ಇದು ಎಲೆಕ್ಷನ್ ಜ್ವರ, ಸಂದರ್ಶನದಲ್ಲಿ ಬಯಲಾಯ್ತು ಪ್ರಥಮ್ ಬಿಜೆಪಿ ಒಲವು
ಮೈಸೂರು, ಜನವರಿ 20 : 'ಒಳ್ಳೆ ಹುಡುಗ' ಪ್ರಥಮ್ ಗೆ ರಾತ್ರೋ ರಾತ್ರಿ ಕೀರ್ತಿ ಬಂದಿತು. ಅವರು ನಿರ್ದೇಶಿಸುತ್ತಿದ್ದ ಸಿನಿಮಾ ಮೂಲಕ ಸದ್ದು ಮಾಡಬೇಕಿದ್ದ ವ್ಯಕ್ತಿ ಪ್ರಥಮ್ ರ ಜೀವನವನ್ನೇ ಬದಲಿಸಿದ್ದು 'ಬಿಗ್ ಬಾಸ್' ಕನ್ನಡ ಸೀಸನ್ ನಾಲ್ಕು. ಪ್ರಥಮ್ ರ ಮಾತಿನ ಧಾಟಿ, ಕೂಗಾಟ- ಕಿರುಚಾಟ, ಸ್ಫುಟವಾದ ನೆನಪಿನ ಶಕ್ತಿ.. ಹೀಗೆ ಟಿವಿ ವೀಕ್ಷಕರಿಗೆ ಅವರು ಇಷ್ಟವಾದರು.
ಸಹ ಸ್ಪರ್ಧಿಗಳ ಮಾತನ್ನು ಅವರು ಖಂಡಿಸುತ್ತಿದ್ದ ಪರಿ, ಕನ್ನಡದ ಮಾತುಗಾರಿಕೆ, ಆಟದ ಚತುರತೆ ಎಲ್ಲವೂ ಈಗ ಮತ್ತೊಮ್ಮೆ ನೆನಪಾಗುತ್ತದೆ. ಅಷ್ಟೇ ಅಲ್ಲ, ಇತ್ತೀಚಿಗೆ ಹಲವು ಅನುಭವಿ ನಟರಿಗೆ ಪ್ರೋತ್ಸಾಹ ನೀಡಿ, ತಮ್ಮ ಚಿತ್ರದಲ್ಲಿ ಅಭಿನಯಿಸುವಂತೆ ಪ್ರೋತ್ಸಾಹಿಸುತ್ತಿರುವ ಪರಿ ಅಚ್ಚರಿ ಮೂಡಿಸುತ್ತದೆ.
ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಒಳ್ಳೆ ಹುಡುಗ ಪ್ರಥಮ್
ಇಂಥ ಪ್ರಥಮ್ ಇತ್ತೀಚೆಗೆ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದರು. ಆದರೆ ಯಾವ ಪಕ್ಷದಿಂದ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ ಅಷ್ಟೇ. ತಮ್ಮ ರಾಜಕೀಯ ಅರಂಗೇಟ್ರಂನ ಬಗ್ಗೆ ಅವರ ಅಭಿಮಾನಿಗಳು ಹಾಗೂ ಪ್ರಥಮ್ ಬಗ್ಗೆ ಕುತೂಹಲ ಇರಿಸಿಕೊಂಡವರಿಗೆ ಇದ್ದ ಪ್ರಶ್ನೆಗಳಿಗೆ ಸ್ವತಃ ಅವರೇ ಉತ್ತರಿಸಿದ್ದಾರೆ: ಒನ್ಇಂಡಿಯಾ ಕನ್ನಡದ ಸಂದರ್ಶನದಲ್ಲಿ. ಏನಂದ್ರಪ್ಪಾ ಪ್ರಥಮ್ ಎಂಬುದು ತಿಳಿಯುವುದಕ್ಕೆ ಮುಂದೆ ಓದಿ.
ಪ್ರಶ್ನೆ: ಹನೂರು ತಾಲೂಕಾಗಿ ಘೋಷಣೆಯಾದಾಗ ಅಭ್ಯರ್ಥಿಯಾಗಿ ಟಿಕೆಟ್ ಕೊಡಿ ಎಂದು ಸಿದ್ದರಾಮಯ್ಯ ಅವರಿಗೆ ಕೇಳಿದ್ದಿರಿ. ನೀವು ಕಾಂಗ್ರೆಸ್ ನಿಂದ ಚುನಾವಣೆ ಕಣಕ್ಕಿಳಿಯುತ್ತೀರಾ ?
ಪ್ರಥಮ್: ಇದು ನಾನು ಹುಟ್ಟಿ ಬೆಳೆದ ಊರು. ಇದು ತಾಲೂಕು ಎಂದು ಘೋಷಣೆ ಆಗಬೇಕು ಎಂಬುದು ಬಹುದಿನಗಳ ಕನಸು. ಅದು ನನಸಾಗಿದೆ. ನನಗೆ ಟಿಕೆಟ್ ಕೊಡುತ್ತಾರೋ ಇಲ್ಲವೋ, ಗೊತ್ತಿಲ್ಲ. ಕೇಳುವುದಂತೂ ಕೇಳಿದೆ. ಆದರೆ ನಾನು ಕಾಂಗ್ರೆಸ್ ಗೆ ಹೋಗುವುದು ಶೇ 99 ರಷ್ಟು ಅನುಮಾನ.
ಪ್ರಶ್ನೆ: 2- 3 ತಿಂಗಳಿನಿಂದ ನಿಮ್ಮ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗುತ್ತಿವೆಯಲ್ಲಾ ಕಾರಣವೇನು?
ಪ್ರಥಮ್: ನಾನು ಹಿಂದಿನಿಂದಲೂ ಪೋಸ್ಟ್ ಗಳನ್ನು ಹಾಕುತ್ತಿದ್ದೇನೆ. ಈ ಮಾತನ್ನು ನಾನು ಒಪ್ಪುವುದಿಲ್ಲ. ಶಂಕರ್ ಅಶ್ವತ್ ಕುರಿತಾದದ್ದು ಮಾನವೀಯ ಕಳಕಳಿ. ಸತ್ಯಜಿತ್ ಅವರನ್ನು ನನ್ನ ಚಿತ್ರಕ್ಕೆ ಆಹ್ವಾನಿಸಿದ್ದು ಕೂಡ ಸ್ವಾವಲಂಬನೆಗಾಗಿ. ದೀಪಕ್ ಸಾವು ನನ್ನನ್ನು ಕೆರಳಿಸಿತ್ತು. ನನ್ನದು ಸಾಮಾಜಿಕ ಕಳಕಳಿಯಷ್ಟೇ. ಒಳ್ಳೆಯ ಕೆಲಸಕ್ಕೆ ನಾನು ಸರ್ವ ಸನ್ನದ್ಧ. ಅದು ಮಹಾದಾಯಿ ಹೋರಾಟ ಆಗಿರಬಹುದು ಅಥವಾ ದಾನಮ್ಮ ಅತ್ಯಾಚಾರ ಪ್ರಕರಣದ ವಿರುದ್ಧ ಧ್ವನಿ ಎತ್ತುವುದಾಗಿರಬಹುದು.
ಪ್ರಶ್ನೆ: ನೀವೇನೋ ರಾಜಕೀಯಕ್ಕೆ ಬರಲು ಸನ್ನದ್ಧರಾಗಿದ್ದೀರಿ. ಜನ ನಿಮ್ಮಲ್ಲಿ ಏನು ವಿಶೇಷವಿದೆ ಅಂತ ಆಯ್ಕೆ ಮಾಡಬೇಕು?
ಪ್ರಥಮ್: ನಾನು ಕಳ್ ನನ್ಮಗ ಇರಬಹುದು, ಆದರೆ ಕೋತಿ ನನ್ಮಗ ಅಂತೂ ಅಲ್ಲ. ನಾನು ಹಠವಾದಿಯಷ್ಟೇ ಅಲ್ಲ, ಆಶಾವಾದಿಯೂ ಹೌದು. ಇದು ರಾಜಕಾರಣಿಗೆ ಇರಲೇಬೇಕಾದ ಲಕ್ಷಣ. ಹಾಗಾಗಿ ನಾನು ವಿಶೇಷ. ನಾನು ಯಾರನ್ನೂ ಶತ್ರುವನ್ನಾಗಿ ತೆಗೆದುಕೊಳ್ಳುವುದಿಲ್ಲ. ಸ್ನೇಹದಿಂದ ಅಧಿಕಾರಿಗಳ ಬಳಿ ಕೆಲಸ ಮಾಡಿಸುತ್ತೇನೆ.
ಪ್ರಶ್ನೆ: ಬಿಜೆಪಿ ಬಗ್ಗೆ ನಿಮ್ಮ ಒಲವೇಕೆ?
ಪ್ರಥಮ್: ನನ್ನ ಹಲವು ಯೋಚನೆಗಳು ಬಿಜೆಪಿಯ ಯೋಚನೆಗಳಿಗೆ ಪೂರಕವಾಗಿದೆ. ಕಾಂಗ್ರೆಸ್ ಬಗ್ಗೆ ನನ್ನ ಒಲವು ಇಲ್ಲ ಅಂತಲ್ಲ. ನನ್ನ ನಿಲುವಿಗೆ ಅದು ಹತ್ತಿರವಾಗಿಲ್ಲ. ಸಿದ್ದರಾಮಯ್ಯ ಒಳ್ಳೆ ಮನುಷ್ಯ. ಕಾಂಗ್ರೆಸ್ ನಿಂದ ನಾನು ಸ್ಪರ್ಧಿಸುವುದು ಭಾಗಶಃ ಕಡಿಮೆಯೇ.
ಪ್ರಶ್ನೆ: ಚುನಾವಣೆಯಲ್ಲಿ ಗೆಲ್ಲಲು ಯಾವ ರೀತಿ ತಯಾರಿ ನಡೆಯುತ್ತಿದೆ? ಸ್ಟಾರ್ ನಟರನ್ನು ಪ್ರಚಾರಕ್ಕೆ ಕರೆತರುವ ಆಲೋಚನೆ ಇದೆಯಾ?
ಪ್ರಥಮ್: ನಾನು ಸ್ಪರ್ಧಿಸುವ ಊರಿನಲ್ಲಿ ಸಮಸ್ಯೆಗಳನ್ನು ಬೇರು ಮಟ್ಟದಿಂದ ಅಧ್ಯಯನ ನಡೆಸಲು ಪ್ರಯತ್ನಿಸುತ್ತೇನೆ. ಹಾಗಾದಾಗ ಗೆಲುವು ಸಾಧ್ಯ. ನಮ್ಮ ಜನ ಒಪ್ಪಿಕೊಳ್ಳುವುದು ವ್ಯಕ್ತಿಯನ್ನು, ಆ ನಂತರ ಪಕ್ಷವನ್ನು. ನಾನು ಕ್ಷೇತ್ರವನ್ನು ಉತ್ತಮಪಡಿಸುತ್ತೇನೆ. ನಾನೆಂದಿಗೂ ನಾಯಕನಲ್ಲ, ಜನಸೇವಕ ಅಷ್ಟೇ.
ಪ್ರಶ್ನೆ: ರಾಜಕಾರಣ ಹಾಗೂ ನಿಮ್ಮ ಸಿನಿಮಾಗಳನ್ನು ಹೇಗೆ ಒಟ್ಟಿಗೆ ನಿಭಾಯಿಸುತ್ತೀರಿ?
ಪ್ರಥಮ್: ಈಗಾಗಲೇ ಕೆಲವು ಚಿತ್ರಗಳಿಗೆ ಸಹಿ ಹಾಕಿದ್ದೇನೆ. ಬೇಗನೇ ಸಿನಿಮಾಗಳನ್ನು ಮುಗಿಸುತ್ತಿದ್ದೇನೆ. ಕೆಲವು ನಿರ್ಮಾಪಕರನ್ನು ಸಂತೈಸುತ್ತಿದ್ದೇನೆ. ಕಾರಣ ಅವರು ನನ್ನನ್ನು ನಂಬಿ ಹಣ ಹೂಡಿರುತ್ತಾರೆ. ಸಿನಿಮಾ ರಂಗದಿಂದ ಹೊರಬಂದು ಸಂಪೂರ್ಣ ರಾಜಕೀಯ ಅಖಾಡಕ್ಕೆ ಇಳಿಯುವುದಕ್ಕೆ ಸಜ್ಜಾಗುತ್ತಿದ್ದೇನೆ.
ಪ್ರಶ್ನೆ: ನೀವು ಈ ಹಿಂದೆ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದೀರಾ? ರಾಜಕೀಯಕ್ಕೆ ಬಂದ ಮೇಲೆ ಒತ್ತಡಕ್ಕೆ ಒಳಗಾಗಿ ಘಟನೆ ಮರುಕಳಿಸುವುದಿಲ್ಲ ಅನ್ನೋ ಗ್ಯಾರಂಟಿ ಏನು?
ಪ್ರಥಮ್: ನನ್ನಿಂದ ತಪ್ಪು ಆಗಿದೆ. ಆ ಪರಿಸ್ಥಿತಿಯಲ್ಲಿ ನನಗೆ ಏನು ಮಾಡಬೇಕೆಂದು ಗೊತ್ತಾಗದೆ ಆ ಥರ ಮಾಡಿದೆ. ತಪ್ಪು ಯಾರು ಮಾಡುವುದಿಲ್ಲ ನೀವೇ ಹೇಳಿ. ಈ ಘಟನೆ ನಡೆದ 7 ತಿಂಗಳ ಗ್ಯಾಪ್ ನಲ್ಲಿ ನನ್ನಿಂದ ಯಾವುದೇ ತಪ್ಪುಗಳಾಗಿಲ್ಲ. ಅದರಿಂದ ನಾನು ತಿದ್ದುಕೊಂಡಿದ್ದೇನೆ. ತಿದ್ದುಕೊಳ್ಳುತ್ತೇನೆ.