ವಿನಿವಿಂಕ್ ಚಿಟ್ ಫಂಡ್ ಹೆಸರಿನಲ್ಲಿ 20 ಸಾವಿರ ಮಂದಿಗೆ ಟೋಪಿ ಹಾಕಿದ ಕಥೆ
ಬೆಂಗಳೂರು, ಆ. 22: ಅದು 2004ನೇ ಇಸವಿ. ನಮ್ಮ ಬ್ಯಾಂಕ್ನಲ್ಲಿ ನೂರು ರೂಪಾಯಿಗೆ ತಿಂಗಳಿಗೆ ಹತ್ತು ರೂಪಾಯಿ ಬಡ್ಡಿ ಕೊಡ್ತೀವಿ ಎಂಬ ಬೋಗಸ್ ಸ್ಕೀಮ್ವೊಂದನ್ನು ಕೆ. ಎನ್. ಶ್ರೀನಿವಾಸ್ ಶಾಸ್ತ್ರಿ ಎಂಬ ಮಧ್ಯ ವಯಸ್ಸಿನ ವ್ಯಕ್ತಿ ಪರಿಚಯಿಸಿದ್ದ. ವಿನಿವಿಂಕ್ ಸೌಹಾರ್ದ ಕೋ ಆಪರೇಟೀವ್ ಸೊಸೈಟಿ ತೆರೆದು ಅದಕ್ಕೆ 20 ನಿರ್ದೇಶಕರನ್ನು ನೇಮಿಸಿಕೊಂಡಿದ್ದ. ಬದುಕಿಗೆ ಶಾಸ್ತ್ರಿ ಕೊಡುವ ಬಡ್ಡಿನೇ ಸಾಕು ಎಂದು ಆಸೆಗೆ ಬಿದ್ದ ಜನರು ದುಡಿದ್ದೆನ್ನಲ್ಲಾ ವಿನಿವಿಂಕ್ ಸೌಹಾರ್ದ ಕೋ ಆಪರೇಟೀವ್ ಸೊಸೈಟಿಗೆ ತುಂಬಿದರು. ಹಣ ತುಂಬಲಿಕ್ಕೆ ಜನ ಸಾಲುಗಟ್ಟಿ ನಿಲ್ಲುತ್ತಿದ್ದರು. ಬಂದ ಹಣವನ್ನು ಬ್ರೋಕರ್ ನಂಬಿ ಷೇರು ಮಾರ್ಕೆಟ್ನಲ್ಲಿ ಹೂಡಿ ನಷ್ಟ ಅನುಭವಿಸಿದ. ಬ್ರೋಕರ್ಗೂ ಸಾಲ ಇಡುವ ಸ್ಥಿತಿಗೆ ದಿವಾಳಿಯಾದ. ಬಡ್ಡಿ ಆಸೆಗೆ ಬಿದ್ದು ವಿನಿವಿಂಕ್ ಶಾಸ್ತ್ರಿ ಬ್ಯಾಂಕ್ಗೆ ದುಡ್ಡು ಹಾಕಿದ್ದ 20 ಸಾವಿರ ಮಂದಿ ರಾತ್ರೋ ರಾತ್ರಿ ಬೀದಿಗೆ ಬಿದ್ದರು!
ಗಿರಿನಗರದಲ್ಲಿದ್ದ ವಿನಿವಿಂಕ್ ಶಾಸ್ತ್ರಿಯ ಬ್ಯಾಂಕ್ ಮುಂದೆ ಬಿದ್ದು ಚೀರಾಡ ತೊಡಗಿದರು. ಅಷ್ಟೊತ್ತಿಗೆ ಬಡ್ಡಿ ಹೆಸರಿಲ್ಲಿ 203 ಕೋಟಿ ರೂಪಾಯಿ ಸಂಗ್ರಹಿಸಿ ನಾಮ ಹಾಕಿದ್ದ. ಬಡ್ಡಿಯೂ ಇಲ್ಲ ಅಸಲೂ ಇಲ್ಲದಂತೆ ವಿನಿವಿಂಕ್ ಶಾಸ್ತ್ರಿ ಮತ್ತು ಪಟಾಲಂ ಕೈ ಎತ್ತಿತ್ತು. ಹೂಡಿಕೆ ಮಾಡಿದ್ದ ಶಿಕ್ಷಕರು, ಕೂಲಿ ಕಾರ್ಮಿಕರು, ನಿವೃತ್ತ ಅಧಿಕಾರಿಗಳು ಪ್ರತಿಭಟನೆ ನಡೆಸಿದರು. ಸಾಲುಗಟ್ಟಿ ದೂರು ನೀಡಿದರು. ಇಡೀ ಪ್ರಕರಣವನ್ನು 2005 ರಲ್ಲಿ ತನಿಖೆ ನಡೆಸುವಂತೆ ಸಿಐಡಿ ಪೊಲೀಸರಿಗೆ ಒಪ್ಪಿಸಲಾಯಿತು. ಸಿಐಡಿ ತನಿಖಾ ಸಂಸ್ಥೆಯ ಮುಖ್ಯಸ್ಥರಾಗಿದ್ದ ಅಜಯ್ ಕುಮಾರ್ ಸಿಂಗ್ ಮಾರ್ಗದರ್ಶದಲ್ಲಿ ಸಿಐಡಿ ಪೊಲೀಸರು ತನಿಖೆ ನಡಸಿದರು.
ಇನ್ಸೈಡ್ ಸ್ಟೋರಿ: ಗೃಹ ಮಂತ್ರಿ ಇಲಾಖೆ ಸಮಸ್ಯೆಗಳನ್ನು ಸಡಿಪಡಿಸುತ್ತಾರಾ?
ಶಾಸ್ತ್ರಿಯ ಬ್ಯಾಲೆನ್ಸ್ ಶೀಟ್ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದರು. ಜನರು ಹೂಡಿಕೆ ಮಾಡಿದ್ದ 203 ಕೋಟಿ ಹಣವನ್ನು ಟ್ರೇಡಿಂಗ್ಗೆ ಹಾಕಿ ಕೈ ಸುಟ್ಟು ಕೊಂಡಿದ್ದ. ತನ್ನ ಸ್ವಂತ ಐಷಾರಾಮಿ ಜೀವನಕ್ಕಾಗಿ ಕೋಲಾರದಲ್ಲಿ ಒಂದಷ್ಟು ಜಮೀನು ತೆಗೆದಿದ್ದ. ಯಲಹಂಕದಲ್ಲಿ 30 ಕ್ಕೂ ಹೆಚ್ಚು ನಿವೇಶನ ಖರೀದಿ ಮಾಡಿದ್ದ. ಆರಂಭದಲ್ಲಿ ಶಾಸ್ತ್ರಿಗೆ ಸೇರಿದ ಕಾರು, ಬಂಗಲೆ, ಮನೆ ಎಲ್ಲಾ ಮಾರಿದರೂ ಪೊಲೀಸರು ಜಪ್ತಿ ಮಾಡಲು ಸಾಧ್ಯವಾಗಿದ್ದು ಕೇವಲ 15 ಕೋಟಿ. ವಿನಿವಿಂಕ್ ಶಾಸ್ತ್ರಿಯನ್ನು ಮತ್ತು ಉಪಾಧ್ಯಕ್ಷ ಲೋಕೇಶ್ ಎಂಬುವರನ್ನು ಸಿಐಡಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಉಳಿದ ಹದಿನೆಂಟು ಮಂದಿ ಆರೋಪಿಗಳು ತಲೆ ಮರೆಸಿಕೊಂಡು ಜಾಮೀನು ಪಡೆದಿದ್ದರು.
ವಿನಿವಿಂಕ್ ಅಕ್ರಮ ಪ್ರಕರಣ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು 20 ಸಾವಿರ ಮಂದಿಗೆ 203 ಕೋಟಿ ರೂ. ಮೋಸ ಮಾಡಿರುವ ಬಗ್ಗೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ2008 ರಲ್ಲಿ ಸಲ್ಲಿಸಿದ್ದರು. 2005 ರಲ್ಲಿ ಬೆಳಕಿಗೆ ಬಂದ ಈ ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸಿತ್ತು.
ಗೃಹ ಸಚಿವರ ಗಮನಕ್ಕೆ: ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಬಡವರಿಗೆ ನ್ಯಾಯ ಕೊಡಿಸುವುದು ನಿಮ್ಮದೇ ಹೊಣೆಗಾರಿಕೆ!
ವಿನಿವಿಂಕ್ ನಿಂದ ಜೀವ ಕಳೆದುಕೊಂಡವರು: ವಿನಿವಿಂಕ್ ಶಾಸ್ತ್ರಿಯ ಪರಿಚಯಿಸಿದ ಬ್ಲೇಡ್ ಸ್ಕೀಮ್ಗೆ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಆತ್ಮೀಯರನ್ನು ನಂಬಿಸಿ ಹೂಡಿಕೆ ಮಾಡಿಸಿದ್ದವರು ಸಂಕಷ್ಟಕ್ಕೆ ಒಳಗಾಗಿದ್ದರು. ಹೂಡಿಕೆ ಮಾಡಿದವರಿಗೆ ಪ್ರತ್ಯೇಕ ಕಮೀಷನ್ ಆಸೆ ಹುಟ್ಟಿಸಿದ್ದ ಶಾಸ್ತ್ರಿಯನ್ನು ನಂಬಿ ಹೂಡಿಕೆ ಮಾಡಿದವರು ಆ ನೋವಿನಿಂದ ಹೊರ ಬರಲಾರದೇ ಕೆಲವರು ಜೀವ ಕಳೆದುಕೊಂಡಿದ್ದಾರೆ. 2010 ರಲ್ಲಿ ಸುಪ್ರೀಂಕೋರ್ಟ್ ವಿನಿವಿಂಕ್ ಶಾಸ್ತ್ರಿಗೆ ಜಾಮೀನು ಮಂಜೂರು ಮಾಡಿತ್ತು. ಅದಾದ ಬಳಿಕ ರಾಯಚೂರಿನ ಸದರ ಬಜಾರ್ ಠಾಣೆ ಪೊಲೀಸರು ಶಾಸ್ತ್ರಿಯನ್ನು 400 ಜನರಿಗೆ ಮೋಸ ಮಾಡಿದ ಪ್ರಕರಣದಲ್ಲಿ ಬಂಧಿಸಿದ್ದರು. ಬಡವರ ರಕ್ತ ಹೀರಿದ ಶಾಸ್ತ್ರಿ ಸದ್ಯ, ಇದರಿಂದ ಹೊರಗೆ ಬರಲಾರದೇ ಪರದಾಡುತ್ತಿದ್ದಾನೆ. ವಾಸ್ತವದಲ್ಲಿ ಈತನಿಂದ ಮೋಸ ಹೋದವರು ಎಷ್ಟೋ ಮಂದಿ ಜೀವನವನ್ನೇ ಕಳೆದಕೊಂಡಿದ್ದಾರೆ.
ಈಗಲಾದರೂ ಸಿಗುವುದೇ ನ್ಯಾಯ ?:
ಸದ್ಯ ಸಿಐಡಿ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯ ಮಾಹಿತಿ ಪ್ರಕಾರ ವಿನಿವಿಂಕ್ ಶಾಸ್ತ್ರಿಯ ಅಕ್ರಮ ಸಂಬಂಧ 85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಪ್ರಕರಣ ಜರುಗಿ ಹನ್ನೆರಡು ವರ್ಷಗಳಾದರೂ ಯಾವೊಬ್ಬ ಹೂಡಿಕೆದಾರನಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ ಎಂಬುದು ವಿಪರ್ಯಾಸ. ಕನಿಷ್ಠ ಹೂಡಿಕೆ ಮಾಡಿದ ಹಣದಲ್ಲಿ ಶೇ. 30 ರಷ್ಟು ಹಣವಾದರೂ ಹೂಡಿಕೆ ಮಾಡಿದವರ ಕೈಗೆ ಸೇರುತ್ತಿತ್ತು. ಈ ವರೆಗೂ ಈ ಬಗ್ಗೆ ಪೊಲೀಸರು ಆಸಕ್ತಿ ತೋರಿಸಿಲ್ಲ. ಹೀಗಾಗಿ ಹತ್ತು ವರ್ಷವಾದರೂ ಚಾತಕ ಪಕ್ಷಿಗಳಂತೆ ಇನ್ನೂ ಅನೇಕರು ಕಾಯುತ್ತಲೇ ಇದ್ದಾರೆ.
ಪ್ರಕರಣದ ತನಿಖೆ, ಆರೋಪಿಗಳಿಗೆ ಶಿಕ್ಷೆ ಕೊಡಿಸುವುದು ತನಿಖೆಯ ಭಾಗ ಸರಿ. ಆದರೆ, ಜಪ್ತಿ ಮಾಡಿರುವ ಹಣವನ್ನು ನ್ಯಾಯಾಲಯದ ಅನುಮತಿ ಪಡೆದು ಅರ್ಹರಿಗೆ ಕ್ಲೇಮ್ ಕಮೀಷನ್ ರಚನೆ ಮಾಡಿ ಕೊಡಿಸುವುದು ಪೊಲೀಸರ ಬಹುದೊಡ್ಡ ಜವಾಬ್ದಾರಿ ನಡೆ. ಅವಾಗಲೇ ಪೊಲೀಸರು ಹಾಗೂ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆ ಜನರಲ್ಲಿ ಹೆಚ್ಚಾಗುವುದು. ರಾಜ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳು ಇದ್ದರೂ ಜನ ಸಾಮಾನ್ಯರು ಮೋಸ ಹೋಗುವ ಪ್ರಕರಣಗಳ ಬಗ್ಗೆ ಆಸಕ್ತಿ ವಹಿಸದಿರುವುದು ವಿಪರ್ಯಾಸ. ಇದು ಕರ್ನಾಟಕವನ್ನು ಬೆಚ್ಚಿ ಬೀಳಿಸಿದ ಒಂದು ಪ್ರಕರಣ ವಷ್ಟೇ. ಇದರ ಸಾವಿರ ಪಟ್ಟು ದೊಡ್ಡ ಅಕ್ರಮಗಳ ಸರಣಿಯೇ ಕರ್ನಾಟಕದಲ್ಲಿದೆ. ಅದರಲ್ಲಿ ಇದು ಕೇವಲ ಒಂದಷ್ಟೇ.