ಮರೆಯಬೇಕು ಅನ್ನೋದನ್ನ ನೆನಪಿಟ್ಟುಕೊಳ್ಳುವುದನ್ನು ಮರೆಯದಿರಿ!
ಇದೊಂದು ಮರೆಯುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಹರಸಾಹಸದ ಮೆರವಣಿಗೆ. ಮರೆಯಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದೋ ಅಥವಾ ನೆನಪಿಟ್ಟುಕೊಂಡು ಮರೆಯುವುದೋ ಒಮ್ಮೊಮ್ಮೆ ಅರ್ಥವಾಗದ ಪ್ರಶ್ನೆಯಾಗುತ್ತದೆ.
ಜೀವನದಲ್ಲಿ ಯಾವುದೋ ವಿಷಘಳಿಗೆಯಲ್ಲಿ ಆಗಬಾರದ್ದು ಆಗಿರುತ್ತೆ ಎಂದುಕೊಳ್ಳಿ. ಈ ಕಹಿಘಟನೆಯನ್ನು ಮನಸ್ಸಿನಿಂದ ತೊಡೆದು ಹಾಕಿ ಹೊಸ ಬಾಳು ರೂಪಿಸಿಕೊಳ್ಳುವುದನ್ನು ಕಲಿಯಬೇಕು ಎಂದು ಧೃಡ ನಿರ್ಧಾರ ಮಾಡಿದ್ದರೂ ಆ ಕಹಿನೆನಪನ್ನು ಮರೆಯಬೇಕು ಎಂಬುದನ್ನು ಮನಸ್ಸು ನೆನಪಿಟ್ಟುಕೊಳ್ಳಲು ಸೋಲುತ್ತದೆ.
ಮೌನ ಬಂಗಾರವೂ ಆಗಬಹುದು, ಬಣ್ಣವನ್ನೂ ಕಳೆದುಕೊಳ್ಳಬಹುದು!
ಸೆಪ್ಟೆಂಬರ್ 11ರಂದು ನ್ಯೂಯಾರ್ಕಿನ ಕಟ್ಟಡಗಳೆರಡೂ ಉರುಳಿ ಪ್ರಾಣ ಹಾನಿಯೇ ಅಲ್ಲದೆ ಇಡೀ ದೇಶವೇ ಅಲ್ಲಾಡಿತ್ತು. ಆ ದಿನವನ್ನು ಮರೆಯುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎನ್ನಲಾದೀತೇ? ಮುಂಬೈ ನಗರದ ಮೇಲಿನ ದಾಳಿಗಳು, ತಾಜ್ ಹೋಟೆಲ್'ನ ದಾಳಿ ಇತ್ಯಾದಿ ಘಟನೆಗಳನ್ನು ನೆನಪಿನಲ್ಲೇ ಇಟ್ಟುಕೊಳ್ಳುತ್ತೇವೆಯೇ ಹೊರತು ಮರೆಯಬೇಕು ಅಂತ ನೆನಪಿನಲ್ಲಿ ಇಟ್ಟುಕೊಳ್ಳುವುದು ದುಸ್ತರ. ಕೆಲವು ಆರದ ಗಾಯಗಳು. ಇನ್ನು ಕೆಲವು ಕಾಲ ಸರಿದ ಹಾಗೆ ಕಡಿಮೆಯಾಗುತ್ತದೆ.
ಮರೆಯಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳದ ಮನ, ಆಗಾಗ ಅದನ್ನೇ ನೆನಪಿಸಿಕೊಳ್ಳುತ್ತಾ ಇರುವುದರಿಂದಲೇ ನೆನಪುಗಳು ಹಸಿಯಾಗೇ ಇರುತ್ತವೆ. ಒಂದು ಸಾಮ್ಯತೆಯನ್ನು ನೋಡೋಣ. ಒಂದು ಕಚೇರಿಯ ರೆಕಾರ್ಡ್ಸ್ ವಿಭಾಗದಲ್ಲಿ ಪ್ರತಿಬಾರಿಯೂ ಕಡತಗಳನ್ನು ಪೇರಿಸುವಾಗ ಒಂದರ ಮೇಲೊಂದು ಪೇರಿಸುತ್ತಾ ಸಾಗಿದರೆ ಕೆಳಗಡೆ ಇರುವ ಕಡತದ ಕುರುಹೇ ಇರುವುದಿಲ್ಲ ಅಲ್ಲವೇ? ಬದಲಿಗೆ ಪ್ರತೀ ಬಾರಿಯೂ ಒಂದು ಹೊಸ ಕಡತ ಇಡುವಾಗ ಹಳೆಯ ಕಡತದ ಕೆಳಗೆ ಇಡುತ್ತಾ ಸಾಗಿದರೆ, ಆ ಹಳೆಯ ಕಡತ ಮೇಲೆಯೇ ಇದ್ದು ಹಳೆಯ ವಾಸನೆ ಬೀರುತ್ತಲೇ ಇರುತ್ತದೆ.
ಕೃಷ್ಣನು ರಾಧೆಯನ್ನು ವೃಂದಾವನದಲ್ಲಿ ಬಿಟ್ಟು ಮಧುರೆಗೆ ತೆರಳಿದಾಗ, ರಾಧೆಯ ಮನಸ್ಸಿನಲ್ಲಿ ಕೊನೆಯವರೆಗೂ ಇದ್ದುದು "ನಿನ್ನನ್ನು ಮರೆಯಬೇಕು ಅಂತ ನನಗೆ ನೆನಪೇ ಆಗುವುದಿಲ್ಲ ಕೃಷ್ಣ" ಎಂದೇ ಇದ್ದಿತೇ?
ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡ್ಕೊಂಡಿದ್ದೀರಾ?
ಯಾವ ಒಂದು ನೆನಪು, ಎಂಥಾ ಸಂತಸದ ಸಮಯದಲ್ಲೂ ದು:ಖದ ಛಾಯೆಯನ್ನು ಆವರಿಸುವಂತೆ ಮಾಡುತ್ತದೋ, ಮೊದಲು ಅದನ್ನು ಮರೆಯಲು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಅಮ್ಮನ ನೆನಪಾಗುತ್ತದೆ, ಅಪ್ಪನ ನೆನಪಾಗುತ್ತದೆ, ಅಣ್ಣ / ತಮ್ಮ / ಅಕ್ಕ / ತಂಗಿ ಹೀಗೆ ಹೃದಯಕ್ಕೆ ತೀರಾ ಹತ್ತಿರದವರು ನಮ್ಮೊಂದಿಗೆ ಈಗ ಇಲ್ಲ ಎಂಬ ನೋವಿನ ನೆನಪುಗಳು ಆಗಾಗ್ಗೆ ದು:ಖ ಆವರಿಸುವಂತೆ ಮಾಡುತ್ತದೆ. ಅದನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ ಎಂದು ವಾದಿಸಬಹುದು. ನನಗೂ ಈ ಅನುಭವ ಇದೆ. ಯಾರು ನಮ್ಮಿಂದ ದೂರವಾಗಿರುತ್ತಾರೋ ಅವರಿಗೆ ಪ್ರಿಯವಾದ ಕೆಲಸವನ್ನು ನಾವು ಮುಂದುವರೆಸುವುದರಲ್ಲಿ, ಅಥವಾ ಅವರ values ಅನ್ನು ನಾವು ಜೀವಿಸುವುದರಲ್ಲಿ ಅವರನ್ನು ನೆನಪಿಸಿಕೊಂಡಾಗ ಆ ನೆನಪು ದು:ಖ ತರುವುದಿಲ್ಲ. 'ಆ ಮರೆಯಲಾಗದ ನೆನಪ ದು:ಖ ತರಿಸುವುದರಿಂದ ದೂರವಾಗಿ' ಅಂತ ಈ ಮಾತಿನ ಅರ್ಥವೇ ಹೊರತು, ಅವರನ್ನು ನೆನಪಿಸಿಕೊಳ್ಳಲೇಬೇಡಿ ಅಂತಲ್ಲ.
ನಮ್ಮಲ್ಲಿ ಶೇಖರಿಸಿ ಇಟ್ಟುಕೊಳ್ಳಲು, ಖಜಾನೆಯಷ್ಟು ನೆನಪುಗಳನ್ನು ಬಿಟ್ಟುಹೋದವರನ್ನು ಮರೆಯುವುದಾದರೂ ಹೇಗೆ? ಪ್ರೀತಿಪಾತ್ರರಾದವರನ್ನು ಮರೆಯಲು ಯತ್ನಿಸುವುದು ಹೇಗೆ ಎಂದರೆ ಜೀವನದಲ್ಲಿ ಎಂದಿಗೂ ಭೇಟಿಯಾಗದಿರುವವರನ್ನು ನೆನಪಿಸಿಕೊಳ್ಳಲು ಯತ್ನಿಸುವುದು.
ನಾಮಕರಣ, ಮರುನಾಮಕರಣ - ಅಂದು ಇಂದು ಎಂದೆಂದೂ!
ಭೇಟಿಯಾಗದೇ ಇರುವವರನ್ನು ಹೇಗ್ರೀ ನೆನಪಿನಲ್ಲಿ ಇಟ್ಟುಕೊಳ್ಳುವುದು ಎಂದಾಗ 'ಬೆಳದಿಂಗಳ ಬಾಲೆ' ನೆನಪಾಗುತ್ತಾಳೆ ಅಲ್ಲವೇ? ಇಲ್ಲಿನ ಸನ್ನಿವೇಶ ಕೊಂಚ ಬೇರೆ. ಎದುರಿಗೆ ಕಂಡಿಲ್ಲದಿದ್ದರೂ ಕಂಡದ್ದಕ್ಕಿಂತಾ ಹೆಚ್ಚು ಬಾಂಧವ್ಯ ಇತ್ತು. ಅದು ಸಿನಿಮಾ ಬಿಡಿ ಎಂದರೆ ಕಳೆದ ವಾರದಲ್ಲಿ ಸ್ವಾಮಿ ವಿವೇಕಾನಂದರ ಜನುಮದಿನ ಇತ್ತು. ಅವರ ಜೀವನದ ಬಗ್ಗೆ, ಅವರ ತತ್ವಗಳ ಬಗ್ಗೆ ಹಲವಾರು ಪೋಸ್ಟ್'ಗಳನ್ನು ವಾಟ್ಸಾಪ್, ಫೇಸ್ಬುಕ್ ಮುಂತಾದ ತಾಣದಲ್ಲಿ ಓದುತ್ತಿದ್ದೆವು. ನಮ್ಮಲ್ಲಿ ಎಷ್ಟು ಜನ ಅವರನ್ನು ನೋಡಿದ್ದೇವೆ? ಆದರೂ ಅವರು ನಮ್ಮಲ್ಲಿ ಜೀವಂತ ಅಲ್ಲವೇ? ಇಂದಿನ ಉದಾಹರಣೆ ತೆಗೆದುಕೊಳ್ಳೋಣ. ನಿಮ್ಮದೇ ಫೇಸ್ಬುಕ್ ತಾಣದ ಸ್ನೇಹಿತರಲ್ಲಿ ನೀವು ಎಷ್ಟು ಜನರನ್ನು ಭೇಟಿಯಾಗಿದ್ದೀರಿ? ಕಂಡೇ ಇಲ್ಲದಿದ್ದರೂ ಅವರ ನೆನಪು ನಮ್ಮಲ್ಲಿ ಇದೆ ಅಲ್ಲವೇ?
ಪ್ರೀತಿಪಾತ್ರರಾದವರನ್ನು ಮರೆಯಲು ಯತ್ನಿಸುವುದು, ಎಂದಿಗೂ ಭೇಟಿಯಾಗದಿರುವವರನ್ನು ನೆನಪಿಸಿಕೊಳ್ಳಲು ಯತ್ನಿಸುವುದು ಎಂದರೆ ಯಾವುದೋ ಒಂದು ಕಡೆ ಇರುವ, ಯಾವುದೋ ಒಬ್ಬ ವ್ಯಕ್ತಿಯ ಜೊತೆ ನಿಮಗೆ ಯಾವುದೇ ರೀತಿಯ ಸಂಪರ್ಕವಿಲ್ಲದೆ ಅವರನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಯತ್ನಿಸುವುದು ಅಂತ. ಉದಾಹರಣೆಗೆ ಚೈನಾದ ಒಂದು ಹಳ್ಳಿಯಲ್ಲಿ ವಾಸವಾಗಿರುವ ಚಿಂಗ್ ಚಾಂಗ್ ಚೂ ಎಂಬ ವ್ಯಕ್ತಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು. ಇದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಪ್ರೀತಿಪಾತ್ರರಾದವರನ್ನು ಮರೆಯಲೂ ಸಾಧ್ಯವಿಲ್ಲ.
ಈ ಲೇಖನ ಓದಿದ ಮೇಲೆ ಕುಡೀಬೇಕಾ, ಕುಡಿಯೋದ್ ಬೇಡ್ವಾ? ನಿರ್ಧಾರ ಮಾಡಿ
ಹಲವು ಸಿನಿಮಾಗಳಲ್ಲಿ ನಾವು ನೋಡಿರುವ ಸನ್ನಿವೇಶ ಏನಪ್ಪಾ ಅಂದ್ರೆ, ಪ್ರೇಯಸಿಯನ್ನು ತಾತ್ಕಾಲಿಕವಾಗಿ ಬಿಟ್ಟು ಪ್ರಿಯಕರ ಪರದೇಶಕ್ಕೆಲ್ಲೋ ಹೋಗುತ್ತಾನೆ. ಆಗ ಪ್ರೇಯಸಿ complicated ಆಗಿ "ನನ್ನನ್ನು ದಿನವೂ ನೆನಪಿಸಿಕೊಳ್ಳುವುದನ್ನು ನೆನಪಿನಲ್ಲಿಟ್ಟುಕೋ. ನನ್ನನ್ನು ಮರೆತುಬಿಡಬೇಕು ಎಂಬ ಯತ್ನವನ್ನು ಮರೆತುಬಿಡು. ನನ್ನನ್ನು ಮರೆಯಬೇಕು ಅಂತೇನಾದರೂ ನೆನಪಿನಲ್ಲಿ ಇಟ್ಟುಕೊಂಡರೆ ನಿನ್ನ ನೆನಪುಗಳನ್ನೇ ಮರೆಯೋ ಹಾಗೆ ಮಾಡಬೇಕಾಗುತ್ತೆ" ಅಂತ ಪ್ರಿಯಕರನಿಗೆ ವಾರ್ನಿಂಗ್ ರೀತಿ ಹೇಳಿದಳು ಅನ್ನಿ, ಅವನು ಪರದೇಶಕ್ಕೆ ಹೋದರೂ ಅಲ್ಲಿ ಪರಪರ ಅಂತ ತಲೆಕೆರೆದುಕೊಂಡು ಯೋಚಿಸಬೇಕು ಅವಳೇನೆಂದಳು ಅಂತ. ಇದು ದಿನವೂ ಅಲ್ಲ,ಪ್ರತಿ ಕ್ಷಣವೂ ಅವಳನ್ನು ನೆನಪಿಸಿಕೊಳ್ಳುವಂತೆ ಮಾಡುವ ತಂತ್ರ ಎನ್ನಬಹುದೇ?
ಮೊನ್ನೆ ವಾಟ್ಸಪ್ಪ್'ನಲ್ಲಿ ಕಂಡ ಒಂದು ಮೆಸೇಜ್ ಈ ಬರಹಕ್ಕೆ ಕಾರಣ. ಅದರಲ್ಲಿ "ನೆನಪಿನಲ್ಲಿಟ್ಟುಕೊಳ್ಳುವುದು ಅಗತ್ಯ. ಮರೆಯುವುದು ಅದಕ್ಕಿಂತಲೂ ಅಗತ್ಯ. ನೆನಪಿಟ್ಟುಕೊಳ್ಳಿ" ಅಂತ.
ಎಲ್ಲ ವಿಷಯವನ್ನೂ ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಮೆದುಳು explode ಆಗಿಹೋದೀತು. ಹೀಗಾಗದಂತೆ ತಡೆಯುವುದು ಸೃಷ್ಟಿಯ ವೈಶಿಷ್ಟ್ಯವೇ ಆಗಿದೆ. ಮೆದುಳಿಗೆ ಮರೆಯುವುದನ್ನೂ ಕೊಟ್ಟಿರುವುದು ಒಂದು ವರದಾನ ಎನ್ನಬಹುದು. ಕೆಲವು ವಿಷಯಗಳು ಸರ್ವೇಸಾಮಾನ್ಯ ಅಂತಾಗಿ ಅಥವಾ ಅದರಲ್ಲೇನೂ ವಿಶೇಷವಿಲ್ಲ ಅಂತಾದರೆ, ಅದು ಮನಸ್ಸಿನ ಕಪಾಟಿನಲ್ಲಿ ಒಂದು ಸ್ವಲ್ಪ ಹೊತ್ತು ಕೂತು ಮರೆಯಾಗಿಬಿಡುತ್ತದೆ. ಉದಾಹರಣೆಗೆ ಎಲ್ಲೋ ಒಂದು ಕಡೆ ಹೋಗಿದ್ದಾಗ elevator ಏರಿ ಸಾಗುತ್ತೀರಿ ಅಂದುಕೊಳ್ಳಿ. ನಿಮ್ಮೊಂದಿಗೆ ಹಲವು ಜನ ಅಲ್ಲಿರುತ್ತಾರೆ. ನಿಮ್ಮ floor ಬಂದ ಮೇಲೆ, ಬಾಗಿಲು ತೆರೆದುಕೊಳ್ಳುತ್ತಿದ್ದಂತೆ ಹೊರಗೆ ಹೋಗುತ್ತೀರಿ. ನಿಮ್ಮೊಂದಿಗೆ ಯಾರಿದ್ದರು ಅಂತ ಬಹುಶ: ನೀವು ನೋಡಿದ್ದರೂ ಅವರ ನೆನಪೇ ನಿಮ್ಮಲ್ಲಿ ಉಳಿಯುವುದಿಲ್ಲ. ಸೃಷ್ಟಿಯ ವೈಶಿಷ್ಟ್ಯ ಎಂದರೆ ಇದೇ. ಇಲ್ಲಿ ವಿಷಯವನ್ನು ಮರೆಯಲು ನಿಮ್ಮ ಯತ್ನವೇ ಇಲ್ಲ ಇನ್ನು ಪಾತ್ರವಂತೂ ದೂರ ಉಳಿಯಿತು. You do not need to remember to forget.
ಮನೆಯ ಜನರ ನಡುವೆ, ಬಂಧುವರ್ಗದಲ್ಲಿ, ಸ್ನೇಹಿತರ ವಲಯದಲ್ಲಿ, ಕಚೇರಿಗಳಲ್ಲಿ ಹೀಗೇ ಎಲ್ಲೆಲ್ಲಿ ಮಾನವ ಸಂಪರ್ಕ ಇದೆಯೋ ಪ್ರತಿಯೊಂದು ಕಡೆಯೂ ಕ್ರಿಮಿಕೀಟಾಣು ಇರುವಂತೆ ಮನಸ್ತಾಪಗಳೂ ಇರುತ್ತದೆ. ಇವು ಮನಸ್ಸಿನಲ್ಲೇ ಕೂತಿದ್ದು, ನೀವು ನಿದ್ರೆ ಮಾಡಿದರೆ ಅವೂ ಮಲಗುತ್ತದೆ. ನೀವು ಕಣ್ಣು ಬಿಟ್ಟೊಡನೆ ಸಕ್ಕರೆಗೆ ಇರುವೆ ಮುತ್ತಿದಂತೆ ನಿಮ್ಮ ಮನಸ್ಸನ್ನು ಮುತ್ತುತ್ತದೆ. ಮನಸ್ಸಿಗೆ ತೀವ್ರವಾಗಿ ಹತ್ತಿರವಿದ್ದು ಅಥವಾ ಘಾಸಿಗೊಳಿಸಿದ ಘಟನೆಗಳ ನೆನಪನ್ನು ಮರೆಯುವುದನ್ನು ನೆನಪಲ್ಲಿ ಇಟ್ಟುಕೊಳ್ಳುವುದು ಆರೋಗ್ಯದ ವಿಷಯದಲ್ಲಿ ಒಳ್ಳೆಯದು. ನೆನಪಿಟ್ಟುಕೊಳ್ಳಿ.
ಕಾಮನಬಿಲ್ಲು ಚಿತ್ರದಲ್ಲಿ ತನ್ನ ಪ್ರೀತಿಯನ್ನು ತ್ಯಾಗ ಮಾಡುವಾಗ, ತನ್ನ ಪ್ರಿಯತಮೆಯನ್ನು ಮರೆಯಲು ನಾಯಕ 'ಯೋಗ'ಕ್ಕೆ ಶರಣಾಗುತ್ತಾನೆ. ಮನಸ್ಸಿಗೆ ದು:ಖ ತರಿಸುವ ನೆನಪನ್ನು ಮರೆಯಲು ದಿನನಿತ್ಯದಲ್ಲಿ ಅಂಥಾ ಘಟನೆಯನ್ನು ಮನಸ್ಸಿನಿಂದ ಹೊರತಳ್ಳಲು ಯತ್ನಿಸಬೇಕು. ಆ ಒಂದು ಆಲೋಚನೆ ಮನಸ್ಸಿಗೆ ಬಂದ ಕೂಡಲೇ ಮತ್ತೇನೋ ಕೆಲಸದಲ್ಲಿ ತೊಡಗುವುದು ಅಥವಾ ಆ ನೆನಪಿಗೆ ಒಂದು ಧನಾತ್ಮಕ ಆಲೋಚನೆಯನ್ನು ಕೊಂಡಿ ಹಾಕುವುದನ್ನು ಮಾಡಿಕೊಂಡು ಮನಸ್ಸನ್ನು ಪ್ರಕ್ಷೋಭೆಯಿಂದ ಹೊರಗೆ ತರುವ ಯತ್ನ ಮಾಡಬೇಕು.
ಇಂಥಾ ಯತ್ನವು ಒಂದು ಘಂಟೆಯಲ್ಲಿ, ಒಂದು ದಿನದಲ್ಲಿ ಅಥವಾ ಒಂದು ವಾರದಲ್ಲಿ ಕೈಗೂಡುವುದಿಲ್ಲ. ನಿರಂತರ ಯತ್ನ ಅಗತ್ಯ. ಇಂಥಾ ಯತ್ನಗಳಲ್ಲಿ ಸಹನೆ ಮುಖ್ಯ. ಆಲೋಚನೆಗಳಲ್ಲಾಗಲಿ ಅಥವಾ ಯತ್ನಗಳಲ್ಲಾಗಲೀ ನಮ್ಮ ಕರ್ಮವೇನಿದ್ದರೂ stay positive ಎಂಬ ಧ್ಯೇಯ. ಫಲಿತಾಂಶ 'ಅವನಿಗೆ' ಬಿಡೋಣ. ಏನಂತೀರಾ?