ನಮ್ಮನ್ನು ಸೋಲಿಸುತ್ತಿರುವ ಜಾನಪದ, ಗೆಲ್ಲುವ ಸೂತ್ರ ಯಾವುದು?
ನೋಟದ, ಕೇಳುವಿಕೆಯ, ಆಟದ, ಆಚರಣೆಯ ಮುಂತಾದವುಗಳ ದೃಶ್ಯ, ಶ್ರವಣ, ಲೇಖನಗಳ ಮೂಲಕ ಜಾನಪದ ಕುರಿತ ಸಂಗ್ರಹ, ಅಧ್ಯಯನ ಕಾರ್ಯಗಳು ಮುಂದುವರಿಯುತ್ತಲೇ ಇವೆ. ಇದರಲ್ಲಿ ವ್ಯಕ್ತಿಗಳು, ಸಂಸ್ಥೆಗಳ ಆಸ್ಥೆ ಮುಂದುವರೆದಿದೆ.
ಸಂಗ್ರಹಕಾರರು ಶ್ರಮಿಸಿದಂತೆ ಸಂಶೋಧನೆಯಲ್ಲಿ ಇತರೆ ಕೆಲವರು ಶ್ರಮಿಸಿರುವುದು, ಶ್ರಮಿಸುತ್ತಿರುವುದು ಉಂಟು. 'ಆಬಾದು' ಕೊರತೆಯೊ, ರೋಗವೊ ಗದ್ದೆ-ಹೊಲಗಳ ಬಿತ್ತನೆಯಲ್ಲಿ ಬಂದ ಕೆಲವು ಪೈರುಗಳು 'ಕೂರೇಸಿ'ಬಿದ್ದು ನಾಸು (ನಚ್ಚು - ಜೊಳ್ಳು) ಕಾಳಾಗಿಬಿಡುತ್ತವೆ.
ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ ಮಹಾತಾಯಿ ಪದ್ಮಸಾಲಿ ಲಕ್ಷ್ಮೀದೇವಮ್ಮ
ಜಾನಪದ ಸಂಶೋಧನೆಯಲ್ಲಿಯೂ ಇಂಥ 'ನಾಸುಗಿಂಜೆ' (ಜೊಳ್ಳುಕಾಳು)ಗಳು ಮುಖ್ಯವಾಗಿ ಡಾಕ್ಟೊರಲ್ ನಿಬಂಧಗಳ ಹೆಸರಿನಲ್ಲಿ ಸಂಗ್ರಹವಾಗಿ ಗುಂಗಾಡುಗಳಂತೆ ಕಾಡುತ್ತವೆ. ಬೇಸರವನ್ನೂ ಹುಟ್ಟಿಸುತ್ತವೆ. ವಿದ್ವಾಂಸತೆಯೆಂಬುದು ಘನವಾದುದು. ಶ್ರಮವಹಿಸಿ ಪಡೆದುಕೊಳ್ಳಬೇಕಾದುದು. ಅದಕ್ಕೆ ಅದರದ್ದೇ ಆದ ಗೌರವ ಮರ್ಯಾದೆಗಳುಂಟು.
ಆದರೆ, ಒಳ ಮಾರ್ಗಗಳಲ್ಲಿ ಪದವಿ ತೆಗೆದುಕೊಳ್ಳುವುದರ ಬಗ್ಗೆ ಈ ಗೌರವ ಇಟ್ಟುಕೊಳ್ಳುವುದಾದರೂ ಹೇಗೆ? ಹಲವು ಹತ್ತು ಮುದ್ರಿತ ಆಕರಗಳಿಂದ ಪಠ್ಯಭಾಗಗಳನ್ನು 'ಎತ್ತಿಕೊಂಡು' ಅವನ್ನೇ ತುಂಬಿಸಿ, ತನ್ನತನದ್ದು ಎಂಬುದನ್ನು ಎಷ್ಟು ಸಾಧ್ಯವೋ ಅಷ್ಟೂ ಕಡಿಮೆ ಮಾಡಿಕೊಂಡು, ಪುಟಗಳನ್ನು ತುಂಬಿದವಕ್ಕೆ ತೂಕವೂ ಕಡಿಮೆ, ಅದು ವಿದ್ವತ್ತೂ ಆಗಿರದು.
ಎಂಡ್ರಕಾಯಿಸಾರು ಮುದ್ದೆಯೊಂದಿಗೆ ಉಣ್ಣಲು ಪಸಂದು
ಇಂಥವನ್ನು 'ಶಾರ್ಟ್ ಕಟ್' ಥೀಸಿಸ್ ಗಳೆಂದು ಕರೆಯಬಹುದು. ಕೆಲವರು ಗ್ರಂಥ ಋಣದ ಸೌಲಭ್ಯದಲ್ಲಿ ಆಕರಗಳನ್ನು ಉಲ್ಲೇಖಿಸುತ್ತಾರೆ. ಆದರೆ ಕೆಲವರಿಗೆ ಆವರೆಗೆ ಭೂಮಿಗೆ ಬಂದಿದ್ದೆಲ್ಲವೂ ತನ್ನದೇ!!
ನಿಜ ಹೇಳುವವರನ್ನು ಕಡೆಗಣಿಸುವುದುಂಟು
ಈ ವಲಯದಲ್ಲಿ ನಿಜ ಹೇಳುವವರನ್ನು ಕಡೆಗಣಿಸುವುದುಂಟು. ಹಾಗಾಗಿ ನಿಜವಂತರು ಬಾಯಿ ಬಂದು ಮಾಡಿಕೊಂಡು ಅಂದರೆ ವಿದ್ವದಭಿಪ್ರಾಯ ಕೊಡಲಾಗದೆ ಕೊರಗುವುದನ್ನು ನಾನು ಕಂಡಿರುವೆ. ಇದಕ್ಕೆ ಮತ್ತೂ ಜಾತಿ, ಹುದ್ದೆ, ಮುಲಾಜು, ಅಳುಕಿನಂಥ ಒಳ ಕಾರಣಗಳಿದ್ದಾವು.
ಶಿಷ್ಯನ ವಿದ್ವತ್ತು ಪ್ರಖರವಾಗಲಿ ಎನ್ನುತ್ತಿದ್ದ ಗುರುಗಳು
ವಿದ್ವತ್ತಿಗೆ ಗೌರವವಿದ್ದ ದಿನಗಳಲ್ಲಿ ಇಂಥ ನಡವಳಿಕೆ ಕಂಡುಬರುತ್ತಿದ್ದುದು ಕಡಿಮೆ. ಅಧ್ಯಯನದ ಆಶಯಕ್ಕೆ ನಿಕಷವಾಗುತ್ತಿದ್ದವರನ್ನು ಮನದುಂಬಿ ಗೌರವಿಸುತ್ತಿದ್ದುದುಂಟು. ಶಿಷ್ಯನ ವಿದ್ವತ್ತು ಪ್ರಖರವಾಗಬೇಕೆಂದು ಆಶಿಸುವ ಗುರುಗಳಿದ್ದರು. ಅವರ ನಿಕಷದಿಂದ ಹೊರಬರುತ್ತಿದ್ದ ನಿಷ್ಠುರ ಅಭಿಪ್ರಾಯಗಳನ್ನು ಕೃತಜ್ಞತೆ, ಧನ್ಯವಾದಗಳೊಂದಿಗೆ ದಾರಿಯೆಂದು ನಂಬಿ ಸ್ವೀಕರಿಸುವ ಶಿಷ್ಯರಿರುತ್ತಿದ್ದರು.
ಉಪನಿಷತ್ ವಾಕ್ಕಿನಂತೆ 'ಒಟ್ಟಿಗೆ ಶ್ರಮಿಸೋಣ, ತೇಜಸ್ವಿಗಳಾಗೋಣ' ಎಂದು ಕಲಿಸುತ್ತ, ಕಲಿಯುತ್ತಿದ್ದರು. ಈಗಿದು ಕ್ಷೀಣಿಸುತ್ತಿದೆ.
ಶೈಲಿ-ವೈಖರಿ ಅನುಸರಿಸಬೇಕು
ಜಾನಪದಕ್ಕೆ ಸಂಬಂಧಿಸಿದ ಸಕಲವೂ ವಿಶಿಷ್ಟವಾದವು. ಪದ, ಗಾದೆ, ನುಡಿಗಟ್ಟು, ದೃಶ್ಯಕ್ಕೆ ಬರುವ ಪ್ರಕಾರಗಳು, ಹೆಜ್ಜೆ, ಹಾವಭಾವ, ನಟನೆ, ನಿರೂಪಣೆ ಹೀಗೆ. ಇವನ್ನು ಹಿಡಿದು ಬರಹದಲ್ಲಿಡಲು ಅವುಗಳ ಶೈಲಿ, ವೈಖರಿಗಳನ್ನು ಅನುಕರಿಸಬೇಕು. ಇದಕ್ಕಾಗಿ ಇಲ್ಲಿನ ತಳಮೂಲದ ಭಾಷೆಯನ್ನು ಒಗ್ಗಿಸಿಕೊಳ್ಳಬೇಕು.
ಸಾಮಾನ್ಯನು ಅರ್ಥ ಮಾಡಿಕೊಳ್ಳಲಾಗದಂಥವು
ಇದು ಅನೇಕ ಸಂದರ್ಭಗಳಲ್ಲಿ ಅವುಗಳಲ್ಲಿಯೇ ಸಿಗುತ್ತವೆ. ಇದನ್ನು ಗ್ರಹಿಸಿದವರು ವಿರಳ. ಬಹುತೇಕ ನಮ್ಮ ಜಾನಪದವನ್ನು ಪಾಶ್ಚಾತ್ಯ ಸಂಶೋಧನಾ ಪದ್ಧತಿ, ಪರಿಭಾಷೆಗಳಲ್ಲಿ ಗ್ರಹಿಸಲಾಗುತ್ತಿದೆ. ಬಳಸುವ ಪಾರಿಭಾಷಿಕ ಶಬ್ದಗಳು ಪದ, ಬರವಣಿಗೆಯ ಕ್ರಮಗಳು ಈಗಾಗಲೇ ವಿದ್ವತ್ಪ್ರಕಾಶನಕ್ಕೆ ಸಿದ್ಧಕನ್ನಡವೂ ಆಸಕ್ತ ಸಾಮಾನ್ಯನು ಅರ್ಥ ಮಾಡಿಕೊಳ್ಳಲಾಗದಂಥವೂ ಆಗಿರುತ್ತವೆ.
ನುರಿತ ಜಾನಪದ ಮೂಲದ ಗಾಯಕ, ಕಲಾವಿದನಿಗೆ ಅಂಥ ಬರಹಗಳನ್ನು ಓದಿ ಕೇಳಿಸಿದಾಗ ಅವನ ಕಲೆಯೇ ಅವನಿಗೆ ಅರ್ಥವಾಗದೆ ಹೋಗುವಂತಿರುತ್ತವೆ. ಅವನ ಕಲೆಯ ಮೌಲ್ಯ, ಪ್ರತಿಭೆಯ ಬಣ್ಣ ಅವನಿಗೂ ತಿಳಿಯದಂತಿದ್ದರೆ ಬರಹ ಎಂಥ ಚೆನ್ನ?
(ಮುಂದುವರಿಯುವುದು)