ಮುಖಪುಟ
| ಸೋರುತಿಹುದು ಮನೆಯ ಮಾಳಿಗೆ, ಯಾರೂ ಕಟ್ಟಿ ಮಾಳ್ಪರಿಲ್ಲ ! | ![]() |
*ಶಾಮ್
ಹೆಲಿಕಾಪ್ಟರ್, ತಪ್ಪಿದರೆ ಹವಾನಿಂತ್ರಿತ ಕಾರುಗಳಲ್ಲೇ ಪ್ರಯಾಣ ಮಾಡುವುದಕ್ಕೆ ಇವತ್ತು ಎಲ್ಲರೂ ಇಷ್ಟಪಡುತ್ತಾರೆ. ಯಾಕೆಂದರೆ, ಇನ್ನೊಂದು ತುದಿಯನ್ನು ಆದಷ್ಟು ಬೇಗ, ಬೇಗ ತಲುಪಬೇಕೆನ್ನುವುದೇ ಧಾವಂತ. ಆ ತುದಿ ಯಾವುದು ? ಅಲ್ಲಿಯವರೆಗೆ ಯಾಕೆ ಹೋಗಬೇಕು ಎನ್ನುವುದು ಮಾತ್ರ ನಮಗೆ-ನಿಮಗೆ ಗೊತ್ತಾಗಬಾರದು !
ನಮ್ಮ ರಾಜ್ಯದಲ್ಲಂತೂ ಇಂಥ ಧಾವಂತ ಧೀರರು ಮತ್ತು ಸಾರ್ವಜನಿಕರ ನೆಮ್ಮದಿಯನ್ನು ಪಣಕ್ಟಿಟ್ಟ ಸುಖಮುಖಿಗಳು ಎಲ್ಲ ರಂಗಗಳಲ್ಲೂ ಎದ್ದು ಕಾಣುತ್ತಿದ್ದಾರೆ. ಅವರನ್ನು ರಾಜಕಾರಣಿಗಳು ಎಂದು ಕರೆಯುತ್ತಾರೆ. ಅವರೆಲ್ಲರೂ ಪಿಟಿ ಉಷಾ ವೇಗದಲ್ಲಿ ಯಾವಾಗಲೂ ಎಲ್ಲಿಗೋ ಓಡುತ್ತಲೇ ಇರುತ್ತಾರೆ. ಆದರೆ, ಕರ್ನಾಟಕಕ್ಕೆ ಒಂದು ಪದಕವನ್ನಾದರೂ ಯಾರಾದರೂ ಗೆದ್ದು ತರುತ್ತಾರಾ ಎಂಬ ಪ್ರಶ್ನೆ ಪ್ರಶ್ನೆಯಾಗೇ ಉಳಿದುಕೊಳ್ಳುತ್ತದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಎಲ್ಲ ತಮಾಷೆಗಳೂ ಒಂದೇಸಮನೆ , ಏಕಕಾಲಕ್ಕೆ ನಡೆಯುತ್ತಲೇ ಇರುತ್ತವೆ.
ಮೇಲಿನಿಂದ ತೀರ್ಪು ಬಂದಿದೆ.
ತಮಿಳುನಾಡಿಗೆ ನಾವು ನೀರು ಬಿಡಬೇಕಾ ? ಬೇಡವಾ ?
ಇದೊಂದು ಪ್ರಶ್ನೆಯೇ ಅಲ್ಲ. ನ್ಯಾಯಾಲದಲ್ಲಿ ನಮಗೆ ಗೌರವವಿದೆ. ಆದರೆ, ನೀರು ಬಿಟ್ಟರೆ ನಿಮ್ಮ ಸರಕಾರ ಎಕ್ಕುಟ್ಟು ಹೋಗುತ್ತದೆ ಎನ್ನುತ್ತಿದ್ದಾನೆ ಮಂಡ್ಯ-ಮದ್ದೂರಿನ ರೈತ. ನೀವು ನೀರನ್ನೂ ಬಿಡಬಾರದು, ಸರಕಾರವನ್ನೂ ನಡೆಸಬಾರದು ಎನ್ನುತ್ತಿದ್ದಾರೆ ಕೃಷ್ಣ ಅವರ ರಾಜಕೀಯ ವೈರಿಗಳು. ಸ್ವಾರಸ್ಯವೆಂದರೆ ಹಾಗೆ ತಿರುಗಿ ಬಿದ್ದಿರುವವರಲ್ಲಿ ಮಂಡ್ಯದವರೇ ಆದ ಮಾದೇಗೌಡರು ಮತ್ತು ಕಬಿನಿ ರೈತ ಒಕ್ಕೂಟದ ಅಧ್ಯಕ್ಷ ಪುಟ್ಟಣ್ಣಯ್ಯ ಅವರು ಕೃಷ್ಣ ಅವರ ಕಾಲು ನಡಿಗೆಗೆ ಮಂಡ್ಯದಲ್ಲಿ ಬ್ರೇಕು ಹಾಕುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಅಂದಹಾಗೆ, ಮಂಡ್ಯದ ಸಂಸದ - ನಟ ಅಂಬರೀಶ್ ಮತ್ತು ಶಾಸಕ ಆತ್ಮಾನಂದ ಏನು ಮಾಡುತ್ತಿದ್ದಾರೆ ?
ಇವತ್ತಿನ ಕರ್ನಾಟಕದ ಚಿತ್ರ ಹೇಗೆ ರೂಪುಗೊಳ್ಳುತ್ತಿದೆ ಎಂದರೆ ಕಾವೇರಿ ಸಮಸ್ಯೆಯೇ ಅಲ್ಲವೆನ್ನುವಂತೆ, ಕೃಷ್ಣ ಅವರ ಪಾದಯಾತ್ರೆಯೇ ಒಂದು ದೊಡ್ಡ ಆಪರಾಧವೆನ್ನುವಂತೆ ಅವರ ವಿರೋಧಿಗಳಿಗೆ ಕಾಣಿಸುತ್ತಿದೆ. ಈ ಪತ್ರ ಬರೆಯುವ ಸಮಯಕ್ಕೆ ಮಾನ್ಯ ದೇವೇಗೌಡರು ಮತ್ತೆ ಸುದ್ದಿಯಲ್ಲಿ ಕೇಳಿಸುತ್ತಿದ್ದಾರೆ. ಕೃಷ್ಣ ಅವರ ವೈಫಲ್ಯಗಳ ವಿರುದ್ಧ ಸೆಡ್ಡು ಹೊಡೆಯುವ ತಮ್ಮದೇ ಶೈಲಿಯ ಕೌಂಟರ್ ರ್ಯಾಲಿಯನ್ನು ಆಯೋಜಿಸಿದ್ದಾರೆ. ಭಾಗಮಂಡಲದಿಂದ ಮತ್ತೊಂದು ಕಾವೇರಿ ಕಲರವ ನಿಮಗೆ ಕೇಳಿಬರುತ್ತದೆ. ಪರಿಣಾಮವೆಂದರೆ, ಈ ಗದ್ದಲದಲ್ಲಿ ಕಾವೇರಿ ವಿವಾದದ ಅಸಲು ಸಮಸ್ಯೆ ಖದರು ಕಳೆದುಕೊಳ್ಳುತ್ತಿದೆ- ವೀರಪ್ಪನ್ ಸೆರೆಯಲ್ಲಿರುವ ನಾಗಪ್ಪನ ಥರಾ !
ಹೀಗೇಕಾಗುತ್ತದೆ ಎಂದರೆ ನಮ್ಮನ್ನಾಳುವವರಿಗೆ ಸಮಷ್ಠಿ ಪ್ರಜ್ಞೆಯೇ ಇಲ್ಲ ಎನ್ನುತ್ತಾರೆ ರಾಜಕಾರಣಿಗಳ ದೊಂಬರಾಟ ನೋಡಿ ಬೇಸತ್ತ ನಾಗರಿಕರು. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವವರಂತೆ ನಾಟಕ ಆಡುವ ನಾಯಕರನ್ನು ಕಂಡು ಮತ್ತೆ ಜಿಗುಪ್ಸೆ ಪಡುತ್ತಾರೆ.
ಮದ್ರಾಸು ಪ್ರೆಸಿಡೆನ್ಸಿಯ ಅನುಕೂಲಕ್ಕೆ ತಕ್ಕಂತೆ ರೂಪುಗೊಂಡ ಕಾವೇರಿಯ ಚಲನವಲನ ಸ್ವಾತಂತ್ರ ್ಯ ಬಂದು ಅರ್ಧ ಶತಮಾನ ದಾಟಿದರೂ ವರ್ತಮಾನದ ಅಗತ್ಯಗಳಿಗೆ ತಕ್ಕಂತೆ ಮಾರ್ಪಾಟು ಆಗದಿರುವುದಕ್ಕೆ, ನೀರು- ಆಸ್ತಿ ಹಂಚಿಕೆ ಆಗದಿರುವುದಕ್ಕೆ , ನಿಯಮಗಳು ಪಾರದರ್ಶಕವಾಗದಿರುವುದಕ್ಕೆ ನಮ್ಮ ಜನ ದುಃಖಿಸುತ್ತಾರೆ. ಜಯಲಲಿತಾಗೆ ಬೈದು ಪ್ರಯೋಜನವಿಲ್ಲ ನಮ್ಮನ್ನು ನಾವೇ ಜರೆದುಕೊಳ್ಳಬೇಕು ಎಂದುಕೊಳ್ಳುತ್ತಲೇ ಕಾವೇರಿ ಗಲಭೆ ಎಲ್ಲಿಯವರೆಗೆ ಬಂತು ತಿಳಿದುಕೊಳ್ಳಲು ಆವತ್ತಿನ ಪೇಪರ್ ಅನ್ನು ಮತ್ತೆ ಕೈಗೆತ್ತಿಕೊಳ್ಳುತ್ತಾರೆ.
ಈಗ ಉಳಿದಿರುವುದು ಎರಡು ಮಾರ್ಗ. ಒಗ್ಗಟ್ಟು ಮೂಡಿಬರಬೇಕಾದರೆ ಕೃಷ್ಣ ಅವರು ಪಾದಯಾತ್ರೆ ನಿಲ್ಲಿಸಬೇಕು ಅಥವಾ ಮೈಸೂರು-ಮಂಡ್ಯ ರಸ್ತೆಯ ಎಲ್ಲ ರೈತರು ಪಾದಯಾತ್ರೆಯಲ್ಲಿ ತಾವೂ ಸೇರಿಕೊಳ್ಳಬೇಕು. ಅಲ್ಲಿಯವರೆಗೆ ಕೃಷ್ಣ ನಡೆಯುತ್ತಲೇ ಇರುತ್ತಾರೆ, ದಾರಿ ಉದ್ದಕ್ಕೂ ಅವರ ಬಿಳಿ ಅಂಗಿಗೆ ಕೆಸರು ಎರಚಲು ವಿರೋಧಿಗಳು ರಸ್ತೆಯ ಅಕ್ಕಪಕ್ಕ ನಿಂತುಕೊಂಡೇ ಇರುತ್ತಾರೆ !
ಮುಂದೇನು ?
Also Read : Book Of Solutions, BBC On Cauvery Water Dispute
[Cauveri River Water Dispute and Solutions by the Author Prof.T.Shivaji Rao in THE HINDU news paper dated 492002]
|













Click it and Unblock the Notifications