ದಾಸರ ಪದಗಳು ನಲಿದವು ಸುನಂದಾಳ ನಾಲಿಗೆ ಮೇಲೆ...
ಮುಂಜಾನೆ ಅಮ್ಮ ಸುನಂದಾಳಿಗೆ ಅಭ್ಯಂಜನ ಮಾಡಿಸಿದಳು. ಅವಳು ಸಾದಾ ಸೀರೆಯುಟ್ಟು ಪಾಠಕ್ಕೆ ಅಣಿಯಾದಳು. ಅಮ್ಮನಿಗೆ ಅದು ಸರಿಬರಲಿಲ್ಲ. ಹಬ್ಬದ ದಿನ ಲಕ್ಷಣವಾಗಿ ಒಂದು ರೇಷ್ಮೆ ಸೀರೆ ಉಟ್ಟರೆ ಚೆನ್ನ ಅಂದಳು. ಸುನಂದಾಳ ಮೋರೆ ಪೆಚ್ಚಾಯಿತು. ಅಪ್ಪ ಸೀರೆಗೇನು ಪಾಠ ಅಂದರು. ಅಮ್ಮ ಒಳ ಹೋಗಿ ತನ್ನ ರೇಷ್ಮೆ ಸೀರೆ ತಂದು, ನಾನು ಕೊಂಚ ದಪ್ಪ. ರವಿಕೆ ದೊಗಲೆಯಾಗುತ್ತೆ ಎಂದಳು.
ಕೊಂಚ ಇರಿ ಎಂದು ಮುನೆಕ್ಕ ಹೋದವಳು ಹಳದಿ ರೇಷ್ಮ ಸೀರೆಯೊಂದಿಗೆ ಬಂದು, ನಾನಿನ್ನೂ ಉಟ್ಟಿಲ್ಲ. ನನ್ನ ಅಳತೆಯ ರವಿಕೆ ಸರಿಯಾದೀತು ನೋಡು ಎಂದಳು. ಮೂವರು ಹೆಂಗಸರು ಒಳಗೆ ಹೋದರು. ಸುನಂದಾ ಸಿಂಗರಿಸಿದ ಗೌರಿಯಾಗಿ ಬಂದಳು. ನರಸಿಂಗರಾಯನ ಕಣ್ಣು ಮೆಚ್ಚುಗೆಯ ಮಿಂಚು ಚೆಲ್ಲಿತು... ಇದನ್ನು ಮುನೆಕ್ಕ, ಸುನಂದಾ ಒಟ್ಟಿಗೆ ಗಮನಿಸಿದರು.
ಅಪ್ಪ ಕನಕದಾಸರ 'ನಮ್ಮಮ್ಮ ಶಾರದೆ ಉಮಾಮಹೇಶ್ವರಿ' ಕೀರ್ತನೆಯೊಂದಿಂಗೆ ಪಾಠ ಶುರು ಮಾಡಿದ. ಅಮ್ಮ 'ವಂದಿಸುವುದಾದಿಯಲಿ ಗಣನಾಥನ' ಆದರೆ ಚೆನ್ನವೇನೊ ಅಂದಳು. ಅದೂ ಆಯಿತು ಎಂದ ಅಪ್ಪ. ಎರಡು ಗಣಪತಿ ಸ್ತುತಿಗಳು ಆಗಬಹುದೆ ಎಂದಳು ಸುನಂದಾ. ಆದೀತು. ತಪ್ಪೇನು? ಕಲಿತಿರು, ನಷ್ಟವಿಲ್ಲ ಅಂದ. ಸುನಂದಾ ಸಮ್ಮತಿಗೆ ತಲೆ ಆಡಿಸಿದಳು.

ಸುನಂದಾ ತನ್ನ ಅಗತ್ಯದಂತೆ ಕಥೆ ನಿರೂಪಿಸುತ್ತಿದ್ದರೆ, ನರಸಿಂಗರಾಯ ಅದಕ್ಕೆ ತಕ್ಕ ದಾಸರ ಪದಗಳನ್ನು ಹೆಕ್ಕಿ ಕೊಡುತ್ತಿದ್ದ. ಅಪ್ಪ ಅವಕ್ಕೆ ಮಟ್ಟು ಹಾಕಿ ಪಾಠ ಮಾಡುತ್ತಿದ್ದ. ಮುನೆಕ್ಕ ತಾನೂ ಒಂದಷ್ಟು ಕಲಿಯುತ್ತಿದ್ದರೆ, ಅಮ್ಮ ಪುನರಾವರ್ತಿಸುತ್ತ ಸುನಂದಾಳ ಕಲಿಕೆಯನ್ನು ಸುಗಮ ಮಾಡುತ್ತಿದ್ದಳು. ಲಂಕೆ ಸೇರಿದ ಹನುಮಂತ ರಾವಣನೊಂದಿಗೆ ಸಂಭಾಷಿಸುವ ಸಂದರ್ಭಕ್ಕೆ ನರಸಿಂಗರಾಯ ಪುರಂದರ ದಾಸರ 'ಏಳೇಳು ಶರಧಿಯು ಏಕವಾಗಿದೆ ಕಂಡ್ಯ' ಪದವನ್ನು ಆಯ್ಕೆ ಮಾಡಿದ್ದ.
ಅಪ್ಪ, ಅವಳಿಗೆ ಕಷ್ಟವಾದೀತೇನೊ ಅಂದ. ಅಮ್ಮ ಅದಕ್ಕೆ ಬದಲು ಬೇರೆ ನೋಡು ಅಂದಳು. ನನಗೇನು ಕಷ್ಟವಾಗದು ಅಂದಳು ಸುನಂದಾ. ಸರಿ ಅಪ್ಪ ಹಾಡಿ ತೋರಿಸಿದ. ಅಮ್ಮ ದನಿಗೂಡಿಸಿದಳು. ಸುನಂದಾ ಹರಿಕಥಾ ದಾಸರ ರೀತಿ ಅಭಿನಯಿಸುತ್ತ ಹಾಡನ್ನು ಹೊಂದಿಸಿಕೊಳ್ಳುತ್ತಿದ್ದಳು. ಇಲ್ಲಿ ಯಾರ ಮಧ್ಯಪ್ರವೇಶವೂ ಇರುತ್ತಿರುತ್ತಿರಲಿಲ್ಲ. ಏಕೆಂದರೆ ಯಾರಿಗೂ ಹರಿಕಥೆಯಲ್ಲಿ ಹೇಳಿಕೊಳ್ಳುವಂತಹ ಪರಿಣತಿ ಇದ್ದುದಿಲ್ಲ.
ಸುನಂದಾಳಿಗೆ ಸಂಗೀತಜ್ಞಾನವಿದ್ದುದರಿಂದ ಕಲಿಕೆ ಕಷ್ಟವಿರಲಿಲ್ಲ. ಉಚ್ಚಾರಣೆ ಇನ್ನೂ ಸುಧಾರಿಸಬೇಕಿತ್ತು. ಹಾಗಾಗಿ ಅವಳ ಕಲಿಕೆ ಒಂದೂವರೆ ತಿಂಗಳವರೆಗೆ ಮುಂದುವರೆಯಿತು.











Click it and Unblock the Notifications