ಸ ರಘುನಾಥ ಅಂಕಣ; ವ್ಯವಹಾರ ಕುದುರಿಸಿ ಸಾಕ್ಷಿಯಾದ ನರಸಿಂಗರಾಯ

ತಲ್ಲಣಿಸದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
ಅಪ್ಪಯ್ಯ ಹಾಡಿದ್ದರ ಉದ್ದೇಶ, ಅದರ ಅರ್ಥ ಎಲ್ಲರಿಗೂ ಅಲ್ಲದಿದ್ದರು ಕೆಲವರಿಗಂತೂ ಅರ್ಥವಾಗಿತ್ತು. ಈ ಹಿಂದೆಲ್ಲಾ ಸಂದರ್ಭಗಳಲ್ಲಿ ತಾನಿಲ್ಲವೇನೋ ಎಂಬಂತಿದ್ದ ಮುನೆಂಕಟೇಗೌಡ, ನಿಜಾನೆ. ಶಾಂತಿಗಾಗಿ ನರಮನ್ಸರಾಗಿ ಮಾಡೂದ್ನೆಲ್ಲ ಮಾಡಾಗಿದೆ. ಇನ್ನೇನಿದ್ರೂ ಆಗೋದ್ಕೆ ಕಾಯೋದಷ್ಟೆ ಅಂದಿದ್ದು ನರಸಿಂಗರಾಯನಿಗೆ ಚೆನ್ನಾಗಿ ಕೇಳಿಸಿತು.

ಜೊತೆಗೆ ಇಷ್ಟುದಿನ ಊರನ್ನು ಓದುತ್ತಿದ್ದ ಅನ್ನಿಸಿತು. ಅವನ ಮನಸ್ಸಿನಲ್ಲಿ ಇರುವುದೇನು ಅನ್ನುವುದನ್ನು ತಿಳಿಯುವುದು ತನಗೆ ಮುಖ್ಯ ಅನ್ನಿಸಿತು. ಈಗ ಗೌಡರ ಕಾಲು ಎತ್ತ ಕಡೆಗೋ ಅಂದ. ಇನ್ನೆರಡು ತಡಿಕೆ ನೀರಿಲ್ದೆ ಬೆಳೆ ಒಣಗ್ತಿರೊ ತ್ವಾಟದ ಕಡಿಕೆ. ನೋಡಿ ಹೊಟ್ಟೆ ಉರುಸ್ಕೊಬೇಕಲ್ಲ ಅಂದ. ನಾನೂ ಬರಲೊ ಅಂದ ನರಸಿಂಗರಾಯ. ಬಾ ಬಾ ಮಾರಾಯ, ನಾಯೇನು ಹೊತ್ಕೊಂಡು ಹೋಗ್ಬೇಕ ಅಂದ.

ಹೂಕೋಸಿನ ಮುಖದಲ್ಲಿ ಕಳೆಯೇ ಇರಲಿಲ್ಲ. ಇನ್ನೊಂದು ಆರು ತಡಿ (ಸಲ, ತೇವ) ನೀರು ಕಟ್ಟದ್ರೆ ಬೆಳೆ ಕೈಗೆ ಬರೋದು. ಬಾವಿಯಲ್ಲಿ ಇಣುಕಿದ. ಹೆಚ್ಚೆಂದರೆ ಎರಡು ಅಡಿ ನೀರಿತ್ತು. ತಾನು ಈಜು ಕಲಿತ ಬಾವಿ. ನರಸಿಂಗರಾಯನ ಹೊಟ್ಟೆಯಲ್ಲಿ ಬೆಂಕಿ ಎದ್ದಿತು. ಈ ಸಲ ಹೂವ್ನ ಕೊಯಮತ್ತೂರಿಗೆ ಹಾಕೋದು ಅಂತಿದ್ದೆ. ನೋಡಿದ್ರೆ ಕೋಲಾರಕ್ಕೂ ಹಾಕೊಂಗಿಲ್ಲ. ಆಗೊ ರಾಗೀನ ಮಾರಿ ಪಿ.ಎಲ್.ಡಿ. ಬ್ಯಾಂಕಿಗೆ ಬಡ್ಡಿ ಕಟ್ಟಿ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕ್ಕೊಬೇಕು ಅಂದ ಗೌಡನ ಕಣ್ಣಲ್ಲಿ ನೀರು ಕಂಡಿತು.

Narasingaraya Compromised Yalagireppa To Provide Water To Crops

ಬೀರಣ್ಣ ಮಗನ ಕಳಕೊಂಡು ಅಳ್ತಿದ್ರೆ, ನಾನು ಬೆಳೇನ ಕಳಕೊಳ್ತ ಅಳ್ತಿದ್ದೀನಿ. ನಿನ್ನ ಈರುಳ್ಳಿ ಕತೆ ಒಂಥರ ಆದ್ರೆ, ನನ್ನ ಹೂಕೋಸಿನ ಕತೆ ಇದು ನೋಡು ಅಂದವನು, ಕೆರೆಕಟ್ಟೆ ಕೆಳಗಿನ ಬಾವಿ ನಂದು. ಕರೇಲಿ ನೀರಿದ್ರಲ್ವ ಬಾವೀಲಿ ಇರೊಕೆ? ರಾಜಕಾಲ್ವೆ ಒತ್ತುವರೀಲಿ ಹೋದ್ರೆ ಕೆರೆಗೆ ನೀರು ಎಲ್ಲಿಂದ ಬಂದಾತು? ರೈತ್ರಿಂದ್ಲೇ ಕೆರೇನ, ಮರಾನ ಉಳಿಸೊ ಕಾಲ ಬಂದದೇನೊ? ಹಿಂಗೇ ಆದ್ರೆ ಯಾವುದೂ ಊರ್ಜಿತ ಇಲ್ಲ ನರಸಿಂಗ ಅಂದ.

ಯಾಕೊ ಯಾಲಗಿರೆಪ್ಪ ಈ ಸಲ ಯಾವ ಬೆಳೇನೂ ಇಟ್ಟೋನಲ್ಲ. ಬಾವೀಲಿ ಏನಿಲ್ಲೆಂದರು ಒಂದು ಮಟ್ಟು (5-6 ಅಡಿ) ನೀರಿದೆ. ಕೇಳಬೋದಲ್ಲ ಅಂದ ನರಸಿಂಗರಾಯ. ಕೇಳ್ಬೋದು ಅನ್ನು. ಕೊಡ್ತಾನ? ಅವನ್ಗೂ ನಂಗೂ ಅಷ್ಟಕ್ಕಷ್ಟೆ ಅಂದ ನಿರಾಸೆಯಿಂದ ಮುನೆಂಕಟೇಗೌಡ. ಇಲ್ಲಿಗೆ ಕಾಣ್ತಿದ್ದಾನೆ ನೋಡು. ಬಾವಿ ಹತ್ತಿರದಲ್ಲೆ ಇದ್ದಾನೆ. ಕೇಳಿಬಿಡೋಣ ಬಾ ಎಂದು ಕೈ ಹಿಡಿದೆಳೆದ.

ನಾನು ಬೆಳೆ ಇಡೋದು ಬೇಡ್ವ ಅನ್ನೊ ರಾಗದಲ್ಲೆ ಬಹಳ ಹೊತ್ತು ಇದ್ದವನು, ನೀರು ಕೊಟ್ರೆ ನನಗೇನು ಅಂದ. ಮುನೆಂಕಟೇಗೌಡ ಎಲ್ಲ ಮಾತನ್ನು ನರಸಿಂಗರಾಯನಿಗೇ ಬಿಟ್ಟು ಕುಳಿತಿದ್ದ. ಮೆತ್ತಗಾಗ್ತಿದ್ದಾನೆ ಅಂದುಕೊಂಡ ನರಸಿಂಗರಾಯ, ನೀನೆ ಹೇಳು ಅಂದ. ಸರಿಯರ್ಧ ಭಾಗ ಅಂದ ಯಾಲಗಿರೆಪ್ಪ. ರೈತನಾಗಿ ನ್ಯಾಯ ಅಂತೀಯ ಅಂದು ಭಾವನೆಯನ್ನು ಕೆಣಕಿದ ನರಸಿಂಗರಾಯ. ನೀನನ್ನೋದೇನು ಅಂದ ಯಾಲಗಿರೆಪ್ಪ.

ನಿನಗೂ ಗೊತ್ತು ಮುನೆಂಕಟೇಗೌಡ ಮೈತುಂಬ ಸಾಲ ಹೊದ್ದುಕೊಂಡಿರೋದು. ನಿನಗಾ ಪರಿಸ್ಥಿತಿಯಿಲ್ಲ. ಬರೋದೂ ಬೇಡ. ಮೂರನೆಯ ಒಂದು ಭಾಗ ನ್ಯಾಯ ಎಂದು ಹೃದಯದಾಳಕ್ಕೆ ಮಾತನ್ನು ದೂಡಿದ. ಅದು... ಅನ್ನುತ್ತ ಅವನು ಮಾತಾಡ್ತಾನೆ ಇಲ್ಲ ಅಂದ. ಒಪ್ಪಿಗೆಗೆ ಬರುತ್ತಿದ್ದಾನೆ ಅನ್ನಿಸಿ, ನರಸಿಂಗರಾಯ ಮುನೆಂಕಟೇಗೌಡನ ತೊಡೆ ಗಿಲ್ಲಿದ. ಈ ಮಾತಿಗೆ ನನ್ನ ತಕರಾರಿಲ್ಲ ಅಂದ ಮುನೆಂಕಟೇಗೌಡ. ಅದಕ್ಕೆ ಯಾಲಗಿರಿ ಹೂ ಕೊಡೋನೊ, ಕಾಸು ಕೊಡೋನೊ ಅಂದ. ನೀನು ಕೊಡಂದಿದ್ದು ಕೊಡ್ತೀನಿ ಅಂದ ಮಾತಿಗೆ ಯಾಲಗಿರೆಪ್ಪ, ಹುವ್ವೆ ಕೊಡು ಅಂದ. ಮಾತಿನ ಒಪ್ಪಂದಕ್ಕೆ ನರಸಿಂಗರಾಯ ಇಬ್ಬರಿಗೂ ಸಾಕ್ಷಿಯಾದ.

ಮನೆಗೇನ ಎಂದು ಕೇಳಿದ ಯಾಲಗಿರೆಪ್ಪ. ಹೂಂ ಅಂದಿದ್ದಕ್ಕೆ ನಾನೂ ಬರ್ತೀನಿ. ಅಮ್ಮಯ್ಯನ ಕೈಯಿಂದ ಟೀ ನೀರು ಕುಡಿದು ಶಾನೆ ದಿನಾತು ಅಂದ. ನೀನೂ ಬಾ ಅಂದಿದ್ದಕ್ಕೆ, ನಾನಿರ್ಲಿ, ನೀವು ಹೊರಡಿ ಅಂದ ಗೌಡ. ಸಮಸ್ಯೆ ತೀರಿತಲ್ಲ. ಆ ಖುಷೀಲಿ ಟೀ ಕುಡಿಯೋಣ ಬಾ ಎಂದು ಒತ್ತಾಯಿಸಿ ಕರೆದ ನರಸಿಂಗರಾಯ.

ಟೀ ಕುಡಿಯುತ್ತ ಯಾಲಗಿರೆಪ್ಪ ಅಪ್ಪಯ್ಯನಿಗೆ ವ್ಯವಹಾರವನ್ನೆಲ್ಲ ಹೇಳಿ, ಮಗನ್ನು ಲಾಯಿರೀಗೆ ಓದಿಸಿದ್ರೆ ಒಳ್ಳೆ ಜಡ್ಜಿ ಆಗೋನು. ನಾಟಕಕ್ಕೆ ಹಾಕಿದೆ ಎಂದು ಆಕ್ಷೇಪಿಸಿದ. ಅಪ್ಪಯ್ಯನದು ಮಾತಿಲ್ಲದ ನಗೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+