Ajay Rao: ಜ್ಯೋತಿಷಿಗಳ ಪ್ರಕಾರ 'ಕೃಷ್ಣ ಲೀಲಾ' ಸಿನಿಮಾ ಶುರು ಮಾಡಿದ ಮುಹೂರ್ತ ಸರಿಯಿರಲಿಲ್ಲ ಆದರೆ..
ಸ್ಯಾಂಡಲ್ವುಡ್ ನಟ ಅಜಯ್ ರಾವ್ ಅವರ 29ನೇ ಸಿನಿಮಾ ಯುದ್ಧಕಾಂಡ ತೆರೆಕಾಣಲು ಸಿದ್ದವಾಗಿದೆ. ಎಲ್ಲರಿಗೂ ಸಿನಿಮಾ ಹೇಗಿದೆ ಅನ್ನೋ ಕುತೂಹಲ ಇದ್ದೇ ಇರುತ್ತದೆ. ಇದೀಗ ಸಿನಿಮಾ ಬಗ್ಗೆ ನಟ ಅಜಯ್ ರಾವ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಜೊತೆಗೆ ಕೆಲವೊಂದಿಷ್ಟು ಜ್ಯೋತಿಷ್ಯಶಾಸ್ತ್ರಗಳ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ಹಾಗಾದರೆ ಸಿನಿಮಾ ಬಗ್ಗೆ ಅಜಯ್ ರಾವ್ ಹೇಳಿದ್ದೇನು?
ಯುದ್ಧಕಾಂಡ ಸಿನಿಮಾದಲ್ಲಿ ಏನಿದೆ?
ಸಿನಿಮಾ ಹೇಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸುವ ಮುನ್ನ ಅಜಯ್ ರಾವ್ ತಮ್ಮ ಸಿನಿ ಜರ್ನಿಯ ಫೇಲ್ ಸಕ್ಸಸ್ ಬಗ್ಗೆ ಮಾತನಾಡಿದರು, 'ನಾವು ಯಾವುದೇ ಸಿನಿಮಾ ಮಾಡಬೇಕು ಅಂದರೆ ಪ್ರಯತ್ನ ಹಾಗೂ ಶ್ರಮವನ್ನು ಪ್ರಾಮಾಣಿಕವಾಗಿ ಮಾಡಬೇಕು. ಅದೇ ನಮ್ಮನ್ನು ಕಾಪಾಡುತ್ತದೆ. ನಾನು ಕೃಷ್ಣ ಸಿದ್ಧಾಂತವನ್ನು ಅನುಸರಿಸುವವನು. ಯಾವುದೇ ಸಿನಿಮಾ ಸಕ್ಸಸ್ ಫೇಲ್ ಬಗ್ಗೆ ತಲೆ ಕೆಡೆಸಿಕೊಳ್ಳದೇ ಕೆಲಸನೇ ದೇವರು ಅಂತ ಯಾವಾಗ ಪೂಜೆ ಮಾಡ್ತಿವೋ ಆಗ ಅದು ನಮ್ಮನ್ನು ನಡೆಸಿಕೊಂಡು ಹೋಗುತ್ತದೆ' ಎಂದಿದ್ದಾರೆ.

'ಯಾವಾಗಲೂ ನ್ಯಾಯ ಅನ್ನೋದು ಗೆಲ್ಲಬೇಕು ಅನ್ನೋದನ್ನು ಯುದ್ದಕಾಂಡ ಸಿನಿಮಾದಲ್ಲಿ ತೋರಿಸಿಕೊಟ್ಟಿದ್ದೇವೆ. ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ನ್ಯಾಯ ಸಿಗಬೇಕು ಅನ್ನೋ ಕಥೆಯೇ ಯುದ್ಧಕಾಂಡ. ಕೃಷ್ಣ ಪರಮಾತ್ಮ ಕೆಟ್ಟದ್ದು ಹೆಚ್ಚಾದಾಗ ನಾನು ಯಾವುದೋ ಒಂದು ರೂಪದಲ್ಲಿ ಬರುತ್ತೇನೆ ಎಂದಿದ್ದಾನೆ. ಆ ರೂಪ ಯಾರ ರೂಪದಲ್ಲಾದರೂ ಬರಬಹುದು. ಪೊಲೀಸ್, ಲಾಯರ್, ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ದೇವರ ಸ್ವರೂಪನೇ. ಯಾವಾಗ ಧರ್ಮ, ನ್ಯಾಯಕ್ಕೋಸ್ಕರ ಹೋರಾಡುತ್ತಾರೋ ಅವರು ದೇವರು ಸ್ವರೂಪನೇ. ಆಕಾಶದಿಂದ ದೇವರು ಚಕ್ರ ಹಿಡಿದುಕೊಂಡೇ ಬರಬೇಕು ಅಂತಿಲ್ಲ. ನ್ಯಾಯಕ್ಕಾಗಿ ಹೋರಾಡುವ ಪ್ರತಿಯೊಬ್ಬರಲ್ಲೂ ದೇವರಿದ್ದಾನೆ. ಯುದ್ಧಕಾಂಡ ಸಿನಿಮಾ ಮಾಡಿ ಸಮಾಜದಲ್ಲಿ ಯಾವುದಾದರು ಒಂದು ಬದಲಾವಣೆ ತರುತ್ತೇನೆ ಅಂದರೆ ನಾನೂ ಕೂಡ ದೇವರ ರೂಪ' ಎಂದಿದ್ದಾರೆ ಅಜಯ್ ರಾವ್.
ಸಿನಿಮಾ ಬ್ಲಾಕ್ ಬ್ಲಾಸ್ಟರ್ ಆಗುತ್ತಾ?
ಸಿನಿಮಾ ಬ್ಲಾಕ್ ಬ್ಲಾಸ್ಟರ್ ಆಗುತ್ತಾ ಎಂದು ಕೇಳಿದಾಗ ಉತ್ತರಿಸಿದ ಅಜಯ್ ರಾವ್ ಅವರು, 'ನಾನು ಮುಹೂರ್ತ ಅದು ಇದು ನೋಡಲ್ಲ. ನಾನು ನೋಡುವುದು ನನ್ನ ಶ್ರಮ ಮಾತ್ರ. ಸೋಲು ಗೆಲುವು ನೋಡದೆ ಕಷ್ಟಪಟ್ಟರೆ ದೇವರು ಅದನ್ನು ಖಂಡಿತಾ ಕೈ ಹಿಡಿಯುತ್ತಾನೆ ಅನ್ನೋ ನಂಬಿಕೆ ನಂದು. ಜ್ಯೋತಿಷಿಗಳ ಪ್ರಕಾರ ಕೃಷ್ಣ ಲೀಲಾ ಸಿನಿಮಾ ಶುರು ಮಾಡಿದ ಮುಹೂರ್ತ ಸರಿಯಿರಲಿಲ್ಲ. ಆದರೆ ಸಿನಿಮಾ ಬ್ಲಾಕ್ ಬ್ಲಾಸ್ಟರ್ ಆಯ್ತು. ಸಿನಿಮಾ ಚೆನ್ನಾಗಿ ಓಡ್ತು. ಎರಡು ಪಟ್ಟು ಗಳಿಕೆ ಮಾಡಿದೆ. ಹೀಗಾಗಿ ನಮ್ಮ ಶ್ರಮ, ಕಥೆ, ನಾವು ಹೋಗುವ ದಾರಿ ಸರಿಯಾಗಿದ್ದರೆ ಸಿನಿಮಾವನ್ನು ಜನ ಖಂಡಿತಾ ಇಷ್ಟ ಪಡುತ್ತಾರೆ' ಎಂದಿದ್ದಾರೆ.
ಜ್ಯೋತಿಷ್ಯದಲ್ಲಿ ಏನೇ ಇರಲಿ ನಿಮ್ಮ ಶ್ರಮ ನಿಮ್ಮ ಶ್ರದ್ಧೆ ಎಲ್ಲದ್ದಕ್ಕಿಂತ ಮೀರಿದ್ದು. ದಾಂಪತ್ಯದಲ್ಲಿ ತುಂಬಾ ಇಷ್ಟಪಟ್ಟು ಮುಂದುವರೆದರೆ ಜ್ಯೋತಿಷ್ಯದಲ್ಲಿ ಹೇಳಿದ್ದು ಯಾವುದೂ ಕೂಡ ವರ್ಕ್ ಆಗಲ್ಲ ಅನ್ನೋದಕ್ಕೆ ನಾನೇ ಸಾಕ್ಷಿ. ನಾನು ಮದುವೆ ಆದ ಮುಹೂರ್ತ ಕೂಡ ಸರಿಯಾಗಿಲ್ಲ ವಿಚ್ಚೇದನ ಆಗುತ್ತೆ ಅಂದಿದ್ದರು. ನನ್ನ ಜೀವನ ಚೆನ್ನಾಗೇ ಇದೆ. ನನ್ನ ಜೀವನದಲ್ಲಿ ಸಿಕ್ಕಾಪಟ್ಟೆ ಗಳಿಸಿದ್ದೇನೆ. ಜನರ ಪ್ರೀತಿ, ಸ್ನೇಹ, ಬೆಂಬಲ, ಆಶೀರ್ವಾದ ಸಿಕ್ಕಾಪಟ್ಟೆ ಇದೆ. ಇದನ್ನು ನಾವು ದುಡ್ಡಿನಲ್ಲಿ ಅಳಿಯಲು ಸಾಧ್ಯವಿಲ್ಲ ಎಂದಿದ್ದಾರೆ.
ನನ್ನ ಸಿನಿಮಾ ನೋಡಿದರೆ ಮಾತ್ರ ಅಭಿಮಾನಿ ಅಲ್ಲ- ಅಜಯ್ ರಾವ್
ಜೊತೆಗೆ ಅಭಿಮಾನಿಗಳ ಬಗ್ಗೆ ಮಾತನಾಡಿದ ಅಜಯ್, 'ನನ್ನ ಸಿನಿಮಾ ನೋಡಿಲ್ಲ ಅಂದರೆ ಅವರು ನನ್ನ ಅಭಿಮಾನಿ ಅಲ್ಲ ಎಂದು ನಾನು ಹೇಳುವುದಿಲ್ಲ. ನನ್ನ ಮೇಲೆ ತುಂಬಾ ಜನರಿಗೆ ಪ್ರೀತಿ ಇದೆ. ನಾನು ಒಂದು ಒಳ್ಳೆಯ ಸಿನಿಮಾ ಮಾಡಿದರೆ ನೋಡೋಣ ಅನ್ನೋರು ತುಂಬಾ ಜನ ಇದ್ದಾರೆ. ಅವರು ನನ್ನ ಸಿನಿಮಾ ನೋಡುವಂತೆ ನಾನು ಮಾಡಬೇಕು ಅಷ್ಟೇ. ಆ ಪ್ರಯತ್ನ ನಾನು ಮಾಡುತ್ತಲೇ ಇರುತ್ತೇನೆ' ಎಂದಿದ್ದಾರೆ ಅಜಯ್ ರಾವ್.
ಒಟ್ಟಿನಲ್ಲಿ ಯುದ್ಧಕಾಂಡ ಸಿನಿಮಾ ಬಗ್ಗೆ ಅಜಯ್ ರಾವ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತೆರೆಗೆ ಬಂದ ಬಳಿಕ ಸಿನಿಮಾವನ್ನು ಜನ ಯಾವ ರೀತಿ ಸ್ವೀಕರಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications