ಹೆಸರು
![]() | ![]() | |
| ವರ್ಷದ ವ್ಯಕ್ತಿ : ಅವರ್ನ ಬಿಟ್ ಇವರ್ನ ಬಿಟ್ ಅವರ್ಯಾರು? ನಮ್ಮ ಬದುಕಿನ ಮೇಲೆ ಪ್ರಭಾವ ಬೀರಿದ ಆಸಾಮಿಯ ಹೆಸರು ಹೇಳಿ. ನಮ್ಮ ಪತ್ರಿಕೆಯ ವರ್ಷದ ವ್ಯಕ್ತಿ -2002 ವಿಭಾಗವನ್ನು ನೀವು ಪ್ರಾಯೋಜಿಸುವಿರಾ ? ವಿವರಗಳಿಗೆ ಶಾಮ್ಗೆ ಬರೆಯಿರಿ. | ||
*ಎಸ್ಕೆ.ಶಾಮಸುಂದರ
ಇನ್ನೊಂದು ವರ್ಷ ಉರುಳುತ್ತಿದೆ. ಇಸವಿ 2002 ಸವಕಲಾಗುತ್ತಾ ಕ್ಯಾಲೆಂಡರುಗಳು ಏರು ಮುಖದ ಹೊಸ ಅಂಕಿಗಳನ್ನು ಧರಿಸಿ ಬರುತ್ತಿವೆ. ಆನಂದರಾವ್ ಸರ್ಕಲ್ನಲ್ಲಿ ಹುಡುಗರು ಬೆಂಗಳೂರು ಪ್ರೆಸ್ ಕ್ಯಾಲೆಂಡರ್ಗಳನ್ನು ಮಾರುತ್ತಿದ್ದಾರೆ. ನೋಡುನೋಡುತ್ತಲೇ ಮುಗಿದು ಹೋಗುತ್ತಿರುವ ಈ ವರ್ಷದಲ್ಲಿ ನೀವು ಏನೇನು ಕಂಡಿರಿ ? ನಿಮ್ಮ ಅನುಭವ ದ್ರವ್ಯದ ಆಳ, ವಿಸ್ತಾರ ಎಷ್ಟಾಯಿತು? ಅಕ್ಕಗಳಿರಾ, ಅಣ್ಣಗಳಿರಾ.. ನೀವು ಸಂಪಾದಿಸಿದ್ದೇನು ? ಜೀರ್ಣಿಸಿಕೊಂಡದ್ದೆಷ್ಟು ? ಇಂಥ ಪ್ರಶ್ನೆಗಳನ್ನು ನಮ್ಮ ಹಾಗೆ ನೀವೂ ಕೂಡ ಖಾಸಗಿ ಮಟ್ಟದಲ್ಲಿ, ಕೌಟುಂಬಿಕ ವಲಯಗಳಲ್ಲಿ, ಬಂಧುಮಿತ್ರ ಬಳಗದಲ್ಲಿ ಕೇಳಿಕೊಳ್ಳಬಹುದು.
ಸಾರ್ವಜನಿಕ ವಲಯದಲ್ಲಿ ಈ ಬಗೆಯ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಹೋದರೆ ಅದು ಒಂದು ನಾಗರಿಕತೆಯ, ಒಂದು ದೇಶದ, ನಮ್ಮ ಸಂದರ್ಭದಲ್ಲಿ ಕರ್ನಾಟಕದ ಇವತ್ತಿನ ಇತಿಹಾಸದ ಮಿನಿ- ದರ್ಶನವೇ ಆದೀತು. ನಮ್ಮ ನಿಮ್ಮಯಗಳ ಪರಸ್ಪರ ಅಂತರ್ಜಾಲ ಒಡನಾಟದಲ್ಲಿ ಈ ಬಗೆಯ ಕಸರತ್ತು ನಿರ್ದಿಷ್ಟ ಕೋನದಲ್ಲಿ ಆಗಬೇಕಾಗಿದೆ. ಹಾಗೆ ಮಾಡುವುದರಿಂದ ಕರ್ನಾಟಕದ ಹಾಗೂ ಸಮಸ್ತ ಕನ್ನಡಿಗರ ಬದುಕನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಿಸಿದ ವ್ಯಕ್ತಿ-ಶಕ್ತಿಗಳ ದರ್ಶನವೂ ಆಗುತ್ತದೆ. ಈ ದರ್ಶನಕ್ಕೆ ಅಂತರ್ಜಾಲ ಕಕ್ಷೆಯ ಸಮೂಹ ಮಾಧ್ಯಮದ ಮುಂದಾಳು ದಟ್ಸ್ಕನ್ನಡದ ಪುಟಗಳು ಕೇವಲ ಒಂದು ನೆಪವಾಗಿ ಕಾರ್ಯೋನ್ಮುಖವಾಗುತ್ತಿದೆ.
ಕೊನೆಗೂ ಮುಖ್ಯವಾಗುವುದು ಮನುಷ್ಯನೇ. ಏನಂತೀರಿ ? ಅವನಿಂದಲೇ ಈ ಭೂಮಿ ಹಸನಾಗಬೇಕು. ಇಲ್ಲಾ ನಿರ್ನಾಮವಾಗಬೇಕು. ಆದ್ದರಿಂದಲೇ ನಾನಿವತ್ತು ಆರಂಭಿಸುತ್ತಿರುವ ‘ವರ್ಷದ ವ್ಯಕ್ತಿ’ ಅಂಕಣವು ‘ಯಾರವರು ’ ಎನ್ನುವ ಹುಡುಕಾಟಕ್ಕೆ ತೊಡಗಿಕೊಳ್ಳುತ್ತಿದೆ.
ಕನ್ನಡ ಕುಲ ಸಂಜಾತರಿಗೆ ಈ ವರ್ಷ ಮುಖ್ಯವೆನಿಸಿದ ವ್ಯಕ್ತಿಯನ್ನು ಆರಿಸುವ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಹೊರಿಸುತ್ತಾ ಈ ಅಂಕಣದ ಕೆಲವು ಮುಖ್ಯ ಸ್ವರೂಪಗಳನ್ನು ತೆಗೆದಿಡುತ್ತೇನೆ.
ನೀವು ಆರಿಸಿ, ಹೆಸರಿಸುವ ವ್ಯಕ್ತಿ ಕನ್ನಡಿಗನಾಗಿರಬೇಕು. ಕನ್ನಡಿಗನಲ್ಲದಿದ್ದರೆ ಕನ್ನಡಿಗರ ಬದುಕಿನಲ್ಲಿ ಹೂವಿನ ಥರ ಅಥವಾ ಹಾವಿನ ಥರ ಹಾಸುಹೊಕ್ಕಾಗಿರಬೇಕು. ಆತ ಅಥವಾ ಆಕೆ ಖ್ಯಾತರೇ ಆಗಿರಬೇಕೆಂಬ ನಿಯಮವಿಲ್ಲ. ಕುಖ್ಯಾತರೂ ಆಗಿರಬಹುದು, ಕಿಳ್ಳೇಕ್ಯಾತರೂ ಆಗಿರಬಹುದು, ಕ್ಯಾತೇದಾರರೂ ಆಗಿರಬಹುದು.
ನಿಮಗೆ ನೆನಪಿರಬಹುದು. ಕಳೆದ ವರ್ಷ, ವರ್ಷದ ವ್ಯಕ್ತಿಯ ಹುಡುಕಾಟದಲ್ಲಿದ್ದ Time Magazine ವಿಚಿತ್ರ ಪರಿಪಾಟಲಿಗೆ ಸಿಲುಕಿತ್ತು. ಇಡೀ ಭೂಮಂಡಲವನ್ನು ದುರುಳತನದಿಂದ ಆಳಿದ/ಕಾಡಿದ ವರ್ಷದ ವ್ಯಕ್ತಿ ಲಾಡೆನ್ನನೋ ಅಥವಾ ಆತನ ಅಟ್ಟಹಾಸಕ್ಕೆ ಗುರಿಯಾಗಿ ತತ್ತರಿಸಿದ ನ್ಯೂಯಾರ್ಕ್ ನಗರವನ್ನು ಮತ್ತೆ ಗಾಲಿಯ ಮೇಲೆ ಎಳೆದು ನಿಲ್ಲಿಸಲು ಶ್ರಮಿಸಿದ ಮೇಯರ್ ಜ್ಯೂಲಿಯಾನಿಯೋ?
ಮತ್ತೆ ಕಟ್ಟುವ ಕೆಲಸಗಳಲ್ಲಿ ಸೈಯೆನಿಸಿದ ಜ್ಯೂಲಿಯಾನಿಯೇ ಶ್ರೇಷ್ಠ ಎನ್ನುವುದು ಕೆಲವರ ವಾದವಾದರೆ, ಒಸಾಮಾ ಗೋಪುರ ಕೆಡವದಿದ್ದರೆ ಜ್ಯೂಲಿಯಾನಿಗೆ ಕೆಲಸವೆಲ್ಲಿರುತ್ತಿತ್ತು ? ಆತ ಗಮನಾರ್ಹ ವ್ಯಕ್ತಿ ಎನಿಸಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ. ಆದಕಾರಣ ಒಸಾಮಾನೇ ವರ್ಷದ ಆಸಾಮಿ ಎನ್ನುವುದು ಹಲವರ ವಾದ.
ಕೊನೆಗೆ ಏನಾಯಿತು ಎನ್ನುವುದು ನಿಮಗೆಲ್ಲಾ ಗೊತ್ತಿದ್ದದ್ದೇ. ಜ್ಯೂಲಿಯಾನಿ Person of The Year ಪಟ್ಟ ತಲುಪಿದ. ಟೈಂಸ್ ಸಂಪಾದಕೀಯ ಮಂಡಳಿ ತನ್ನ ಈ ಆಯ್ಕೆಗೆ ಸಮರ್ಥನೆಯನ್ನೂ ಕೊಟ್ಟಿತು. ‘ಒಸಾಮಾ ಪ್ರಭಾವ ಬೀರಿದ ವ್ಯಕ್ತಿ ಎನ್ನುವುದೇನೋ ನಿಜ. ಆದರೆ ಅಂಥವನನ್ನು Person of The Year ಕುರ್ಚಿಯಲ್ಲಿ ಕೂಡಿಸುವುದು ನಮ್ಮ ಪತ್ರಿಕೆಯ ಘನತೆಗೆ ತಕ್ಕುದಲ್ಲ’
ನೀವು ಎಲ್ಲಾದರೂ ಓದಿರಬಹುದು ಅಥವಾ ಕೇಳಿರಬಹುದು : 1940 ರ Times Person of The Year Rudolf Hitler !
*
ಗ್ಲಾಸು ಒರೆಸಿ ನೋಡಿದರೆ ಕರ್ನಾಟಕದ ಕನ್ನಡಿಯಲ್ಲಿ ನಿಮಗೆ ಒಸಾಮಾನೂ ಸಿಗುತ್ತಾನೆ, ಜ್ಯೂಲಿಯಾನಿಯೂ ಕಾಣಿಸಬಹುದು. ಪೊವೆಲ್ ಇಣುಕಿ ನೋಡಬಹುದು, ಹೆಗಲ ಮೇಲೆ ಟವಲು ಹಾಕಿದ ಬೋರೇಗೊಡನೊಬ್ಬ ಕಾಣಿಸಬಹುದು. ನಿಮ್ಮ ಕಣ್ಣಿಗೆ ಬಿದ್ದ ಅಂಥ ವ್ಯಕ್ತಿಯನ್ನು ‘ದಟ್ಸ್ಕನ್ನಡ ವರ್ಷದ ವ್ಯಕ್ತಿ-2002 ’ ವಿಭಾಗಕ್ಕೆ ಸಲ್ಲಿಸಿ.
ಗಮನಿಸಿ :
ನಿಮ್ಮ ಅನಿಸಿಕೆಗಳನ್ನು ನನ್ನ ಇ-ವಿಳಾಸಕ್ಕೆ ತಲುಪಿಸಿ. [email protected] ನೀವು ಗುರುತಿಸಿ ಆರಿಸಿದ ಆ ವ್ಯಕ್ತಿಯ ಬಗ್ಗೆ ಕನಿಷ್ಠ ಎರಡು ವಾಕ್ಯಗಳನ್ನಾದರೂ ಬರೆಯಿರಿ. ಅಂದರೆ, ನಿಮ್ಮ ಆಯ್ಕೆಗೆ ಸಮರ್ಥನೆ ಇರಬೇಕು ಎನ್ನುವುದೇ ಆಶಯ.
- ಈ ಅಂಕಣಕ್ಕೆ ಬರೆಯುವವರ ಇ -ಮೇಲ್ ವಿಳಾಸವನ್ನು ಪ್ರಕಟಿಸುವುದಿಲ್ಲ.
- ಬರೆಯುವವರು ತಮ್ಮ ಹೆಸರು, ನಗರ, ಟೈಂ ಇದ್ದರೆ ದೇಶದ ಹೆಸರನ್ನು ನಮೂದಿಸಬೇಕು.
- ಕನ್ನಡದಲ್ಲಿ ಬರೆದರೆ ಬಹಳ ಸಂತೋಷ. ಇಂಗ್ಲಿಷ್ನಲ್ಲಿ ಬರೆದರೂ ಸ್ವೀಕರಿಸಲಾಗುತ್ತದೆ.
- ಈ ಬಗ್ಗೆ ಪ್ರತ್ಯೇಕ ಪತ್ರ ವ್ಯವಹಾರ ಅನಗತ್ಯ, ಬೇಡವು !
- ನೀವು ಸೂಚಿಸುವ ವ್ಯಕ್ತಿ ಯಾರೇ ಆಗಿರಲಿ, ತಮ್ಮ ನಿಲುವನ್ನು ಸಮರ್ಥಿಸಿಕೊಂಡು ಬರೆದ ಅತ್ಯುತ್ತಮ ಬರಹಕ್ಕೆ ಒಂದು ಬಹುಮಾನ ಉಂಟು. ಈ ಆಟದಲ್ಲಿ ನೀವು ಗೆದ್ದರೆ, ನಿಮ್ಮ ಸಮ್ಮತಿ-ಅಪ್ಪಣೆಯ ಮೇರೆಗಷ್ಟೆ ನಿಮ್ಮ ಹೆಸರನ್ನು ಬಹಿರಂಗ ಪಡಿಸಲಾಗುವುದು.
- ಈಗಲೇ ಬರೆಯಲು ಶುರು ಮಾಡಿ. ಆಮೇಲೆ ಟೈಮು ಸಿಗುತ್ತದೋ ಇಲ್ಲವೋ, ಯಾರಿಗೆ ಗೊತ್ತು !
ಸಿನಿಮಾಯೆಯಿಂದ ...
| ಹೆಸರು | ಸುದ್ದಿಗೆ ಕಾರಣ |
| ಗಿರೀಶ್ ಕಾಸರವಳ್ಳಿ | ಸ್ವರ್ಣ ಕಮಲ ವಿಜೇತ ನಿರ್ದೇಶಕ |
| ವಿಷ್ಣುವರ್ಧನ್ | ಬೇಡಿಕೆ ಕಳೆದುಕೊಳ್ಳದ ನಟ |
| ರವಿಚಂದ್ರನ್ | ಪ್ರಯೋಗಶೀಲ ನಟ, ನಿರ್ಮಾಪಕ, ನಿರ್ದೇಶಕ |
| ಸೌಂದರ್ಯ | ದ್ವೀಪ ಚಿತ್ರ ನಿರ್ಮಾಣ, ಪ್ರತಿಭಾವಂತ ನಟಿ |
ರಾಜಕೀಯ ಅಂಗಳದಿಂದ..
| ಎಸ್.ಎಂ. ಕೃಷ್ಣ. | ಚಕ್ರವ್ಯೂಹದಲ್ಲಿ ನಿಂತ ಅಭಿಮನ್ಯು |
| ಎಸ್. ಆರ್. ಬೊಮ್ಮಾಯಿ | ವಿದಳವಾದ ಜನತಾದಳಕ್ಕೆ ತೇಪೆ ಹಾಕುವ ಸಾಹಸ |
| ಜಗದೀಶ್ ಶೆಟ್ಟರ್ | ಸರಕಾರದ ವಿರುದ್ಧ ದನಿ ಎತ್ತುವ ಸರದಾರ |
| ಜಿ. ಮಾದೇಗೌಡ | ಕಾವೇರಿ ವಿವಾದದ ಹುತಾತ್ಮ ! |
| ಜಯಲಲಿತಾ | ನೀರ ಕದ್ದ ನೀರೆ |
| ಎಚ್. ನಾಗಪ್ಪ | ಹರಕೆಯ ಕುರಿ |
ಸಾಹಿತ್ಯ - ಸಂಸ್ಕೃತಿ
| ಎಸ್. ಎಲ್. ಭೈರಪ್ಪ | ಇನ್ನೊಂದು ಕಾದಂಬರಿ- ಮಂದ್ರ |
| ಯು. ಆರ್. ಅನಂತಮೂರ್ತಿ | ತುಮಕೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗಿರಿ |
| ಕೆ. ಎಸ್. ನಿಸಾರ್ ಅಹಮದ್ | ವಿದೇಶದಲ್ಲಿ ಕನ್ನಡ ಕಿಂಕರ |
| ಅಮರ್ನಾಥ್ ಗೌಡ | ಡೆಟ್ರಾಯಿಟ್ ವಿಶ್ವಕನ್ನಡ ಸಮ್ಮೇಳನದ ಹೊಣೆಗಾರಿಕೆ |
| ವಿ. ಎಂ. ಕುಮಾರ ಸ್ವಾಮಿ | ಕನ್ನಡ ಮತ್ತು ಸಂಸ್ಕೃತಿಗಾಗಿ ಇ-ಮೇಲ್ ಚಳವಳಿ ! |
| ಜಾಣಗೆರೆ ವೆಂಕಟರಾಮಯ್ಯ | ಬೆಂಗಳೂರಿನಲ್ಲಿ ಕನ್ನಡ ಚಳವಳಿ |
ಕ್ರೀಡೆ
| ರಾಹುಲ್ ದ್ರಾವಿಡ್ | ಕ್ರಿಕೆಟ್ |
| ಸತೀಶ್ ರೈ | ಉದ್ದೀಪನ ಮದ್ದು ಖ್ಯಾತಿಯ ವೇಯ್ಟ್ ಲಿಫ್ಟರ್ |
ಸುದ್ದಿಯಲ್ಲಿದ್ದ ಶೂರರು!
| ವೀರಪ್ಪನ್ | ಅರಿ ಭಯಂಕರ |
| ಕೊಳತ್ತೂರು ಮಣಿ | ಕರ್ನಾಟಕದ ಕಂಸ |
| ಸಿ. ದಿನಕರ್ | ಖಂಡಿತವಾದಿ ಲೋಕವಿರೋಧಿ |
| ರವಿ ಬೆಳಗೆರೆ | ದಣಿಯದ ಅಕ್ಷರ ಶೂರ |
| ವಿಶ್ವೇಶ್ವರ ಭಟ್ | ನಂಬರ್1 ಪತ್ರಿಕೆ ವಿಜಯ ಕರ್ನಾಟಕದ ಸಂಪಾದಕ |
ವಾಣಿಜ್ಯ
| ಎನ್.ಆರ್.ನಾರಾಯಣಮೂರ್ತಿ | ಇನ್ಫೋಸಿಸ್ ರಾಜಗುರು |
| ಅಜೀಂ ಪ್ರೇಂಜಿ | ಪ್ರೊಫೈಲಿಂಗ್ ವಿರೋಧಿಸಿದ ಭಾರತೀಯ ಕುಬೇರ |
ವಿ. ಸೂ : ಹೆಸರು ಸೂಚಿಸುವುದಕ್ಕೆ ಮತ್ತು ನೀವು ಸೂಚಿಸಿದ ವ್ಯಕ್ತಿಯ ಬಗ್ಗೆ ನಾಲ್ಕು ಸಾಲು ಬರೆಯುವುದಕ್ಕೆ ಅನುಕೂಲವಾಗುವ ಒಂದು Interactive web Tool ನಿರ್ಮಿಸುವ ಯೋಚನೆಯೂ ಇದೆ. ನಾನು ಅಂದುಕೊಂಡತೆ ಎಲ್ಲವೂ ಸರಿಹೋದರೆ Back End ಸಿದ್ಧಗೊಂಡರೆ, ನಂತರ ನಿಮಗೆ ಮತ್ತೆ ಬರೆಯುತ್ತೇನೆ. ಅಲ್ಲಿಯವರೆಗೆ ವ್ಯಕ್ತಿಯನ್ನು ಆರಿಸಿ ಕೆಳಕಂಡ ಇ-ಮೇಲ್ ವಿಳಾಸದ ಮೂಲಕ ನನಗೆ ತಿಳಿಸುವ ಕೆಲಸವನ್ನು ನಿಮ್ಮ ಪಾಡಿಗೆ ಮಾಡುತ್ತಾ ಹೋಗಿ ! [email protected]
|














Click it and Unblock the Notifications