ಮಗುವಿನ ಭಾಷೆ ಅರಿಯುವ ಅಮ್ಮನಿಗೆ ಹೋಲಿಕೆ ಎಲ್ಲುಂಟು?
ಶಾಲೆಯೊಂದರ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಹೋಗಿದ್ದೆ. ಅತಿಥಿಗಳ ಸಮ್ಮುಖದಲ್ಲೇ ರಸ ಪ್ರಶ್ನೆ ಕಾರ್ಯಕ್ರಮ ನಡೆಸಬೇಕೆಂಬ ಹಂಬಲ ಅವರಿಗೇಕಿತ್ತೋ ಕಾಣೆ. ರಸಪ್ರಶ್ನೆ ನಡೆಸಿಕೊಡಲು ಒಪ್ಪಿಕೊಂಡಿದ್ದ ಮಹಾನುಭಾವ ಕೈ ಕೊಟ್ಟಿದ್ದ. ಹಾಗಾಗಿ ಅದನ್ನು ನಡೆಸಿಕೊಡುವಂತೆ ನನ್ನನ್ನೇ ಕೋರಿದರು. ಬಹಳ ಒತ್ತಾಯವನ್ನೂ ಮಾಡಿದರು.
ಮೇಷ್ಟ್ರು ಅನ್ನಿಸಿಕೊಂಡವನಿಗೆ ಮಕ್ಕಳ ಕಲಿಕೆಯೊಂದಿಗೆ ಭಾಗವಹಿಸುವುದಕ್ಕಿಂತ ಬೇರೆ ಭಾಗ್ಯ ಯಾವುದಿದೆ? ಮೇಲಾಗಿ ಅತಿಥಿ ಕಾರ್ಯಕ್ಕಿಂತ ಇದು ದೊಡ್ಡದು ಅನ್ನಿಸಿತು. ಸೈ ಎಂದೆ.
ಹೈದರಾಬಾದ್ : ಆಸ್ಪತ್ರೆ ಸಿಬ್ಬಂದಿ ಕಣ್ಣು ತೇವಗೊಳಿಸಿದ ಬಾಲಕ
ಶಾಲೆಯ ಅಧ್ಯಾಪಕರೆಲ್ಲ ಕೂಡಿ ಒಂದಷ್ಟು ಪ್ರಶ್ನೆಗಳನ್ನು ಸಿದ್ಧ ಮಾಡಿದ್ದರು, ಉತ್ತರಗಳೊಂದಿಗೆ. ಒಮ್ಮೆ ಎಲ್ಲವನ್ನು ಓದಿಕೊಂಡೆ. ನಾನೊಂದಿಷ್ಟು ಪ್ರಶ್ನೆಗಳನ್ನು ಸೇರಿಸಬಹುದೇ ಎಂದು ಅನುಮತಿ ಕೇಳಿದೆ. ಧಾರಾಳವಾಗಿ ಸಾರ್ ಎಂದರು ಅಧ್ಯಾಪಕರೆಲ್ಲ ಒಮ್ಮತದಿಂದ. ಹೆಡ್ಮಾಸ್ಟರರಂತೂ ನಿಮ್ಮಂಥವರು ಪ್ರಶ್ನೆ ಕೇಳಿದರೇನೇ ಚೆನ್ನ ಅಂದರು, ನನಗೆ ಘನ ಬುದ್ಧಿವಂತನ ಪಟ್ಟ ಕಟ್ಟುವವರಂತೆ.
ಕೆಲವರಿಗೆ ಸಾಹಿತಿಗಳೆಂದರೆ ಸಕಲ ಶಾಸ್ತ್ರ ವಲ್ಲಭರು ಎಂಬ ಮುಗ್ಧ ಅನ್ನಿಸಿಕೆ. ಆದರೆ ನನ್ನ ಬಂಡವಾಳ ಎಷ್ಟೆಂದು ನನಗಷ್ಟೇ ಗೊತ್ತು. ನನ್ನದೇ ಪ್ರಶ್ನೆಗಳನ್ನು ಕೇಳಲು ಅನುಮತಿ ಸಿಕ್ಕಿತ್ತಲ್ಲ, ಅದನ್ನು ಬಳಸಿಕೊಂಡು ನನಗೆ ಪ್ರಿಯರಾದ ಬೇಂದ್ರೆ, ಅಡಿಗ, ಕೆ.ಎಸ್.ನ., ಎಕ್ಕುಂಡಿ, ವೈದೇಹಿ, ಕಣವಿ, ರಾಜರತ್ನಂ, ಕೊಡಗಿನ ಗೌರಮ್ಮ, ರಾಮಚಂದ್ರಶರ್ಮ, ಕಾರಂತ ಇನ್ನೂ ಮುಂತಾದ ಕವಿಗಳನ್ನು ಕುರಿತಲ್ಲದೆ ನಟ-ನಾಟಕಕಾರರ ಬಗ್ಗೆಯೂ ಕೇಳಿದೆ.
ಪಾಟ್ನಾ: ಅಮ್ಮನ ಚಿಕಿತ್ಸಾವೆಚ್ಚ ಭರಿಸುವುದಕ್ಕೆ ಭಿಕ್ಷೆ ಬೇಡಿದ ಪುಟ್ಟಕಂದ
ಕಾರಣವೆಂದರೆ, ಆಂಧ್ರದ ಗಡಿಯಲ್ಲಿ ಕನ್ನಡದ ಕಂಪು ದಟ್ಟವಾಗಬೇಕೆಂಬುದು. ಈ ಭಾಗದಲ್ಲಿ ಕನ್ನಡ ಸಿನೆಮಾ, ನಟ-ನಟಿಯರಲ್ಲಿ ತೆಲುಗು ಸಿನೆಮಾಗಳಲ್ಲಿ ನಟಿಸುವ ಕನ್ನಡಿಗ ನಟರಾದ ದೇವರಾಜ್, ಪ್ರಕಾಶ ರೈರನ್ನು ಬಿಟ್ಠರೆ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ರಷ್ಟೆ ಗೊತ್ತಿರುವುದು. ಆದರೆ ತೆಲುಗಿನ ಮರಿ ನಟರೂ ಗೊತ್ತಿರುವವರೆ. ಅವರ ನಡುವೆ ಇವರ ಪರಿಚಯವೂ ಇರಲಿ ಎಂಬ ಕಾರಣಕ್ಕೆ ಸಿನೆಮಾ ಬಗ್ಗೆ ಕೇಳೋದು ಬೇಡವೆಂದುಕೊಂಡಿದ್ದರೂ ಹಲವು ಪ್ರಶ್ನೆಗಳನ್ನು ಕೇಳಿದೆ.
ಈ ಸಂಬಂಧಿ ಪ್ರಶ್ನೆಗಳಿಗೆ ಹೆಚ್ಚಿನ ಉತ್ತರಗಳು ಹೊರಡಲಿಲ್ಲ. ಅದೇ ತೆಲುಗಿನ ಎನ್.ಟಿ.ಆರ್., ನಾಗೇಶ್ವರರಾವ್, ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಬಾಲಕೃಷ್ಣ ಮೊದಲಾದವರ ಬಗ್ಗೆ ಕೇಳಿದ್ದರೆ ಯಾರೂ ಸೋಲುತ್ತಲೇ ಇರಲಿಲ್ಲ.
ಇಂಥ ಕಾರ್ಯಕ್ರಮಗಳಲ್ಲಿ ಕೆಲವೊಂದು ಪ್ರಶ್ನೆಗಳು ಥಟಕ್ಕೆಂದು ನುಗ್ಗಿಬಿಡುತ್ತವೆ. ಅಂದೂ ಹಾಗೆಯೆ ಆಯಿತು. ಹಾಗೆ ಬಂದ ಪ್ರಶ್ನೆಯೆಂದರೆ-ಜಗತ್ತಿನ ಶ್ರೇಷ್ಠ ನುಡಿ ದುಭಾಷಿ ಯಾರು ಎಂಬುದು. ಪ್ರಶ್ನೆ ಕಿವಿ ಮುಟ್ಟುತ್ತಲೇ ಎಲ್ಲರೂ ಚಕಿತರಾದರು. ಉತ್ತರವಿರಲಿ ಯಾರಿಂದಲೂ ಮಾತೇ ಇಲ್ಲ!
ದುಭಾಷಿ ಪದವನ್ನು ವಿವರಿಸಿ ಅರ್ಥವನ್ನೂ ಹೇಳಿದೆ. ಗುಸಗುಸ ಪಿಸಪಿಸ ನಡೆಯಿತೇ ಹೊರತು ಉತ್ತರ ಬರಲೇ ಇಲ್ಲ. 'ಟೈಂ ಕೀಪರ್' ಸಹ ಗಡಿಯಾರವನ್ನೇ ಮರೆತಿದ್ದರು. ಕೊಂಚ ಹೊತ್ತಿಗೆ ಗುಜಗುಂಪಲು ನಿಂತು ನಿಶ್ಶಬ್ದದ ಆವರಣ ನಿರ್ಮಾಣವಾಯಿತು. ನನ್ನ ಉತ್ತರ ಏನೋ ಎಂಬ ಕುತೂಹಲ ನನ್ನ ಸುತ್ತ ಆವರಿಸಿಕೊಂಡಿತು.
ನಿಶ್ಶಬ್ದದ ನಡುವೆ ಹೊರಟಿತು ನನ್ನ ಧ್ವನಿ 'ಅಮ್ಮ'. ಎಲ್ಲರೂ ದಂಗಾದರು. ಎಲ್ಲರ ಮನದಲ್ಲೂ 'ಹೇಗೆ, ಹೇಗೆ' ಎಂಬ ಪ್ರಶ್ನೆ. ಇದಕ್ಕೆ ಅತಿಥಿ ಭಾಷಣದಲ್ಲಿ ವಿವರಣೆ ಕೊಡುವುದಾಗಿ ಹೇಳಿದೆ.
ಭಾಷಣ ಮಾಡುತ್ತಿದ್ದಾಗ, ಎಲ್ಲಿ ನಾನು ಹೇಳದೆ ಹೋಗಿಬಿಡುತ್ತೇನೊ ಎಂಬಂತೆ ಆತುರದಲ್ಲಿ ಹುಡುಗಿಯೊಬ್ಬಳು ನೆನಪಿಸುವ ವಿನಯದಿಂದ ಕೇಳಿದಳು. ಮೆಚ್ಚುಗೆಯಿಂದ ಆಕೆಯತ್ತ ನೋಡುತ್ತ ಹೇಳಿದೆ- 'ತೊದಲು ನುಡಿಯುವ ಮಕ್ಕಳು ಗಬಗಬ ಮಾತಾಡುತ್ತವೆ. ಅವು ಏನು ಹೇಳುತ್ತಿವೆ ಎಂದು ಅರ್ಥವಾಗುವುದಿಲ್ಲ. ಮಗುವಿನೊಂದಿಗಿರುವ ತಂದೆಗೂ ಮಗುವಿನ ಅನೇಕ ಮಾತುಗಳು ತಿಳಿಯುವುದಿಲ್ಲ. ಆದರೆ ತಾಯಿಗೆ ಅರ್ಥವಾಗಿರುತ್ತದೆ.
ಅವಳು ಅದನ್ನು ನಮಗೆ ತಿಳಿಸುತ್ತಾಳೆ. ಉದಾಹರಣೆಗೆ ಮಗು 'ತೊಬ್ಬಿ ಬೆಲ್ಲ ಬೇತು' ಅನ್ನತ್ತೆ. ಬೆಲ್ಲ ಗೊತ್ತು. ಈ 'ತೊಬ್ಬಿ' ಏನು, 'ಬೇತು' ಏನು? ಅಮ್ಮನೇ ಹೇಳಬೇಕು. ತೊಬ್ಬಿ ಎಂದರೆ ಕೊಬ್ಬರಿ, ಬೇತು ಎಂದರೆ ಬೇಕು ಎಂದು. 'ಆಲು ತಿವಿ ಇಕ್ಕೊಬುತ್ಲು' ಅನ್ನುತೆ ಮಗು. ನಮಗೆ ಅರ್ಥವಾಗೊಲ್ಲ. ತಾಯಿ ಹೇಳುತ್ತಾಳೆ-ಅವಳು ಕಿವಿ ಹಿಡಿದುಕೊಂಡು ಬಿಟ್ಟಳಂತೆ.
ಕಲಬುರಗಿ : ಸಾವಿನಲ್ಲೂ ಒಂದಾದ ತಾಯಿ, ಮಗ
ಮಗುವೊಂದು ಅಪ್ಪನನ್ನು ಕೇಳುತ್ತೆ 'ನಾಮಲಿ ನಾಮಲಿ ತಿನ್ನಿ ಬೇತೆ ಏಲು'. ಅವನಿಗೆ ತಿಳಿಯುವುದಿಲ್ಲ. ಏನು ಹಾಗಂದ್ರೆ ಅನ್ನುತ್ತಾನೆ. ಮಗು ಮತ್ತೆ ಹೇಳುತ್ತೆ- 'ನಾಮಲಿ ನಮಲಿ ತಿನ್ನಿ ಬೇತೆ ಏಲು'. ಅವನು ಸುಸ್ತೋ ಸುಸ್ತು. ಅಮ್ಮ ಹೇಳುತ್ತಾಳೆ- ಮಗು, ನಾಯಿಮರಿ ನಾಯಿಮರಿ ತಿಂಡಿ ಬೇಕೆ ಪದ್ಯ ಹೇಳು ಅಂತಿದೆ ಮಗು.
ಮೊನ್ನೆ ಮನೆಗೆ ಹೋದ ಕೂಡಲೆ ಮೊಮ್ಮಗ ಹೇಳಿದ 'ತಾತ ಪಚಲಿ ಆಕೊಂಡಿ ಉಲ್ಲಯೆ ಆದ್ದೆ'. ಅರ್ಥವಾಗಲಿಲ್ಲ. ಏನು ಅಂದೆ. ಅದನ್ನೇ ಹೇಳಿದ. ಏನೋ, ಗೊತ್ತಾಗ್ಲಿಲ್ಲ ಹೋಗೊ ಅಂದೆ. ಆಗ ಮಗಳು, ಅವನ ತಾಯಿ - ತಾತ ಚಪ್ಪಲಿ ಹಾಕ್ಕೊಂಡು ಉಯ್ಯಾಲೆಯಲ್ಲಿ ಆಡಿದೆ ಅಂತ ಹೇಳ್ತಿದ್ದಾನೆ ಅಂತ.
ಈಗ ಹೇಳಿ, ತಾಯಿಯನ್ನು ಬಿಟ್ಟರೆ ಇದು ಯಾರಿಂದ ಸಾಧ್ಯವಾಗುತ್ತೆ ಅಂತ? ಇಷ್ಟು ಹೇಳಿದ್ದೆ ತಡ, ಸಭೆ ಇಂಥ ಮಾತುಗಳಿಂದ ಮಾರ್ದನಿಸತೊಡಗಿತು. ಎಲ್ಲರ ಮುಖಗಳಲ್ಲೂ ಆನಂದ. ಮುಖ್ಯೋಪಾಧ್ಯಾಯರು ಎದ್ದು ನಿಂತು 'ನಾ ಇಬಾಗ ಏಲ್ತೆ ಅಲ್ಲ ಚುಮ್ಮೆ ಕೂಕೋ ಬೇತು' ಅಂದರು. ಆಗ ಸಭೆಯಲ್ಲಿ ಏನಾಯ್ತು ಎಂದು ಹೇಳಲೇ ಬೇಕೇನು?