ಶಿವಮೊಗ್ಗದಲ್ಲಿ ನನಗೆ ಎದುರಾಳಿಗಳೇ ಇಲ್ಲ : ಕೆ.ಎಸ್.ಈಶ್ವರಪ್ಪ ಸಂದರ್ಶನ
Recommended Video

ಶಿವಮೊಗ್ಗ, ಮೇ 01 : 'ಶಿವಮೊಗ್ಗ ನಗರ ಕ್ಷೇತ್ರದಲ್ಲಿ ನಮಗೆ ಎದುರಾಳಿಗಳೇ ಇಲ್ಲ. ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿಗಳು ಸಾಕಷ್ಟು ಜನರಿದ್ದಾರೆ. ಬಿಜೆಪಿ ಕಡೆ ಮತದಾರರ ಒಲವು ಹೆಚ್ಚಿದೆ. ಆದ್ದರಿಂದ, ಬಿಜೆಪಿ ಗೆಲ್ಲುವ ವಿಶ್ವಾಸವಿದೆ' ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗ ನಗರ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬಿಡುವಿಲ್ಲದ ಪ್ರಚಾರ ಕಾರ್ಯದ ನಡುವೆ ಅವರು ಒನ್ ಇಂಡಿಯಾ ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ.
ಚುನಾವಣಾ ಸಿದ್ಧತೆ, ಸಿದ್ದರಾಮಯ್ಯ ಸರ್ಕಾರದ ಸಾಧನೆ, ಶಿವಮೊಗ್ಗದಲ್ಲಿ ಎದುರಾಳಿಗಳು, ಬಿಜೆಪಿಯನ್ನು ಏಕೆ ಬೆಂಬಲಿಸಬೇಕು ಎಂದು ಅವರು ಮಾತನಾಡಿದ್ದಾರೆ. 'ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆದ್ದೆ ಗೆಲ್ಲುತ್ತದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದ ಹಾಲಿ ಶಾಸಕರು ಕಾಂಗ್ರೆಸ್ನ ಕೆ.ಬಿ.ಪ್ರಸನ್ನ ಕುಮಾರ್. ಈ ಬಾರಿಯ ಚುನಾವಣೆಗೂ ಅವರೇ ಅಭ್ಯರ್ಥಿ. ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ, ಜೆಡಿಎಸ್ನಿಂದ ನಿರಂಜನ್ ಅವರು ಕಣದಲ್ಲಿದ್ದಾರೆ. ಸಂದರ್ಶನದ ವಿವರ...

ಚುನಾವಣಾ ಸಿದ್ಧತೆ ಹೇಗೆ ಸಾಗಿದೆ, ಪ್ರತಿಕ್ರಿಯೆ ಹೇಗಿದೆ?
ಶಿವಮೊಗ್ಗ ನಗರದ ಎಲ್ಲಾ ವರ್ಗದ, ಎಲ್ಲಾ ಸಮುದಾಯದ ಜನರು ಬಿಜೆಪಿ ಜೊತೆಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಬೇಕು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಜನರು ತೀರ್ಮಾನಿಸಿದ್ದಾರೆ. ಶಿವಮೊಗ್ಗ ನಗರದಲ್ಲೂ ಬಿಜೆಪಿ ಗೆಲ್ಲಿಸಬೇಕು ಎಂದು ಜನರು ತೀರ್ಮಾನಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ನಿಮ್ಮ ಎದುರಾಳಿ ಯಾರು?
ಶಿವಮೊಗ್ಗದಲ್ಲಿ ನಮಗೆ ಎದುರಾಳಿಯೇ ಇಲ್ಲ. ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳಿದ್ದಾರೆ. ಹಲವು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಕಡೆ ಮತದಾರರ ಒಲವು ಹೆಚ್ಚಿದೆ, ಬಿಜೆಪಿ ಗೆಲ್ಲುವ ವಿಶ್ವಾಸವಿದೆ.

ಸಿದ್ದರಾಮಯ್ಯ ಸರ್ಕಾರಕ್ಕೆ ಈಶ್ವರಪ್ಪ ಕೊಡುವ ಅಂಕವೆಷ್ಟು?
ಸಿದ್ದರಾಮಯ್ಯ ಸರ್ಕಾರಕ್ಕೆ ಅಂಕ ಕೊಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಸಂಪೂರ್ಣವಾಗಿ ಫೇಲ್ ಆಗಿದೆ. ರಾಜ್ಯದಲ್ಲಿ ಕೋಮುಗಲಭೆ ಆಗಿದೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ. ಮರಳು ಮಾಫಿಯಾ ನಡೆಯುತ್ತಿದೆ. ಭ್ರಷ್ಟಾಚಾರದ ಸುರಿಮಳೆ ಆಗುತ್ತಿದೆ. ಇದಕ್ಕೆ ಪಾಸ್ ಅಂಕಗಳನ್ನು ನೀಡುವುದಕ್ಕೆ ಬರುವುದಿಲ್ಲ.

ಈ ಬಾರಿ ಬಿಜೆಪಿಯನ್ನು ಏಕೆ ಬೆಂಬಲಿಸಬೇಕು?
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿರುವ ಕೆಲಸವನ್ನು ಪ್ರಪಂಚದ ಎಲ್ಲಾ ರಾಷ್ಟ್ರಗಳು ಮೆಚ್ಚಿವೆ. ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ಬೇಕು. ಕೆಟ್ಟ ಸಿದ್ದರಾಮಯ್ಯ ಅವರ ಸರ್ಕಾರ ತೆಗೆದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳಾಗಿ ಮಾಡಬೇಕು. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಎಲ್ಲಾ ವರ್ಗದವರಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದ್ದರಿಂದ, ಬಿಜೆಪಿ ಸರ್ಕಾರ ಬೇಕು, ಜನರ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ.












Click it and Unblock the Notifications