ಮಂಡ್ಯ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
ಮಂಡ್ಯ, ಮಾರ್ಚ್ 01 : ಜೆಡಿಎಸ್ ಪಕ್ಷ ಮಂಡ್ಯ-ಮೈಸೂರು ಭಾಗದಲ್ಲಿ ಭಾರೀ ಪ್ರಭಾವ ಹೊಂದಿದೆ. ವಿಧಾನಸಭೆ ಚುನಾವಣೆಗೆ 126 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಪಕ್ಷ, ಮಂಡ್ಯ ಜಿಲ್ಲೆಯ 6 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ.
ಚುನಾವಣೆ ಸಿದ್ಧತೆ ಆರಂಭಿಸಿದ್ದ ಜೆಡಿಎಸ್ ಪಕ್ಷ ಮೊದಲು ಮಂಡ್ಯ, ಮೈಸೂರು ಭಾಗದಲ್ಲಿ ಪ್ರಚಾರ ನಡೆಸಿತ್ತು. ಈಗ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮೂಲಕ ಜಿಲ್ಲೆಯಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಮುಂದಾಗಿದೆ.
ಮಳವಳ್ಳಿ : ಆಡಳಿತ ವಿರೋಧಿ ಅಲೆ ಅನ್ನದಾನಿಗೆ ವರವಾಗುತ್ತಾ?
2013ರ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದರು. ಆದರೆ, ನಾಗಮಂಗಲ, ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಪಕ್ಷದಿಂದ ಅಮಾನತುಗೊಂಡಿದ್ದಾರೆ.
ಮಂಡ್ಯ ರಾಜಕೀಯ : ದೇವೇಗೌಡರ ಟಾರ್ಗೆಟ್ ಕ್ಷೇತ್ರ ಶ್ರೀರಂಗಪಟ್ಟಣ!
ಚೆಲುವರಾಯಸ್ವಾಮಿ ಪ್ರತಿನಿಧಿಸುವ ನಾಗಮಂಗಲ, ರಮೇಶ್ ಬಂಡಿಸಿದ್ದೇಗೌಡ ಪ್ರತಿನಿಧಿಸುವ ಶ್ರೀರಂಗಪಟ್ಟಣ ಕ್ಷೇತ್ರಕ್ಕೂ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ ಮೂಲಕ ಕ್ಷೇತ್ರವನ್ನು ಉಳಿಸಿಕೊಳ್ಳಲು ತಂತ್ರ ರೂಪಿಸಿದೆ. ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ ಇಲ್ಲಿದೆ...
ಸಿ.ಎಸ್.ಪುಟ್ಟರಾಜು
ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರಕ್ಕೆ ಸಿ.ಎಸ್.ಪುಟ್ಟರಾಜು ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಸಂಸದರಾದ ಸಿ.ಎಸ್.ಪುಟ್ಟರಾಜು ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 70,193 ಮತಗಳನ್ನು ಪಡೆದು ರೈತ ನಾಯಕ, ಸರ್ವೋದಯ ಪಕ್ಷದ ದಿ.ಕೆ.ಎಸ್.ಪುಟ್ಟಣ್ಣಯ್ಯ ವಿರುದ್ಧ ಸೋತಿದ್ದರು.
ರವೀಂದ್ರ ಶ್ರೀಕಂಠಯ್ಯ
ಶ್ರೀರಂಗಪಟ್ಟಣ ಕ್ಷೇತ್ರದಿಂದ ರವೀಂದ್ರ ಶ್ರೀಕಂಠಯ್ಯ ಅವರು ಅಭ್ಯರ್ಥಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬೆಂಬಲಿಗರಾದ ರವೀಂದ್ರ ಶೀಕಂಠಯ್ಯ ಅವರು ಶ್ರೀರಂಗಪಟ್ಟಣದ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಎಸ್.ಎಂ.ಕೃಷ್ಣ ಬಿಜೆಪಿ ಸೇರಿದ ಮೇಲೆ ಇವರು ಕಾಂಗ್ರೆಸ್ ಪಕ್ಷ ತೊರೆದಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರ ಆಹ್ವಾನದಂತೆ ಜೆಡಿಎಸ್ ಸೇರಿದ್ದಾರೆ.
ಡಿ.ಸಿ.ತಮ್ಮಣ್ಣ
ಮದ್ದೂರು ಕ್ಷೇತ್ರದ ಅಭ್ಯರ್ಥಿ ಹಾಲಿ ಶಾಸಕರೂ ಆಗಿರುವ ಡಿ.ಸಿ.ತಮ್ಮಣ್ಣ. ಎಚ್.ಡಿ.ದೇವೇಗೌಡರ ಬೀಗರೂ ಆಗಿರುವ ಡಿ.ಸಿ.ತಮ್ಮಣ್ಣ ಕಾಂಗ್ರೆಸ್ನಿಂದ ರಾಜಕೀಯ ಜೀವನ ಆರಂಭಿಸಿ, ಬಿಜೆಪಿಯಿಂದ ಒಂದು ಚುನಾವಣೆ ಎದುರಿಸಿ, ಜೆಡಿಎಸ್ ಪಕ್ಷದಲ್ಲಿದ್ದಾರೆ. ಚುನಾವಣಾ ಕಣಕ್ಕೆ ಧುಮುಕುವ ಮೊದಲು ಕರ್ನಾಟಕ ರಾಜ್ಯ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿದ್ದರು. ಸರ್ಕಾರಿ ಸೇವೆ ಮೂರು ವರ್ಷಗಳು ಬಾಕಿ ಇರುವಾಗಲೇ ರಾಜೀನಾಮೆ ಕೊಟ್ಟು ರಾಜಕಾರಣಕ್ಕೆ ಧುಮುಕಿದರು.
ಡಾ.ಕೆ.ಅನ್ನದಾನಿ
ಮಳವಳ್ಳಿ ಕ್ಷೇತ್ರಕ್ಕೆ ಡಾ.ಕೆ.ಅನ್ನದಾನಿ ಅವರು ಅಭ್ಯರ್ಥಿಯಾಗಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ಗೆಲುವು ಕಂಡಿದ್ದ ಅನ್ನದಾನಿ ಅವರು 2008, 2013ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. 2013ರ ಚುನಾವಣೆಯಲ್ಲಿ ಅವರು ಕೇವಲ 538 ಮತಗಳ ಅಂತರದಿಂದ ಸೋತಿದ್ದರು. ಈ ಬಾರಿಯೂ ಅವರಿಗೆ ಟಿಕೆಟ್ ನೀಡಲಾಗಿದೆ.
ಕೆ.ಸುರೇಶ್ ಗೌಡ
ನಾಗಮಂಗಲ ಕ್ಷೇತ್ರಕ್ಕೆ ಕೆ.ಸುರೇಶ್ ಗೌಡ ಅವರು ಅಭ್ಯರ್ಥಿಯಾಗಿದ್ದಾರೆ. ಎಸ್.ಎಂ.ಕೃಷ್ಣ ಬೆಂಬಲಿಗರಾಗಿದ್ದ ಸುರೇಶ್ ಗೌಡ ಅವರು ಕೃಷ್ಣ ಅವರು ಪಕ್ಷ ತೊರೆದ ಬಳಿಕ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದಾರೆ. 2013ರ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುರೇಶ್ ಗೌಡ ಅವರು 68,840 ಮತಗಳನ್ನು ಪಡೆದು ಜೆಡಿಎಸ್ನ ಚೆಲುವರಾಯಸ್ವಾಮಿ ಅವರ ಮುಂದೆ ಸೋತಿದ್ದರು.
ನಾರಾಯಣ ಗೌಡ
ಕೆ.ಆರ್.ಪೇಟೆ ಕ್ಷೇತ್ರಕ್ಕೆ ನಾರಾಯಣ ಗೌಡ ಅವರು ಅಭ್ಯರ್ಥಿಯಾಗಿದ್ದಾರೆ. ಇವರು ಹಾಲಿ ಶಾಸಕರು ಹೌದು. 2013ರ ಚುನಾವಣೆಯಲ್ಲಿ 56,784 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಬೆಂಗಳೂರು ನಗರದ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
ಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ