ಪ್ರೀತಿಯ ದವನ ಪರಿಮಳದ ಶಕುಂತಲೆ ನಿನ್ನ ಕಾಗದ ಓದಿದ ಗುಂಗಿನಲಿ...
ನನ್ನ ಪ್ರೀತಿಯ ದವನ ಪರಿಮಳದ ಶಕುಂತಲೇ, ಕುಶಲವೆ?
ಸಂಜೆ ವಿಹಾರಕ್ಕೆ ಹೋಗಿದ್ದಾಗ ಕಂಡ ದವನದ ತೋಟಕ್ಕೆ ಹೋಗಿ ಕುಳಿತು ನಿನ್ನ ನಿರೀಕ್ಷೆ ಕನಸುಗಳು ತುಂಬಿದ, ನಿನ್ನ ಪ್ರೀತಿ ಸುಗಂಧ ಭರಿತ ಕಾಗದವನ್ನು ಎರಡನೇ ಸಲ ಓದಿದೆ. ಮತ್ತೊಮ್ಮೆ ಓದಿದೆ. ಸುತ್ತಮುತ್ತ ಯಾರೂ ಇರಲಿಲ್ಲವಾಗಿ ನಾಲಕ್ಕನೇ ಸಲ ಗಟ್ಟಿಯಾಗಿ ಓದಿದೆ. ಹೀಗೆ ಓದುವಾಗ ಅಲ್ಲಿಯ ದವನದ ಒಂದೊಂದು ಗಿಡವೂ ಕಾಗದದ ಒಂದೊಂದು ಪದದಲ್ಲಿಯೂ ಕುಳಿತು ಪರಿಮಳಿಸತೊಡಗಿತು.
ಇಡೀ ಪತ್ರ ಬಾಯಿಪಾಠವಾಗಿ ಹೋಯಿತು. ಅಲ್ಲಿಯೇ ಕುಳಿತು ಈ ಓಲೆ ಬರೆಯುತ್ತಿರುವೆ. ಅದಕೆಂದೇ ನಿನ್ನನ್ನು 'ನನ್ನ ಪ್ರೀತಿಯ ದವನ ಪರಿಮಳದ ಶಕುಂತಲೇ' ಎಂದು ಸಂಬೋಧಿಸಿರುವೆ. ಮುಂದೆ ನಮ್ಮ ದಾಂಪತ್ಯದ ದಿನಗಳಲ್ಲಿ ಈ ಪತ್ರಗಳನ್ನು ನಾವು ಕೂಡಿ ಓದುವಾಗ ಈ ತೋಟ ನಮ್ಮ ಮನಸ್ಸುಗಳಲ್ಲಿ ಅರಳಿ, ಬದುಕಿಗೆ ಪರಿಮಳ ಉಳಿಸಲಿ ಎಂಬ ಆಶಯವೂ ನನ್ನದಾಗಿದೆ.
ನಮ್ಮನ್ನು ಕೊಲ್ಲಬೇಡಿ, ಬದುಕಲು ಬಿಡಿ: ಪ್ರೇಮಿಗಳ ದಯನೀಯ ಮೊರೆ
ನೀನು ನಿರೀಕ್ಷಿದಂತೆ ಆಗಲಿ ಎಂಬುದು ನನ್ನ ನಿರೀಕ್ಷೆಯೂ ಆಗಿದೆ. 'ಪದುಮಳು ಒಳಗಿಲ್ಲ ಎಂದಾಗ ರಾಯರು ನಗಲಿಲ್ಲ' ಅನ್ನುವಲ್ಲಿ ನನ್ನನ್ನು ನೀನು ಕಲ್ಪಿಸಿಕೊಂಡು ನಕ್ಕೆ ಎಂಬುದನ್ನು ಓದುವಾಗ ನಿಜಕ್ಕೂ ನಿನ್ನ ಮೇಲೆ ಮುನಿಸು ಬಂದಿತು. ಆ ಮೇಲೆ ಹಾಗೆ ನಗುವಾಗ ನಿನ್ನ ಮುಖ ಎಷ್ಟು ಅಗಲ ಅರಳಿತ್ತು ಎಂದು ಊಹಿಸುವಾಗ ಆ ನಗೆಯ ಅಲೆಯ ಲಯದಲ್ಲಿ ನನ್ನ ಮುನಿಸು ಕರಗಿಹೋಯಿತು.
ಒಂದು ವೇಳೆ ಹಾಗೇನಾದರೂ ಆದರೆ ತಿಳಿ ಹೇಳುವ ಬಳೆಗಾರನೊಬ್ಬನನ್ನು ಹುಡುಕಿಕೊಳ್ಳುವ ಹೊಣೆ ನಿನ್ನದೇ ರನ್ನೆ. ನನ್ನ ಪ್ರೀತಿ ಪರಿಮಳದರಸಿ ಶಕುಂತಲೇ, ನಿನ್ನ ಓಲೆಯನ್ನು ಸುಮಾರು ಹೊತ್ತು ದವನದ ಮೇಲೆ ಹಾಸಿದ್ದೆ. ಗಾಳಿಯೂ ಸಹಕರಿಸಿ ಬೀಸಲಿಲ್ಲ. ಹಾಗಾಗಿ ಪತ್ರ ಹಾರಿ ಹೋಗಲಿಲ್ಲ. ಪ್ರತಿಯೊಂದು ಅಕ್ಷರವೂ ದವನ ಪರಿಮಳವನ್ನು ಕುಡಿಯುತ್ತಿದೆ ಅನ್ನಿಸಿತು.
ಕೊಂಚ ಹೊತ್ತಿನ ಮೇಲೆ ಬೀಸಿದ ಗಾಳಿ 'ಎತ್ತಿಕೋ ಪತ್ರವನ್ನು. ನಾನು ಎಷ್ಟೋ ಹೃದಯಗಳಿಗೆ ತಂಪೆರೆಯಬೇಕಿದೆ. ನಿನ್ನ ಶಂಕುತಲೆಯ ಪತ್ರವೇನಾದರೂ ಹಾರಿ ನನ್ನೊಡನೆ ಬಂದರೆ ಅದು ಇನ್ನಾರ ಕೈಗೋ ಸೇರೀತು. ನಂತರ ನೀನು ಪರಿತಪಿಸುವೆ. ಇದಕ್ಕೆ ನಾನು ಹೊಣೆಯಲ್ಲ' ಎಂದಿತು.
ದವನ ಪರಿಮಳದ ಪತ್ರವನ್ನು ಎತ್ತಿ ಮಡಚಿ ಜೇಬಿಗಿಟ್ಟು, ಅಲ್ಲಿಂದ ಹೊರಟೆ. ದಾರಿಯುದ್ದಕ್ಕೂ ಏನು, ಮನೆಯಲ್ಲಿಯೂ ದವನ ಪರಿಮಳವೇ. ಅದರಲ್ಲಿ ನೀನೇ.
ರಾತ್ರಿ ಆಕಾಶದ ನಕ್ಷತ್ರಗಳು ಕಣ್ಣಗಲಿಸಿ ನೋಡುತ್ತ, ನಾನು ದವನದ ತೋಟದಲ್ಲಿ ಅರೆ ಬರೆದಿದ್ದ ಕಾಗದ ಬರೆಯಲು ಮೊದಲಿಟ್ಟಾಗ ಅಕ್ಷರ ಅಕ್ಷರಗಳನ್ನೂ ಕದಿಯತೊಡಗಿದವು. ಯಾರಿಗೋ ಕೊಟ್ಟ ಮಾತನ್ನು ಈಡೇರಿಸಲು ಇದ್ದೀತು. ಆದರೆ ಕಾಗದವನ್ನು ಮಡಿಚಿಕೊಂಡು ಬರೆಯುವುದಾಗಲ್ಲವೆ? ಕದಿಯಲಿ ಬಿಡು ಎಂದು ಬರೆದೆ.
ಪೊಲೀಸರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಪ್ರೇಮಿಗಳು
ಆದರೂ ಬೇಸರ ಮನಸ್ಸಿನಲ್ಲಿ, ಕೋಪ ನಕ್ಷತ್ರಗಳ ಮೇಲೆ. ಆಗ ಅಂಗಳದ ಗೋಡೆಯಂಚಿನಲ್ಲಿದ್ದ ಮರುಗ ಮಾತನಾಡಿಸಿ, 'ಬರೀ ಪದಗಳಲ್ಲಿ ಏನಿದೆ ವಸಂತ? ಇರುವುದೇನಿದ್ದರೂ ಪರಿಮಳದಲ್ಲಿ. ನಾನು ಅದನ್ನು ಕೊಡುವೆ. ಭದ್ರಪಡಿಸಿ ಕಳಿಸು ನಿನ್ನ ಶಂಕುತಲೆಗೆ' ಎಂದು ಹೇಳಿತು.
ನನ್ನೆದೆಯ ಪ್ರೀತಿ ಪರಿಮಳದ ಚೆನ್ನೆ ಶಕುಂತಲೇ, ಇದೋ ಮರುಗದ ಕರುಣೆಯ ಪರಿಮಳ ತುಂಬಿದ ನನ್ನ ಅಕ್ಕರೆಯ ಓಲೆ. ಕೋಣೆ ತುಂಬಿದ ಪರಿಮಳದ ನಡುವೆ ನೀನು ನರ್ತಿಸುತ್ತಿರುವೆ. ನಿನ್ನ ಕಾಲ್ಗೆಜ್ಜೆ ದನಿ ಹೃದಯದಲಿ ಹಾಡುತ್ತಿದೆ.