ಹಂಗಾಮಿ ಸ್ಪೀಕರ್ ಸ್ಥಾನಕ್ಕೆ ದೇಶಪಾಂಡೆ ಹೆಸರು ಶಿಫಾರಸು
ಬೆಂಗಳೂರು, ಮೇ 17: ವಿಧಾನಸಭೆಯ ಹಂಗಾಮಿ ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ನ ಹಿರಿಯ ನಾಯಕ ಆರ್ವಿ ದೇಶಪಾಂಡೆ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.
ದೇಶಪಾಂಡೆ ಅವರು ವಿಧಾನಸಭೆಯ ಅತಿ ಹಿರಿಯ ಸದಸ್ಯರಾಗಿರುವುದರಿಂದ ಸಂಪ್ರದಾಯದಂತೆ ಅವರ ಹೆಸರನ್ನು ವಿಧಾನಸಭೆ ಸಚಿವಾಲಯ ಸೂಚಿಸಿದೆ. ದೇಶಪಾಂಡೆ ಅವರ ಹೆಸರನ್ನು ರಾಜ್ಯಪಾಲರ ಅನುಮೋದನೆಗೆ ರವಾನಿಸಲಾಗಿದೆ.
ಬಿ.ಎಸ್ ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಗ ಎಲ್ಲರ ಗಮನ ಬಿಜೆಪಿ ಬಹುಮತ ಸಾಬೀತುಪಡಿಸಬೇಕಿರುವ ವಿಧಾನಸಭೆಯತ್ತ ಹೊರಳಿದೆ. ಆದರೆ, ಇದು ಸುಪ್ರೀಂಕೋರ್ಟ್ನಲ್ಲಿ ಇಂದು (ಗುರುವಾರ) ವಿಚಾರಣೆಗೆ ಬರಲು ಬಾಕಿ ಇರುವ ರಿಟ್ ಅರ್ಜಿಯ ಕುರಿತ ತೀರ್ಪಿನ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.

ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ಸ್ಪೀಕರ್ ಅವರ ಪಾತ್ರ ನಿರ್ಣಾಯಕವಾಗಿದೆ. ಬಹುಮತ ಪರೀಕ್ಷೆಗೆ ಕಲಾಪ ನಡೆಸುವ ಸಂದರ್ಭದಲ್ಲಿ ಹಂಗಾಮಿ ಸ್ಪೀಕರ್ ಅವರನ್ನು ಆಯ್ಕೆ ಮಾಡಲೇಬೇಕು. ಅದಕ್ಕೂ ಮುನ್ನ ಹಂಗಾಮಿ ಸ್ಪೀಕರ್ ಏನು ಎಂಬುದನ್ನು ನೋಡೋಣ ಬನ್ನಿ.
ಹಂಗಾಮಿ ಸ್ಪೀಕರ್ ಎಂದರೆ ಕೆಲವು ದಿನಗಳ ಮಟ್ಟಿಗೆ ತಾತ್ಕಾಲಿಕವಾಗಿ ವಿಧಾನಸಭೆಯಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುವವರು. ಕೇಂದ್ರ ಅಥವಾ ರಾಜ್ಯ ಶಾಸನಸಭೆಯು ಕಾರ್ಯನಿರ್ವಹಿಸಲು ಸೀಮಿತ ಅವಧಿಯವರೆಗೆ ಹಂಗಾಮಿ ಸ್ಪೀಕರ್ಅವರನ್ನು ನೇಮಿಸಲಾಗುತ್ತದೆ. ಹೊಸ ವಿಧಾನಸಭೆ ಚುನಾಯಿತವಾದಾಗ ಸ್ಪೀಕರ್ ಅಥವಾ ಡೆಪ್ಯುಟಿ ಸ್ಪೀಕರ್ ಅವರ ಆಯ್ಕೆ ನಡೆಯುವುದಿಲ್ಲ. ಅದರ ಬದಲು ಹಂಗಾಮಿ ಸ್ಪೀಕರ್ ಅವರನ್ನು ಆಯ್ಕೆ ಮಾಡಲಾಗುತ್ತದೆ. ಕಾಯಂ ಸ್ಪೀಕರ್ ಚುನಾಯಿತರಾಗುವವರೆಗೂ ವಿಧಾನಸಭೆಯ ಎಲ್ಲ ಚಟುವಟಿಕೆಗಳನ್ನು ನಡೆಸಬಹುದು ಎಂದು ಶಾಸಕರ ಒಪ್ಪಿಗೆ ಮೇರೆಗೆ ಹಂಗಾಮಿ ಸ್ಪೀಕರ್ ಅವರನ್ನು ಆಯ್ಕೆ ಮಾಡಲಾಗುತ್ತದೆ.
ಎಲ್ಲ ಪಕ್ಷಗಳೂ ಒಂದಾಗಿ ಒಬ್ಬರನ್ನು ಆಯ್ಕೆ ಮಾಡಿ ಹೆಸರನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು. ಅವರು ಅವರಿಗೆ ಅಂತಿಮ ಕರೆ ನೀಡುತ್ತಾರೆ. ಸಾಂಪ್ರದಾಯಿಕವಾಗಿ ವಿಧಾನಸಭೆಯ ಅತಿ ಹಿರಿಯ ನಾಯಕನನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಲಾಗುತ್ತದೆ. ಅಲ್ಲದೆ ಅವರು ಮುಂದೆ ಸ್ಪೀಕರ್ ಅಭ್ಯರ್ಥಿ ಅಥವಾ ಸಚಿವರು ಆಗುವಂತಿಲ್ಲ.












Click it and Unblock the Notifications