ಮೈತ್ರಿ ಸರ್ಕಾರಕ್ಕೆ ಮೊದಲ ವಿಘ್ನ!? ಪರಮೇಶ್ವರ್ ಮಾತಿನ ಅರ್ಥವೇನು?

ಬೆಂಗಳೂರು, ಮೇ 25: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿಶ್ವಾಸ ಮತದ ಹೊತ್ತಲ್ಲಿ ಎದ್ದಿರುವ ಪ್ರಶ್ನೆಗಳು ಹಲವು. ಅದರಲ್ಲೂ 'ಐದು ವರ್ಷವೂ ಎಚ್ ಡಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಬೇಕು ಎಂಬ ಕುರಿತಂತೆ ಕಾಂಗ್ರೆಸ್ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ' ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿರುವ ಮಾತು ರಾಜಕೀಯ ವಲಯದಲ್ಲಿ ಸಾಕಷ್ಟು ಅನುಮಾನ ಹುಟ್ಟಿಸಿದೆ.

ಮೇ 15 ರಂದು ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಹೀನಾಯ ಪ್ರದರ್ಶನ ತೋರಿದ ಕಾಂಗ್ರೆಸ್, ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಗಡಿಬಿಡಿಯಲ್ಲಿತ್ತು. ಈ ಅವಸರದಲ್ಲಿ ಜೆಡಿಎಸ್ ಗೆ 'ಬೇಷರತ್' ಬೆಂಬಲ ನೀಡುವುದಾಗಿ ಘೋಷಿಸಿದ್ದ ಕಾಂಗ್ರೆಸ್, ನಂತರ ತನ್ನ ನಿಲುವಿನಲ್ಲಿ ಕೊಂಚ ಕೊಂಚವೇ ಬದಲಾವಣೆ ಮಾಡಿಕೊಂಡಿತು. ಅದಕ್ಕೆ ಸಾಕ್ಷಿ ಎಂಬಂತೆ ತಮ್ಮದೇ ಪಕ್ಷದ ಜಿ.ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಸಫಲವಾಯಿತು.

ಇವೆಲ್ಲ ಆರಂಭವಷ್ಟೇ! ಸಚಿವ ಸಂಪುಟ ರಚನೆ ವೇಳೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಕೊಟ್ಟುಬಿಡುತ್ತದೆಯೇ? 'ಬೇಷರತ್' ಎಂಬ ಮಾತು ನಿಜವೇ ಆದರೆ ಯಾವ ವಿಷಯದಲ್ಲೂ ಕಾಂಗ್ರೆಸ್ ತಲೆಹಾಕಬಾರದು! ಆದರೆ ಹಾಗಾಗುವುದಕ್ಕೆ ಸಾಧ್ಯವೇ?

ಪರಮೇಶ್ವರ್ ಮಾತಿನ ಜಾಡುಹಿಡಿದು...

ಪರಮೇಶ್ವರ್ ಮಾತಿನ ಜಾಡುಹಿಡಿದು...

ಅಷ್ಟಕ್ಕೂ ನೂತನ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಮಾತಿನ ಅರ್ಥವೇನು? ಐದು ವರ್ಷಗಳ ಕಾಲವೂ ಎಚ್ ಡಿ ಕೆ ಅವರೇ ಮುಖ್ಯಮಂತ್ರಿಯಾಗಬೇಕೆ ಎಂಬ ಕುರಿತು ಕಾಂಗ್ರೆಸ್ ಇನ್ನೂ ಯೋಚಿಸಿಲ್ಲ ಅಂದರೆ ನಾಯಕತ್ವದಲ್ಲಿ ಬದಲಾವಣೆ ಆಗುತ್ತದೆ ಎಂದೇ? ಅಥವಾ ಒಂದೆರಡು ವರ್ಷದ ನಂತರ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುತ್ತದೆ ಎಂದೇ? 'ಬೇಷರತ್' ಬೆಂಬಲ ಎಂಬ ಮಾತಿಗೆ ಏನರ್ಥ?

ಫಲಿತಾಂಶ ಬಂದಾಗ ಬಿಜೆಪಿಯನ್ನು ದೂರವಿಡುವುದಷ್ಟೇ ಕಾಂಗ್ರೆಸ್ಸಿನ ಆದ್ಯ ಉದ್ದೇಶವಾಗಿತ್ತು. ಅದಕ್ಕೆ ಸರಿಯಾಗಿ ಜೆಡಿಎಸ್ ಸಿಕ್ಕಿತ್ತು! ಅವಸರದಲ್ಲಿ ಬೇಷರತ್ ಬೆಂಬಲ ಎಂದ ಕಾಂಗ್ರೆಸ್ ಈಗ ಒಂದೊಂದೇ ಬೇಡಿಕೆ ಇಡುತ್ತ, ಉಪಾಯವಾಗಿ ತನ್ನೆಲ್ಲ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದೆಯಾ? ಹೊಸ ಮೈತ್ರಿ ಸರ್ಕಾರ ಆರಂಭವಾಗುವ ಮೊದಲೇ ಈ ಸರ್ಕಾರದಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯುವುದಕ್ಕೆ ಹೊರಟಿದೆಯಾ ಕಾಂಗ್ರೆಸ್?

ಆರ್ ಆರ್ ನಗರ ಜೆಡಿಎಸ್ ಅಭ್ಯರ್ಥಿಯಿಲ್ಲ!

ಆರ್ ಆರ್ ನಗರ ಜೆಡಿಎಸ್ ಅಭ್ಯರ್ಥಿಯಿಲ್ಲ!

ನಕಲಿ ಮತದಾರರ ಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿನಗರ(ಆರ್ ಆರ್ ನಗರ) ಚುನಾವಣೆ ಮತ್ತು ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ ಎನ್ ವಿಜಯಕುಮಾರ್ ಅವರ ಸಾವಿನಿಂದ ಮುಂದೂಡಲ್ಪಟ್ಟಿದ್ದ ಜಯನಗರ ಚುನಾವಣೆಗಳಲ್ಲಿ ಜೆಡಿಎಸ್ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿಗಳನ್ನಷ್ಟೇ ಕಣಕ್ಕಿಳಿಸಿದ್ದು ಜೆಡಿಎಸ್ ಪಾಳೇಯದಲ್ಲಿ ಸಾಕಷ್ಟು ಅಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿಯಲ್ಲಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರಿ ಟಿಕೆಟ್ ಗಿಟ್ಟಿಸಿಕೊಂಡಿದ್ದ ಎಸ್ ವಿ ರಾಮಚಂದ್ರ ಅವರ ಅದೃಷ್ಟ ಕೈಕೊಟ್ಟಿದೆ.

ಅವರು ಸ್ಪರ್ಧೆಯಿಂದ ಹಿಂದೆ ಸರಿದು ಒತ್ತಾಯವಾಗಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರಿಗೇ ಬೆಂಬಲ ನೀಡುವಂತೆ ಮಾಡಲಾಗಿದೆ! ಇಲ್ಲಿ ಕಾಂಗ್ರೆಸ್ ತನ್ನ ಪಾರಮ್ಯ ಮೆರೆದಿದೆ. ಈ ಕ್ಷೇತ್ರದಲ್ಲಿ ಮೇ 28 ರಂದು ಚುನಾವಣೆ ನಡೆಯಲಿದ್ದು, ಮೇ 31 ರಂದು ಫಲಿತಾಂಶ ಹೊರಬೀಳಲಿದೆ. ಬಿಜೆಪಿಯಿಂದ ಮುನಿರಾಜು ಗೌಡ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಜಯನಗರದಲ್ಲೂಕಾಂಗ್ರೆಸ್ಸಿಗೇ ಬೆಂಬಲ

ಜಯನಗರದಲ್ಲೂಕಾಂಗ್ರೆಸ್ಸಿಗೇ ಬೆಂಬಲ

ಇನ್ನು ಜಯನಗರ ಕ್ಷೇತ್ರದಲ್ಲಿ ಜೂನ್ 11 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸೌಮ್ಯಾ ರೆಡ್ಡಿ ಅವರನ್ನು ಬೆಂಬಲಿಸಲು ಜೆಡಿಎಸ್ ಬಳಿ ಮನವಿ ಮಾಡಿಕೊಳ್ಳಲಾಗಿದ್ದು, ಈ ನಡೆ ಸಹ ಜೆಡಿಎಸ್ ನಾಯಕರಲ್ಲಿ ಅಸಮಾಧಾನ ಸೃಷ್ಟಿಸಿದೆ. ಬಿಜೆಪಿ ಅಭ್ಯರ್ಥಿಯಾಗಿ ಬಿ ಎನ್ ವಿಜಯ ಕುಮಾರ್ ಅವರ ಸಹೋದರ ಬಿ ಎನ್ ಪ್ರಹ್ಲಾದ್ ಅವರನ್ನು ಘೋಷಿಸಲಾಗಿದೆ. ಕಾಳೇಗೌಡ ಅವರು ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದರು.

ಜೆಡಿಎಸ್ ಲೆಕ್ಕಾಚಾರವೇನು?

ಜೆಡಿಎಸ್ ಲೆಕ್ಕಾಚಾರವೇನು?

ಹಾಗಂತ ಜೆಡಿಎಸ್ ಏನು ಸುಮ್ಮನೆ ಕೂರುವ ಜಾಯಮಾನದ್ದಲ್ಲ. ಕಾಂಗ್ರೆಸ್ ನಿಧಾನವಾಗಿ ಬಾಲಬಿಚ್ಚುತ್ತಿದೆ ಎಂಬುದು ಗೊತ್ತಾಗದಷ್ಟು 'ಮುಗ್ಧ'ರೇನಲ್ಲ ಜೆಡಿಎಸ್ ನಾಯಕರು. ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಿಲ್ಲ ಎಂಬುದು ಗೊತ್ತಿದ್ದರಿಂದಲೇ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದರೆ ಹೆಚ್ಚು ಸಂತಸ ಪಟ್ಟಿದ್ದು ಜೆಡಿಎಸ್. ಕಾಂಗ್ರೆಸ್ಸಿಗೋ, ಬಿಜೆಪಿಗೋ ಬಹುಮತ ಬಂದಿದ್ದರೆ ಜೆಡಿಎಸ್ ಅಸ್ತಿತ್ವವೇ ಬುಡಮೇಲಾಗುತ್ತಿತ್ತು. 122 ಸ್ಥಾನದಿಂದ 78 ಸ್ಥಾನಕ್ಕೆ ಕುಸಿದ ಕಾಂಗ್ರೆಸ್ ಸರ್ಕಾರ ರಚಿಸಲು ಜೆಡಿಎಸ್ ಗೆ ಬೆಂಬಲ ಸೂಚಿಸಿದ್ದೇ ತಡ, 38 ಸ್ಥಾನವನ್ನಷ್ಟೇ ಗೆದ್ದು, ಕಿಂಗ್ ಮೇಕರ್ ಕನಸು ಕಾಣುತ್ತಿದ್ದ ಜೆಡಿಎಸ್ ತಾನೇ ಕಿಂಗ್ ಆಗಿಬಿಟ್ಟಿತ್ತು!

ಬಯಸದೇ ಬಂದ ಭಾಗ್ಯವನ್ನು ಬಿಟ್ಟುಬಿಟ್ಟೀತೆ ಜೆಡಿಎಸ್?

ಬಯಸದೇ ಬಂದ ಭಾಗ್ಯವನ್ನು ಬಿಟ್ಟುಬಿಟ್ಟೀತೆ ಜೆಡಿಎಸ್?

ಇದು ಜೆಡಿಎಸ್ ಪಾಲಿಗೆ ಬಯಸದೇ ಬಂದ ಭಾಗ್ಯ. ಆದರೆ ಜೆಡಿಎಸ್ ಅನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂಬ ಮಾತನ್ನು ಮಾತ್ರ ಸುತಾರಾಂ ಒಪ್ಪುವುದಕ್ಕೆ ಸಾಧ್ಯವಿಲ್ಲ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ರಾಜಕೀಯದ ಆಳ ಅಗಲವನ್ನು ಕಂಡವರು, ಕುಮಾರ ಸ್ವಾಮಿಯರಿಗೂ ಸಾಕಷ್ಟು ರಾಜಕೀಯ ಅನುಭವವಿದೆ. ಹೀಗಿರುವಾಗ ಕೇವಲ ಅಧಿಕಾರದ ಆಸೆಗಾಗಿ ಕಾಂಗ್ರೆಸ್ಸಿನ ತಂತ್ರಗಳಿಗೆಲ್ಲ ಜೆಡಿಎಸ್ ಬಲಿಯಾಗುವ ಸಾಧ್ಯತೆ ಕಡಿಮೆ. ಅಕಸ್ಮಾತ್ ಕಾಂಗ್ರೆಸ್ಸಿನ ಬೇಡಿಕೆಗಳು ಹೆಚ್ಚಿದರೆ ಅಥವಾ ಮುಖ್ಯಮಂತ್ರಿ ಸ್ಥಾನಕ್ಕೆ ವರಾತ ಆರಂಭವಾದರೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಮುರಿದುಬಿದ್ದ ದಿನಗಳನ್ನು ಕಾಂಗ್ರೆಸ್ಸಿಗೆ ಜೆಡಿಎಸ್ ನೆನಪಿಸಬಹುದು! ಒಟ್ಟಿನಲ್ಲಿ ಕಿಂಗ್ ಮೇಕರ್ ಎಂದಿಕೊಂಡಿದ್ದ ಜೆಡಿಎಸ್ ತಾನೇ ಕಿಂಗ್ ಆಗಿದೆ. ಹೀಗಿರುವಾಗ ಯಾವ ತಂತ್ರಗಳಿಗೂ ಅದು ಬಲಿಯಾಗುವ ಸಂಭವ ಕಡಿಮೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+