ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಗೆ 5 ಕಾರಣಗಳು!
ಬೆಂಗಳೂರು, ಮೇ 16 : ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದ, ಹಲವಾರು ಭಾಗ್ಯಗಳನ್ನು ಜನರಿಗೆ ನೀಡಿದ ಕಾಂಗ್ರೆಸ್ ಕೇವಲ 70 ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಸೋಲಿಗೆ ಕಾರಣವೇನು? ಎಂಬುದು ಸದ್ಯದ ಚರ್ಚೆಯ ವಿಷಯ.
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಹಿನ್ನಡೆ ಅನುಭವಿಸಿದೆ. 2 ಕಡೆ ಚುನಾವಣೆಗೆ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ 30 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಬಾದಾಮಿಯಲ್ಲಿ ಕಷ್ಟಪಟ್ಟು ಗೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವೇನು? ಎಂದು ಜನರು ಚರ್ಚೆ ನಡೆಸುತ್ತಿದ್ದಾರೆ. ಐದು ವರ್ಷ ಆಡಳಿತ ನಡೆಸಿದ ಸರ್ಕಾರ ಜನರಿಗೆ ಹಲವು ಜನಪ್ರಿಯ ಯೋಜನೆಗಳನ್ನು ನೀಡಿತ್ತು. ಯಾವ ಭಾಗ್ಯವನ್ನು ಜನರು ಬೆಂಬಲಿಸದೇ ಪಕ್ಷವನ್ನು ತಿರಸ್ಕರಿಸಿದ್ದಾರೆ.
ರಾಹುಲ್ ಗಾಂಧಿ ಅವರ ಪ್ರಚಾರ, ಸಿದ್ದರಾಮಯ್ಯ ಅವರ ವರ್ಚಸ್ಸು, ಸರ್ಕಾರದ ಯೋಜನೆಗಳು ಕಾಂಗ್ರೆಸ್ ಸರ್ಕಾರದ 'ಕೈ' ಹಿಡಿದಿಲ್ಲ. ಹಾಗಾದರೆ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣ ಯಾರು? ಎಂಬ ಮಾಹಿತಿ ಇಲ್ಲಿದೆ ನೋಡಿ...

ಪ್ರತ್ಯೇಕ ಧರ್ಮದ ವಿಚಾರ
ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಮುಂತಾದವರು ಲಿಂಗಾಯತ ಪ್ರತ್ಯೇಕ ಧರ್ಮದ ಪರ, ವಿರೋಧ ಹೋರಾಟದಲ್ಲಿದ್ದರು.
ಈ ವಿಚಾರದಲ್ಲಿ ಮೊದಲಿನಿಂದಲೂ ಮೌನವಾಗಿದ್ದ ಬಿಜೆಪಿ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಆರಂಭಿಸಿತು. ಕಾಂಗ್ರೆಸ್ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ ಎಂದು ಟೀಕೆ ಆರಂಭಿಸಿದರು. ಚುನಾವವಣೆಯಲ್ಲಿ ಈ ಅಂಶ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣವಾಯಿತು.

ನರೇಂದ್ರ ಮೋದಿ ಅವರ ಅಲೆ
ನರೇಂದ್ರ ಮೋದಿ ಅವರ ಅಲೆ ಬಿಜೆಪಿಗೆ ಸಹಾಯಕವಾಯಿತು. ಕಾಂಗ್ರೆಸ್ ಕಡಿಮೆ ಸ್ಥಾನಗಳಿಸಲು ಕಾರಣವಾಯಿತು ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಮೋದಿ ರಾಜ್ಯದಲ್ಲಿ 24 ಸಮಾವೇಶಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.
ಅದರಲ್ಲೂ ಚುನಾವಣೆಗೆ 12 ದಿನ ಬಾಕಿ ಇರುವಾಗ ನರೇಂದ್ರ ಮೋದಿ 6 ದಿನ ಸತತವಾಗಿ ರಾಜ್ಯದಲ್ಲಿ ದಿನಕ್ಕೆ ಮೂರು ಸಮಾವೇಶಗಳಂತೆ 21 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದರು. ನರೇಂದ್ರ ಮೋದಿ ಅವರ ಪ್ರಚಾರ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ತಂದು ಕೊಟ್ಟಿದೆ.

ಅಹಿಂದ ವರ್ಗ, ಮುಸ್ಲಿಂ ಓಲೈಕೆ
ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಇದು ಅಹಿಂದ ಸರ್ಕಾರ ಎಂಬ ಹಣೆ ಪಟ್ಟಿ ಕಟ್ಟಲಾಗಿತ್ತು. ಸರ್ಕಾರ ಶಾದಿ ಭಾಗ್ಯ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತಂದಾಗ ಸರ್ಕಾರ ಅಲ್ಪಸಂಖ್ಯಾತರ ಪರ ಎಂದು ಪ್ರಚಾರ ಮಾಡಲಾಯಿತು.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಾಗ, ಟಿಪ್ಪು ಜಯಂತಿ ವಿಚಾರದಲ್ಲಿ ಗೊಂದಲಗಳು ಆದಾಗ ಸರ್ಕಾರ ಹಿಂದೂ ವಿರೋಧಿ ಎಂದು ಪ್ರತಿಪಕ್ಷ ಬಿಜೆಪಿ ಪ್ರಚಾರ ಮಾಡಿತು. ಇದರಿಂದಾಗಿ ಚುನಾವವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಯಿತು.

15 ಸಚಿವರ ಸೋಲು
ಕಾಂಗ್ರೆಸ್ 70 ಸ್ಥಾನಗಳಲ್ಲಿ ಜಯಗಳಿಸಿದೆ. ಆದರೆ, ಸಿದ್ದರಾಮಯ್ಯ ಸಂಪುಟದಲ್ಲಿದ್ದ 15 ಸಚಿವರು ಚುನಾವಣೆಯಲ್ಲಿ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಹ ವಿಫಲರಾಗಿದ್ದಾರೆ. ಸಚಿವರ ಸೋಲು ಸಹ ಕಾಂಗ್ರೆಸ್ ಹಿನ್ನಡೆಗೆ ಕೊಡುಗೆ ನೀಡಿತು.
ಸಚಿವ ರಮಾನಾಥ ರೈ, ಎಚ್.ಸಿ.ಮಹದೇವಪ್ಪ, ಎಚ್.ಆಂಜನೇಯ, ಟಿ.ಬಿ.ಜಯಚಂದ್ರ, ಡಾ.ಶರಣಪ್ರಕಾಶ್ ಪಾಟೀಲ್, ಉಮಾಶ್ರೀ, ವಿನಯ್ ಕುಲಕರ್ಣಿ ಸೇರಿದಂತೆ 15 ಸಚಿವರು ಚುನಾವಣೆಯಲ್ಲಿ ಸೋತಿದ್ದಾರೆ.

ಸಚಿವರ ಮೇಲೆ ಐಟಿ ದಾಳಿ
ಕರ್ನಾಟಕದ ಚುನಾವಣೆಯಲ್ಲಿ ಐಟಿ ದಾಳಿ ಪ್ರಮುಖ ಪಾತ್ರ ವಹಿಸಿತು. ಸಚಿವ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್, ಹಲವು ಸಚಿವರು ಆಪ್ತರು, ಕಾಂಗ್ರೆಸ್ ಅಭ್ಯರ್ಥಿಗಳ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆಯಿತು.
ಚುನಾವಣೆ ಸಮಯದಲ್ಲಿ ದಾಳಿ ನಡೆದಿದ್ದರಿಂದ ಚುನಾವಣಾ ಖರ್ಚಿಗೂ ಹಣ ಇಲ್ಲದೇ ಅಭ್ಯರ್ಥಿಗಳು ಪರದಾಡಿದರು. ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಹಲವು ನಾಯಕರು ಆರೋಪ ಮಾಡಿದರು. ಐಟಿ ದಾಳಿ ಸಹ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು.











Click it and Unblock the Notifications