Ramya Case: ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಎ1 ಆರೋಪಿ ಅರೆಸ್ಟ್, ಯಾರದು?
ನಟ ದರ್ಶನ್ ಅವರ ಕೆಲ ಅಭಿಮಾನಿಗಳು ತಮಗೆ ಅಚಾಚ್ಯ ಶಬ್ಧಗಳನ್ನು ಬಳಸಿ ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್, ಕಾಮೆಂಟ್ ಹಾಕಿದ್ದಾರೆ ಎಂದು ನಟಿ ಮೋಹಕತಾರೆ ರಮ್ಯಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಹಲವರನ್ನು ಬಂಧಿಸಿ, ಬೆಂಡೆತ್ತಿದ್ದಾರೆ. ಇದೀಗ ರಮ್ಯಾ ನೀಡಿದ್ದ ದೂರಿನಲ್ಲಿ ದಾಖಲಿಸಿದ್ದ ಎ1 ಆರೋಪಿ ಕೂಡ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ. ರಮ್ಯಾ ದೂರಿನ ಮೇರೆಗೆ ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರಿಗೆ ಹಲವರು ಸಿಕ್ಕಿಬಿದ್ದಿದ್ದರು. ಇದೀಗ ಈ ಪ್ರಕರಣದ ಮುಖ್ಯ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ರಮ್ಯಾ ಮೊದಲಿನಿಂದಲೂ ಧ್ವನಿ ಎತ್ತಿದ್ದರು. ಈ ಕೇಸ್ನಲ್ಲಿ ನಟ ದರ್ಶನ್ ಪ್ರಮುಖ ಆರೋಪಿಯಾಗಿದ್ದ ಕಾರಣ, ರಮ್ಯಾ ಅವರು ರೇಣುಕಾಸ್ವಾಮಿಗೆ ನ್ಯಾಯ ಕೋರಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಇದರಿಂದ ದರ್ಶನ್ ಅವರ ಕೆಲ ಅಭಿಮಾನಿಗಳು ರಮ್ಯಾ ಅವರೊಂದಿಗೆ ಕೆಟ್ಟದಾಗಿ ವರ್ತಿಸಲು ಶುರು ಮಾಡಿದ್ದರು. ಅಲ್ಲದೆ ರಮ್ಯಾ ಅವರ ಪೋಸ್ಟ್ ಅವಾಚ್ಯ ಪದಗಳಿಂದ ನಿಂದಿಸಿ, ಮೆಸೇಜ್, ಕಾಮೆಂಟ್ ಹಾಕಿದ್ದರು. ಇದನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದ ನಟಿ ರಮ್ಯಾ, ಬಳಿಕ ಪೊಲೀಸರಿಗೆ ದೂರು ನೀಡಿದ್ದರು.

ರಮ್ಯಾ ಅವರು ಸುಮಾರು 40ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಅಕೌಂಟ್ಗಳನ್ನು ಉಲ್ಲೇಖಿಸಿ ದೂರು ಕೊಟ್ಟಿದ್ದರು. ಇದರಲ್ಲಿ ಅತಿ ಕೆಟ್ಟದಾಗಿ ಕಾಮೆಂಟ್ ಮಾಡಿದವರ ಹೆಸರನ್ನಷ್ಟೇ ಉಲ್ಲೇಖಿಸಿದ್ದೇನೆ ಎಂದಿದ್ದರು. ದೂರಿನ ಮೇರೆಗೆ ಪೊಲೀಸರು ಮೊದಲಿಗೆ ನಾಲ್ಕು ಮಂದಿಯನ್ನು ಬಂಧಿಸಿದ್ದರು. ಇದೀಗ ಪ್ರಕರಣ ಪ್ರಮುಖ ಹಾಗೂ ಎ1 ಆರೋಪಿಯನ್ನ ಸಹ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಯಾರದು ಎ1 ಆರೋಪಿ?
ಪೊಲೀಸರು ಬಂಧಿಸಿರುವ ಪ್ರಮುಖ ಆರೋಪಿ ಹೆಸರು ಪ್ರಮೋದ್ ಗೌಡ ಎಂದು ತಿಳಿದುಬಂದಿದೆ. ಈತ ಬೆಂಗಳೂರಿನ ಕೆ.ಆರ್.ಪುರ ನಿವಾಸಿ ಎನ್ನಲಾಗಿದೆ. ಸದ್ಯ ಈತನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈತನೇ ರಮ್ಯಾ ಕೇಸ್ನಲ್ಲಿ ಎ1 ಆರೋಪಿಯಾಗಿದ್ದಾನೆ. ಆರೋಪಿಯು ತನ್ನ ಸ್ನೇಹಿತನ ಮೊಬೈಲ್ನಲ್ಲಿ ಪ್ರಮೋದ್ ಗೌಡ 87 ಎಂಬ ಅಕೌಂಟ್ ಕ್ರಿಯೇಟ್ ಮಾಡಿದ್ದ. ಇದೇ ಅಕೌಂಟ್ನಿಂದ ಆತ ರಮ್ಯಾಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಸದ್ಯ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಮೊದಲಿಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ನಂತರ ಆತನನ್ನ ಕಸ್ಟಡಿಗರ ಪಡೆದು ವಿಚಾರಣೆ ನಡೆಸಲಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ರಮ್ಯಾ ಅವರ ಕೇಸ್ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದೆ. ರಮ್ಯಾ ಕೇವಲ ನಟಿ ಮಾತ್ರವಲ್ಲ, ಮಾಜಿ ಸಂಸದೆ ಕೂಡ. ಹಾಗಿದ್ದರೂ ಈ ರೀತಿ ಅವಾಚ್ಯ ಪದಗಳನ್ನು ಬಳಸುತ್ತಾರೆ ಅಂದರೆ ಸಾಮಾನ್ಯ ಜನರ ಕಥೆ ಏನು? ಎಂದು ಹಲವರು ಪ್ರಶ್ನೆ ಮುಂದಿಟ್ಟಿದ್ದರು. ಇನ್ನು ರಮ್ಯಾ ಅವರ ಕೇಸ್ ಅನ್ನು ಪೊಲೀಸರು ಕೂಡ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಮನಬಂದಂತೆ ಕಾಮೆಂಟ್ ಮಾಡುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.












Click it and Unblock the Notifications