Upendra: ನಿಮ್ಮೊಳಗೆ ಒಬ್ಬಳು, ಒಬ್ಬನು ಇದ್ದಾನೆ ಅವನ ಮಾತು ಕೇಳಿ: ಉಪೇಂದ್ರ ಹೀಗೆ ಹೇಳಿದ್ಯಾಕೆ?
ಹುಬ್ಬಳ್ಳಿ,ಡಿಸೆಂಬರ್ 05: ನಿಮ್ಮೊಳಗೆ ಒಬ್ಬಳು, ಒಬ್ಬನು ಇದ್ದಾನೆ ಅವನ ಮಾತು ಕೇಳಿ. ನಿಮ್ಮ ಒಳಗೆ ಇರುವ ಆತ್ಮ ಪರಮಾತ್ಮ. ಅದರ ಮಾತು ಕೇಳಬೇಕು ಎಂದು ಮಾದಕ ವಸ್ತುಗಳಿಂದ ಆಗುವ ಹಾನಿ ಕುರಿತಾದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ನಟ ಉಪೇಂದ್ರ ಅವರು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಹುಬ್ಬಳ್ಳಿ-ಧಾರವಾಡದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಸಹಭಾಗಿತ್ವದಲ್ಲಿ ಅಪರಾಧ ತಡೆ, ಸಂಚಾರ ನಿಯಮ ಮತ್ತು ಮಾದಕ ವಸ್ತು ಬಳಕೆ ವಿರುದ್ಧ ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಟ ಉಪೇಂದ್ರ ಅವರು ಮಾತನಾಡಿ, ಗಾಂಜಾ, ಡ್ರಗ್ಸ್, ಸಾರಾಯಿ ಸೇರಿದಂತೆ ಮಾದಕ ವಸ್ತುಗಳ ಕುರಿತಾಗಿ ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ತಾವು ಯಾರದೇ ಮಾತು ಕೇಳುವುದು ಬೇಡ. ನಿಮ್ಮಲ್ಲಿ ಒಬ್ಬರು ಇದ್ದಾರೆ, ಆತ್ಮ ಅನ್ನೊದು ಇದೆ ಅದರ ಮಾತು ಕೇಳಿದರೆ ಸಾಕು ಎಲ್ಲವೂ ಸಾರ್ಥಕ ಎಂದರು.

ಮನೆಯಲ್ಲಿ ಅಪ್ಪ ಅಮ್ಮ, ಉಪನ್ಯಾಸಕರು ಉತ್ತಮ ವಿಷಯಗಳನ್ನು ಹೇಳಿರುತ್ತಾರೆ. ಅದನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದು ಮುಖ್ಯ.ನಿಮ್ಮ ಒಳಗೆ ಇರುವ ಆತ್ಮ ಪರಮಾತ್ಮ. ಅದರ ಮಾತು ಕೇಳಬೇಕು. ಪ್ರತಿಯೊಬ್ಬರಲ್ಲೂ ಅದ್ಭುತ ವ್ಯಕ್ತಿ ಇರುತ್ತಾನೆ. ಎಲ್ಲ ಸಮಸ್ಯೆ ಗಳಿಗೂ ನಮ್ಮಲ್ಲೇ ಉತ್ತರ ಇದೆ. ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕಿದೆ ಎಂದರು.
ಶಾಲಾ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಮಾದಕ ವಸ್ತುಗಳ ಬಳಕೆ ಮಾಡದಂತೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ವತಿಯಿಂದ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮೊನ್ನೆಯಷ್ಟೇ ಡಾ.ಶಿವರಾಜಕುಮಾರ್ ಅವರಿಂದ ಈ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ಬುಧವಾರ ಧಾರವಾಡದ ಜೆಎಸ್ಎಸ್ ಕಾಲೇಜಿಗೆ ನಟ ಉಪೇಂದ್ರ ಅವರ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.
ನಟ ಉಪೇಂದ್ರ ಅವರು ಜೆಎಸ್ಎಸ್ ಕಾಲೇಜಿಗೆ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ಜೆಎಸ್ಎಸ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿ ಸಮೂಹವೇ ಜಮಾಯಿಸಿತ್ತು. ನಟ ಉಪೇಂದ್ರ ಅವರು ತಮ್ಮ"ಯುಐ" ಸಿನಿಮಾದ ಪ್ರಮೋಷನ್ಗಾಗಿ ಹುಬ್ಬಳ್ಳಿಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ.
ಧಾರವಾಡದ ಜೆಎಸ್ಎಸ್ ಕಾಲೇಜಿಗೆ ಬಂದ ನಟ ಉಪೇಂದ್ರ ಅವರ ಮೇಲೆ ಪುಷ್ಪಗಳನ್ನು ಹಾಕುವ ಮೂಲಕ ಬರಮಾಡಿಕೊಳ್ಳಲಾಯಿತು. ಉಪೇಂದ್ರ ಅವರು ಬರುತ್ತಿದ್ದಂತೆ ವಿದ್ಯಾರ್ಥಿಗಳು, ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಅಷ್ಟೇ ಅಲ್ಲದೇ ಅನೇಕರು ಅವರ ಕೈ ಕುಲುಕಿ ಸಂತಸಪಟ್ಟರು. ಈ ವೇಳೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ನಟ ಉಪೇಂದ್ರ ಅವರು, ಈ ಭೂಮಿ ಮೇಲೆ ಅನೇಕ ಮಾದಕ ವಸ್ತುಗಳಿವೆ. ಆದರೆ, ಯಾವು ಯಾವ ರೀತಿ ಬದುಕಬೇಕು? ಜೀವನ ಕಟ್ಟಿಕೊಳ್ಳಬೇಕು ಎಂಬ ವಿಚಾರ ನಮ್ಮ ತಲೆಯಲ್ಲಿರಬೇಕು.
ಯಾರು ಏನೇ ಹೇಳಿದರೂ ಎಲ್ಲವನ್ನೂ ಕೇಳಬೇಕು ಆದರೆ, ಮೊದಲು ನಮ್ಮನ್ನು ನಾವು ನಂಬಬೇಕು. ನಮಗಾಗಿ ಬದುಕಬೇಕು. ಮಾದಕ ವಸ್ತುಗಳ ಬಳಕೆ ಬೇಡ. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು ಎಂದರು. ಇದೇ ವೇಳೆ ಅವರು ಯುಐ ಸಿನಿಮಾದ ಡೈಲಾಗ್ ಹೇಳಿದರು. ನೃತ್ಯ ಮಾಡಿ ವಿದ್ಯಾರ್ಥಿಗಳನ್ನು ನಟ ಉಪೇದ್ರ ಅವರು ರಂಜಿಸಿದರು.
ಉಪೇಂದ್ರ ಅವರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಡಿಸಿಪಿಗಳಾದ ಮಹಾಲಿಂಗ ನಂದಗಾವಿ, ರವೀಶ್ ಸೇರಿದಂತೆ ಅನೇಕರು ಸಾಥ್ ನೀಡಿದರು. ಧಾರವಾಡದಿಂದಲೇ ಉಪೇಂದ್ರ ಅವರ "ಯುಐ" ಸಿನಿಮಾದ ಪ್ರಮೋಷನ್ ಆರಂಭಗೊಂಡಿರುವುದಕ್ಕೆ ಉಪೇಂದ್ರ ಹರ್ಷ ವ್ಯಕ್ತಪಡಿಸಿದರು.












Click it and Unblock the Notifications