ಮಂಗಳೂರು ಕ್ಷೇತ್ರ ಪರಿಚಯ: ಖಾದರ್ ಅಶ್ವಮೇಧಕ್ಕೆ ತಡೆ ಸಾಧ್ಯವೇ?
ಹಿಂದಿನ ಉಳ್ಳಾಲ ಕ್ಷೇತ್ರ ಮತ್ತು ಬೇರೆ ಒಂದಷ್ಟು ಪ್ರದೇಶಗಳನ್ನು ಸೇರ್ಪಡೆ ಮತ್ತು ತೆರವುಗೊಳಿಸಿ ಈಗಿನ ಮಂಗಳೂರನ್ನು 2008ರಲ್ಲಿ ರಚಿಸಲಾಯಿತು. ಉಳ್ಳಾಲ ದೇಶದ ಹಳೇ ನಗರಗಳಲ್ಲಿ ಒಂದು. ರಾಣಿ ಅಬ್ಬಕ್ಕ ಪೋರ್ಚುಗೀಸರನ್ನು ಎದುರಿಸಿದ್ದು ಇದೇ ನಗರದಲ್ಲಿ. ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡ ಉಳ್ಳಾಲದಲ್ಲಿ ಸೋಮೇಶ್ವರ ಬೀಚ್, ಜುಮ್ಮಾ ಮಸೀದಿಗಳು ಬರುತ್ತವೆ.
ಮಂಗಳೂರು ತಾಲೂಕು ವ್ಯಾಪ್ತಿಗೆ ಬರುವ ಇಲ್ಲಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಕಾರಣಕ್ಕೆ 1994ರಲ್ಲಿ ಮಾತ್ರ ಇಲ್ಲಿ ಹಿಂದೂ ಧರ್ಮೀಯರಾದ ಕೆ. ಜಯರಾಮ ಶೆಟ್ಟಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಇದೊಂದು ಅವಧಿ ಬಿಟ್ಟರೆ ಇಲ್ಲಿನ ಜನ ಮುಸ್ಲಿಂ ಅಭ್ಯರ್ಥಿಗಳನ್ನೇ ಎತ್ತಿ ಆಡಿಸುತ್ತಾ ಬಂದಿದ್ದಾರೆ.

ಕಾಂಗ್ರೆಸ್ ಪಾಲಿಗೆ ಉಳ್ಳಾಲ ಭದ್ರಕೋಟೆ. 1994ರಲ್ಲಿ ಇಲ್ಲಿ ಕಮಲ ಅರಳಿದ್ದು ಬಿಟ್ಟರೆ ಇತ್ತೀಚಿನ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. 1962 ಮತ್ತು 1983ರಲ್ಲಿ ಇಲ್ಲಿ ಸಿಪಿಐ ಮತ್ತು ಸಿಪಿಎಂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು ಎಂಬುದೂ ವಿಶೇಷ.
ಈ ಕ್ಷೇತ್ರದ ಜತೆಗೆ ಹಾಲಿ ಶಾಸಕ ಯು.ಟಿ. ಖಾದರ್ ಕುಟುಂಬ ಸಾಕಷ್ಟು ಒಡನಾಟ ಇಟ್ಟುಕೊಂಡಿದೆ. ಇಲ್ಲಿ ಖಾದರ್ ತಂದೆ ಯು.ಟಿ ಫರೀದ್ 1972, 1978, 1999ಮತ್ತು 2004ರಲ್ಲಿ ಗೆಲುವು ಸಾಧಿಸಿದ್ದರು.
2004ರಲ್ಲಿ ಗೆದ್ದ ನಂತರ ಫರೀದ್ 2007ರಲ್ಲಿ ನಿಧನರಾದರು. ಆಗ ಅವರ ಜಾಗದಲ್ಲಿ ಮಗ ಯು.ಟಿ. ಖಾದರ್ ರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಈ ಚುನಾವಣೆಯಲ್ಲಿ ಖಾದರ್ ಗೆದ್ದರು.
ಮುಂದೆ 2008ರಲ್ಲಿ ಕ್ಷೇತ್ರ ಮರು ವಿಂಗಡಣೆ ನಂತರ ಉಳ್ಳಾಲ ಹೋಗಿ ಮಂಗಳೂರಾಯಿತು. ಹೆಸರು ಪ್ರದೇಶ ಬದಲಾದರೇನಂತೆ 2008 ಮತ್ತು 2013ರಲ್ಲೂ ಖಾದರ್ ಇಲ್ಲಿ ಗೆಲುವು ಸಾಧಿಸಿದರು. ಈ ಮೂಲಕ 1994ರ ನಂತರ ಕಳೆದ 6 ಚುನಾವಣೆಗಳಲ್ಲಿ ಆರನ್ನೂ ಖಾದರ್ ಕುಟುಂಬ ಗೆದ್ದಿದೆ.
ಸದ್ಯ ಕಾಂಗ್ರೆಸ್ ಸರಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಖಾದರ್ 2007ರಲ್ಲಿ ಗೆದ್ದಾಗ ಇದ್ದ 6 ಸಾವಿರ ಮತಗಳ ಅಂತರವನ್ನು 2013ರ ಹೊತ್ತಿಗೆ ಬರೋಬ್ಬರಿ 29 ಸಾವಿರಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಖಾದರ್ 69,450 ಮತಗಳನ್ನು ಪಡೆದರೆ ಬಿಜೆಪಿಯ ಚಂದ್ರಹಾಸ್ ಉಳ್ಳಾಲ್ 40,339 ಮತಗಳನ್ನು ಪಡೆದಿದ್ದರು. ಈ ಬಾರಿಯೂ ಅವರ ಗೆಲುವು ಬಹುತೇಕ ನಿರ್ಧಾರವಾಗಿದೆ.












Click it and Unblock the Notifications