ಅತಂತ್ರ ವಿಧಾನಸಭೆ: ಕಾಂಗ್ರೆಸ್ಗೆ ಮುಳುವಾದ ಅಂಶಗಳೇನು?
ಬೆಂಗಳೂರು, ಮೇ 17: ರಾಜ್ಯದಲ್ಲಿ ಮತದಾರರು ನೀಡಿರುವ ಅತಂತ್ರ ವಿಧಾನಸಭೆಯ ತೀರ್ಪು ರಾಜಕೀಯ ರಂಗದಲ್ಲಿ ಕೋಲಾಹಲ ಮೂಡಿಸಿದೆ. ಬಿಜೆಪಿ ಎಂಟು ಮತಗಳಿಂದ ಬಹುಮತದ ಕೊರತೆ ಅನುಭವಿಸುತ್ತಿರುವುದು ಒಂದೆಡೆಯಾದರೆ, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಗೊಂದಲ ಇನ್ನೊಂದೆಡೆ.
ಚುನಾವಣೆಗೂ ಮುನ್ನ ಪ್ರಚಾರ ಆರಂಭವಾದಾಗ ಕಾಂಗ್ರೆಸ್ ಸುಲಭವಾಗಿ ಬಹುಮತ ಪಡೆದುಕೊಳ್ಳಲಿದೆ ಎಂಬ ಅನಿಸಿಕೆ ಮೂಡಿಸಿತ್ತು. ಆದರೆ ಅದು 78 ಸೀಟುಗಳೊಂದಿಗೆ ತನ್ನ ಹೋರಾಟ ಅಂತ್ಯಗೊಳಿಸಿತು. ಬುಧವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ನ ಅನೇಕ ಹಿರಿಯ ಮುಖಂಡರು ತಮ್ಮ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ ಎಂದು ದೂಷಿಸಿದರು.
ವಿಧಾನಸಭೆಗೆ ಅಗತ್ಯವಿರುವಷ್ಟು ಬಹುಮತವನ್ನು ಬಿಜೆಪಿ ಗಳಿಸಲು ಸಾಧ್ಯವಾಗದೇ ಇರುವುದಕ್ಕೆ ಮುಖ್ಯ ಕಾರಣ ಬೆಂಗಳೂರಿನಲ್ಲಿ ಅದರ ಕಳಪೆ ಪ್ರದರ್ಶನ ಎಂದು ಖ್ಯಾತ ರಾಜಕೀಯ ವಿಶ್ಲೇಷಕ ಡಾ. ಸಂದೀಪ್ ಶಾಸ್ತ್ರಿ ವಿವರಿಸುತ್ತಾರೆ.

ಅನೇಕ ಪ್ರಮುಖ ಕಾರ್ಯಸೂಚಿಗಳು ವಿಫಲವಾಗಿದ್ದು ಕಾಂಗ್ರೆಸ್ನ ಸೋಲಿಗೆ ಕಾರಣ. ಸ್ಥಳೀಯ ಸಮಸ್ಯೆಗಳ ಮೇಲೆಯೇ ಸಂಪೂರ್ಣ ಕೇಂದ್ರೀಕರಿಸಿದ್ದು, ಕಾಂಗ್ರೆಸ್ಗೆ ಯಾವುದೇ ಲಾಭವನ್ನು ತಂದುಕೊಡುವಲ್ಲಿ ಯಶಸ್ವಿಯಾಗಲಿಲ್ಲ ಎಂದು ಅವರು ಒನ್ ಇಂಡಿಯಾಕ್ಕೆ ತಿಳಿಸಿದರು.
ಚುನಾವಣೆಗೂ ಮುನ್ನ ಕಾಂಗ್ರೆಸ್ ಬಿತ್ತಿದ ಲಿಂಗಾಯ ಧರ್ಮದ ವಿಚಾರವೂ ಚುನಾವಣೆಯಲ್ಲಿ ಬಹುದೊಡ್ಡ ವೈಫಲ್ಯ ಕಂಡಿತು. ಇದರ ಪರಿಣಾಮವಾಗಿ ಲಿಂಗಾಯತರು ಭಾರಿ ಪ್ರಮಾಣದಲ್ಲಿ ಬಿಜೆಪಿಯನ್ನು ಬೆಂಬಲಿಸಿರುವುದನ್ನು ಕಾಣಬಹುದು. ಮುಖ್ಯವಾಗಿ ಕಾಂಗ್ರೆಸ್ನಲ್ಲಿ ಲಿಂಗಾಯತ ವಿಚಾರದ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದ್ದ ಹೆಚ್ಚಿನ ಸಚಿವರು ಕೂಡ ಚುನಾವಣೆಯಲ್ಲಿ ಸೋಲು ಅನುಭವಿಸಿದರು.
ಅಹಿಂದ ಕಾರ್ಯಸೂಚಿ ವಿಚಾರಕ್ಕೆ ಬಂದರೆ, ಅದು ಕಾಂಗ್ರೆಸ್ಗೆ ಹೆಚ್ಚಿನ ಬಲವನ್ನೇನೂ ತಂದುಕೊಡಲಿಲ್ಲ. ಕುರುಬಯೇತರ ಮತ್ತು ಇತರೆ ಹಿಂದುಳಿದ ವರ್ಗದ ಜನರು ಬಿಜೆಪಿ ಕಡೆಗೆ ಒಲವು ತೋರಿಸಿದರು. ಒಳ ಮೀಸಲಾತಿ ನೀಡುವ ಶಿಫಾರಸಿನ ಪ್ರಸ್ತಾವವನ್ನು ಅನುಷ್ಠಾನಕ್ಕೆ ತರದೇ ಹೋಗಿದ್ದರಿಂದ ಉಳಿದ ದಲಿತರು ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ಹೊಂದಿದ್ದರು. ಕಾಂಗ್ರೆಸ್ ಪರಿಣಾಮ ಸೃಷ್ಟಿಸುವ ಉದ್ದೇಶದಿಂದ ಪ್ರಯತ್ನಿಸಿದ ಒಟ್ಟಾರೆ ಸಾಮಾಜಿಕ ಸಂಯೋಜನೆಗಳು ಅದಕ್ಕೇ ತಿರುವು ಮುರುವಾದವು. ಅಂತಿಮವಾಗಿ ಬಿಜೆಪಿಗೆ ಲಾಭ ತಂದುಕೊಟ್ಟವು.
ಬಿಜೆಪಿಗೆ ಕೊನೆಯ ದಿನಗಳ ಪ್ರಚಾರದಲ್ಲಿನ ಬೆಳವಣಿಗೆಗಳು ಕೆಲಸ ಮಾಡಿದವು. ಪ್ರಧಾನಿ ನರೇಂದ್ರ ಅವರ ಕೊನೆಯ ದಿನಗಳ ಪ್ರಚಾರ ಜನರ ಮನಸ್ಸನ್ನು ಮುಟ್ಟಿತು ಎನ್ನುತ್ತಾರೆ ಸಂದೀಪ್ ಶಾಸ್ತ್ರಿ. ಬಿಜೆಪಿಯ ಸಂಘಟನಾ ತಂತ್ರವು ಅದರ ಬೆಂಬಲಿಗರನ್ನು ಮತಗಟ್ಟೆ ಕಡೆಗೆ ಸೆಳೆಯುವಲ್ಲಿ ಸಫಲವಾಯಿತು. ಇದು ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾಯಿತು.
ಆದರೆ, ಬೆಂಗಳೂರು ಬಿಜೆಪಿಯ ಹಿನ್ನಡೆಗೆ ಕಾರಣವಾಯಿತು. ಮಧ್ಯಮ ಮತ್ತು ಮೇಲ್ಜಾತಿಯ ಜನರು ಹೊರಗೆ ಬಂದು ಮತಚಲಾಯಿಸಲಿಲ್ಲ. ಮತದಾನ ಶನಿವಾರ ನಡೆಸಿದ್ದರಿಂದ ಹೆಚ್ಚುನವರು ರಜೆ ಕಳೆಯಲು ಶುಕ್ರವಾರವೇ ಪ್ರವಾಸಕ್ಕೆ ಹೊರಟರು. ಇದರಿಂದ ಬಿಜೆಪಿ ಸಂಖ್ಯೆ ಇಳಿಕೆಯಾಯಿತು ಎಂದು ಅವರು ವಿಶ್ಲೇಷಿಸಿದರು.











Click it and Unblock the Notifications