ನಿಮ್ ರೊಮ್ಯಾನ್ಸ್ ಜಾಸ್ತಿ ಆಯ್ತು, ಹೊರಗೆ ಹೋಗ್ಬೇಕಾಗುತ್ತೆ! ಕಿಚ್ಚ ವಾರ್ನ್ ಮಾಡಿದ್ದು ಯಾರಿಗೆ?
ಪ್ರತಿ ವಾರದಂತೆ ಕಿಚ್ಚ ಸುದೀಪ್ ಬಿಗ್ಬಾಸ್ ಮನೆಮಂದಿಯ ಯೋಗಕ್ಷೇಮ ವಿಚಾರಿಸಿದ್ದಾರೆ. ಇದರ ಜೊತೆಗೆ ತಮ್ಮದೇ ಸ್ಟೈಲಲ್ಲಿ ಕೆಲವರಿಗೆ ಬಿಸಿ ಕೂಡ ಮುಟ್ಟಿಸಿದ್ದಾರೆ. ಇನ್ನು ಬಿಗ್ಬಾಸ್ ಪ್ರತಿ ಸೀಸನ್ನಲ್ಲೂ ಸಿಂಗಲ್ ಆಗಿ ಬಂದು ಜೋಡಿಯಾಗಿ ಹೊರಬರೋ ಟ್ರೆಂಡ್ ಇದ್ದು, ಈ ಬಾರಿಯೂ ಅದು ಮುಂದುವರಿದಿದೆ.
ಅದರಲ್ಲೂ ಒಂದು ಜೋಡಿಯ ರೊಮ್ಯಾನ್ಸ್ ಕಿಚ್ಚನ ಕೆಂಗಣ್ಣಿಗೆ ಗುರಿಯಾಗಿದೆ. ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ವೀಕೆಂಡ್ ಪಂಚಾಯ್ತಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಾದ ಶಿಶಿರ್ ಮತ್ತು ಐಶ್ವರ್ಯಾ ಕುರಿತು ಮಾತನಾಡುತ್ತಾ ಅವರ ರೊಮ್ಯಾನ್ಸ್ ಬಗ್ಗೆಯೂ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇನ್ನು ದೊಡ್ಮನೆಯಲ್ಲಿ ಶಿಶಿರ್ ಮತ್ತು ಐಶ್ವರ್ಯಾ ಪ್ರಣಯ ಪಕ್ಷಿಗಳಾಗಿ ಕಾಣಿಸಿಕೊಂಡಿದ್ದಾರೆ ಎಂಬ ಗಾಸಿಪ್ ಕೂಡ ಇದ್ದು, ಇದಕ್ಕೆ ಪುಷ್ಟಿ ನೀಡುವಂತಹ ಅವರ ನಡೆಯ ಬಗ್ಗೆ ಕಿಚ್ಚ ಸುದೀಪ್ ಖಾರವಾಗಿ ಮಾತನಾಡಿದ್ದಾರೆ. ನಿಮ್ಮ ರೊಮ್ಯಾನ್ಸ್ ಜಾಸ್ತಿಯಾ ಆಯ್ತು, ಇದು ಹಿಂಗೇ ಮುಂದುವರೆದರೆ ಇಬ್ಬರಲ್ಲಿ ಒಬ್ಬರು ಹೊರಗೆ ಬರೋದು ಗ್ಯಾರಂಟಿ ಎಂದೂ ಕಿಚ್ಚ ವಾರ್ನ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಕಿಚ್ಚ ನಟಿಸಿದ್ದ ಕೆಂಪೇಗೌಡ ಸಿನಿಮಾ ಬಗ್ಗೆಯೂ ಉಲ್ಲೇಖಿಸಿದ್ದು, ಶಿಶಿರ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಶಿಶಿರ್ ಕೆಂಪೇಗೌಡ ಸಿನಿಮಾ ಸ್ಟೈಲಲ್ಲಿ ಮೀಸೆ ಬಿಟ್ಟಿರುವ ಬಗ್ಗೆಯೂ ಮಾತನಾಡಿದ್ದಾರೆ. ಕೆಂಪೇಗೌಡ ಸಿನಿಮಾದಲ್ಲಿ ಎಷ್ಟು ರೊಮ್ಯಾನ್ಸ್ ಇದೆ? ಎಷ್ಟು ಪರ್ಸೆಂಟ್ ಆ್ಯಕ್ಷನ್ ಇದೆ? ಎಂದು ಸುದೀಪ್ ಶಿಶಿರ್ಗೆ ಕೇಳಿದ್ದಾರೆ.
ಇದಕ್ಕೆ ಉತ್ತರ ಕೊಟ್ಟ ಶಿಶಿರ್ 80 ಪರ್ಸೆಂಟ್ ಆ್ಯಕ್ಷನ್, 15 ಪರ್ಸೆಂಟ್ ರೊಮ್ಯಾನ್ಸ್ ಇದೆ ಎಂದು ಹೇಳಿದ್ರು. ಇದು ಉಲ್ಟಾ ಆದ್ರೆ ಹೆಂಗಿರುತ್ತೆ? ಎಂದು ಸುದೀಪ್ ಮತ್ತೆ ಪ್ರಶ್ನೆ ಕೇಳಿದ್ರು. ಇದಕ್ಕೆ ಉತ್ತರಿಸಿದ ಶಿಶಿರ್, ಚೆನ್ನಾಗಿರಲ್ಲ ಅಂದರು. ಮತ್ತೆ ನೀವು ಮಾಡ್ತಿರೋದು ಅದನ್ನೇ ಎಂದು ಸುದೀಪ್ ಗರಂ ಆಗಿ ಮಾತನಾಡಿದ್ರು.
ಈ ವಾರ ಬಿಗ್ಬಾಸ್ ಮನೇಲಿ ನಿಮ್ಮ ಆಟ ಕಾಣಲಿಲ್ಲ. ಯಾಕೆ ಈ ರೀತಿ ಆಯಿತು? ನೀವು ಮೀಸೆ ಬಿಟ್ಟ ಮೇಲೆ ನಿಮ್ಮದ ಆಟದ ವೈಖರಿ ಬದಲಾಗಿದೆ. ನನಗೆ ಎಲ್ಲಿಯೂ ನಿಮ್ಮ ಆಟ ಕಾಣಿಸುತ್ತಿಲ್ಲ ಎಂದು ಸುದೀಪ್ ಕೇಳಿದರು. ಇದಕ್ಕೆ ಶಿಶಿರ್ ಕೂಡ ದಂಗಾಗಿ ಹೋದರು.
ಈ ವಾರ ಬಿಗ್ಬಾಸ್ ಮನೆಯಲ್ಲಿ ಹಲವು ಘಟನೆಗಳು ನಡೆದಿದ್ದು, ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಗೆ ಬಂದಿರೋ ರಜತ್ ಅವಾಚ್ಯ ಶಬ್ದಗಳನ್ನು ಹೆಚ್ಚಾಗಿ ಬಳಸಿರುವ ಕಾರಣ ಅವರಿಗೆ ಕಳಪೆ ನೀಡಲಾಗಿತ್ತು. ಅಲ್ಲದೆ ಅಲ್ಲಿನ ಸೆರೆಮನೆಗೂ ತಳ್ಳಲಾಗಿತ್ತು. ಈ ಬಗ್ಗೆಯೂ ಪ್ರಸ್ತಾಪಿಸಿದ ಸುದೀಪ್ ಅವರು ರಜತ್ ಬೆವರಿಳಿಸಿದ್ದಾರೆ. ಭಾಷೆಯ ಬಳಕೆ ಬಗ್ಗೆ ಬುದ್ಧಿವಾದವೂ ಹೇಳಿದ್ದಾರೆ.
ರಜತ್ ಅವರು ಮನೆಯಲ್ಲಿ ಮನಬಂದಂತೆ ಮಾತನಾಡಿದ್ದಾರೆ. ಇದರಿಂದ ನೊಂದಿದ್ದ ಗೋಲ್ಡ್ ಸುರೇಶ್ ಅವರು ಮನೆಯಿಂದ ಹೊರಬರಲು ನಿರ್ಧರಿಸಿದ್ದರು. ಇದೀಗ ಸುದೀಪ್ ಈ ವಿಚಾರದ ಬಗ್ಗೆ ರಜತ್ಗೆ ಕ್ಲಾಸ್ ತೆಗೆದುಕೊಂಡರು. ಕನ್ನಡದಲ್ಲಿ ಆಡೋಕೆ ತುಂಬಾ ಪದಗಳಿವೆ ಎಂದು ರಜತ್ಗೆ ತಿವಿದಿದ್ದಾರೆ.
ಕೋಪ ಬಂದಾಗ ಇಂತಾ ಪದಗಳೇ ಬಾಯಲ್ಲಿ ಬರುತ್ತೆ ಅಂತೀರಲ್ಲ, ಈಗ ಆ ಮಾತುಗಳನ್ನ ನನ್ ಮುಂದೆ ರಿಪೀಟ್ ಮಾಡಿ. ಈಗ ಯಾಕೆ ಅದು ಸಾಧ್ಯವಾಗ್ತಿಲ್ಲ ಎಂದು ಕೇಳಿದರು. ಇದರಿಂದ ಮೆತ್ತಗಾದ ರಜತ್, ತನ್ನ ತಪ್ಪಿನ ಅರಿವಾಯ್ತು ಎಂದಿದ್ದಾರೆ.












Click it and Unblock the Notifications