ಸ ರಘುನಾಥ ಅಂಕಣ; ಚಿಗುರ ನಗೆ ಕಾಣುವ ಕಣ್ಣಿಗೆ ಹಗೆಯ ಹೊಗೆ ಏಕೆ?
ಕಡಿದ ಹುಣಿಸೆಗಿಡಗಳ ಮೈತುಂಬ ಕೆಂಪು ಚಿಗುರು ಕಂಡ ನರಸಿಂಗರಾಯ ಅವಕ್ಕಿನ್ನು ಸಾವಿಲ್ಲವೆಂದು ತಿಳಿದು ಹರ್ಷಿತನಾದ. ತೋಪಿನ ಮಧ್ಯೆ ನಿಂತು ಹಸಿರಮ್ಮ ನಿನ್ನ ಕೊಲ್ಲುವ ಮನಸ್ಸುಗಳು ಹುಟ್ಟದಿರುವಂತೆ ಹರಸು ತಾಯೇ ಎಂದು ಪ್ರಾರ್ಥಿಸಿದ ಹೊತ್ತಿನಲ್ಲೇ ಗೆಳೆಯರು ಅಲ್ಲಿಗೆ ಬಂದರು. ಜೊತೆಯಲ್ಲಿ ಸುನಂದಾಳೂ.
Recommended Video
ಅವರಿಗೆ ನರಸಿಂಗರಾಯ ಆ ಚಿಗುರನ್ನು ತೋರಿಸಿದ. ಉಳಿದ ಗಿಡಗಳಿಗಿಂತ ಇವುಗಳಲ್ಲಿ ಫಸಲು ನಿಧಾನವಾಗುತ್ತೆ ಅಷ್ಟೆ. ಪುಣ್ಯಕ್ಕೆ ಗಿಡಗಳು ಒಣಗಲಿಲ್ಲವಲ್ಲ ಎಂದಳು ಸುನಂದಾ. ಯಾರ ಪುಣ್ಯ, ಈ ಬೋಡೆಪ್ಪ, ಪಿಲ್ಲಣ್ಣನವರದೇ? ಎಂದ ನರಸಿಂಗರಾಯನ ಮಾತಿನಿಂದ ಇವನಿಗೆ ವಿಷಯ ತಿಳಿದಿದೆ ಎಂದು ಅವರಿಗೆ ತಿಳಿಯಿತು. 'ಅದು ಏನಾಯಿತಂತೆ ಎಂದರೆ...' ಸುನಂದಾಳ ರಾಗವನ್ನು ತಡೆದ ನರಸಿಂಗರಾಯ, ಆಯಿತಲ್ಲ, ಬಿಡಿ. ನನಗೆ ತಿಳಿಸಿದವರಾರೆಂದು ನಿಮಗೂ ತಿಳಿದಿದೆ. ಚಿಗುರ ನಗೆ ಕಾಣುವ ಕಣ್ಣಿಗೆ ಹಗೆಯ ಹೊಗೆ ಏಕೆ ಎಂದ.
ನಾಟಕದ ಮೇಷ್ಟ್ರು ಕವಿಯಾಗುತ್ತಿದ್ದಾನೆ ಎಂಬ ಪಿಲ್ಲಣ್ಣನ ಮಾತಿಗೆ ಎಲ್ಲರೂ ನಕ್ಕರು. ಆ ನಗು ಸುನಂದಾಳಿಗೆ ತೋಪಿನ ಗಿಡಗಿಡದಲ್ಲೂ ಕಂಡಿತು. ಸುಂಟರಗಾಳಿ ಎದ್ದು ಎರಚಿದ ದೂಳನ್ನು ಮಳೆ ಕುಡಿಯಿತು ಎಂದಳು. 'ಸಾವಾಸ ದೋಷಾನೊ ಪಿಲ್ಲಗ. ನಮ್ಮ ಹುಡುಗೀನೂ ಕವಿಯಾಗಿಬಿಟ್ಟಳು. ಇನ್ನು ನಾವಿಬ್ಬರು ಬಾಕಿ. ನೀನು ನರಸಿಂಗನಿಂದ ಕಲಿ, ನಾನು ಈವಮ್ಮನಿಂದ ಕಲೀತೀನಿ' ಎಂದ ಬೋಡೆಪ್ಪ. ಅವರು ನಗುವಾಗ ಎಲೆ ಎಳೆಗಾಳಿ ಬೀಸಿತು.

'ಅಮ್ಮ ತೋಪಿನಿಂದ ಎಲ್ಲರು ಇಲ್ಲಿಗೇ ಬನ್ನಿ' ಅಂದಿದ್ದಾಳೆ ಎಂದಳು ಸುನಂದಾ. ಯಾವ ಅಮ್ಮನೆಂದು ಕೇಳಿದ ನರಸಿಂಗರಾಯ. ತಕ್ಕಡಿ ಹಿಡಿವಂತೆ ಅಭಿನಯಿಸಿ, ಈ ಅಮ್ಮ ಅಂದಳು. ನರಸಿಂಗರಾಯ, ಯಾವಾಗಿನಿಂದ ಈ ಮೂಕಾಭಿನಯ ಅಂದ. ನಿನ್ನ ಸಹವಾಸವಾದಾಗಿನಿಂದ ಅಂದು ನಾಲಗೆ ಕಚ್ಚಿಕೊಂಡಳು. ತಲೆ ತಗ್ಗಿಸಿದ್ದರಿಂದ ಯಾರ ಮುಖದಲ್ಲಿ ಯಾವ ಭಾವವಿತ್ತೆಂದು ಅವಳಿಗೆ ತಿಳಿಯಲಿಲ್ಲ. ಬೋಡೆಪ್ಪ, ಪಿಲ್ಲಣ್ಣ ಚಪ್ಪಾಳೆ ತಟ್ಟಿದರು. 'ಕೋತಿಗಳು' ಎಂದ ನರಸಿಂಗರಾಯನ ಮನಸ್ಸಿನಲ್ಲಿ ಭಾವಲಹರಿಯ ಗಾಳಿ ಬೀಸತು. ಅದು ಪದ್ಯ ಕಟ್ಟಿಕೊಂಡು ಬಂದಿತು.
ಚಿಗುರು ನೋಡು ಚಿಗುರಂದವ ನೋಡು ಓ ಭಾಮೆ
ಅದರ ಹಾಗಿದೆ ನಿನ್ನಯ ಮುಖವು ದೇವರಾಣೆ
ಅದಕೆ ಮೆಚ್ಚಿ ನಿನ್ನನು ತಂದೆ ಅಮ್ಮನಾಣೆ
ನಂಬೆಲೆ ಚಿನ್ನ ಸುಳ್ಳನ್ನಾಡೆ ಚಂದಿರನಾಣೆ

ಹಾಡಿ ಕೇಳಿಸಿ, ಇದನ್ನು ಕಾಡಿನಲ್ಲಿ ಕಳ್ಳ ಸದಾರಮೆಗೆ ಹೇಳುವಂತೆ ಇಟ್ಟರೆ ಹೇಗಿರುತ್ತೆ ಎಂದು ನರಸಿಂಗರಾಯ ಕೇಳಿದ. ಕೂಡಲೆ ಪಿಲ್ಲಣ್ಣ, ಆ ಕಳ್ಳನಿಗೂ ಆಗುತ್ತೆ; ಇನ್ನೊಬ್ಬ ಮಳ್ಳನಿಗೂ ಆಗುತ್ತಲ್ಲೇನೊ ಬೋಡ ಅಂದ. ಅವನು ಹಾಗೇ ಅನ್ನಿಸುತ್ತೆ ಅಂದ. ಅವನಾರೊ? ಯಾವ ಸೀಮೆಯೋನು ಅಂದ ನರಸಿಂಗರಾಯ. ಇದ್ದಾನೆ ಬಿಡು ಅಂದ ಬೋಡೆಪ್ಪ. ಅಮ್ಮ ಕಾಯ್ತಿರ್ತಾಳೆ ಹೋಗೋಣ ಎಂದು ನೆಲ ಕೆರೆಯುತ್ತಿದ್ದ ತನ್ನ ಬಲಗಾಲ ಹೆಬ್ಬೆರಳನ್ನೇ ನೋಡುತ್ತ ಹೇಳಿದಳು ಸುನಂದಾ.
ಕಾಯುತ್ತಿದ್ದ ಮುನೆಕ್ಕ, ಗುಂಪು ಬರುವುದನ್ನು ಅಷ್ಟು ದೂರದಿಂದಲೇ ಕಂಡು ಅಡುಗೆ ಮನೆ ಸೇರಿದಳು. ಅವರು ಬಂದು ಕೂರುವ ಹೊತ್ತಿಗೆ ನುಗ್ಗೆ, ಕೊತ್ತಂಬರಿ, ಪುದೀನ, ಸಬ್ಬಕ್ಕಿಸೊಪ್ಪು, ಶಿಡ್ಲಘಟ್ಟದ ಹಸಿಮೆಣಸಿನಕಾಯಿ ಹಾಕಿ ಕರಿದ ಬೋಡವನ್ನು ದೊಡ್ಡ ತಟ್ಟೆತುಂಬ ತಂದು ಅವರ ನಡುವೆ ಇಟ್ಟು ಕುಳಿತಳು. ಅಷ್ಟು ಖಾರ ಸಹಿಸದ ಪಿಲ್ಲಣ್ಣ ಬೆವರುತ್ತಿದ್ದರೂ ರುಚಿಗೆ ಸೋತು, ನೀರು ಕುಡಿಯತ್ತಲೇ ತಿನ್ನುತ್ತಿದ್ದ. ಸುನಂದಾಳ ಕೆಂಪೇರಿದ ಮುಖದಲ್ಲಿ ಹನಿಹನಿ ಬೆವರು. ನರಸಿಂಗರಾಯನ ಮನಸ್ಸಿನಲ್ಲಿ ಪುಟ್ಟ ಪದ್ಯವೊಂದು ಸ್ಫುರಿಸಿತು...
"ಕೆಮ್ಮುಖವ ಚುಂಬಿಸಲು ಹನಿಗಟ್ಟಿತೆ ಬೆವರು
ತುಂಬಿಕೊಳ್ಳಲು ಕೆಂದಾವರೆ ಕೊಳವಾಯಿತೆ ಮುಖವು
ಎಂಥ ಚೆಂದ ಭಾಗ್ಯ ಕೊಟ್ಟೆ ಕಣ್ಣಿಗೆ
ವಂದನೆ ಶಿಡ್ಲಘಟ್ಟ ಮೆಣಸಿನಕಾಯಿಗೆ..."












Click it and Unblock the Notifications