ಇಂಡಿಯಾ ಟುಡೇ - ಆಕ್ಸಿಸ್ ಸಮೀಕ್ಷೆ: ಯಾವ ಜಾತಿಯವರ ಮತ ಯಾರಿಗೆ?
ಬೆಂಗಳೂರು, ಮೇ 12: ಕರ್ನಾಟಕ ವಿಧಾನಸಭೆಯ 222 ಸ್ಥಾನಗಳಿಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ನಡೆದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಕೊನೆಗೊಂಡಿದೆ. ಈಗೇನಿದ್ದರೂ ಚುನಾವಣೋತ್ತರ ಸಮೀಕ್ಷೆ, ಫಲಿತಾಂಶದ ಕಾಲ.
ಇಂಡಿಯಾ ಟುಡೇ - ಆಕ್ಸಿಸ್ ಮೈ ಇಂಡಿಯಾ ಕರ್ನಾಟಕ ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, 222 ಕ್ಷೇತ್ರಗಳಲ್ಲಿ 70,574 ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಸರ್ವೆ ನಡೆಸಿದೆ.
Exit Poll : ಇಂಡಿಯಾ ಟುಡೇ ಫಲಿತಾಂಶ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ
ಸಮೀಕ್ಷೆ ಪ್ರಕಾರ, ಕಾಂಗ್ರೆಸ್: 106-118, ಬಿಜೆಪಿ: 79-92, ಜೆಡಿಎಸ್: 22-30, ಇತರರು - 1-4 ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರ ನಡೆಸುವ ಸಾಧ್ಯತೆಗಳು ಕಾಣಿಸುತ್ತಿವೆ.
ಇನ್ನು ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಶೇಕಡಾ 39 ಮತಗಳನ್ನು ಪಡೆಯಲಿದೆ. ಬಿಜೆಪಿ ಶೇಕಡಾ 35 ಮತಗಳನ್ನು ಪಡೆದು ಎರಡನೇ ಸ್ಥಾನ ಮತ್ತು ಜೆಡಿಎಸ್ + ಬಿಎಸ್ಪಿ ಶೇಕಡಾ 17 ಮತಗಳನ್ನು ಪಡೆಯಲಿದೆ. ಇತರರು ಶೇಕಡಾ 9 ಮತಗಳನ್ನು ಹಂಚಿಕೊಳ್ಳಲಿದ್ದಾರೆ.
ಜಾತಿವಾರು ಮತ ಹಂಚಿಕೆ
ಜಾತಿವಾರು ಮತದಾನದ ಪ್ರಮಾಣವನ್ನು ನೋಡಿದರೆ, ರಾಜ್ಯದ ಶೇಕಡಾ 48 ಜನರನ್ನು ಹೊಂದಿರುವ 6 ಸಮುದಾಯಗಳು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸಿಗೆ ಮತ ನೀಡಿವೆ ಎಂದು ಇಂಡಿಯಾ ಟುಡೇ - ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಹೇಳುತ್ತಿದೆ.
ಕರ್ನಾಟಕ ಸಮೀಕ್ಷೆ ಸರಾಸರಿ : ಬಿಜೆಪಿಗೆ 107, ಅಧಿಕಾರಕ್ಕೆ ಹತ್ತಿರ
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಪರಿಶಿಷ್ಟ ಪಂಗಡದ ಶೇಕಡಾ 43, ಪರಿಶಿಷ್ಟ ಜಾತಿಯ ಶೇಕಡಾ 48, ಶೇಕಡಾ 80 ಮುಸ್ಲಿಮರು, ಶೇಕಡಾ 61 ಕುರುಬರು, ಶೇಕಡಾ 68 ಕ್ರಿಶ್ಚಿಯನ್ ಸಮುದಾಯದವರು ಮತ್ತು ಶೇಕಡಾ 38 ಗೊಲ್ಲ ಸಮುದಾಯದವರು ಕಾಂಗ್ರೆಸಿಗೆ ಮತ ಹಾಕಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಬಿಜೆಪಿ ವಿಚಾರಕ್ಕೆ ಬಂದಾಗ ಪರಿಶಿಷ್ಟ ಪಂಗಡದ ಶೇಕಡಾ 33, ಪರಿಶಿಷ್ಟ ಜಾತಿಯ ಶೇಕಡಾ 26, ಶೇಕಡಾ 5 ಮುಸ್ಲಿಮರು, ಶೇಕಡಾ 22 ಕುರುಬರು, ಶೇಕಡಾ 18 ಕ್ರಿಶ್ಚಿಯನ್ನರು ಮತ್ತು ಶೇಕಡಾ 36 ಗೊಲ್ಲ ಸಮುದಾಯದವರು ಕಮಲ ಪಕ್ಷಕ್ಕೆ ತಮ್ಮ ಮತ ಹಾಕಿದ್ದಾರೆ.
ಇನ್ನು ಶೇಕಡಾ 62 ಲಿಂಗಾಯತರು, ಶೇಕಡಾ 66 ಬ್ರಾಹ್ಮಣರು, ಶೇಕಡಾ 49 ಒಬಿಸಿ, ಶೇಕಡಾ 52 ಮೇಲ್ವರ್ಗದವರು, ಶೇಕಡಾ 57 ಮರಾಠಿ ಕ್ಷತ್ರಿಯರು, ಶೇಕಡಾ 54 ಈಡಿಗರು, ಶೇಕಡಾ 53 ನೇಕಾರರು, ಶೇಕಡಾ 51 ರೆಡ್ಡಿಗಳು, ಶೇಕಡಾ 42 ಬೆಸ್ತರು, ಉಪ್ಪಾರರಲ್ಲಿ ಶೇಕಡಾ 40 ಮತ್ತು ತಮಿಳರಲ್ಲಿ ಶೇಕಡಾ 38 ಜನರ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಸರ್ವೆ ಹೇಳಿದೆ.
ಇದೇ ವೇಳೆ ಜೆಡಿಎಸ್ ವಿಚಾರಕ್ಕೆ ಬಂದಾಗ ಶೇಕಡಾ 54 ಒಕ್ಕಲಿಗರು ತೆನೆಹೊತ್ತ ಮಹಿಳೆಗೆ ಮತ ಹಾಕಿದ್ದಾರೆ. ಇನ್ನುಳಿದ ಶೇಕಡಾ 23 ಒಕ್ಕಲಿಗರು ಬಿಜೆಪಿಗೆ ಮತ್ತು ಶೇಕಡಾ 18 ಜನರು ಕಾಂಗ್ರೆಸಿಗೆ ಮತ ಹಾಕಿರುವುದಾಗಿ ಸಮೀಕ್ಷೆ ಪ್ರತಿಪಾದಿಸಿದೆ.
ಕರ್ನಾಟಕದ ಜನಸಂಖ್ಯೆಯಲ್ಲಿ ಶೇಕಡಾ 7 ಜನರು ಪರಿಶಿಷ್ಟ ಪಂಗಡ, ಶೇಕಡಾ 17 ಪರಿಶಿಷ್ಟ ಜಾತಿ, ಶೇಕಡಾ 13 ಮುಸ್ಲಿಂ, ಶೇಕಡಾ 7 ಕುರುಬ, ಶೇಕಡಾ 14 ಲಿಂಗಾಯತ, ಶೇಕಡಾ 3 ಬ್ರಾಹ್ಮಣರು ಮತ್ತು ಶೇಕಡಾ 12 ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ.
ಒಟ್ಟಾರೆ 224 ವಿಧಾನಸಭಾ ಕ್ಷೇತ್ರಗಳಲ್ಲಿ 36 ಪರಿಶಿಷ್ಟ ಜಾತಿ ಮತ್ತು 15 ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರಗಳಾಗಿವೆ.
ಜಾತಿವಾರು ಬಾಹುಳ್ಯದ ಕ್ಷೇತ್ರಗಳನ್ನು ನೋಡುವುದಾದರೆ, 13 ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯವಿದೆ. 3 ರಲ್ಲಿ ಕುರುಬರು, ಒಂದರಲ್ಲಿ ಕ್ರಿಶ್ಚಿಯನ್, 76 ಕ್ಷೇತ್ರಗಳಲ್ಲಿ ಲಿಂಗಾಯತರು, 7ರಲ್ಲಿ ಮರಾಠಿಗರು, 8ರಲ್ಲಿ ಈಡಿಗರು, ಒಕ್ಕಲಿಗರು 54, ಬೆಸ್ತರು ಮತ್ತು ತಮಿಳರು ತಲಾ ಒಂದು ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ.