ಕಳ್ಳ ಬಂದ ಕಳ್ಳ ಎಂದು ಎಚ್ಚರಿಸುವ ತಿತ್ತಿರಿ ಹಕ್ಕಿ!
ನಮ್ಮ ಜಾನಪದರ ಕಾರ್ಯ ಕಾರಣದ ಕಥೆಗಳಲ್ಲಿ ಬಲು ಸ್ವಾರಸ್ಯಕರವಾದ ತಿತ್ತಿರಿ ಹಕ್ಕಿಯ ಕಥೆಯೂ ಒಂದು.
ದಸುರತ (ದಶರಥ) ಮಹಾರಾಜ ಅಯಿವೋದಿಯ (ಅಯೋಧ್ಯೆ) ಪುರವನ್ನು ಆಳುತ್ತಿದ್ದ. ಒಂದು ದಿನ ಕಾಡಿನಂಚಿನ ಹಳ್ಳಿಗಳ ಜನ ಅಯೋಧ್ಯೆಗೆ ಬಂದು "ರಾಜಾ ಕಾಡಂದಿಗಳು ನಡಿರಾತ್ರೊತ್ಲು ಬಂದು ನಮ್ಮ ಬೆಳಿಗಳನೆಲ್ಲ ನಾಸನ ಮಾಡ್ತಾವೆ. ನಾವು ಏನೇನೋ ಅರುವು ಮಾಡಿದಿವಿ. ಆದ್ರೂ ಅವುಗುಳ ದರುಬಾರುನ ತಡಿಯೋಕಾದ್ದಿಲ್ಲ. ಯಾಮಾರಿದುರೆ ಜನಗಳ ಮ್ಯಾಗೂ ಬಿಳ್ತಾವ. ನೀನೇ ರಚ್ಚಿಣ ಮಾಡಬೇಕಾಗದೆ. ಇಲ್ಲಂದ್ರೆ ನಾವು ಊರು ಬುಟ್ಟು ಅಯಿವೋದಿಕ ಬಂದಿರಬೇಕಾತದ" ಎಂದು ಬೇಡಿಕೊಂಡರು.
ಅವರ ಕಷ್ಟ ಎಷ್ಟು ದೊಡ್ಡದು ಎಂದು ದಶರಥನಿಗೆ ಅರ್ಥವಾಯಿತು. ಸೈನ್ಯದೊಂದಿಗೆ ಬರುವುದಾಗಿ ಹೇಳಿದ. ಅದರಂತೆ ಅವುನು ಹೊಂಟ ವೈನ ಎಂಗಿತ್ತಂದುರೆ ಇಂದೆ ಇನ್ನೂರು ದಂಡು/ ಮುಂದೆ ಮುನ್ನೂರು ದಂಡು/ ವಂಟಾನೆ ದಸುರತರಾಜ/ ಕಾಡಂದಿಗುಳ ಬ್ಯಾಟಿಕ.

ದಶರಥ ಮತ್ತು ಅವನ ಸೈನಿಕರು ಹೊಲಗಳ ಹತ್ತಿರದ ಗಿಡಮರ ಪೊದೆಗಳ ಮರೆಯಲ್ಲಿ ಅವಿತು ಕಾಯತೊಡಗಿದರು. ನಡುರಾತ್ರಿಯಾಯಿತು. ಹಂದಿಗಳ ಸುಳಿವಿಲ್ಲ. ಕಾದುಕಾದು ರಾಜನಿಗೆ ತೂಕಡಿಕೆ ಬಂದಿತು. ನಿದ್ದೆ ಮಾಡಿದ. ರಾಜನ ನಿದ್ದೆ ನೋಡಿ ಸೈನಿಕರಿಗೂ ನಿದ್ದೆ ಬಂದಿತು. ಹೊಸಬರ ಗದ್ದಲ ನಿಂತು ಕಾಡು ಎಂದಿನಂತೆ ತಣ್ಣಗಾದಾಗ ಹಂದಿಗಳು ನುಗ್ಗಿ ಬಂದು ಹೊಲಗಳ ಮೇಲೆ ಬಿದ್ದವು. ಬೆಳೆಗಳನ್ನು ತಿಂದು, ತುಳಿದು ಹೊರಟು ಹೋದವು. ಹೀಗೆಯೇ ಮೂರು ರಾತ್ರಿಗಳು ಕಳೆದವು. ಅರಸನಿಗೆ ಚಿಂತೆ. ಏನಾದರೂ ಸರಿ ಇಂದು ಹಂದಿಗಳನ್ನು ಬಿಡಬಾರದೆಂದುಕೊಂಡ. ಆಲೋಚಿಸಿದ.
ಅಲ್ಲೊಂದು ಕುಂಟೆ. ದಶರಥ ಅದರಿಂದ ಹಸಿ ಮಣ್ಣನ್ನು ತರಿಸಿಕೊಂಡ. ಅದರಿಂದ ಒಂದು ಹಕ್ಕಿಯನ್ನು ಮಾಡಿದ. ಅದಕ್ಕೆ ಜೀವಕೊಟ್ಟು, ನೀನು ಕುಂಟೆಯ ಪಕ್ಕದ ಪೊದೆಯಲ್ಲಿದ್ದು ಗಮನಿಸುತ್ತ ಹಂದಿಗಳು ಬಂದ ಕೂಡಲೆ ಆಕಾಶಕ್ಕೆ ಹಾರಿ ಗಿರಕಿ ಹೊಡೆಯುತ್ತ ಕೂಗಿ ನಮ್ಮನ್ನೆಲ್ಲ ಎಚ್ಚರಿಸಬೇಕೆಂದು ಹೇಳಿದ. ಮಧ್ಯರಾತ್ರಿ ಎಲ್ಲರಿಗೂ ನಿದ್ದೆ. ಇದೇ ಸಮಯಕ್ಕೆ ಹಂದಿಗಳು ಹೊಲಗಳತ್ತ ಬರತೊಡಗಿದವು. ಕೂಡಲೆ ಹಕ್ಕಿ ಆಕಾಶಕ್ಕೆ ಜಿಗಿದು ಚಕ್ರಾಕಾರವಾಗಿ ಸುತ್ತುತ್ತ ಉತ್ತೂತಿ ಉತ್ತೂತಿ ಎಂದು ಕೂಗತೊಡಗಿತು. ದಶರಥನೊಂದಿಗೆ ಎಲ್ಲರೂ ಎದ್ದರು. ಹಂದಿಗಳನ್ನು ಬೇಟೆಯಾಡಿದರು. ತಪ್ಪಿಸಿಕೊಂಡವು ಕಾಡಿನೊಳಕ್ಕೆ ದೌಡಾಯಿಸಿದವು.

ಅರಸನಿಗೆ ಖುಷಿಯಾಯಿತು. ಇನ್ನೊಮ್ಮೆ ಕೂಗುವಂತೆ ಹಕ್ಕಿಗೆ ಹೇಳಿದ. ಅದು ಆಕಾಶಕ್ಕೆ ಹಾರಿ ಕೂಗಿತು. ಅದರ ಕೂಗು ತಿತ್ತಿರಿ ಎಂದು ಕೇಳಿಸಿತು. ಅರಸ ಅದನ್ನು ತಿತ್ತಿರಿಪಕ್ಷಿ ಎಂದು ಕರೆದ. ನಂತರ ರಾಜ ನೀನು ಇಲ್ಲಿಯೆ ಇದ್ದು ಬೆಳೆ ನಾಶಮಾಡುವ ಪ್ರಾಣಿಗಳು ಬಂದಾಗ ಕೂಗಿ ಜನರನ್ನು ಎಚ್ಚರಿಸುತ್ತಿರು. ಹಾಗೆಯೇ ಕಳ್ಳರು ಬಂದಾಗಲೂ ಕೂಗಬೇಕೆಂದು ಹೇಳಿದ. ಅದು ಒಪ್ಪಿತು. ಬೆಳಕು ಹರಿಯುವ ಮೊದಲೇ ಜನ ಬಂದರು. ನೋಡಿದರು. ಬೆಳೆಗಳು ಸುರಕ್ಷಿತವಾಗಿದ್ದವು. ಅರಸ ನಿಮಗಿನ್ನು ಭಯವಿಲ್ಲ. ಈ ತಿತ್ತಿರಿ ಹಕ್ಕಿ ಇಲ್ಲಿಯೇ ಇದ್ದು ನಿಮಗೆ ಎಚ್ಚರಿಕೆ ನೀಡುತ್ತಿರುತ್ತದೆ ಎಂದು ಹೇಳಿ ರಾಜಧಾನಿಗೆ ಹಿಂದಿರುಗಿದ.
ಇದು ಜಾನಪದರ ಕತೆಯಾದರೆ, ಯಜುರ್ವೇದಕ್ಕೆ ತೈತ್ತಿರೀಯ ಎನ್ನುವುದುಂಟು. ಇದಕ್ಕಿರುವ ಹಿನ್ನೆಲೆಯೆಂದರೆ, ಯಾಜ್ಞವಲ್ಕ್ಯನು ವೈಶಂಪಾಯನನಿಂದ ವೇದ ಅಧ್ಯಯನ ಮಾಡಿದ. ಗುರುಗಳ ಆದೇಶದಂತೆ ಯಜುರ್ವೇದವನ್ನು ವಾಂತಿ ಮಾಡಿದ. ಆಗ ಅಲ್ಲಿದ್ದ ಋಷಿಗಳು ತಿತ್ತಿರ ಪಕ್ಷಿಯ ರೂಪ ಪಡೆದು ಆ ವೇದವನ್ನು ಸಂಗ್ರಹಿಸಿದರು. ಇವರಿಂದ ಮತ್ತೆ ಮೂಡಿದ ಯಜುರ್ವೇದ ತೈತ್ತಿರೀಯವೆಂದು ಹೆಸರಾಯಿತು. ಈ ಹಕ್ಕಿಯನ್ನು ತಿತ್ತಿರಿ, ಲಾವ, ಲಾವಕ, ಟಿಟ್ಟಿಭ ಎಂದು ಸಂಸ್ಕೃತದಲ್ಲಿ ಕರೆಯಲಾಗಿದೆ. ಅಮರಕೋಶವೂ (ದ್ವಿತೀಯಕಾಂಡ, ಸಿಂಹಾದಿ ವರ್ಗ) ಹೀಗೆಯೇ ಹೇಳಿದೆ.

ಉದ್ದ ಕಾಲಿನ, ಪುಟ್ಟ ದೇಹದ, ತಲೆ ಮತ್ತು ಕತ್ತಿನ ಭಾಗ ಕಪ್ಪಾದ, ಕಣ್ಣಿನ ಬಳಿ ಬಿಳುಪು ಪಟ್ಟಿ ಇರುವ, ಕೊಂಚ ಬೂದುಬಣ್ಣ ಎನಿಸುವ ರೆಕ್ಕೆಗಳಿರುವ ಸುಂದರ ಉತ್ತುತ್ತಿಯು ನೀರಿನ ವಸತಿಯಿರುವ ಕೆರೆಕುಂಟೆ, ಕಟ್ಟುಕಾಲುವೆಗಳ ಬಳಿಯ ಪೋದೆಗಳ ಮರೆಯಲ್ಲಿ ವಾಸಿಸುತ್ತದೆ. ಮೊಟ್ಟೆಗಳನ್ನು ಅಲ್ಲಿಯೇ ಇಟ್ಟು ಸಣ್ಣ ಕಲ್ಲುಗಳಿಂದ ಮರೆ ಮಾಡುತ್ತದೆ. ಯಾರಾದರು ಅಪರಿಚಿತರು ಅತ್ತ ಸುಳಿದರೆ ಹೆದರಿಸುವಂತೆ ನಾಲ್ಕೈದು ಆಳಿನೆತ್ತರಕ್ಕೆ ಹಾರಿ ಕೂಗುತ್ತ ಸುತ್ತತೊಡಗುತ್ತದೆ. ನೀರು ಮತ್ತು ಬಯಲಿನಲ್ಲಿ ಆಹಾರ ಹುಡುಕುತ್ತದೆ. ಸಾಮಾನ್ಯವಾಗಿ ಹಳ್ಳಿಗರು ಇದಕ್ಕೆ ಯಾವ ಅಪಾಯವನ್ನೂ ತರುವುದಿಲ್ಲ. ಬೇಟೆಯಾಡುವುದೂ ಇಲ್ಲ.
ಕನ್ನಡದಲ್ಲಿ ತಿತ್ತಿರಿ, ಲಾವಕ್ಕಿ, ಟಿಟ್ಟಿಭವೆಂದು ಕರೆಯುವರು. ಜನರ ಕಿವಿಗೆ ಆ ಹಕ್ಕಿಯ ಕೂಗು ಉತ್ತುತ್ತೀ ಎಂದು ಕೇಳಿಸುವುದರಿಂದ ಉತ್ತುತ್ತಿ ಎಂದೆ ಕರೆದರು. ತೆಲುಗಿನಲ್ಲಿ ತಿಕ್ಕತೀತ, ತೀತುವುಪಿಟ್ಟ, ಟಿಟ್ಟಿಭಮು, ತಿತ್ತಿ, ತಿತ್ತಿರಮು, ತಿತ್ತಿರಿ, ತಿತ್ತಿರಿಕಮು, ತೀತುವ ಎಂದು ಕರೆದರೆ, ಕೋಲಾರ ತೆಲುಗಿನಲ್ಲಿ ತಿಕ್ಕತೀತ, ತೀತ, ಎಂದು ಕರೆಯುತ್ತಾರೆ. ಹೊಲಗದ್ದೆತೋಟಗಳನ್ನು ಕಾಯುವಾಗ ಈ ಹಕ್ಕಿ ಎದ್ದು ಆಗಸದಲ್ಲಿ ಚಕ್ಕರ್ ಹೊಡೆಯುತ್ತ ಕೂಗಿದರೆ ಕಾವಲುಗಾರರು ಎದ್ದು ಹಾಹೂ, ಒಹೋಯ್, ಯಾವನ್ಲಾ ಅವುನು ಮುಂತಾಗಿ ಕೂಗುತ್ತಾರೆ. ಒಟ್ಟಿನಲ್ಲಿ ದಶರಥನ ಕಾಲದಿಂದಲೂ ಎಚ್ಚರಿಕೆ ಕೊಡುವ ರೈತರ ಗೆಳೆಯ ಹಕ್ಕಿ ಇದು.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications