ಕ್ಷೇತ್ರ ಪರಿಚಯ : ಇಲ್ಲಿ ಗೆದ್ದ ಪಕ್ಷ ರಾಜ್ಯದ ಆಡಳಿತ ನಡೆಸುತ್ತದೆ
ಬಳ್ಳಾರಿ, ಮಾರ್ಚ್ 08 : ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಬಳ್ಳಾರಿ ಜಿಲ್ಲಾ ಕೇಂದ್ರದ ಪ್ರಮುಖ ಕ್ಷೇತ್ರ. ಮಹಾನಗರ ಪಾಲಿಕೆಯನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಅಕ್ಷರಸ್ಥ ಮತದಾರರ ಸಂಖ್ಯೆ ಹೆಚ್ಚು.
ಕೋಟೆ ಮಲ್ಲೇಶ್ವರ ದೇವಸ್ಥಾನ, ಕನಕದುರ್ಗಮ್ಮ ದೇವಸ್ಥಾನ, ಸಾಯಿಬಾಬ ದೇವಸ್ಥಾನ ಸೇರಿ ವಿಜಯನಗರ ಅರಸರ, ಟಿಪ್ಪುವಿನ ಮತ್ತು ವಿವಿಧ ಅರಸರ ಆಡಳಿತ ಪ್ರಭಾವ ಹೊಂದಿದೆ. ಇಲ್ಲಿ ಕನ್ನಡ ಮಾತೃಭಾಷೆ. ತೆಲುಗನ್ನಡ, ಉರ್ದು ಹಿಂದಿ ಮಿಶ್ರಿತ ಕನ್ನಡ, ಅಚ್ಚಕನ್ನಡ ವ್ಯವಹಾರಿಕ ಭಾಷೆಗಳು.
ವೀರಶೈವ ಲಿಂಗಾಯಿತ, ಕುರುಬ, ವಾಲ್ಮೀಕಿ ಮತ್ತು ಮುಸ್ಲಿಂ ಮತದಾರರನ್ನು ಸಮ ಪ್ರಮಾಣದಲ್ಲಿ ಹೊಂದಿರುವ ಕ್ಷೇತ್ರವಿದು. ಆದರೆ, ಕೋಮು ಸೌಹಾರ್ದತೆಗೆ ಆದರ್ಶವಾಗಿದೆ. ಇಡೀ ರಾಷ್ಟ್ರದಲ್ಲಿ ಹಿಂದು - ಮುಸ್ಲಿಂ ಗಲಭೆಗಳು ನಡೆದಾಗಲೂ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜನರು ಪರಸ್ಪರ ಸೌಹಾರ್ದವಾಗಿ, ಆಪ್ತವಾಗಿ ಬಾಳಿ ರಾಷ್ಟ್ರಕ್ಕೇ ಮಾದರಿ ಆಗಿದ್ದಾರೆ.
ಕಾಂಗ್ರೆಸ್ ಪಕ್ಷದ ಭದ್ರಕೋಟೆ ಬಳ್ಳಾರಿ ಜಿಲ್ಲೆ. ಆದರೆ, ಕಾಂಗ್ರೆಸ್ನಲ್ಲಿಯ ಮುಖಂಡರ ಆಂತರಿಕ ಕಚ್ಚಾಟ, ವ್ಯಕ್ತಿ ಪ್ರತಿಷ್ಠೆ, ಪರಸ್ಪರ ಕಾಲೆಳೆಯುವ ತಂತ್ರ-ಪ್ರತಿತಂತ್ರಗಳ ಕಾರಣ ಜಿಲ್ಲೆಯಲ್ಲಿ ಅದರಲ್ಲೂ ಬಳ್ಳಾರಿ ನಗರದಲ್ಲಿ ಕಾಂಗ್ರೆಸ್ಸೇತರ ಪಕ್ಷ ಬೆಳೆಯಲು ಪೂರಕ ವಾತಾವರಣ ನಿರ್ಮಾಣವಾಗಿದೆ. ಪಕ್ಷದ ಸೋಲಿಗೆ ಕಾಂಗ್ರೆಸ್ಸಿಗರೇ ಮೂಲ ಕಾರಣ.
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್, ವಿಧಾನಸಭಾ ಚುನಾವಣೆಯಲ್ಲೂ ಅನಿಲ್ ಎಚ್. ಲಾಡ್ ಅವರನ್ನು ನಿರೀಕ್ಷೆಯಂತೆ ಗೆಲ್ಲಿಸಿತು. ಕ್ಷೇತ್ರವು 235 ಮತಗಟ್ಟೆಗಳನ್ನು ಹೊಂದಿದೆ. 206326ಗೂ ಹೆಚ್ಚಿನ ಮತದಾರರು ಇಲ್ಲಿದ್ದಾರೆ. 1999ರಲ್ಲಿ ಸೋನಿಯಾಗಾಂಧಿ ಸ್ಪರ್ಧಿಸಿದಾಗ ಎಂ. ದಿವಾಕರಬಾಬು ಅವರು ಕ್ಷೇತ್ರದ ಶಾಸಕರಾಗಿದ್ದರು.

ಸೋಮಶೇಖರ ರೆಡ್ಡಿ ಗೆಲುವು
2009ರಲ್ಲಿ ನಡೆದ ಚುನಾವಣೆಯಲ್ಲಿ ಜಿ. ಸೋಮಶೇಖರ ರೆಡ್ಡಿ ಬಿಜೆಪಿಯಿಂದ ಶಾಸಕರಾಗಿ ಸಾಕಷ್ಟು ಶ್ರಮಪಟ್ಟು ಆಯ್ಕೆಯಾದರು. ಆದರೆ, ಅವರು ಶಾಸಕರಾಗುವ ಪೂರ್ವದಲ್ಲೇ ನಗರಸಭೆ ಸದಸ್ಯರಾಗಿ, ಕೊನೆಯ ಅಧ್ಯಕ್ಷರಾಗಿ, ಪ್ರಪ್ರಥಮ ಮೇಯರ್ ಆಗಿ, ಇಡೀ ಕ್ಷೇತ್ರವನ್ನು ಬಿಜೆಪಿಮಯಗೊಳಿಸಿ, ಜನಪ್ರಿಯರಾಗಿದ್ದರು.
ಚುನಾವಣೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಸೋಲನುಭವಿಸಿದ್ದ ಅನಿಲ್ ಎಚ್. ಲಾಡ್, 2013ರ ಚುನಾವಣೆಯಲ್ಲಿ ಪುನಃ ಸ್ಪರ್ಧಿಸಿ, ಸಿದ್ದರಾಮಯ್ಯ ಅವರ ಅಲೆ, ಕಳೆದ ಚುನಾವಣೆಯಲ್ಲಿಯ ಸೋಲಿನ ಅನುಕಂಪ, ಕಾಂಗ್ರೆಸ್ ಬಗ್ಗೆ ಹೊಸ ವಿಶ್ವಾಸ ಮೂಡಿದ ಕಾರಣ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಜಿ. ಸೋಮಶೇಖರ ರೆಡ್ಡಿ ಸ್ಪರ್ಧಿಸಿರಲಿಲ್ಲ.

ಕಾಂಗ್ರೆಸ್ ಒಡೆದ ಮನೆ
2013ರ ಚುನಾವಣೆಯ ನಂತರ ಜಿಲ್ಲಾ ಕಾಂಗ್ರೆಸ್ ನೂರಾರು ಗುಂಪುಗಳಾಗಿ ಒಡೆದಿದೆ. ಮಾಜಿ ಸಚಿವ ಎಂ. ದಿವಾಕರಬಾಬು, ಅವರ ಪುತ್ರ, ಯುವ ಕಾಂಗ್ರೆಸ್ನ ಹನುಮ ಕಿಶೋರ್ ಸೇರಿ ಕನಿಷ್ಠ 16 ಜನರು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ನ ಚುನಾವಣಾ ವೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ಗಾಗಿ ಜಿ. ಸೋಮಶೇಖರ ರೆಡ್ಡಿ ಮತ್ತು ಡಾ. ಬಿ.ಕೆ. ಸುಂದರ್ ಮಧ್ಯೆ ತೆರೆಮರೆಯಲ್ಲಿ ತೀವ್ರ ಪೈಪೋಟಿ ನಡೆದಿದೆ.

ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಯಾರು?
ಬಳ್ಳಾರಿ ನಗರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಇನ್ನೂ ಅಂತಿಮಗೊಂಡಿಲ್ಲ. ಜೆಡಿಎಸ್ನಿಂದ ಟಪಾಲ್ ಗಣೇಶ್ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಬಳ್ಳಾರಿ ನಗರದ ಜನಹಿತ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಉಳಿದಂತೆ ಪಕ್ಷೇತರರ ಸಂಖ್ಯೆ ಹೆಚ್ಚಾಗಲಿದೆ. ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಯ ಪಕ್ಷ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎನ್ನುವ ಮಾತು ಕ್ಷೇತ್ರದಲ್ಲಿ ಪ್ರಚಲಿತದಲ್ಲಿದೆ.

ಅನಿಲ್ ಲಾಡ್ ಕೆಲಸ ಮಾಡಿಲ್ಲ?
ಅನಿಲ್ ಎಚ್. ಲಾಡ್ ಶಾಸಕರಾಗಿ ಆಯ್ಕೆ ಆದ ನಂತರ ಆಡಳಿತ ನಡೆಸಿದ್ದು ಅಧಿಕಾರಿಗಳು ಮತ್ತು ಕಾರ್ಪೊರೇಟರುಗಳು ಮಾತ್ರ ಎನ್ನುವ ಅಪವಾದವಿದೆ. ಕುಡಿಯುವ ನೀರಿನ ಸಮಸ್ಯೆ, ನೈರ್ಮಲ್ಯ, ಆರೋಗ್ಯ, ಸ್ವಚ್ಛತೆಯಲ್ಲಿ ಶಾಸಕರು ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಜನಪರವಾಗಿ ಅವರು ಮಾತನಾಡಿದ್ದೂ ವಿರಳ. ವಿಧಾನಸೌಧದಲ್ಲಿ ಮೌನವ್ರತಧಾರಿ. ಕಲಾಪಗಳಲ್ಲಿ ಹಾಜರಿಯೂ ಅಷ್ಟಕಷ್ಟೇ. ವಿಧಾನಪರಿಷತ್ತಿನ ಸದಸ್ಯ ಕೆ.ಸಿ. ಕೊಂಡಯ್ಯ ಮಾತನಾಡಿದ್ದೇ ಹೆಚ್ಚು. ಶ್ರೀಮತಿ ಬಸವರಾಜೇಶ್ವರಿ, ಎಂ. ರಾಮಪ್ಪ, ಎಂ.ಪಿ. ಪ್ರಕಾಶ್ ಸೇರಿದಂತೆ ಅನೇಕ ಹಿರಿಯ ರಾಜಕಾರಣಿಗಳಿಂದ ಅಭಿವೃದ್ಧಿಪಥದಲ್ಲಿದ್ದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನೆರೆಯ ಆಂಧ್ರದ ವಲಸಿಗರ ಪ್ರಭಾವವೇ ಹೆಚ್ಚು. ಆದರೂ, ಕನ್ನಡತನ ತನ್ನ ಮೂಲಗುಣವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿ ಆಗಿದೆ.

ಕ್ಷೇತ್ರದ ಸಮಸ್ಯೆಗಳು
ಈ ಕ್ಷೇತ್ರದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಶಾಸಕರು ಇದ್ದೂ ಇಲ್ಲದಂತಾಗಿದ್ದಾರೆ. ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ, ಬೀದಿದೀಪ, ರಸ್ತೆಗಳ ನಿರ್ವಹಣೆ ಇಲ್ಲದೇ ಅನೇಕ ಕೆಲಸಗಳು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗುರಿ ಆಗಿವೆ. ನಗರ ಪ್ರಸ್ತುತ 15 -20 ದಿನಕ್ಕೆ ಒಮ್ಮೆ ಕುಡಿಯುವ ನೀರು ಪಡೆಯುತ್ತಿದೆ. ಅಲ್ಲೀಪುರ ಮತ್ತು ಮೋಕದಲ್ಲಿ ಕುಡಿಯುವ ನೀರಿನ ಜಲಾಗಾರಗಳು ಇದ್ದರೂ ನೀರು ಸಂಗ್ರಹ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ಆರೋಪವಿದೆ.












Click it and Unblock the Notifications