ರಾಮನಗರದಲ್ಲಿ ಕುಮಾರಣ್ಣ ಗೆಲ್ಲೋದು ಕಷ್ಟಾಂತೆ!
ರಾಮನಗರ, ಮಾ 29: ದಿನದಿಂದ ದಿನಕ್ಕೆ ಬದಲಾಗುತ್ತಿರುವ ರಾಜಕೀಯ ಚಿತ್ರಣ, ಸನ್ನಿವೇಶದ ನಡುವೆ ಮತದಾರನ ಚಿತ್ತ ಎತ್ತ ಎಂದು ಕಂಡು ಹಿಡಿಯುವುದು 'ನೀರಿನಲ್ಲಿ ಮೀನಿನ ಹೆಜ್ಜೆ' ಕಂಡು ಹಿಡಿದಂತೆ. ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ರಾಜಕೀಯ ಕರ್ಮಭೂಮಿ ರಾಮನಗರ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ 'ಸುಲಭದ ತುತ್ತಲ್ಲ' ಎನ್ನುವ ಸುದ್ದಿ ಮೈಸೂರು ಹೆದ್ದಾರಿಯಿಂದ ಹಿಡಿದು ರಾಮನಗರದ ಗಲ್ಲಿಗಲ್ಲಿಯಲ್ಲಿ ಹರಿದಾಡುತ್ತಿದೆ.
ಒಂದು ಕಡೆ ಎಚ್ಡಿಕೆ ವಿರೋಧಿ ಬಣ ಶತಾಯುಗತಾಯು ಕುಮಾರಣ್ಣನನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಲೇ ಬೇಕೆಂದು ಟೊಂಕ ಕಟ್ಟಿ ಆಖಾಡಕ್ಕೆ ಇಳಿದಿದ್ದರೆ, ಜೆಡಿಎಸ್ ಕಾರ್ಯಕರ್ತರ ಅತಿಯಾದ ಆತ್ಮವಿಶ್ವಾಸ ಎಚ್ಡಿಕೆಗೆ ಮುಳ್ಳಾಗುವ ಸಾಧ್ಯತೆ ಇಲ್ಲದಿಲ್ಲ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಕುಮಾರಸ್ವಾಮಿ ಆಯ್ಕೆಯಾದ ನಂತರ ತೆರವಾದ ರಾಮನಗರ ಕ್ಷೇತ್ರದ ಮರುಚುನಾವಣೆಯನ್ನು ನೆನಪಿಸಿಕೊಳ್ಳೋಣ. 'ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ, ಇಲ್ಲದಿದ್ದರೆ ನಿಮ್ಮ ಈ ಕುಮಾರಸ್ವಾಮಿಗೆ ಒಂದು ಬಾಟಲಿ ವಿಷ ಕೊಡಿ'ಎಂದು ಕಣ್ಣೀರಿಟ್ಟು ಮತ ಯಾಚಿಸಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವಷ್ಟರಲ್ಲಿ ಕುಮಾರಸ್ವಾಮಿ ಹೈರಾಣವಾಗಿದ್ದರು. ಈ ಕಟುಸತ್ಯವನ್ನು ಜೆಡಿಎಸ್ ಮರೆತಂತಿದೆ, ನಂಬಿಕಸ್ಥರ ಅಸಡ್ಡೆ ಕುಮಾರಸ್ವಾಮಿಗೆ ಅಗ್ನಿಪರೀಕ್ಷೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
ರಾಮನಗರ ಜಿಲ್ಲೆಯಲ್ಲಿ (ಕನಕಪುರ ಹೊರತು ಪಡಿಸಿ) ಕುಮಾರಸ್ವಾಮಿ ತನ್ನ ಪ್ರಭುತ್ವವನ್ನು ಮುಂದುವರಿಸಿಕೊಂಡು ಬಂದಿದ್ದಾರಾದರೂ, ಈ ಬಾರಿಯ ಚುನಾವಣೆಯಲ್ಲಿ ಅವರು ಸಾಕಷ್ಟು ಸವಾಲನ್ನು ಎದುರಿಸ ಬೇಕಾಗುವುದಂತೂ ನಿಶ್ಚಿತ, ಹಾಗಂತ ಮತದಾರರು ಪ್ರಬುದ್ದರಾಗಿದ್ದಾರಂತಲ್ಲ.
ರಾಮನಗರ ಕ್ಷೇತ್ರದಲ್ಲಿ ಎಚ್ಡಿಕೆ ಜಯಕ್ಕೆ ಇರುವ ಅಡೆ ತಡೆಗಳೇನು?

ರಾಮನಗರ ಮತ್ತು ಕುಮಾರಸ್ವಾಮಿ
ಮಾಜಿ ಶಾಸಕ ಸಿ ಎಂ ಲಿಂಗಪ್ಪ ಕ್ಷೇತ್ರದ ಪ್ರಭಾವಿ ಮುಖಂಡ. ಸಂಭವನೀಯ ಕಾಂಗ್ರೆಸ್ ಅಭ್ಯರ್ಥಿ ಮರಿದೇವರು ಜೊತೆ ಅವರು ಗೌಪ್ಯವಾಗಿ ಕೈಜೋಡಿಸಿ ಕಾರ್ಯತಂತ್ರ ಹಣೆದಿದ್ದಾರೆ ಎನ್ನಲಾಗುತ್ತಿದೆ.

ರಾಮನಗರ ಮತ್ತು ಕುಮಾರಸ್ವಾಮಿ
ನಗರಾಭಿವೃದ್ದಿ ಅಧ್ಯಕ್ಷ ಶೇಷಾದ್ರಿ ಮತ್ತು ಕೆಎಂಎಫ್ ನಾಗರಾಜು ಅವರಿಗೆ ಕಾಂಗ್ರೆಸ್ ಗಾಳ ಬೀಸಿದೆ. ಇಬ್ಬರೂ ಜೆಡಿಎಸ್ ಆಪ್ತವಲಯದಲ್ಲಿ ಸದ್ಯ ಕಾಣಿಸಿಕೊಂಡಿದ್ದರೂ ಎಚ್ಡಿಕೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರದಿದ್ದ ಪಕ್ಷದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಕಾಣಿಸಿಕೊಳ್ಳುವುದು ಖಂಡಿತ ಎನ್ನಲಾಗುತ್ತಿದೆ.

ರಾಮನಗರ ಮತ್ತು ಕುಮಾರಸ್ವಾಮಿ
ಕ್ಷೇತ್ರದ ಸಂಭವನೀಯ ಕಾಂಗ್ರೆಸ್ ಅಭ್ಯರ್ಥಿ ಮರಿದೇವರು ನಿವೃತ್ತ ಕಂದಾಯ ಇಲಾಖೆಯವರು ಮತ್ತು ಆಗರ್ಭ ಶ್ರೀಮಂತರು. ಭಾರತದಲ್ಲಿ ಚುನಾವಣೆಗೆ ಪ್ರಮುಖವಾಗಿರುವ ಹಣದ ಹೊಳೆಯನ್ನು ಹರಿಸುವಷ್ಟು ಶಕ್ತರು. ಕೋಟಿ ಕೋಟಿ ಖರ್ಚಾದರೂ ಪರವಾಗಿಲ್ಲ ಕುಮಾರಸ್ವಾಮಿಗೆ ಸೋಲಿನ ರುಚಿ ತೋರಿಸಲೇ ಬೇಕೆಂದು ಹಠಕ್ಕೆ ಬಿದ್ದಿದ್ದಾರೆ ಎನ್ನುವುದು ಕ್ಷೇತ್ರದ ಲೇಟೆಸ್ಟ್ ಅಪ್ಡೇಟ್.

ರಾಮನಗರ ಮತ್ತು ಕುಮಾರಸ್ವಾಮಿ
2007ರಲ್ಲಿ ರಾಮನಗರವನ್ನು ಜಿಲ್ಲೆಯಾಗಿ ಘೋಷಿಸಿದ ನಂತರ ಅಭಿವೃದ್ದಿಗೆ ಬಹಳಷ್ಟು ಅನುದಾನ ಮಂಜೂರು ಮಾಡಿದ್ದು ಎಚ್ಡಿಕೆಗೆ ಮುಳುವಾಗುವ ಸಾಧ್ಯತೆಯಿದೆ. ಜಿಲ್ಲೆ ರಚನೆಯ ನಂತರ ಜಮೀನಿನ ಬೆಲೆ ಗಗನಕ್ಕೇರಿದ್ದು ಮಧ್ಯಮ ವರ್ಗದವರಿಗೆ ಸ್ವಂತ ಸೂರು ಗಗನ ಕುಸುಮವಾಗುತ್ತಿದೆ.

ರಾಮನಗರ ಮತ್ತು ಕುಮಾರಸ್ವಾಮಿ
ಕುಮಾರಸ್ವಾಮಿ ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಪಕ್ಷದ ಪ್ರಮುಖ ಕಾರ್ಯಕರ್ತರು ಅವರ ಜೊತೆ ಫೋಟೋ ಸೆಸನಿಗೆ ತೋರಿಸುವ ಉತ್ಸಾಹ ಜನಸಾಮಾನ್ಯರ ಸಣ್ಣ ಸಣ್ಣ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ ಎನ್ನುವುದು ಇನ್ನೊಂದು ಅಪವಾದ.

ರಾಮನಗರ ಮತ್ತು ಕುಮಾರಸ್ವಾಮಿ
last but not least ಎನ್ನುವ ಹಾಗೆ ರಾಜ್ಯವಿಡೀ ಪ್ರವಾಸ ಮಾಡುತ್ತಿರುವ ಕುಮಾರಣ್ಣನಿಗೆ ಕ್ಷೇತ್ರದ ಸಮಸ್ಯೆ ಬಗ್ಗೆ ನಿಗಾವಿರುವುದಿಲ್ಲ. ಚುನಾವಣೆ ಮುಗಿದ ನಂತರ ನಮ್ಮ ಸಮಸ್ಯೆಗಳನ್ನು ಹಿಡಿದುಕೊಂಡು ಪ್ರತೀ ಬಾರಿ ಬೆಂಗಳೂರಿಗೆ ಸುತ್ತಕ್ಕಾಗುವುದಿಲ್ಲ ಎನ್ನುವುದು ಮತದಾರ ಪ್ರಭುಗಳ ಗುಸುಗುಸು ಮಾತು. ಯಾವುದಕ್ಕೂ ಕುಮಾರಣ್ಣ ಎಚ್ಚರ! ಎಚ್ಚರ! ಎಚ್ಚರ!












Click it and Unblock the Notifications