ಕೋಮುವಾದ ವರ್ಸಸ್ ಜಾತ್ಯತೀತವಾದ : ಸಿದ್ದರಾಮಯ್ಯ ಸಂದರ್ಶನ
ಒಂದು ದಿನದಲ್ಲಿ ಕನಿಷ್ಠ ಮೂರು ಸಾರ್ವಜನಿಕ ಸಭೆ. ಇನ್ನು ಸಭೆಯ ಮಧ್ಯದಲ್ಲಿ ಅಂದರೆ ಸಾಗುವ ಮಾರ್ಗದಲ್ಲೇ ಕಾಂಗ್ರೆಸ್ ನ ಬೇರು ಮಟ್ಟದ ಕಾರ್ಯಕರ್ತರ ಜತೆಗೆ ಪ್ರತಿ ಜಿಲ್ಲೆಯಲ್ಲೂ ಸಭೆ. ಸರಕಾರದ ಕೋಟಿಕೋಟಿ ರುಪಾಯಿಯ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿ ದಿನದ ವೇಳಾಪಟ್ಟಿಯೇ ಹೀಗಾಗಿದೆ.
ಈಗಾಗಲೇ ಕರ್ನಾಟಕ ನವನಿರ್ಮಾಣ ಯಾತ್ರೆ (ರಾಜ್ಯ ಸರಕಾರದ ಸಾಧನೆಯನ್ನು ಜನರಿಗೆ ಮುಟ್ಟಿಸುವ ಯಾತ್ರೆ) ಆರಂಭಿಸಿ ತಿಂಗಳ ಹತ್ತಿರ ಬಂತು. ಪಾದರಸದಷ್ಟು ಚುರುಕಾಗಿರುವ- ಒಂದಿನಿತೂ ಬಿಡುವಿಲ್ಲದ ಸಿದ್ದರಾಮಯ್ಯ ಅವರನ್ನು ಉಡುಪಿಯಲ್ಲಿ ಹಿಡಿದು, ಒಂದು ಸಂದರ್ಶನ ಮಾಡುವುದರಲ್ಲಿ ಒನ್ ಇಂಡಿಯಾ ಸಫಲವಾಗಿದೆ.
ಹಿಂದೂಗಳ ಪಾಲಿಗೆ ಸರಕಾರ ಸತ್ತಿದೆ: ಶಾಸಕ ಸುನಿಲ್ ಕುಮಾರ್ ಸಂದರ್ಶನ
ಸಿದ್ದರಾಮಯ್ಯ ಪ್ರಕಾರ ಕರ್ನಾಟಕದಲ್ಲಿ ಆಡಳಿತವಿರೋಧಿ ಅಲೆಯೇನೂ ಇಲ್ಲ. ವಿಧಾನಸಭೆ ಚುನಾವಣೆಯಿಂದ ಹಿಂದುತ್ವದ ಧ್ರುವೀಕರಣದವರೆಗೆ ನಾನಾ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ಎಲ್ಲ ಸವಾಲುಗಳ ಆಚೆಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದು ಸಿದ್ದರಾಮಯ್ಯ ಅವರ ವಿಶ್ವಾಸ. ಇನ್ನು ಪ್ರಶ್ನೋತ್ತರಗಳಿಗಾಗಿ ಮುಂದೆ ಓದಿ.
ಪ್ರಶ್ನೆ: ಈಚೆಗೆ ಗಮನಿಸಿದ ಹಾಗೆ ಕರ್ನಾಟಕ ಚುನಾವಣೆಯಲ್ಲಿ ದೊಡ್ಡ ಮಟ್ಟದ ಧ್ರುವೀಕರಣ ಆಗಬಹುದೇ?
ಸಿದ್ದರಾಮಯ್ಯ: ಅವರು (ಬಿಜೆಪಿ) ಧ್ರುವೀಕರಣದ ನಿರೀಕ್ಷೆಯಲ್ಲಿದ್ದಾರೆ ಮತ್ತು ಆದ್ದರಿಂದಲೇ ಕೋಮುವಾದದ ಪ್ರಚಾರವನ್ನು ಪ್ರಬಲವಾಗಿ ಮಾಡುತ್ತಿದ್ದಾರೆ. ಆದರೂ ಇದು ಕರ್ನಾಟಕದಲ್ಲಿ ಸಾಧ್ಯವಿಲ್ಲ. ಇದು ಬೇರೆಯದೇ ರೀತಿಯ ರಾಜ್ಯ. ಇದು ಉತ್ತರಪ್ರದೇಶವೋ ಗುಜರಾತೋ ಅಥವಾ ಮಧ್ಯಪ್ರದೇಶವೋ ಅಲ್ಲ. ಹಿಂದಿ ಮಾತಾಡುವ ರಾಜ್ಯಗಳಿಗಿಂತ ಕರ್ನಾಟಕ ವಿಭಿನ್ನವಾದದ್ದು.
ಪ್ರಶ್ನೆ: ಹಿಂದಿ ಹೇರಿಕೆ, ಕನ್ನಡದ ಅನುಷ್ಠಾನ ಸೇರಿದಂತೆ ನಾನಾ ವಿಚಾರಗಳಲ್ಲಿ ಬಿಜೆಪಿಗೆ ಹಿನ್ನಡೆ ಆಗುವಂತೆ ನೋಡಿಕೊಂಡಿದ್ದೀರಿ. ಅದು ಹೇಗೆ ಮ್ಯಾನೇಜ್ ಮಾಡಿದಿರಿ?
ಸಿದ್ದರಾಮಯ್ಯ: ಇದು ಮ್ಯಾನೇಜ್ ಮೆಂಟ್ ಅಂತಲ್ಲ. ನಾವು ಸರಿಯಾದ ನಿರ್ಧಾರವನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ತಿದ್ದೀವಿ. ಎಲ್ಲ ವಿಚಾರಗಳ ಬಗ್ಗೆಯೂ ನಮಗೆ ಸ್ಪಷ್ಟತೆ ಇದೆ. ಆದ್ದರಿಂದಲೇ ನಾನು ಸರಿಯಾದ ತೀರ್ಮಾನ ತೆಗೆದುಕೊಳ್ತಿದ್ದೀನಿ. ಭಾಷೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಈ ಬಗ್ಗೆ ಸ್ಪಷ್ಟವಾಗಿದ್ದೀವಿ. ಈ ಬಗ್ಗೆ ಗೊಂದಲವಿಲ್ಲ. ಬಿಜೆಪಿಯವರು ಗೊಂದಲದಲ್ಲಿದ್ದಾರೆ. ಏಕೆಂದರೆ ಅವರಿಗೆ ನಿರ್ದಿಷ್ಟ ಸಿದ್ಧಾಂತವೇ ಇಲ್ಲ.
ಪ್ರಶ್ನೆ: ಬಿಜೆಪಿಯ ಮತಗಳ ಧ್ರುವೀಕರಣಕ್ಕಾಗಿ ಕಾಂಗ್ರೆಸ್ ಮೃದು ಹಿಂದುತ್ವ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪಕ್ಕೆ ನಿಮ್ಮ ಉತ್ತರವೇನು?
ಸಿದ್ದರಾಮಯ್ಯ: ಇಲ್ಲ, ನಾವು ಹಾಗೆ ಮಾಡಿಲ್ಲ. ಮೃದು ಅಥವಾ ಉಗ್ರ ಹಿಂದುತ್ವ ಇವುಗಳ ಮೇಲೆಲ್ಲ ನನಗೆ ನಂಬಿಕೆಯಿಲ್ಲ. ಹಿಂದುತ್ವ ಅಂದರೆ ಹಿಂದುತ್ವ ಅಷ್ಟೇ. ಮಾನವೀಯತೆಯೇ ಮೊದಲು. ಮನುಷ್ಯತ್ವ ಇಲ್ಲದ ಧರ್ಮವು ಧರ್ಮವೇ ಅಲ್ಲ. ಅದು ಕೋಮುವಾದ ಆಗುತ್ತದೆ ಮತ್ತು ಬಿಜೆಪಿ ಮಾಡುತ್ತಿರುವುದು ಅದನ್ನೇ.
ಪ್ರಶ್ನೆ: ನಿಮ್ಮ ಸಾರ್ವಜನಿಕ ಸಂವಾದಗಳಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದೀರಿ. ರಾಜ್ಯದಾದ್ಯಂತ ನಿಮ್ಮ ಪೋಸ್ಟರ್ ಗಳೇ ರಾರಾಜಿಸುತ್ತಿವೆ. ನೀವು ಪಕ್ಷವನ್ನೂ ಮೀರಿ ಬೆಳೆಯುತ್ತಿದ್ದೀರಾ?
ಸಿದ್ದರಾಮಯ್ಯ: ಪಕ್ಷಕ್ಕಿಂತ ಯಾರೂ ಹೆಚ್ಚಲ್ಲ. ಪಕ್ಷದ ಸಿದ್ಧಾಂತವನ್ನು ಜನರಿಗೆ ತಲುಪಿಸುವ ಕೆಲಸ ಮಾಡ್ತಿದ್ದೀನಿ. ಬಿಜೆಪಿಯು ಮತಗಳ ಧ್ರುವೀಕರಣಕ್ಕೆ ಪ್ರಯತ್ನಿಸುತ್ತಾ ಸುಳ್ಳು ಭರವಸೆಗಳನ್ನು ಕೊಡುತ್ತಿರುವುದರಿಂದ ನಾನು ಆಕ್ರಮಣಕಾರಿಯಾಗಿದ್ದೇನೆ. ಇದು ಮೋದಿ ವರ್ಸಸ್ ಸಿದ್ದರಾಮಯ್ಯ ಅಲ್ಲ. ಇದು ಕಾಂಗ್ರೆಸ್ ವರ್ಸಸ್ ಬಿಜೆಪಿ. ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯದ ಸೈದ್ಧಾಂತಿಕ ಸಂಘರ್ಷವಿದು.
ಈ ಸಲದ ಬಗ್ಗೆ ಕೇಳುವುದಾದರೆ, ಅವರು (ಬಿಜೆಪಿ) ಹಿಂದುತ್ವವನ್ನು ಮುಖ್ಯ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ. ಈ ಬಾರಿಯ ಚುನಾವಣೆ ಇರುವುದು ಕೋಮುವಾದ ವರ್ಸಸ್ ಜಾತ್ಯತೀತವಾದಕ್ಕೆ.
ಪ್ರಶ್ನೆ: ಈ ಸಮೀಕರಣದಲ್ಲಿ ಜೆಡಿಎಸ್ ನ ಪಾತ್ರ ಏನು?
ಸಿದ್ದರಾಮಯ್ಯ: ಜೆಡಿಎಸ್ ಪಕ್ಷ ನಾಲ್ಕೈದು ಜಿಲ್ಲೆಗೆ ಮಾತ್ರ ಸೀಮಿತವಾದದ್ದು. ಆದರೆ ನಾನು ಕರ್ನಾಟಕದಲ್ಲಿ ಜೆಡಿಎಸ್ ಗೆ ನೆಲೆಯೇ ಇಲ್ಲ ಅಂತ ಹೇಳುವುದಿಲ್ಲ. ಕೆಲವು ಭಾಗದಲ್ಲಿ ಅವರು ಪ್ರಬಲವಾಗಿದ್ದಾರೆ. ಬಿಜೆಪಿಗೆ ಕೂಡ ಎಲ್ಲ ಜಿಲ್ಲೆಯಲ್ಲಿ ಪ್ರಬಲವಾದ ನೆಲೆಯಿಲ್ಲ. ಉದಾಹರಣೆಗೆ ಮೈಸೂರು.
ಕೃಷ್ಣರಾಜ ಕ್ಷೇತ್ರವನ್ನು ಹೊರತುಪಡಿಸಿ ಬೇರೆ ಕ್ಷೇತ್ರಗಳಿಗೆ ಅವರಿಗೆ ಅಭ್ಯರ್ಥಿಗಳೇ ಇಲ್ಲ. ಇನ್ನು ಮಂಡ್ಯದಲ್ಲಿ ಬಿಜೆಪಿಗೆ ಗೆಲ್ಲುವ ಅಭ್ಯರ್ಥಿಗಳೇ ಇಲ್ಲ. ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಅಥವಾ ಕೋಲಾರ ಇಲ್ಲೆಲ್ಲ ಪ್ರಬಲವಾದ ಅಭ್ಯರ್ಥಿಗಳೇ ಬಿಜೆಪಿಗಿಲ್ಲ. ಕಾಂಗ್ರೆಸ್ ಹಾಗಲ್ಲ. ಬಿಜೆಪಿ ಹಾಗೂ ಜೆಡಿಎಸ್ ಪ್ರಬಲವಾಗಿರುವ ಕ್ಷೇತ್ರಗಳಲ್ಲೂ ಹೋರಾಡುತ್ತಿದ್ದೀವಿ.
ಪ್ರಶ್ನೆ: ಹಿಂದುತ್ವದ ಮೇಲೆ ಬಿಜೆಪಿಗೆ ಹಕ್ಕಿದೆಯಾ ಎಂಬಂತೆ, ಎಐಎಂಐಎಂ ಹೇಳುವಂತೆ ಕಾಂಗ್ರೆಸ್ ಗೆ ಮುಸ್ಲಿಮರ ಮತಗಳ ಮೇಲೆ ಹಕ್ಕಿದೆಯಾ. ದಲಿತರು ಹಾಗೂ ಮುಸ್ಲಿಮರು ನಿಮಗೆ ಮತ ಹಾಕುತ್ತಾರೆ ಅನ್ನೋದಾದರೆ ಹಿಂದೂ ಮತಗಳದಷ್ಟೇ ಪ್ರಶ್ನೆಯೇ?
ಸಿದ್ದರಾಮಯ್ಯ: ಬಿಜೆಪಿಯು ನೇರವಾಗಿ ಮುಸ್ಲಿಮರನ್ನು ವಿರೋಧಿಸುತ್ತಿದೆ. ಅನಂತಕುಮಾರ್ ಹೆಗಡೆ ಅಂಥವರನ್ನು ಮುಸ್ಲಿಮರ ವಿಚಾರವಾಗಿ ಅವರ ನಿಲುವೇನು ಅಂತ ಕೇಳಿ. ಅವರು ಸತ್ಯ ಹೇಳ್ತಾರೆ. ಬಿಎಸ್ ಯಡಿಯೂರಪ್ಪ ಮತ್ತು ಅಂಥವರು ಸುಳ್ಳುಗಾರರು, ಆಷಾಢಭೂತಿಗಳು. ಆದರೆ ಹೆಗಡೆ ನಿಮಗೆ ನಿಜ ಹೇಳ್ತಾರೆ (ಸಂವಿಧಾನ ಬದಲಿಸುವ ಮಾತನಾಡಿದ್ದನ್ನು ಸ್ಮರಿಸಿದರು).
ಅನಂತಕುಮಾರ್ ಹೆಗಡೆಗೆ ರಾಜಕೀಯ ಸಂಸ್ಕೃತಿ ಇಲ್ಲದಿರಬಹುದು. ಆದರೆ ನಿಮಗೆ ನಿಜ ಹೇಳ್ತಾರೆ ಮತ್ತು ಅವರ ಹಿಡನ್ ಅಜೆಂಡಾ ಬಯಲಾಗುತ್ತದೆ.
ಪ್ರಶ್ನೆ: ಮೌಢ್ಯ ನಿಷೇಧ ಮಸೂದೆ ಅಥವಾ ಕೆಪಿಎಂಇ ಮಸೂದೆಯಂಥದ್ದನ್ನು ಜಾರಿಗೆ ಪ್ರಸ್ತಾವ ಮಾಡಿದಿರಿ. ಅದರ ಫಲಿತಾಂಶದ ಬಗ್ಗೆ ಸಂತೋಷ ಇದೆಯಾ?
ಸಿದ್ದರಾಮಯ್ಯ: ಮೊದಲನೆಯದಾಗಿ ಅವುಗಳನ್ನು ತುಂಬ ಕಠಿಣ ಮಾಡಬೇಕು ಅಂತಿರಲಿಲ್ಲ. ನಮ್ಮ ಅನುಭವದ ಆಧಾರದಲ್ಲಿ ಬದಲಾವಣೆ ತಂದಿದ್ದೀವಿ. ತಿದ್ದುಪಡಿಗಳನ್ನು ಮಾಡುವ ಸಾಧ್ಯತೆ ಇದೆ.
ಪ್ರಶ್ನೆ: ಕೋಮುಗಲಭೆಯ ಬಲಿಪಶುಗಳಾಗುತ್ತಿರುವವರು ದಲಿತರು ಅಥವಾ ಹಿಂದುಳಿದ ವರ್ಗದವರು ಎಂದು ನೀವು ಸಮರ್ಥನೆ ಮಾಡಿಕೊಂಡಿದ್ದಿರಿ...
ಸಿದ್ದರಾಮಯ್ಯ: ಇದು ಆರೆಸ್ಸೆಸ್ ಮತ್ತು ಬಜರಂಗದಳ ಮಾಡುತ್ತಿರುವುದು. ಇದರಲ್ಲಿ ಮುಚ್ಚಿಡುವುದು ಏನೂ ಇಲ್ಲ. ಹಿಂದುಳಿದ ವರ್ಗಗಳ ಅಮಾಯಕ ಹುಡುಗರಿಗೆ ಕೋಮುವಾದ ತುಂಬುತ್ತಿದ್ದಾರೆ. ಇತರ ಧರ್ಮದ ವಿರುದ್ಧ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುತ್ತಿದ್ದಾರೆ.
ಆರೆಸ್ಸೆಸ್ ಅಥವಾ ಬಜರಂಗ ದಳ ನಾಯಕರ ಮಕ್ಕಳು ಯಾರಾದರೂ ಬಲಿಪಶುಗಳಾಗಿದ್ದಾರಾ?
ಪ್ರಶ್ನೆ: ಮೃತ ದೀಪಕ್ ರಾವ್ ಹಾಗೂ ಅಹ್ಮದ್ ಬಶೀರ್ ಕುಟುಂಬಗಳಿಗೆ ಪರಿಹಾರ ಘೋಷಿಸಲಾಯಿತು. ಪ್ರಶಾಂತ್ ಪೂಜಾರಿ ಮತ್ತಿತರರ (ಕಳೆದ ಎರಡು ವರ್ಷದಲ್ಲಿ ಕೊಲೆಯಾದವರು) ಕುಟುಂಬಗಳಿಗೆ ಏಕಿಲ್ಲ? ಇದು ಚುನಾವಣೆ ಕಾರಣಕ್ಕಾ?
ಸಿದ್ದರಾಮಯ್ಯ: ಕೋಮುಗಲಭೆಯಲ್ಲಿ ಸಾವು ಸಂಭವಿಸಿದ ಕಾರಣಕ್ಕೆ ಪರಿಹಾರ ಘೋಷಣೆ ಮಾಡಿದ್ದೇವೆ ವಿನಾ ವೈಯಕ್ತಿಕ ಕಾರಣದ ಸಾವುಗಳಿಗಲ್ಲ. ಆ ಕುಟುಂಬಗಳು ಬಡತನದಲ್ಲಿ ಇರುವುದರಿಂದ ಸರಕಾರದಿಂದ ಐದು ಲಕ್ಷ ಪರಿಹಾರ ನೀಡಿದ್ದೀವಿ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನಾನು ಹೆಚ್ಚುವರಿ ಐದು ಲಕ್ಷ ಘೋಷಣೆ ಮಾಡಿದ್ದೀನಿ.
ಪ್ರಶ್ನೆ: ಹೀಗೆ ಘೋಷಿಸುವ ಮೂಲಕ ದೀಪಕ್ ರಾವ್ ಸಾವು ಕೋಮು ದ್ವೇಷದಿಂದಲೇ ಸಂಭವಿಸಿದ್ದು ಎಂದು ಒಪ್ಪಿಕೊಂಡಂತೆ ಆಗಲಿಲ್ಲವೆ?
ಸಿದ್ದರಾಮಯ್ಯ: ಇಲ್ಲ, ನಾನು ಯಾವುದನ್ನೂ ಘೋಷಿಸಿಲ್ಲ. ಮೇಲ್ನೋಟಕ್ಕೆ ಕೋಮು ಹಿಂಸಾಚಾರ ಪ್ರಕರಣದಂತೆ ಕಂಡುಬಂದಿದೆ. ಅವರ ಕುಟುಂಬಗಳು ಬಡತನದಲ್ಲಿವೆ ಮತ್ತು ನೆರವಿನ ಅಗತ್ಯದಲ್ಲಿವೆ. ಆದ್ದರಿಂದ ಪರಿಹಾರ ಘೋಷಿಸಲಾಗಿದೆ.
ಪ್ರಶ್ನೆ: ಬಹುತೇಕ ಚುನಾವಣೆ ಸಮೀಕ್ಷೆಗಳು ಕರ್ನಾಟಕದಲ್ಲಿ ಈ ಬಾರಿ ಅತಂತ್ರ ವಿಧಾನಸಭೆ ಆಗುತ್ತದೆ ಎಂದು ಭವಿಷ್ಯ ನುಡಿದಿವೆ. ಮುಂಬರುವ ಚುನಾವಣೆ ಫಲಿತಾಂಶದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಸಿದ್ದರಾಮಯ್ಯ: ನಮ್ಮ ಕಡೆಯಿಂದಲೂ ಸಮೀಕ್ಷೆ ಮಾಡಿಸಿದ್ದೀವಿ. ಎಐಸಿಸಿಯಿಂದಲೂ ಸಮೀಕ್ಷೆ ಆಗಿದೆ. ನಮ್ಮ ಸಮೀಕ್ಷೆಗಳ ಪ್ರಕಾರ ತುಂಬ ಸುಲಭವಾಗಿ ಬಹುಮತ ಪಡೆಯುತ್ತೇವೆ. ಅತಂತ್ರ ವಿಧಾನಸಭೆ ಆಗಲ್ಲ.
ಒನ್ಇಂಡಿಯಾ ನ್ಯೂಸ್