ರಾಹುಲ್ ಗಾಂಧಿಗೆ ಕರ್ನಾಟಕ ಬಿಜೆಪಿ ಬತ್ತಳಿಕೆಯಿಂದ 10 ಪ್ರಶ್ನೆ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಜ್ಯ ಬಿಜೆಪಿಯಿಂದ ಹತ್ತು ಪ್ರಶ್ನೆಗಳನ್ನು ಕೇಳಲಾಗಿದೆ. ಮಹಾದಾಯಿ ವಿವಾದ ಸೇರಿದಂತೆ ಹಲವು ವಿಚಾರಗಳ ಬಗ್ಗೆ ರಾಹುಲ್ ಗಾಂಧಿ ಅವರನ್ನು ಪ್ರಶ್ನೆ ಮಾಡಲಾಗಿದೆ. ಅದರಲ್ಲೂ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರದಲ್ಲಿನ ಲೋಪಗಳು ಎಂದು ಕೇಸರಿ ಪಕ್ಷ ಗುರುತಿಸಿರುವ ವಿಚಾರಗಳನ್ನು ಪ್ರಸ್ತಾವ ಮಾಡಲಾಗಿದೆ.
ಈ ಪೈಕಿ ಎಷ್ಟು ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರ ನೀಡುತ್ತಾರೋ ಗೊತ್ತಿಲ್ಲ. ಏಕೆಂದರೆ ಶನಿವಾರದಿಂದ ಅವರು ರಾಜ್ಯ ಪ್ರವಾಸದಲ್ಲಿದ್ದಾರೆ. ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ಧೋರಣೆಯನ್ನು ಎಗಾದಿಗಾ ತರಾಟೆಗೆ ತೆಗೆದುಕೊಳ್ಳುತ್ತಿರುವ ರಾಹುಲ್ ಗಾಂಧಿ ಅವರು ಬಿಜೆಪಿಯವರ ಈ ಪ್ರಶ್ನೆಗಳಿಗೂ ಉತ್ತರ ನೀಡುತ್ತಾರೆಯೆ? ಗೊತ್ತಿಲ್ಲ.
ಸಿದ್ದು ಮುಂದೆ, ಮೋದಿ ಹಿಂದೆ ನೋಡ್ಕೊಂಡು ಗಾಡಿ ಓಡಿಸ್ತಾರೆ!
ಆದರೆ, ಆ ಎಲ್ಲ ಪ್ರಶ್ನೆಗಳನ್ನೂ ಓದುಗರಿಗೂ ಗಮನಕ್ಕೆ ಬರುವಂತೆ ಪ್ರಕಟಿಸಲಾಗುತ್ತಿದೆ. ಹತ್ತು ಪ್ರಶ್ನೆಗಳು ಅಷ್ಟೇ ಎನ್ನುವಂತಿಲ್ಲ. ಏಕೆಂದರೆ ಚುನಾವಣೆ ಹೊಸ್ತಿಲಲ್ಲಿರುವಾಗ ಈ ಎಲ್ಲ ವಿಚಾರಗಳು ತೀರಾ ಗಂಭೀರವಾದುವೇ ಹಾಗೂ ಮುಖ್ಯವಾದುವೇ. ಪ್ರಮುಖ ಪಕ್ಷದ ರಾಷ್ಟ್ರೀಯ ನಾಯಕರಿಗೆ ಇವಕ್ಕೆ ಉತ್ತರಿಸುವ ಅಗತ್ಯ ಇದೆ ಎಂದು ಕಾಣಿಸುತ್ತಿದೆ. ಆ ಎಲ್ಲ ಪ್ರಶ್ನೆಗಳಿಗಾಗಿ ಮುಂದೆ ಓದಿ.
ಕರ್ನಾಟಕ ವಿರೋಧಿ ಹೇಳಿಕೆಯನ್ನು ಖಂಡಿಸುತ್ತೀರಾ?
ಮಹಾದಾಯಿ ನದಿಯ ಒಂದು ಹನಿ ನೀರನ್ನೂ ಸಹ ಗೋವಾದಿಂದ ಕರ್ನಾಟಕಕ್ಕೆ ಬಿಡಲು ಎಂದೆಂದೂ ಅವಕಾಶ ನೀಡುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದರು. ನೀವು ಈ ಕರ್ನಾಟಕ ವಿರೋಧಿ ಹೇಳಿಕೆಯನ್ನು ಖಂಡಿಸುತ್ತೀರಾ?
ರಾಜಕೀಯ ಒಮ್ಮತ ಸಾಧಿಸುವುದಾದರೂ ಹೇಗೆ?
ಮಹಾದಾಯಿ ವಿಷಯದ ಬಗ್ಗೆ ಯಡಿಯೂರಪ್ಪನವರು ಗೋವಾ ಮುಖ್ಯಮಂತ್ರಿಯವರನ್ನು ಮನವೊಲಿಸಿದಾಗ ನೀವು ಅಥವಾ ಸಿದ್ದರಾಮಯ್ಯನವರು ಇನ್ನೂ ಗೋವಾ ಕಾಂಗ್ರೆಸನ್ನು ಒಪ್ಪಿಸಿಲ್ಲವಲ್ಲ ಏಕೆ? ಎರಡೂ ರಾಜ್ಯಗಳ ಎಲ್ಲಾ ಪಕ್ಷಗಳೂ ಒಪ್ಪದೇ ಹೋದರೆ ರಾಜಕೀಯ ಒಮ್ಮತ ಸಾಧಿಸುವುದಾದರೂ ಹೇಗೆ?
ಮೃತಪಟ್ಟವರ ಮನೆಗೆ ಏಕೆ ಭೇಟಿ ನೀಡಿಲ್ಲ?
ಮಹಮದ್ ಅಖ್ಲಾಖ್ ಮರಣದ ನಂತರ ದಾದ್ರಿಯಲ್ಲಿ ನೀವು ಅವರ ಮನೆಗೆ ಭೇಟಿ ನೀಡಿದಿರಿ. ಕರ್ನಾಟಕದಲ್ಲಿ ಇತ್ತೀಚೆಗೆ ದಲಿತರೂ ಸೇರಿದಂತೆ ಇಪ್ಪತ್ನಾಲ್ಕು ಯುವ ಹಿಂದೂಗಳ ಕಗ್ಗೊಲೆಯಾಗಿದೆ. ನೀವು ಏಕೆ ಈವರೆಗೆ ಇವರೊಬ್ಬರ ಮನೆಗೂ ಭೇಟಿ ನೀಡಿಲ್ಲ?
ಸ್ವಚ್ಛ ಆಡಳಿತ ನೀಡಲು ವಿಫಲರಾಗಿದ್ದೀರಿ ಎಂದು ಒಪ್ಪಿಕೊಳ್ಳುತ್ತೀರಾ?
ಭ್ರಷ್ಟಾಚಾರ ವಿರೋಧಿ ಬ್ಯುರೋದಲ್ಲಿ (ಎಸಿಬಿ) ಮುಖ್ಯಮಂತ್ರಿ ವಿರುದ್ಧ 67ಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆ ಆಗದೆಯೇ ಬಾಕಿ ಉಳಿದಿವೆ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲು ನಿಮ್ಮ ಸರಕಾರವು ಕರ್ನಾಟಕ ಲೋಕಾಯುಕ್ತವನ್ನೇ ನಾಡ ಮಾಡಿದೆ. ಕರ್ನಾಟಕವು ಭ್ರಷ್ಟಾಚಾರದಲ್ಲಿ ನಂಬರ್ ಒನ್ ರಾಜ್ಯ ಎಂದು ಸಮೀಕ್ಷೆಗಳು ಹೇಳಿವೆ. ಎಂದಿನಂತೆ ಈ ಬಾರಿಯೂ ನೀವು ಪಾರದರ್ಶಕ ಮತ್ತು ಸ್ವಚ್ಛ ಆಡಳಿತ ನೀಡಲು ವಿಫಲರಾಗಿದ್ದೀರಿ ಎಂದು ಒಪ್ಪಿಕೊಳ್ಳುತ್ತೀರಾ?
ನೈತಿಕ ಹೊಣೆಗಾರಿಕೆಯನ್ನು ನಿಮ್ಮ ಸರಕಾರವು ಹೊತ್ತುಕೊಳ್ಳುವುದೆ?
ಬೆಂಗಳೂರಿನಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳಿವೆ; ಸಂಚಾರ ವ್ಯವಸ್ಥೆ ನೆಗೆದುಬಿದ್ದಿದೆ; ರಸ್ತೆಗಳಲ್ಲಿ ಕಸ ತುಂಬಿ ತುಳುಕುತ್ತಿದೆ; ಮಾಲಿನ್ಯದಿಂದ ಕೆರೆಗೇ ಬೆಂಕಿ ಬಿದ್ದಿದೆ; ಮಳೆ ನೀರು ಮನೆಗಳಿಗೆ ನುಗ್ಗುತ್ತದೆ. ಸೂಕ್ತ ಮೂಲಸೌಕರ್ಯ ಇಲ್ಲವೆಂದು ಕಂಪೆನಿಗಳು ಬೆಂಗಳೂರು ಬಿಡುತ್ತಿವೆ. ನಿಮ್ಮ ಸರಕಾರವು ವಸ್ತುಶಃ ಬೆಂಗಳೂರನ್ನು ಕೊಂದುಹಾಕಿದೆ. ಬ್ರಾಂಡ್ ಬೆಂಗಳೂರನ್ನು ಬರ್ ಬಾದ್ ಬೆಂಗಳೂರು ಮಾಡಿದ ನೈತಿಕ ಹೊಣೆಗಾರಿಕೆಯನ್ನು ನಿಮ್ಮ ಸರಕಾರವು ಹೊತ್ತುಕೊಳ್ಳುವುದೆ?
ರೈತರಿಗೆ ಏನೂ ಮಾಡಿಲ್ಲ ಎಂಬುದು ಖಚಿತ ಅಲ್ಲವೆ?
ಕನ್ನಡಿಗರು ಕೇಳ್ತಿದ್ದಾರೆ ರಾಹುಲ್! ಕಳೆದ ಕೇವಲ ಐದು ವರ್ಷಗಳಲ್ಲಿ ಮೂರು ಸಾವಿರದ ಐನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ನಾವು ಹೆಮ್ಮೆಪಡಬೇಕಾದ ದಾಖಲೆಯ ಅಂಕಿ-ಅಂಶ ಅಲ್ಲವೇ ಅಲ್ಲ. ನಿಮ್ಮ ಸರ್ಕಾರವು ಕನ್ನಡಿಗ ರೈತರಿಗೆ ಏನೂ ಮಾಡಿಲ್ಲ ಎಂಬುದು ಇದರಿಂದ ಖಚಿತ ಆಗುತ್ತಿದೆ ಅಲ್ಲವೆ?
ಸಾಲ ಮನ್ನಾ ಮಾಡಲು ನಿಮ್ಮ ಸರಕಾರಕ್ಕೆ ಯಾವ ಅಡೆತಡೆ ಇದೆ?
ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯಗಳು ಅನುಕ್ರಮವಾಗಿ ಮೂವತ್ತು ಹಾಗೂ ಮೂವತ್ತಾರು ಸಾವಿರ ಕೋಟಿ ರುಪಾಯಿ ರೈತರ ಸಾಲ ಮನ್ನಾ ಮಾಡಿವೆ. ಇದರಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ನೀಡಿದ ಸಾಲವೂ ಸೇರಿವೆ. ಸಿದ್ದರಾಮಯ್ಯ ಸರಕಾರ ಕೇವಲ ಎಂಟು ಸಾವಿರ ಸಾಲ ಕೋಟಿ ಮನ್ನಾ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ನೀಡಿದ ಸಾಲ ಮನ್ನಾ ಮಾಡಲು ನಿಮ್ಮ ಸರಕಾರಕ್ಕೆ ಯಾವ ಅಡೆತಡೆ ಇದೆ ರಾಹುಲ್?
ಕೇಂದ್ರ ಸರಕಾರಿ ಯೋಜನೆಗಳ ಜಾರಿಯಲ್ಲಿ ಶೋಚನೀಯ ಸೋಲು
ಬಿಜೆಪಿ ಆಡಳಿತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಿಮ್ಮ ಸರಕಾರವು ಕೇಂದ್ರ ಸರಕಾರದ ಯೋಜನೆಗಳನ್ನು (ಉದಾಹರಣೆಗೆ ಫಸಲ್ ಬಿಮಾ ಯೋಜನೆ ಅಥವಾ ಪ್ರಧಾನಮಂತ್ರಿ ಆವಾಸ್ ಯೋಜನೆ) ಜಾರಿಗೊಳಿಸುವುದರಲ್ಲಿ ಶೋಚನೀಯವಾಗಿ ಸೋತಿದೆ. ಇಲ್ಲಿಯೂ ಬಿಜೆಪಿ ಸರಕಾರ ಇದ್ದಿದ್ದರೆ ಕನ್ನಡಿಗರಿಗೆ ಈ ಯೋಜನೆಗಳಿಂದ ಹೆಚ್ಚು ಅನುಕೂಲ ಆಗುತ್ತಿತ್ತು ಅನ್ನೋದು ಇದರಿಂದ ಸ್ಪಷ್ಟ ಆಗುತ್ತದೆ ಅಲ್ಲವೆ?
ನಿಮ್ಮ ಸರಕಾರವು ಕರ್ನಾಟಕವನ್ನು ಮಾಫಿಯಾ ಕೈಗೆ ಕೊಟ್ಟು ಕೂತಿಲ್ಲವೆ?
ಪ್ರಾಮಾಣಿಕ ಮತ್ತು ನೇರ ನಡೆಯ ಅಧಿಕಾರಿಗಳನ್ನು ಸತಾಯಿಸಿ ಬೇಕಾಬಿಟ್ಟಿ ವರ್ಗಾವಣೆ ಮಾಡಲಾಗುತ್ತಿದೆ. ಕೆಲವು ಅಧಿಕಾರಿಗಳಂತೂ ಶಂಕಾಸ್ಪದ ರೀತಿಯಲ್ಲಿ ಸತ್ತೇ ಹೋಗಿದ್ದಾರೆ. ಸಿದ್ದರಾಮಯ್ಯ ಸರಕಾರದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಯಾವುದೇ ಬೆಲೆ ಇಲ್ಲ ಎಂಬುದು ಖಚಿತವಾಗುವುದಿಲ್ಲವೆ? ನಿಮ್ಮ ಸರಕಾರವು ಕರ್ನಾಟಕವನ್ನು ಮಾಫಿಯಾ ಕೈಗೆ ಕೊಟ್ಟು ಕೂತಿಲ್ಲವೆ?
ನಿಮ್ಮ ನಾಯಕರಿಗೆ ಕ್ಷಮೆ ಕೋರುವಂತೆ ಕೇಳುತ್ತೀರಾ?
ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರಾದ ದಿನೇಶ್ ಗುಂಡೂರಾವ್, ಕೆಸಿ ವೇಣುಗೋಪಾಲ್ ಮುಂತಾದವರು ಪಿಎಫ್ ಐ ಮತ್ತು ಎಸ್ ಡಿಪಿಐನಂತಹ ಸಂಘಟನೆಗಳನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಬದಲಿಗೆ, ಅವರು ಬಿಜೆಪಿಯನ್ನೇ ನಿಷೇಧಿಸುವ ಮಾತಾಡುತ್ತಿದ್ದಾರೆ.
ರಾಜಕೀಯ ಪಕ್ಷವನ್ನೇ ನಿಷೇಧಿಸುವ ಹೇಳಿಕೆಯು ಕಾಂಗ್ರೆಸಿನ ತುರ್ತು ಪರಿಸ್ಥಿತಿ ಮಾನಸಿಕತೆಯನ್ನು ಬಿಂಬಿಸುತ್ತದೆ. ನೀವು ಈ ಹೇಳಿಕೆಯನ್ನು ಸಮರ್ಥಿಸುತ್ತೀರಾ? ಇಲ್ಲವಾದರೆ ನೀವು ನಿಮ್ಮ ನಾಯಕರಿಗೆ ಕ್ಷಮೆ ಕೋರುವಂತೆ ಕೇಳುತ್ತೀರಾ?