ಕ್ಷೇತ್ರ ಪರಿಚಯ: ಬೋಪಯ್ಯ ಸೋತರಷ್ಟೇ ವಿರಾಜಪೇಟೆ ಕಾಂಗ್ರೆಸ್ ಪಾಲು
ವೀರರಾಜೇಂದ್ರಪೇಟೆ (ವಿರಾಜಪೇಟೆ) ಕೊಡಗು ಜಿಲ್ಲೆಯ ತಾಲೂಕು ಕೇಂದ್ರ. ಈ ಪಟ್ಟಣವನ್ನು ಕೊಡಗಿನ ದೊರೆ ವೀರರಾಜೇಂದ್ರ 1792ರಲ್ಲಿ ಕಟ್ಟಿಸಿದರು ಎಂದು ಇತಿಹಾಸ ಹೇಳುತ್ತದೆ.
ವಿರಾಜಪೇಟೆಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಬ ಮತ್ತು ಅದರ ಪಕ್ಕದಲ್ಲಿ ಗಣೇಶನ ಗುಡಿಯಿದೆ. 250 ವರ್ಷಗಳಿಗೂ ಹಿಂದೆ ಕಟ್ಟಿಸಿದ ಸೈಂಟ್ ಏನ್ಸ್ ಚರ್ಚನ್ನು ಸಹ ಇಲ್ಲಿ ಕಾಣಬಹುದು.
ಮಂಜಿನ ನಗರಿ ಮಡಿಕೇರಿಯಲ್ಲಿ ಬಿಜೆಪಿ ಭದ್ರಕೋಟೆ ಒಡೆಯುವುದೇ?
ವಿರಾಜಪೇಟೆಯಲ್ಲಿ ನಡೆಯುವ ಸಾಂಪ್ರದಾಯಿಕ ಕ್ರೀಡೆಯಾದ ಹಾಕಿ ಉತ್ಸವ, ಪ್ರತಿ ವರ್ಷ ನಡೆಯುವ ಗೌರಿ ಗಣೇಶ ಉತ್ಸವ ಜತೆಗೆ ಇದೇ ವ್ಯಾಪ್ತಿಯ ಗೋಣಿಕೊಪ್ಪಲಿನಲ್ಲಿ ನಡೆಯುವ ದಸರಾ ಉತ್ಸವವು ಸಹ ಅತೀ ಪ್ರಸಿದ್ಧವಾಗಿದೆ. ಇಲ್ಲಿನ ಇರ್ಪು ಜಲಪಾತ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಬರ ಸೆಳೆಯುತ್ತದೆ.
ವಿರಾಜಪೇಟೆ 2008ರ ತನಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿತ್ತು. ಇಲ್ಲಿ 1972, 78, 83ರಲ್ಲಿ ಜಿಕೆ ಸುಬ್ಬಯ್ಯ ಕಾಂಗ್ರೆಸ್ ನಿಂದ ಗೆದ್ದಿದ್ದರು. 1985, 89ರಲ್ಲಿ ಸುಮಾ ವಸಂತ್ ಕಾಂಗ್ರೆಸ್ ನಿಂದ ವಿಧಾನಸಭೆ ಪ್ರವೇಶಿಸಿದ್ದರು.
1994ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಕೋಟೆ ಒಡೆದು 1 ಸಾವಿರ ಚಿಲ್ಲರೆ ಮತಗಳಿಂದ ಇಲ್ಲಿ ಬಿಜೆಪಿಯ ಬಸವರಾಜು ಎಚ್.ಡಿ ಗೆಲುವು ಸಾಧಿಸಿದರು. 1999ರಲ್ಲಿ ಸುಮಾ ವಸಂತ್ ಗೆದ್ದರೆ ಬಸವರಾಜ್ ಸೋತರು. 2004ರಲ್ಲಿ ಮತ್ತೆ ಬಸವರಾಜ್ ಗೆದ್ದರು, ಸುಮಾ ವಸಂತ್ ಸೋತರು.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ವಿರಾಜಪೇಟೆ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಆಗ ಮಡಿಕೇರಿಯಲ್ಲಿ ಸ್ಪರ್ಧಿಸಿ ಅದಾಗಲೇ ಒಮ್ಮೆ ಗೆದ್ದಿದ್ದ ಕೆಜಿ ಬೋಪಯ್ಯ ವಿರಾಜಪೇಟೆಗೆ ವರ್ಗವಾದರು.
ಹಾಗೆ ಬಂದವರು 2008ರಲ್ಲಿ ಕಾಂಗ್ರೆಸ್ ನ ವೀಣಾ ಅಚ್ಚಯರನ್ನು 15 ಸಾವಿರ ಮತಗಳಿಂದ ಸೋಲಿಸಿ ಎರಡನೇ ಬಾರಿಗೆ ಶಾಸಕರಾದರು. 2013ರಲ್ಲೂ ಕಾಂಗ್ರೆಸ್ ನ ಬಿದ್ದಾಟಂಡ ಪ್ರದೀಪ್ ರನ್ನು ಬೋಪಯ್ಯ 4 ಸಾವಿರ ಮತಗಳಿಂದ ಸೋಲಿಸಿದರು.
ಮಡಿಕೇರಿಯಂತೆ ಇಲ್ಲೂ ಬಿಜೆಪಿಯ ಗೆಲುವಿಗೆ ಡಿವೈಎಸ್ಪಿ ಎಂ.ಕೆ ಗಣಪತಿ ಪ್ರಕರಣ, ಸಿದ್ದರಾಮಯ್ಯ ಸರಕಾರದ ಟಿಪ್ಪು ಜಯಂತಿ ಆಚರಣೆ ಸಹಾಯಕ್ಕೆ ಬರಬಹುದು. ಅತ್ತ ಕಾಂಗ್ರೆಸ್ ಗೆ ತನ್ನ ನಾಯಕ ಬಿದ್ದಾಟಂಡ ಪ್ರದೀಪ್ ರ ಅಕಾಲಿಕ ಸಾವು ಕಾಡುತ್ತಿದೆ.
ಮಡಿಕೇರಿಯಂತೆ ಇಲ್ಲೂ ಬಿಜೆಪಿಯ ಗೆಲುವಿನ ಅಂತರ ಕಡಿಮೆಯಾಗಿರುವುದು ಬಿಜೆಪಿ ಪಾಲಿಗೆ ಎಚ್ಚರಿಕೆಯ ಗಂಟೆ. ಇನ್ನು ಜೆಡಿಎಸ್ ನದು ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪರಿಸ್ಥಿತಿ. ಹೀಗಾಗಿ ಮತ್ತೆ ಈ ಬಾರಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಪೈಪೋಟಿ ಕುತೂಹಲ ಹುಟ್ಟಿಸಿದೆ.