ಚರ್ಚೆ: ಚಿಲ್ಟೂ ಪಕ್ಷಗಳ ಮಾತೆಲ್ಲ ಕೇಳಂಗಾಗಿದೆ ಎಂದ ಪರಮೇಶ್ವರ್
ಮೇ ಹದಿನೈದನೇ ತಾರೀಕು ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ದಿನದ ಕಾಂಗ್ರೆಸ್ ಪಕ್ಷಕ್ಕೂ, ಅದಾಗಿ ಹದಿನೈದು ದಿನ ಕಳೆಯುವುದಕ್ಕೂ ಚಿಗಿತು ನಿಂತಿರುವ ಈಗಿನ ಕೈ ಪಕ್ಷಕ್ಕೂ ಅಜಗಜಾಂತರ ಕಾಣುತ್ತಿದೆ. ಯಾವುದೇ ಷರತ್ತಿಲ್ಲದೇ ಜೆಡಿಎಸ್ ಗೆ ಬೆಂಬಲ ಕೊಟ್ಟಿದ್ದೇವೆ. ಅವರು ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಮಾಡಲಿ ಎಂದು ತುಂಬಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಪರಮೇಶ್ವರ್ ಇವರೇನಾ ಎಂಬ ಅನುಮಾನ ಮೂಡುತ್ತಿದೆ.
ಏಕೆಂದರೆ, ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಶ್ಯಾನೇ ಬೇಜಾರು ಮಾಡಿಕೊಂಡರಂತೆ ಪರಮೇಶ್ವರ್. ರಾಷ್ಟ್ರೀಯ ಪಕ್ಷದವರಾದ ನಾವು, ಸಣ್ಣ ಪಕ್ಷದವರ ಮಾತೆಲ್ಲ ಕೇಳಬೇಕಾಯ್ತಲ್ಲ, ಛೇ. ಮುಖ್ಯ ಖಾತೆಗಳೆಲ್ಲ ತನಗೆ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ ಎಂಬ ಕಾರಣಕ್ಕೆ ಉಪ ಮುಖ್ಯಮಂತ್ರಿಗಳು ಹೀಗೆ ಗಳ ಗಳ ಗಳ ಅಂತ ನೊಂದುಕೊಂಡಿದ್ದಾರೆ.
ಸಣ್ಣ ಪಕ್ಷದ ಮಾತು ಕೇಳಬೇಕಿರುವುದು ನೋವು ತಂದಿದೆ: ಪರಮೇಶ್ವರ್
ಜತೆಗೆ ಲೋಕಸಭೆ ಚುನಾವಣೆ ಹೊತ್ತಿಗೆ ಇನ್ನಷ್ಟು ಗಟ್ಟಿಯಾಗೋಣ ಅಂದವರೇ, ಲೋಕಸಭೆ ಚುನಾವಣೆಗೆ ಈಗಾಗಲೇ ಮೈತ್ರಿ ಮಾಡಿಕೊಳ್ಳುವ ಮಾತಾಗಿದೆ ಅನ್ನೋದನ್ನೂ ಹೂಬೇಹೂಬು ಕುರುಕ್ಷೇತ್ರ ಯುದ್ಧದಲ್ಲಿ ಧರ್ಮರಾಯನ ರೀತಿ 'ಅಶ್ವತ್ಥಾಮ ಹತಃ ಕುಂಜರಃ' ಎಂದಿದ್ದಾರೆ ಪರಮೇಶ್ವರ್.
ಹೌದಾ, ಜೆಡಿಎಸ್ ನಂಥ ಚಿಲ್ಟೂ ಪಕ್ಷದ ಮಾತು ಕೇಳುವಂತಾಗಿರುವುದು ಕಾಂಗ್ರೆಸ್ ಪಾಲಿಗೆ ಮುಖಭಂಗವೇ? ಈಗಿನ ಮೈತ್ರಿ ಸರಕಾರದ ನಡೆಗಳನ್ನು ನೋಡಿದರೆ ಆದಷ್ಟು ಬೇಗ ಪಾಯಸ- ಉದ್ದಿನ ವಡೆ ಅಂತೇನಾದರೂ ಅನಿಸುತ್ತಾ? ಅಥವಾ ಇವೆಲ್ಲ ಬಿಜೆಪಿ ಕೃಪಾಪೋಷಿತ ನಾಟಕಮು ಅಂತೇನಾದರೂ ಅನುಮಾನ ಬರುತ್ತಾ? ಒಟ್ಟಿನಲ್ಲಿ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನು ಕಮೆಂಟ್ ಮಾಡಿ.