ʼದರ್ಶನ್..ದಿಸ್ ಈಸ್ ಫಾರ್ ಯೂ..ʼ ದುಬೈನಲ್ಲಿ ಶಿಳ್ಳೆ, ಚಪ್ಪಾಳೆ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ತೂಗುದೀಪ ಬಳ್ಳಾರಿ ಜೈಲಿನಲ್ಲಿದ್ದಾರೆ. ಆದರೆ, ದೂರದ ದುಬೈನಲ್ಲೂ ದರ್ಶನ್ ಹೆಸರು ಜೋರಾಗಿ ಸದ್ದು ಮಾಡಿದೆ. ದುಬೈನಲ್ಲಿ ನಡೆದ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಪ್ರದಾನ ಕಾರ್ಯಕ್ರಮ ದರ್ಶನ್ ಅಭಿನಯದ ʼಕಾಟೇರʼ ಸಿನಿಮಾಗೆ ಕನ್ನಡದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಘೋಷಣೆಯಾಯಿತು. ಈ ವೇಳೆ ಅಲ್ಲಿ ಕಾರ್ಯಕ್ರಮದಲ್ಲಿದ್ದವರು ಶಿಳ್ಳೆ, ಚಪ್ಪಾಳೆ ತಟ್ಟಿರುವ ವಿಡಿಯೋ ವೈರಲ್ ಆಗಿದೆ.
ʼಕಾಟೇರʼ ಸಿನಿಮಾ ʼಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿʼ ಸೇರಿದಂತೆ ಹಲವು ವಿಭಾಗಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಬರೋಬ್ಬರಿ ನಾಲ್ಕು ವಿಭಾಗಗಳಲ್ಲಿ ಸೈಮಾ ಪ್ರಶಸ್ತಿಗೆ ಈ ಸಿನಿಮಾ ಭಾಜನವಾಗಿದೆ. ಈ ಸಿನಿಮಾಗೆ ʼಅತ್ಯುತ್ತಮ ಕನ್ನಡ ಸಿನಿಮಾʼ ಪ್ರಶಸ್ತಿ, ಈ ಚಿತ್ರದಲ್ಲಿ ಚೊಚ್ಚಲ ನಟನೆಗೆ ಆರಾಧನಾ ಅವರಿಗೆ ʼಅತ್ಯುತ್ತಮ ಹೊಸ ನಟಿ ಪ್ರಶಸ್ತಿʼ ಸಿಕ್ಕಿದೆ. ಮೊದಲ ಸಿನಿಮಾದಲ್ಲೇ ಆರಾಧನಾ ಪ್ರಶಸ್ತಿ ಕೈಗೆತ್ತಿಕೊಂಡಿದ್ದರು. ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರಿಗೆ ʼಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿʼ ಹಾಗೂ ಮಂಗ್ಲಿ ಅವರಿಗೆ ʼಅತ್ಯುತ್ತಮ ಗಾಯಕಿʼ ಪ್ರಶಸ್ತಿಯು ಕಾಟೇರ ಸಿನಿಮಾದಿಂದ ಸಿಕ್ಕಿದೆ.

ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಕಾಟೇರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ದರ್ಶನ್ ಅವರ ಅನುಪಸ್ಥಿತಿಯಲ್ಲಿ ಸ್ವೀಕರಿಸಿದರು. ಬಳಿಕ ಮಾತನಾಡಿದ ರಾಕ್ಲೈನ್, ಈ ಪ್ರಶಸ್ತಿಯನ್ನು ಇಡೀ ಕಾಟೇರ ಚಿತ್ರತಂಡಕ್ಕೆ ಅರ್ಪಿಸುತ್ತೇನೆ ಎಂದರು. ಮುಖ್ಯವಾಗಿ ದರ್ಶನ್....ದಿಸ್ ಈಸ್ ಫಾರ್ ಯೂ ಎಂದು ರಾಕ್ಲೈನ್ ವೆಂಕಟೇಶ್ ಅವರು ಅರ್ಪಿಸಿದ್ದನ್ನು ಕೇಳಿ ಅಲ್ಲಿದ್ದ ಅನೇಕರ ಶಿಳ್ಳೆ ಹಾಕಿದರು.
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ದರ್ಶನ್ ಅಭಿಮಾನಿಗಳು ನಟನನ್ನು ನೆನೆದಿದ್ದಾರೆ. ಈ ಪೈಕಿ ಕಾಟೇರ ತಂಡದ ಎಲ್ಲರೂ ನಿನ್ನೆ ದುಬೈಗೆ ತೆರಳಿ ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಆದರೆ, ದರ್ಶನ್ ಅವರು ಕೊಲೆ ಕೇಸ್ನಲ್ಲಿ ಬಳ್ಳಾರಿ ಜೈಲಿನಲ್ಲಿ ಇರುವುದರಿಂದ ಈ ಬಾರಿಯ ಸೈಮಾ ಸಮಾರಂಭದಲ್ಲಿ ದರ್ಶನ್ ಅವರ ಅನುಪಸ್ಥಿತಿ ಇತ್ತು.
ನಿನ್ನೆ ಕಾಟೇರನಿಗೆ ಪ್ರಶಸ್ತಿ ಸಿಕ್ಕ ವಿಚಾರ ತಿಳಿದ ಅಭಿಮಾನಿಗಳು ಎಲ್ಲೆಡೆ ಫೋಟೋ, ಸ್ಟೇಟಸ್ಗಳನ್ನು ಕಾಟೇರ ಸಿನಿಮಾದ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದರು. ಮತ್ತೊಂದೆಡೆ ʼಇದನ್ನು ಸಂಭ್ರಮಿಸಲು ನಮ್ಮ ಬಾಸ್ ನಮ್ಮ ಮುಂದೆ ಇಲ್ವಲ್ಲʼ ಎಂದು ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಬೇಸರ ಹಂಚಿಕೊಂಡಿದ್ದರು. ಎಲ್ಲ ಸರಿ ಇದ್ದಿದ್ರೆ ಈ ಕ್ಷಣವನ್ನು ಬಾಸ್ ಜೊತೆಗೆ ಅದ್ಧೂರಿಯಾಗಿ ಸೆಲೆಬ್ರೇಷನ್ ಮಾಡ್ತಿದ್ವಿ ಎಂದು ಹಲವರು ಕಾಮೆಂಟ್ ಕೂಡ ಮಾಡಿದ್ದರು.

ಈ ಹಿಂದೆ ಸಿನಿಮಾ ಪ್ರಶಸ್ತಿ ಕಾರ್ಯಕ್ರಮಗಳ ಬಗ್ಗೆ ಬೇಸರ ಹಂಚಿಕೊಂಡಿದ್ದ ನಟ ದರ್ಶನ್ ತೂಗುದೀಪ, ಅಂತಹ ಕಾರ್ಯಕ್ರಮಗಳಲ್ಲಿ ಕನ್ನಡ ಚಿತ್ರರಂಗದವರಿಗೆ ಮೊದಲ ಸಾಲಿನಲ್ಲಿ ಆದ್ಯತೆ ಕೊಡಬೇಕು. ಅಂತಹ ದಿನ ಬಂದಾಗ ನಾನು ಕಂಡಿತವಾಗಿಯೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಿಗೆ ಬರುತ್ತೇನೆ ಎಂದು ಬೇಡಿಕೆ ಇಟ್ಟಿದ್ದರು.
ಬಳಿಕ ನಮ್ಮ ಬೆಂಗಳೂರಿನಲ್ಲೇ ಕಳೆದ ವರ್ಷ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ನಟ ದರ್ಶನ್ ಕೂಡ ಹಾಜರಾಗಿದ್ದರು. ಅವರು ಹೇಳಿದಂತೆ ಕನ್ನಡ ಚಿತ್ರರಂಗದವರು ಮೊದಲ ಸಾಲಿನಲ್ಲೇ ಕುಳಿತಿದ್ದರು. ಈ ಬಾರಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವುದರಿಂದ ದರ್ಶನ್ ಹೊರತುಪಡಿಸಿ, ಕಾಟೇರ ಚಿತ್ರತಂಡದ ಎಲ್ಲರೂ ದುಬೈಗೆ ತೆರಳಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.












Click it and Unblock the Notifications