ಪೂರ್ಣಯ್ಯನವರ ಛತ್ರ ಸಾರ್ವಜನಿಕರಿಗೆ ಮುಕ್ತ
ಈ ಸಭಾಂಗಣ ವಿಶಾಲವಾಗಿದ್ದು ಒಂದು ನೆಲ ಅಂತಸ್ತಿದೆ. ಅದು ಭೋಜನ ಗೃಹ. ಒಂದು ಮುಖ್ಯ ಸಭಾಂಗಣ ಮತ್ತು ಕಡಿಮೆ ಜನ ಹಿಡಿಸುವ ಕಾರ್ಯಕ್ರಮಗಳಿಗಾಗಿ ಮೇಲಂತಸ್ತಿನಲ್ಲಿ ಒಂದು ಮಿನಿ ಸಭಾಂಗಣ. ಈ ಛತ್ರ ಮಹಾತ್ಮಾ ಗಾಂಧೀ ರಸ್ತೆಯಲ್ಲಿದೆ. ಸುಮಾರು 200 ವರ್ಷಗಳಷ್ಟು ಹಳೆಯದಾದ ಛತ್ರವನ್ನು ಅಂದವಾಗಿ ನವೀಕರಿಸಲಾಗಿದೆ. ಒಂದು ಭಾಗ ಮಾತ್ರ ಸಿದ್ಧವಾಗಿದ್ದ ಈ ಸಭಾಂಗಣವನ್ನು ಕಳೆದ ಫೆಬ್ರವರಿಯಲ್ಲೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉದ್ಘಾಟಿಸಿದ್ದರು.
ಮುಜರಾಯಿ ಇಲಾಖೆ ಹಾಗೂ ಅರಮನೆಯ ಮುಜರಾಯಿ ಮಂಡಳಿಯ ಸಹಭಾಗಿತ್ವದಲ್ಲಿ ಕಟ್ಟಿರುವ ನೂತನ ಸಭಾಂಗಣವನ್ನು ಸಾರ್ವಜನಿಕರು ಬಳಸಬಹುದು. ಆಸಕ್ತರು 08121-2434739 ಸಂಪರ್ಕಿಸಬಹುದು ಎಂದು ಚಾಮುಂಡಿ ದೇವಸ್ಥಾನ ಸಮಿತಿಯ ಆಡಳಿತಾಧಿಕಾರಿ ಶಿವಲಿಂಗೇ ಗೌಡ ತಿಳಿಸಿದ್ದಾರೆ. ಮೈಸೂರು ರಾಜ್ಯದ ನಾನಾ ಜಿಲ್ಲೆಗಳಲ್ಲಿಯೂ ಪೂರ್ಣಯ್ಯನವರು ಛತ್ರ ಕಟ್ಟಿಸಿದ್ದರು. ಪ್ರವಾಸಿಗರು ತಂಗಲು ಅವರು ಕಲ್ಪಿಸಿದ್ದ ಉಚಿತ ವಸತಿ ವ್ಯವಸ್ಥೆ ಆದಾಗಿತ್ತು. ಮೈಸೂರಿನ ಛತ್ರಕ್ಕೆ ಸ್ಮಾರಕದ ಯೋಗ ಲಭಿಸಿತು. ಉಳಿದ ಜಿಲ್ಲೆಗಳಲ್ಲಿದ್ದ ಈ ಛತ್ರಗಳು ಯಾವ ಸ್ಥಿತಿಯಲ್ಲಿವೆ? ತಪಾಸಣೆ ಆಗಬೇಕು.
ಪೂರ್ಣಯ್ಯನವರ ಬಗ್ಗೆ : ಪೂರ್ಣಯ್ಯ (1746-1812) ಮೈಸೂರಿನ ದಿವಾನರಾಗಿದ್ದರು. ದಿವಾನ್ ಎಂದರೆ ಇವತ್ತಿನ ಸಂದರ್ಭಕ್ಕೆ ಚೀಫ್ ಸೆಕ್ರೆಟರಿ ಎಂದು ಹೇಳಬಹುದು. ಟಿಪ್ಪೂ ಸುಲ್ತಾನ್, ಹೈದರ್ ಅಲಿ ಆಸ್ಥಾನದಲ್ಲಿ ಅವರು ಹಿರಿಯ ಅಧಿಕಾರಿಯಾಗಿದ್ದರು. ಆನಂತರ ಬ್ರಿಟಿಷರ ಆಳ್ವಿಕೆಯಲ್ಲಿಯೂ ಅವರು ದಿವಾನರಾಗಿದ್ದರು. ಬಾಲಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅವರೇ ಮೈಸೂರು ಪ್ರಾಂತ್ಯದ ಆಗುಹೋಗುಗಳಿಗೆ ಬಾಧ್ಯಸ್ಥರಾಗಿದ್ದರು.
ಮಹಾ ಮೇಧಾವಿ, ದಕ್ಷ ಆಡಳಿತಗಾರ ಎಂದು ಪೂರ್ಣಯ್ಯ ಜನಪ್ರಿಯರಾಗಿದ್ದರು. ಹಲವು ಭಾಷಾ ಕೋವಿದ, ಕುಶಲ ಕೆಲಸಗಾರರಷ್ಟೇ ಅಲ್ಲದೆ ಕಷ್ಟಪಟ್ಟು ದುಡಿಯುವ ಜನಸೇವಕ ಎಂದೂ ಖ್ಯಾತರಾಗಿದ್ದರು. ಟಿಪ್ಪು ಸಾವಿನ ನಂತರ ಮೈಸೂರು ಪ್ರಾಂತ್ಯ ಒಡೆಯರ್ ಅವರ ಆಳ್ವಿಕೆಗೆ ಬಂತು. ಆಗಿನ್ನೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಚಿಕ್ಕ ಹುಡುಗ. ಅವರಿಗೆ ವಿದ್ಯಾಭ್ಯಾಸ, ತರಬೇತಿ, ರಾಜ್ಯಭಾರ, ಆಡಳಿತದ ಸೂಕ್ಷ್ಮಗಳನ್ನು ತಿಳಿಯ ಹೇಳಿದವರು ಪೂರ್ಣಯ್ಯನವರು ಎಂದು ಇತಿಹಾಸ ಹೇಳುತ್ತದೆ. ಪೂರ್ಣಯ್ಯನವರ ತೈಲಚಿತ್ರ ಕೃಪೆ: ಕಾಮತ್ ಡಾಟ್ ಕಾಂ.