ಸಂದರ್ಶನ:ಕಾರ್ಕಳ ಬಿಜೆಪಿ ಅಭ್ಯರ್ಥಿಯ ಮನದಾಳದ ಮಾತು
ಉಡುಪಿ, ಏ 30: ಚುನಾವಣೆ ಹತ್ತಿರ ಬರುತ್ತಿದ್ದಂತೆ ಕುತೂಹಲಗಳೂ ಹಾಗೇ ತೆರೆಯುತ್ತವೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಉಡುಪಿ ಜಿಲ್ಲೆ ಎನ್ನುವ ಬಿಜೆಪಿ ಭದ್ರ ಕೋಟೆಯನ್ನು ಕಾಂಗ್ರೆಸ್ ಭೇದಿಸಿದ ನಂತರ ನಡೆಯುತ್ತಿರುವ ಈ ವಿಧಾನಸಭಾ ಚುನಾವಣೆ ಜನರ ನಾಡಿಮಿಡಿತ ಯಾವ ಪಕ್ಷದತ್ತ ಇದೆ ಎಂದು ತಿಳಿದುಕೊಳ್ಳುವ ವೇದಿಕೆಗೆ ಜಿಲ್ಲೆ ಸಜ್ಜಾಗಿದೆ.
ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷ, ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ವಿ ಸುನಿಲ್ ಕುಮಾರ್ ಜೊತೆ ನಡೆದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಸಂದರ್ಶನ ನಡೆಸಿದವರು ಬಾಲರಾಜ್ ತಂತ್ರಿ
ಪ್ರ: ಕಾರ್ಕಳ ಕ್ಷೇತ್ರದಲ್ಲಿ ನಿಮ್ಮನ್ನು ಹೊರತು ಪಡಿಸಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಬೇರೆ ಯಾರಾದರೂ ಸ್ಪರ್ಧೆಯಲ್ಲಿ ಇದ್ದರೇ?
ಸುನಿಲ್ : ಇಲ್ಲ, ನಾನು ಕಾರ್ಕಳ ಬಿಜೆಪಿ ಘಟಕದ ಸರ್ವಾನುಮತದ ಆಯ್ಕೆ.
ಪ್ರ: ಮತದಾನದ ದಿನ ಸಮೀಪಿಸುತ್ತಿದೆ, ಕ್ಷೇತ್ರ ಪರ್ಯಟನೆ ಮಾಡಿದ್ದೀರಿ, ಜನರ ನಾಡಿಮಿಡಿತದ ಬಗ್ಗೆ?
ಸುನಿಲ್ : ಇದುವರೆಗೆ ಮೂರು ಸುತ್ತಿನ ಚುನಾವಣಾ ಪ್ರಚಾರ ಕಾರ್ಯ ಮುಗಿಸಿದ್ದೇನೆ. ಗ್ರಾಮೀಣ ಭಾಗದ ಮತ್ತು ಮಹಿಳೆಯರ ಒಲವು ಈ ಬಾರಿ ನಮ್ಮ ಪಕ್ಷದ ಮೇಲಿದೆ.

ಪ್ರ: ಎಷ್ಟು ಮತಗಳ ಅಂತರದಿಂದ ಜಯ ನಿರೀಕ್ಷಿಸುತ್ತಿದ್ದೀರಿ?
ಸುನಿಲ್ : ಈ ಬಾರಿ ನನ್ನ ಗೆಲುವು ನಿಶ್ಚಿತ. ಸುಮಾರು ಹತ್ತು ಸಾವಿರ ಮತಗಳ ಅಂತರದಿಂದ ಗೆಲುವು ನಿರೀಕ್ಷಿಸುತ್ತಿದ್ದೇನೆ.
ಪ್ರ: ಕ್ಷೇತ್ರದಲ್ಲಿ ಕಾಂಗ್ರೆಸ್ ಹೊರತು ಪಡಿಸಿ ಇತರ ಪಕ್ಷಗಳಿಂದ ಯಾವ ರೀತಿ ಪೈಪೋಟಿ ಎದುರಿಸುತ್ತಿದ್ದೀರಿ?
ಸುನಿಲ್ : ಕ್ಷೇತ್ರದಲ್ಲಿ ಎಲ್ಲಾ ಪ್ರಮುಖ ಪಕ್ಷಗಳು ಕಣದಲ್ಲಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ನೇರ ಹಣಾಹಣಿ.
ಪ್ರ: ಮುಂದಿನ ಐದು ವರ್ಷಗಳಲ್ಲಿ ಕಾರ್ಕಳಕ್ಕೆ ಏನು ಸೌಲಭ್ಯ ಕೊಡಬೇಕೆಂದಿದ್ದೀರಿ?
ಸುನಿಲ್ : 94C ಕಾಯ್ದೆಯಲ್ಲಿ ತಿದ್ದುಪಡಿ ತರಲು ಪ್ರಯತ್ನಿಸುತ್ತೇನೆ. ಗ್ರಾಮೀಣ ಭಾಗದ ಜನತೆ ಹಕ್ಕುಪತ್ರ ವಿತರಿಸುವುದು, ಪ್ರವಾಸೋಧ್ಯಮ ಕ್ಷೇತ್ರವನ್ನಾಗಿ ಕಾರ್ಕಳವನ್ನು ಪರಿಚಯಿಸುವುದು, ಪರಿಸರ ಸ್ನೇಹಿ ಕಾರ್ಖಾನೆ ಸ್ಥಾಪಿಸಿ ಯುವ ಸಮುದಾಯಕ್ಕೆ ಉದ್ಯೋಗಾವಕಾಶ ನೀಡುತ್ತೇನೆ ಎಂದು ನಿಮ್ಮ ಸಂದರ್ಶನದ ಮೂಲಕ ವಾಗ್ದಾನ ಮಾಡುತ್ತಿದ್ದೇನೆ.
ಪ್ರ: ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಸ್ಥಳೀಯರು ಯಾರೂ ಇರಲಿಲ್ಲ, ಹೊರಗಿನವರು ಬಹಳಷ್ಟು ಜನರಿದ್ದರು ಎನ್ನುವ ಸುದ್ದಿಯ ಬಗ್ಗೆ?
ಸುನಿಲ್ : ಕಾಂಗ್ರೆಸ್ ನಾಮಪತ್ರ ಸಲ್ಲಿಸುವ ವೇಳೆಯಲ್ಲೇ ಸೋಲನ್ನು ಒಪ್ಪಿಕೊಂಡಿದೆ. ಸ್ಥಳೀಯರ ಬೆಂಬಲದ ಕೊರತೆ ಕಾಂಗ್ರೆಸ್ ಪಕ್ಷ ಎದುರಿಸುತ್ತಿದೆ.
ಪ್ರ:ಸಂಘ ಪರಿವಾರದ ಬೆಂಬಲ ನಿಮಗೆ ಸಿಗುತ್ತಿದೆಯೇ? ಉರಿಮಜಲು ರಾಮ್ ಭಟ್ ಬಿಜೆಪಿಗೆ ಬೆಂಬಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರಲ್ಲಾ?
ಸುನಿಲ್ : ರಾಮ್ ಭಟ್ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಾನು ಸಂಘ ಪರಿವಾರದ ಸಕ್ರಿಯ ಸದಸ್ಯನಾಗಿರುವುದರಿಂದ ಬೆಂಬಲ ಸಿಗುವುದಿಲ್ಲ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಪ್ರ: ರಾಜ್ಯ ಮಟ್ಟದಲ್ಲಿ ಪಕ್ಷದ ಆಂತರಿಕ ಕಿತ್ತಾಟ ನೋವು ತಂದಿದೆಯಾ?
ಸುನಿಲ್ : ಹೌದು. ಯುವಕರನ್ನು ಕಡೆಗಣಿಸಲಾಗುತ್ತಿದೆ. ನಮ್ಮಂತ ನಿಷ್ಠಾವಂತ ಕಾರ್ಯಕರ್ತರ ಮಾತಿಗೆ ಬೆಲೆ ಸಿಗುತ್ತಿಲ್ಲ ಎನ್ನುವ ನೋವಿದೆ. ಮುಂದಿನ ದಿನಗಳಲ್ಲಿ ರಾಜ್ಯ ನಾಯಕರು ಈ ಬಗ್ಗೆ ಗಮನ ಹರಿಸುತ್ತಾರೆ ಎನ್ನುವ ನಂಬಿಕೆಯಲ್ಲಿದ್ದೇವೆ.
ಪ್ರ: ಒಂದು ವೇಳೆ ಯಡಿಯೂರಪ್ಪ ಮತ್ತೆ ಪಕ್ಷಕ್ಕೆ ಬಂದರೆ, ಅವರನ್ನು ಸ್ವಾಗತಿಸಬೇಕೇ ಬೇಡವೇ (ನಿಮ್ಮ ವೈಯಕ್ತಿಕ ಅಭಿಪ್ರಾಯ)
ಸುನಿಲ್ : ವೈಯಕ್ತಿಕವಾಗಿ ಅವರನ್ನು ಸ್ವಾಗತಿಸುತ್ತೇನೆ.
ಪ್ರ: ಕಳೆದ ಬಾರಿ ಜಾತಿ ಸಮೀಕರಣದಲ್ಲಿ ನಿಮಗೆ ಸೋಲು ಉಂಟಾಗಿತ್ತು? ಈ ಬಾರಿ ಈ ಸಮಸ್ಯೆ ಇದೆಯಾ?
ಸುನಿಲ್ : ನಾನು ಜಾತಿವಾದಿಯಲ್ಲ, ನಾನು ರಾಷ್ಟ್ರವಾದಿ. ಜಾತಿ ರಾಜಕಾರಣದ ಮೇಲೆ ನನಗೆ ನಂಬಿಕೆಯಿಲ್ಲ.
ಪ್ರ: ಕಾರ್ಕಳ ಕ್ಷೇತ್ರದ ಮತದಾರರಿಗೆ ನಿಮ್ಮ ಸಂದೇಶ?
ಸುನಿಲ್ : 2004-2008ರ ಅವಧಿಯಲ್ಲಿ ಕ್ಷೇತ್ರದ ಶಾಸಕನಾಗಿದ್ದೆ. ಆ ಸಮಯದಲ್ಲೂ ಕ್ಷೇತ್ರಕ್ಕೆ ನಿಯತ್ತಿನಿಂದ ದುಡಿದಿದ್ದೇನೆ. ಕಾರ್ಕಳ ಕ್ಷೇತ್ರದ ಅಭಿವೃದ್ದಿಗೆ ಬಹಳಷ್ಟು ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಮೂಲಭೂತ ಸಮಸ್ಯೆ ಕಡೆ ಗಮನಹಸಿರುವುದರ ಜೊತೆಗೆ ಕಾರ್ಕಳವನ್ನು ಪ್ರವಾಸೋಧ್ಯಮ ಸ್ಥಳವನ್ನಾಗಿ ಮಾಡಬೇಕೆನ್ನುವುದು ನನ್ನ ಆಸೆ. ವೆಂಕಟರಮಣ ದೇವಸ್ಥಾನ, ಗೋಮಟೇಶ್ವರ, ಕೋಟಿಚನ್ನಯ್ಯ ಥೀಮ್ ಪಾರ್ಕ್, ಕಂಬಳ ಕ್ರೀಡಾಂಗಣ ಮುಂತಾದ ಹಲವು ಆಕರ್ಷಣೀಯ ಸ್ಥಳಗಳಿವೆ.
photo courtesy :vsunilkumar.com












Click it and Unblock the Notifications