ಕೇಳ್ರಪ್ಪೋ ಕೇಳಿ, ಮತದಾನ ಗುರುತು ಚೀಟಿಗೆ ಏಪ್ರಿಲ್ 8 ಮತ್ತೊಂದು ಅವಕಾಶ
ಬೆಂಗಳೂರು, ಏಪ್ರಿಲ್ 2: ಮೇ 12ರಂದು ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಮಾಡಲು ಗುರುತಿನ ಚೀಟಿಗಾಗಿ ನೋಂದಣಿ ಮಾಡಿಕೊಳ್ಳಲು ಅನುಕೂಲ ಆಗುವಂತೆ ಪ್ರತಿ ಮತಗಟ್ಟೆಯಲ್ಲಿ ಏಪ್ರಿಲ್ 8 ರಂದು 'ಮಿಂಚಿನ ನೋಂದಣಿ' ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 14 ನೋಂದಣಿಗಾಗಿ ಕೊನೆಯ ದಿನವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಮತದಾರರ ನೋಂದಣಿಗೆ ಫೆಬ್ರವರಿ 28 ಕೊನೆಯ ದಿನವೆಂದು ನಿಗದಿಪಡಿಸಲಾಗಿತ್ತು. ಅದರ ಪ್ರಕಾರ ಈಗಾಗಲೇ 4.96 ಕೋಟಿ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದರು.
ಮಾರ್ಚ್ 1 ರಿಂದ ಪುನಃ ನೋಂದಣಿಗೆ ಅವಕಾಶ ನೀಡಲಾಗಿತ್ತು. ಈ ತನಕ 1,74,313 ಹೊಸ ಅರ್ಜಿಗಳು ಬಂದಿವೆ. 1,582 ವರ್ಗಾವಣೆ ಅರ್ಜಿಗಳು, 81,412 ಹೆಸರು ತೆಗೆದು ಹಾಕಲು ಕೋರಿ ಅರ್ಜಿಗಳು ಬಂದಿವೆ ಎಂದರು.

ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರು, ವಿಕಲಚೇತನರು, ಬುಡಕಟ್ಟು ಜನಾಂಗದವರು ಹಾಗೂ ಇತರ ದುರ್ಬಲ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಲು ಏಪ್ರಿಲ್ 8ರಂದು 'ಮಿಂಚಿನ ನೋಂದಣಿ' ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗೂ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾನದ ಗುರುತಿನ ಚೀಟಿಯನ್ನು ಪಡೆಯಲು ನೋಂದಣಿಗೆ ಏಪ್ರಿಲ್ 14 ಕೊನೆ ದಿನ ಎಂದು ಹೇಳಿದರು.
ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಖಚಿತಪಡಿಸಿಕೊಳ್ಳಬೇಕು. ತಪ್ಪುಗಳಿದ್ದಲ್ಲಿ ಏಪ್ರಿಲ್ 14 ರೊಳಗಾಗಿ ಸರಿಪಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು.
1,156 ಪ್ಲೆಯಿಂಗ್ ಸ್ಕ್ವಾಡ್ಸ್ ಮತ್ತು 1,255 ಸ್ಟಾಟಿಕ್ ಸರ್ವೆಲೆನ್ಸ್ ಟೀಮ್ಸ್ ಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. 4957 ಪರವಾನಗಿ ಹೊಂದಿದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ 24 ಗಂಟೆಗಳಲ್ಲಿ 239 ಮಂದಿಯಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ ಹಾಗೂ 269 ಜಾಮೀನು ರಹಿತ ವಾರೆಂಟ್ ಗಳನ್ನು ಹೊರಡಿಸಲಾಗಿದೆ.
ಚುನಾವಣೆ ಘೋಷಣೆಯಾದ ದಿನಾಂಕದಿಂದ ಒಟ್ಟಾರೆ 31,992 ಪರವಾನಗಿ ಹೊಂದಿದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಒಂದು ಶಸ್ತ್ರಾಸ್ತ್ರದ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. 2369 ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 994 ಮಂದಿಯಿಂದ ಮುಚ್ಚಳಿಕೆ ಪಡೆಯಲಾಗಿದೆ ಹಾಗೂ 4092 ಜಾಮೀನು ರಹಿತ ವಾರೆಂಟ್ ಗಳನ್ನು ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.












Click it and Unblock the Notifications