ಮೂರೂ ಪ್ರಮುಖ ಪಕ್ಷದಿಂದ ಗೆದ್ದಿರುವ ವಸಂತ ಬಂಗೇರ ಬಗ್ಗೆ ಗೊತ್ತೆ?
ರಾಜಕಾರಣದಲ್ಲಿ ಇಂಥ ವ್ಯಕ್ತಿಗಳೂ ಅಪರೂಪ, ಈ ರೀತಿ ವರ್ಚಸ್ಸು ಉಳಿಸಿಕೊಂಡವರೂ ವಿರಳ. ಅಧಿಕಾರವೋ ವೈಯಕ್ತಿಕ ಪ್ರತಿಷ್ಠೆಯೋ ಮತ್ಯಾವ ಕಾರಣಕ್ಕೋ ಪಕ್ಷಾಂತರ ಮಾಡುತ್ತಾರೆ. ಅಂಥವರ ರಾಜಕೀಯ ಭವಿಷ್ಯ ಆರಕ್ಕೆ ಏರಿದ್ದೂ ಇದೆ. ಮೂರಕ್ಕೆ ಕುಸಿದಿದ್ದೂ ಇದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಈ ರಾಜಕಾರಣಿ ಸಂಪೂರ್ಣ ಭಿನ್ನ.
ರಾಜ್ಯ ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು, ಗೆಲವು ಸಾಧಿಸಿ ವಿಶಿಷ್ಟ ದಾಖಲೆಯನ್ನು ಬರೆದಿದ್ದಾರೆ. ಈ ರೀತಿ ವಿಶಿಷ್ಟ ದಾಖಲೆಯನ್ನು ಹೊಂದಿರುವ ರಾಜಕಾರಣಿ ಬೆಳ್ತಂಗಡಿಯ ಶಾಸಕ ವಸಂತ ಬಂಗೇರ. ಸದ್ಯ ಕಾಂಗ್ರೆಸ್ ನ ಶಾಸಕರಾಗಿರುವ ಅವರು, ಈ ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ಎರಡರಿಂದಲೂ ಚುನಾವಣೆಗೆ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದಾರೆ.
ಬೆಳ್ತಂಗಡಿ: 5ಬಾರಿಯ ಶಾಸಕ ವಸಂತ ಬಂಗೇರ ಸ್ಪರ್ಧೆಯ ನಿರ್ಧಾರವೇ ಹೈಲೈಟ್
ಈ ಬಾರಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವುದು ಬಹುತೇಕ ಖಚಿತವಾಗಿದೆ. 1983 ಮತ್ತು 1985ರಲ್ಲಿ ವಸಂತ ಬಂಗೇರ ಬಿಜೆಪಿಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಆ ನಂತರ 1989ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತ ಬಂಗೇರ ಸೋಲನ್ನು ಅನುಭವಿಸಿದರು. 1994ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ನಿಂತು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು.
ಸಹೋದರ ಪ್ರಭಾಕರ ಬಂಗೇರ ಗೆದ್ದಿದ್ದರು
1999 ಮತ್ತು 2004ರಲ್ಲಿ ಈ ಕ್ಷೇತ್ರ ಬಿಜೆಪಿ ಪಾಲಾಗಿತ್ತು. ಜೆಡಿಎಸ್ ನಿಂದ ಸ್ಪರ್ಧಿಸಿದ ವಂಸತ ಬಂಗೇರ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿ, ಅವರ ಸಹೋದರ ಪ್ರಭಾಕರ ಬಂಗೇರ ಗೆಲುವು ಸಾಧಿಸಿದ್ದರು. ಆ ನಂತರ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ವಸಂತ ಬಂಗೇರ ಸಹೋದರನನ್ನು ಸೋಲಿಸಿದರು.
2013ರಲ್ಲಿ ಕಾಂಗ್ರೆಸ್ ನಿಂದ ಗೆದ್ದರು
2013ರಲ್ಲಿ ವಸಂತ ಬಂಗೇರ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಬಿಜೆಪಿಯ ರಂಜನ್ ಗೌಡ ಅವರನ್ನು ಸೋಲಿಸಿ, ಶಾಸಕರಾಗಿ ಆಯ್ಕೆಯಾದರು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹೀಗೆ ಮೂರು ಪಕ್ಷಗಳಿಂದಲೂ ಗೆದ್ದು ವಿಶೇಷ ದಾಖಲೆ ನಿರ್ಮಿಸಿದವರು ವಸಂತ ಬಂಗೇರ. ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿ, ಬಳಿಕ ಜೆಡಿಎಸ್ ಸೇರ್ಪಡೆಗೊಂಡು ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು.
ಕಳೆಗುಂದಿದ ಜೆಡಿಎಸ್
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ವಸಂತ ಬಂಗೇರ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ನಂತರ ಕ್ಷೇತ್ರದಲ್ಲಿ ಜೆಡಿಎಸ್ ಸಂಪೂರ್ಣ ಕಳೆಗುಂದಿದೆ. ಕಳೆದ ಎರಡು ಚುನಾವಣೆಯಲ್ಲಿ ಬಿಜೆಪಿಗೂ ಇಲ್ಲಿ ಗೆಲವು ಸಾಧಿಸುವುದು ಸಾಧ್ಯವಾಗಿಲ್ಲ.
ಸಿದ್ದರಾಮಯ್ಯ ಒತ್ತಾಯಕ್ಕೆ ಮಣಿದರು
ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಂಗೇರ ಇನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದರು. ಆದರೆ ಕಾರ್ಯಕರ್ತರ ಒತ್ತಡ ಮತ್ತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪರ್ಧಿಸುವಂತೆ ಒತ್ತಾಯಿಸಿದ ಮೇರೆಗೆ ನಿರ್ಧಾರ ಬದಲಾಯಿಸಿದ್ದಾರೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಂಗೇರ ಮತ್ತೆ ಕಣಕ್ಕಿಳಿಯುವುದು ಖಚಿತವಾಗಿದೆ.