Bigg Boss Kannada 12: ಮುದ್ದಾದ ಹುಡುಗಿ ಜೊತೆ ಇದ್ದಿದ್ರೆ ಎಲಿಮಿನೇಟ್ ಆಗುತ್ತಿರಲಿಲ್ಲ: ಕರಿಬಸಪ್ಪ
ಅಂತರರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್ ಆಗಿದ್ದ ಕರಿಬಸಪ್ಪ ಅವರು ಬಿಗ್ಬಾಸ್ ಸೀಸನ್ 12ರ ಸ್ಪರ್ಧಿಯಾಗಿ ಹೋಗಿದ್ದರು. ಆದರೆ ಒಂದೇ ವಾರಕ್ಕೆ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ಬಿಗ್ಬಾಸ್ ಬಗ್ಗೆ ಶಾಕಿಂಗ್ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ತಾವು ಎಲಿಮಿನೇಟ್ ಆಗಲು ಕಾರಣ ಏನೆಂದು ಕರಿಬಸಪ್ಪ ಬಹಿರಂಗಪಡಿಸಿದ್ದಾರೆ. ಮನೆಯೊಳಗೆ ನೀಡುತ್ತಿದ್ದ ಊಟ ನನಗೆ ಸಾಕಾಗುತ್ತಿರಲಿಲ್ಲ ಎಂದೂ ಶಾಕಿಂಗ್ ವಿಚಾರ ತಿಳಿಸಿದ್ದಾರೆ.
'ಬಿಗ್ಬಾಸ್ ಮನೆಯಲ್ಲಿ ನನಗೆ ಊಟ ಸಾಕಾಗುತ್ತಿರಲಿಲ್ಲ. ಅಲ್ಲಿ ಅರಸ, ಸೇವಕರ ಇರುವುದರಿಂದ ನಾವು ಸೇವಕರಾಗಿದ್ವಿ. ಹಾಗಾಗಿ ಊಟಕ್ಕೆ ಸಮಸ್ಯೆ ಆಗಿತ್ತು. ಅರ್ಧ ಚಪಾತಿ, ಪೂರಿಯಲ್ಲಿ ಜೀವನ ಕಳೆಯಬೇಕು. ಆದರೆ ನನಗೆ ಅಲ್ಲಿ ಊಟ ಮುಖ್ಯ ಆಗಿರಲಿಲ್ಲ, ಎಲ್ಲರಲ್ಲೂ ನಗು ತರೋದು ಮುಖ್ಯ ಆಗಿತ್ತು. ನನಗೆ ಹಸಿವಿಗಿಂತ ಅವರೆಲ್ಲ ನನ್ನೊಂದಿಗೆ ಓಪನ್ ಅಪ್ ಆಗಲಿಲ್ಲ ಅನ್ನೋ ಬೇಜಾರಿದೆ' ಎಂದು ಕರಿಬಸಪ್ಪ ಹೇಳಿದ್ದಾರೆ.

'ಜಂಟಿಗಳನ್ನ ಟಾರ್ಗೆಟ್ ಮಾಡಿದ್ರು'
'ಅವರೆಲ್ಲ ನನ್ನ ಜೊತೆ ಹಾಗೆ ಇದ್ದಿದ್ದರೆ, ಹೊಟ್ಟೆ ತುಂಬಿದಷ್ಟು ಆನಂದ ಆಗ್ತಿತ್ತು. ಅಲ್ಲಿ ಉಳಿದವರು ನಮ್ಮ ಜಂಟಿಗಳನ್ನ ಟಾರ್ಗೆಟ್ ಮಾಡಿದ್ರು ಅನಿಸುತ್ತಿದೆ. ಅಲ್ಲಿ ನಾನು ಊಟಕ್ಕೆ ಅಂತ ಹೋಗಲಿಲ್ಲ, ಆಟಕ್ಕೆ, ವ್ಯಕ್ತಿತ್ವ ಪ್ರದರ್ಶನಕ್ಕೆಂದು ಹೋಗಿದ್ದೆ. ಮೊದಲು ನಾನು ಬಾಡಿಬಿಲ್ಡಿಂಗ್ ಮಾಡ್ತಿದ್ದಾಗ ಡಯಟ್ ಪ್ಲ್ಯಾನ್ ಮಾಡಿಕೊಂಡಿದ್ದೆ. ಈಗ ನಾನು ಎರಡು ಮಕ್ಕಳ ತಂದೆ. ಮೊದಲಿನಂತೆ ತಿನ್ನಲು ಹೋದರೆ ಸಂಸಾರ ಹೇಗೆ ಸಾಗುತ್ತೆ? ಮೊದಲು ನಲವತ್ತು ಮೊಟ್ಟೆ ತಿಂತಿದ್ದೆ. ಈಗ ನಾರ್ಮಲ್ ಮನೆ ಊಟವನ್ನೇ ತಿಂತೀನಿ' ಎಂದಿದ್ದಾರೆ.
'ಬಿಗ್ಬಾಸ್ ಮನೆಯಲ್ಲಿ ಸಮಯಕ್ಕೆ ತಕ್ಕಂತೆ ಮಾತನಾಡಬೇಕು. ಅಲ್ಲಿ ಒಳಗೆ ಕರಿಬಸಪ್ಪ ಮಾತನಾಡಲ್ಲ ಅಂತಾರೆ. ಮಾತಾಡಿದ್ರೆ ಎಷ್ಟು ಮಾತಾಡ್ತಾರೆ ಅಂತಾರೆ. ಅಲ್ಲಿ ಹೊಂದಿಕೊಳ್ಳಲು ನಮಗೆ ಇನ್ನೂ ಸಮಯ ಬೇಕಾಗಿತ್ತು. ಇದು ವ್ಯಕ್ತಿತ್ವಗಳ ಆಟ, ಮಾತು ಮುಖ್ಯ ಅಲ್ಲ. ಅಲ್ಲಿ ಅಧಿಕಪ್ರಸಂಗ ಜಾಸ್ತಿ. ವಿಷಯಗಳೇ ಇರೋದಿಲ್ಲ. ಅಲ್ಲಿ ಏನ್ ಮಾತನಾಡ್ತೀವಿ ಅನ್ನೋ ಪರಿಜ್ಞಾನ ಇರಬೇಕು. ಸುಮ್ನೆ ಡಬಲ್ ಮೀನಿಂಗ್ ಮಾತಾಡಿಕೊಂಡು ಇರೋದಲ್ಲ. ಅದು ನನಗೆ ಇಷ್ಟವೂ ಆಗಲ್ಲ. ನಾವು ಜನರಿಗೆ ಏನಾದರೂ ಒಳ್ಳೆ ಸಂದೇಶ ಕೊಡಬೇಕು. ಅಲ್ಲಿ ಮಾತನಾಡಿಯೇ ಗೆಲ್ಲಬೇಕು ಅನ್ನೋದಿಲ್ಲ, ಮೌನವಾಗಿಯೂ ಗೆಲ್ಲಬಹುದು' ಎಂದಿದ್ದಾರೆ.
'ಹುಡುಗಿ ಇದ್ದಿದ್ರೆ ಪಾರಾಗುತ್ತಿದ್ದೆ'
'ಮಾತನಾಡೋಕೆ ಶುರು ಮಾಡಿದ್ರೆ ನಾನು ಯಾರಿಗೂ ಕಮ್ಮಿ ಇಲ್ಲ. ಅಲ್ಲಿ ಒಂಟಿ-ಜಂಟಿ ಆಟದಿಂದಲೂ ಹಿನ್ನಡೆ ಆಯ್ತು. ಬೇರೆಯವರಿಗೆ ಹೋಲಿಸಿದರೆ ನಾನು ಹಾಗೂ ಅಮಿತ್ ಸ್ಟ್ರಾಂಗ್ ಇದ್ವಿ. ಬೇರೆ ಜಂಟಿಗಳು ಪಾರಾಗಲು ಕಾರಣ ಏನಂದ್ರೆ ಅವರೆಲ್ಲ ಒಂದು ಹುಡುಗ-ಹುಡುಗಿ ಇದ್ದರು. ಹಾಗಾಗಿ ನನ್ನ ಜೊತೆಯೂ ಜಂಟಿಯಾಗಿ ಒಂದು ಹುಡುಗಿ ಇದ್ದಿದ್ರೆ ನಾನು ಎಲಿಮಿನೇಟ್ ಆಗುತ್ತಿರಲಿಲ್ಲ. ನನ್ ಜೊತೆ ಒಂದು ಮುದ್ದಾದ ಹುಡುಗಿ ಇದ್ದಿದ್ರೆ, ಅವರು ಆಟ ಆಡದೇ ಇದ್ರೂ ಅವರು ಕೊಡೋ ಸ್ಮೈಲ್ ಇಂದ ನಮ್ಮನ್ನೂ ಪಾರು ಮಾಡ್ತಿದ್ರು' ಎಂದು ಕರಿಬಸಪ್ಪ ಹೇಳಿಕೊಂಡಿದ್ದಾರೆ.
'ಈಗಿನ ಬಿಗ್ಬಾಸ್ನಲ್ಲಿ ಇದೇ ನಡೆಯುತ್ತಿದೆ. ಅಲ್ಲಿ ಯಾರೂ ಆಟ ಅಷ್ಟೊಂದು ಚೆನ್ನಾಗಿ ಆಡ್ತಿಲ್ಲ. ಅಲ್ಲಿ ಕೆಲವು ಮುದ್ದಾದ ಹುಡುಗಿಯರಿದ್ದಾರೆ. ಅವರ ಜೊತೆಗೆ ನಮ್ಮ ಹುಡುಗ್ರು. ಇದೇ ಕಾರಣಕ್ಕೆ ನಾವು ಎಲಿಮಿನೇಟ್ ಆಗಿದ್ದು ಅನಿಸುತ್ತೆ' ಎಂದಿದ್ದಾರೆ.












Click it and Unblock the Notifications