22 ವರ್ಷದ ಹಿಂದಿನ 'ಕರ್ಮ' ಕಾಂಗ್ರೆಸ್ಗೆ ಎರವಾಗಲಿದೆಯೇ?
ಬೆಂಗಳೂರು, ಮೇ 16: ಸುಮಾರು 22 ವರ್ಷಗಳ ಹಿಂದೆ ಗುಜರಾತ್ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಘಟನೆಗೂ ಇಂದಿನ ಕರ್ನಾಟಕ ರಾಜಕೀಯದ ಸನ್ನಿವೇಶಕ್ಕೂ ಸಾಮ್ಯತೆ ಇದೆಯೇ?
ರಾಜಕೀಯ ಇತಿಹಾಸದ ಘಟನಾವಳಿಗಳನ್ನು ನೋಡಿದಾಗ ಕೆಲವೊಂದು ಸನ್ನಿವೇಶಗಳು ಒಂದಲ್ಲ ಒಂದು ಆಯಾಮದಲ್ಲಿ ಪುನರಾವರ್ತನೆಯಾಗುವುದನ್ನು ಕಾಣಬಹುದು.
ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಗೆ 5 ಕಾರಣಗಳು!
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ನಡೆಸುತ್ತಿರುವ ಕಸರತ್ತನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಚರಿತ್ರೆಯ ಘಟನೆಯನ್ನು ನೆನಪಿಸಿದ್ದಾರೆ. 22 ವರ್ಷಗಳ ಬಳಿಕ ಕರ್ಮ ಕಾಂಗ್ರೆಸ್ಅನ್ನು ಕಾಡಲು ಕರ್ನಾಟಕಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಮೊದಲ ಬಿಜೆಪಿ ಸರ್ಕಾರ
ಗುಜರಾತ್ನಲ್ಲಿ 1995ರಲ್ಲಿ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆಗ ಕೇಶುಭಾಯ್ ಪಟೇಲ್ ಮುಖ್ಯಮಂತ್ರಿಯಾಗಿದ್ದರು. ನರೇಂದ್ರ ಮೋದಿ ಅವರು ಬಿಜೆಪಿ ಸಂಘಟನಾ ಕಾರ್ಯದರ್ಶಿ ಆಗಿದ್ದರು. ಇದಕ್ಕೂ ಮೊದಲು 1990ರಲ್ಲಿ ಜನತಾದಳಕ್ಕೆ ಬೆಂಬಲ ನೀಡುವ ಮೂಲಕ ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚನೆಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದಿತ್ತು.
ರಾಜ್ಯಪಾಲ ವಜುಭಾಯಿ ವಾಲ ಮುಂದಿರುವ ನಾಲ್ಕು ಆಯ್ಕೆಗಳು
ಬಂಡಾಯಕ್ಕೆ ಕಾಂಗ್ರೆಸ್ ಬೆಂಬಲ
ಒಂದು ವರ್ಷದಲ್ಲೇ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ಬಿಜೆಪಿಯ ಶಂಕರ್ಸಿನ್ಹ ವಾಘೇಲಾ ಅವರು ಕಾಂಗ್ರೆಸ್ನ ಬೆಂಬಲ ಪಡೆದು ಸರ್ಕಾರವನ್ನು ಒಡೆದು ಕೆಲವು ಬೆಂಬಲಿಗರೊಂದಿಗೆ ಹೊರಬಂದಿದ್ದರು. 28 ಬೆಂಬಲಿತ ಶಾಸಕರನ್ನು ಹೊಂದಿದ್ದ ವಾಘೇಲಾ ಅವರಿಗೆ ಕಾಂಗ್ರೆಸ್ನ 43 ಮತ್ತು 13 ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಇತ್ತು.
ಹದಿನೈದೇ ನಿಮಿಷದಲ್ಲಿ ಆದೇಶ
ಬಿಜೆಪಿಯು ವಿಶ್ವಾಸಮತ ಸಾಬೀತುಪಡಿಸುವ ಸಂದರ್ಭದಲ್ಲಿ ಅದಕ್ಕೆ ಅವಕಾಶ ನೀಡದಂತೆ ವಿಧಾನಸಭೆ ಒಳಗೆ ಭಾರಿ ಗದ್ದಲ ನಡೆದಿತ್ತು. ಇಡೀ ವಿರೋಧ ಪಕ್ಷವನ್ನು ಸ್ಪೀಕರ್ ಒಂದು ದಿನ ಅಮಾನತು ಮಾಡಿದ್ದರು. ಬಿಜೆಪಿ ವಿಶ್ವಾಸಮತ ಯಾಚಿಸಿ, ತನ್ನ ಬಲವನ್ನು ಸಾಬೀತುಪಡಿಸಿಕೊಂಡಿತ್ತು.
ಆದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ ಎಂದು ರಾಜ್ಯಪಾಲ ಕೃಷ್ಣಪಾಲ್ ಸಿಂಗ್ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದರು. ವರದಿ ಪ್ರಧಾನಿಯ ಕಚೇರಿ ತಲುಪಿದ 15 ನಿಮಿಷದಲ್ಲಿಯೇ ಗುಜರಾತ್ ಸರ್ಕಾರವನ್ನು ಅನರ್ಹಗೊಳಿಸಿ, ರಾಷ್ಟ್ರಪತಿ ಆಡಳಿತ ಹೇರುವಂತೆ ಆದೇಶ ಹೊರಬಿದ್ದಿತ್ತು.
ಮುಖ್ಯಮಂತ್ರಿಯಾದ ವಾಘೇಲಾ
ಒಂದು ತಿಂಗಳಿನಲ್ಲಿಯೇ ಶಂಕರ್ ಸಿನ್ಹಾ ವಾಘೇಲಾ ಅವರ ನೇತೃತ್ವದ ರಾಷ್ಟ್ರೀಯ ಜನತಾ ಪಾರ್ಟಿಯು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ವಾಘೇಲಾ ಅವರು ಒಂದು ವರ್ಷದ ಅವಧಿವರೆಗೆ ಆಡಳಿತ ನಡೆಸಿದರು. ಬಳಿಕ ಅವರ ಸಹವರ್ತಿ ದಿಲೀಪ್ ಪರೀಖ್ ಅವರು ಕೆಲವು ತಿಂಗಳು ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ಪಕ್ಷ ಈ ಇಬ್ಬರಿಗೂ ನೀಡಿದ ಬೆಂಬಲವನ್ನು ವಾಪಸ್ ತೆಗೆದುಕೊಂಡಿತು.
ಮತ್ತೆ ಗೆದ್ದ ಬಿಜೆಪಿ
1998ರಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಿತು. ಆಗ ಬಿಜೆಪಿ ಸುಲಭವಾಗಿ ಗದ್ದುಗೆಗೆ ಏರಿತು. 182 ಸೀಟುಗಳಲ್ಲಿ ವಾಘೇಲಾ ಪಕ್ಷ ಕೇವಲ ನಾಲ್ಕರಲ್ಲಿ ಜಯಗಳಿಸಿತ್ತು. ಕೇಶುಭಾಯ್ ಪಟೇಲ್ ಮತ್ತೆ ಮುಖ್ಯಮಂತ್ರಿಯಾದರು.
2001ರಲ್ಲಿ ಅನಾರೋಗ್ಯದ ಕಾರಣ ಕೇಶುಭಾಯ್ ಪಟೇಲ್ ರಾಜೀನಾಮೆ ಸಲ್ಲಿಸಿದಾಗ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2002ರಲ್ಲಿ ವಾಘೇಲಾ ತಮ್ಮ ಪಕ್ಷವನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸಿದರು. ಆಗಲೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು.
|
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಈ ವಿವರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕೆಲವರು, 22 ವರ್ಷದ ಹಿಂದಿನ ಘಟನೆ ಕರ್ನಾಟಕದ ಪ್ರಸ್ತುತದ ಘಟನೆಗೆ ಹೊಂದಿಕೊಳ್ಳುತ್ತಿದೆ. ನೈತಿಕತೆ, ಸಂವಿಧಾನಬದ್ಧ ನಿಯಮಗಳ ಬಗ್ಗೆ ಮಾತನಾಡುವವರು ನೆಹರೂ ಕಾಲದಿಂದಲೂ ಪ್ರಜಾಪ್ರಭುತ್ವವನ್ನು ಮತ್ತು ಚುನಾಯಿತ ಸರ್ಕಾರವನ್ನು ಕೊಲ್ಲುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆಗಿನ ಬಿಜೆಪಿ ಅಧ್ಯಕ್ಷ ಈಗ ರಾಜ್ಯಪಾಲ
ಗುಜರಾತ್ನಲ್ಲಿ ಮೊದಲ ಬಿಜೆಪಿ ಸರ್ಕಾರ 1996ರಲ್ಲಿ ಪತನಗೊಂಡ ಸಂದರ್ಭದಲ್ಲಿ ಬಿಜೆಪಿಯ ಗುಜರಾತ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದವರು ಕರ್ನಾಟಕದ ಈಗಿನ ರಾಜ್ಯಪಾಲ ವಜೂಭಾಯಿ ವಾಲಾ. ರಾಜ್ಯಪಾಲರು ಬಿಜೆಪಿಯವರಾಗಿರುವುದರಿಂದ ಅವರ ಪರವಾಗಿಯೇ ಒಲವು ತೋರಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಪ್ರಧಾನಿಯಾಗಿದ್ದವರು ದೇವೇಗೌಡ
ಗುಜರಾತ್ನ ಬಿಜೆಪಿ ಸರ್ಕಾರವನ್ನು ವಜಾಗೊಳಿಸುವಂತೆ ಹದಿನೈದೇ ನಿಮಿಷದಲ್ಲಿ ಆದೇಶ ನೀಡಿದ್ದು ಆಗ ಪ್ರಧಾನಿಯಾಗಿದ್ದ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ. ಈಗ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಅವರ ಕರ್ತವ್ಯವನ್ನು ನೆನಪಿಸುತ್ತಿದ್ದಾರೆ. ತಮಗೆ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಕರ್ಮ ಎಲ್ಲಿದ್ದರೂ ಹಿಂಬಾಲಿಸುತ್ತದೆ ಎಂದು ಹೇಳಿದ್ದಾರೆ.