ಹುಣಿಸೇ ಮರದಿಂದ ಉಳಿದುಕೊಂಡ ಜೀವ ಇದು; ಕರ್ಮವನ್ನೂ ಮೀರಿದ ಧರ್ಮದ ಫಲ
ಬಡತನದ ಫಲ ಕಷ್ಟ ಅನ್ನುವ ಮಾತು ಲೋಕ ಸಾಮಾನ್ಯ. ಕರ್ಮ ಅನ್ನುವುದು ನೋವು, ನಿರಾಸೆ, ಸಮಾಧಾನ ಮಿಶ್ರಿತವಾಗಿ ಬರುವ ಮಾತು. ಪ್ರಾರಬ್ಧ ಕರ್ಮ ಎಂದು ಅಂದರೆ ಈ ಎಲ್ಲದರ ತೀವ್ರತೆಯನ್ನು ತಿಳಿಸುವ, ಸದ್ಯಕ್ಕೆ ಪರಿಹಾರವಿಲ್ಲ ಎಂಬ ಸೂಚನೆಯ ಮಾತು. ವಿಶೇಷವಾಗಿ ಹೆಚ್ಚು- ಹೆಚ್ಚುಕಾಲ ಕಾಡುವ ರೋಗಗಳಿದ್ದಾಗ ನಿರಾಸೆಯಲ್ಲಿ ಹೊರಡುವ ಮಾತು.
ಇದರಲ್ಲಿ ಅನುಭವಿಸುವುದೊಂದೇ ಪಾಲಿಗಿರುವುದು ಎಂಬ ನೋವಿನಿಂದ ಕೂಡಿದ ಅರಿವೂ ಇರುತ್ತದೆ. ಈ ಅರಿವಿನ ವ್ಯಕ್ತಿಯೊಬ್ಬರ ಪರಿಚಯವಾದುದು ವೈದ್ಯಮಿತ್ರ ವೆಂಕಟಾಚಲ ಅವರ ಆಸ್ಪತ್ರೆಯಲ್ಲಿ. ಆತ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಾರಾಯಣಪುರದ ಮುನಿವೆಂಕಟಪ್ಪ.
ಈ ಹಿಂದೆ ಅವರು ಕತ್ತು, ಸೊಂಟ, ಮಂಡಿ ನೋವೆಂದು ಬಂದು ಪರೀಕ್ಷೆಗೆ ಒಳಗಾಗಿ, ಕಿಡ್ನಿ ತೊಂದರೆ ಇರುವುದು ತಿಳಿದು ಭಯಗೊಂಡಿದ್ದರು. ಅವರೊಂದಿಗೆ ವೆಂಕಟಾಚಲ ಆಪ್ತ ಸಮಾಲೋಚನೆ ನಡೆಸಿ, ಧೈರ್ಯ ತುಂಬಿ ಚಿಕಿತ್ಸೆ ನೀಡುತ್ತಿದ್ದರು. ವೈದ್ಯರ ಉಸ್ತುವಾರಿಯಲ್ಲಿ ಚಿಕಿತ್ಸೆ ಮುಂದುವರೆಯಬೇಕಿತ್ತು.

ಆದರೆ, ಮುನಿವೆಂಕಟಪ್ಪ 'ಮನೆಗೆ ಹೋಗಿ ಸ್ನಾನ ಮಾಡಿ ನಾಳೆ ಬರುದಾಗಿ' ಕಾಡಿ ಬೇಡಿ, 'ಸ್ವಇಚ್ಛೆಯಿಂದ' ಎಂದು ಬರೆದುಕೊಟ್ಟು ಡಿಸ್ಚಾರ್ಜ್ ಮಾಡಿಸಿಕೊಂಡು ಹೋಗಿದ್ದರು. ಆದರೆ ಬಂದುದು ಒಂದು ತಿಂಗಳ ನಂತರ. ಬಂದಾಗ ಅನಾರೋಗ್ಯ ಹೆಚ್ಚಿತ್ತು.
ಅವರಿಂದ ಚಿಕಿತ್ಸೆಗೆ ಒಳ್ಳೆಯ ಸ್ಪಂದನೆ ಸಿಕ್ಕಿ, ಮನೆಗೆ ಹೋಗುವಂತಾಯಿತು. ಮಗ ಬಿಲ್ಲು ಪಾವತಿಸಿ ಬಂದಾಗ 'ನಿನ್ನ ಪುಣ್ಯದಿಂದ ನಿನ್ನಪ್ಪ ಬದುಕಿದ' ಎಂದು ವೆಂಕಟಾಚಲ ಹೇಳಿದರು. ಅದಕ್ಕವನು, "ನೇನು ಕಾದು. ಚಿಂತಮಾನು ಪುಣ್ಯಾನ" (ನಾನಲ್ಲ. ಹುಣಿಸೆಮರದ ಪುಣ್ಯದಿಂದ) ಅಂದ.
ನಮ್ಮಿಬ್ಬರಿಗೂ ಅರ್ಥವಾಗಲಿಲ್ಲ. ಇದರಲ್ಲಿ ಹುಣಿಸೆಮರದ ಪುಣ್ಯವೇನು? ಎಲ್ಲಿಂದೆಲ್ಲಿಯ ಸಂಬಂಧ ಅನ್ನುವ ಪ್ರಶ್ನೆ ನಮ್ಮಲ್ಲಿ ಹುಟ್ಟಿತು. 'ಬೆಟ್ಟದ ನೆಲ್ಲಿಕಾಯಿಗೂ, ಸಮುದ್ರದ ಉಪ್ಪಿಗೂ' ಇರುವಂತಹ ಸಂಬಂಧವೇನಾದರೂ ಇದ್ದೀತೆ?
ಹಳ್ಳಿ ರೋಗಿಗಳೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಚಿಕಿತ್ಸೆ ನೀಡುವ ಗುಣ ಬೆಳಿಸಿಕೊಂಡಿರುವ ವೆಂಕಟಾಚಲ, ಇಂತಹ ಸಂದರ್ಭ ಬಂದಾಗ ಅದರ ಹಿನ್ನೆಲೆ ತಿಳಿಯುವ ಸ್ವಭಾವದವರು. ಇದು ಅವರ ವೈದ್ಯ ವೃತ್ತಿಯ ಯಶಸ್ಸೂ ಆಗಿತ್ತು. ಆಗ ಅಲ್ಲಿ ಅವರಿಗೆ ನೋಡುವ ರೋಗಿಗಳು ಇರಲಿಲ್ಲ. ನನಗೆ ಬೇರೆ ಕೆಲಸವಿರಲಿಲ್ಲ. ಆ ಮಾತಿನ ಒಳಮರ್ಮ ತಿಳಿಯಲು ಅವನನ್ನು ಕೂರಿಸಿಕೊಂಡೆವು. ಆತ ಯಾವ ಸಂಕೋಚ, ಮುಜುಗರವೂ ಇಲ್ಲದೆ ತಂದೆಯ ಪರಿಸ್ಥಿತಿಯನ್ನು ತೆರೆದಿಟ್ಟ.
ಈ ಹಿಂದೆ ಚಿಕಿತ್ಸೆಯ ಮಧ್ಯೆ ಮನೆಗೆ ಹೋಗಲು ಕಾರಣ ಕೈಯಲ್ಲಿ ಹಣವಿಲ್ಲದ್ದು. ಹಾಗೆಂದು ಹೇಳಲು ಮರ್ಯಾದೆ ಅಡ್ಡಬಂದಿತ್ತು. ಸ್ನಾನ ಮಾಡಿ ಬರುವೆ ಎಂದುದು ಒಂದು ಕುಂಟು ನೆಪವಾಗಿತ್ತು.
ಮುನಿವೆಂಕಟಪ್ಪ ತನ್ನ ಜಮೀನಿನಲ್ಲಿ ಐದು ಹುಣಿಸೆ ಗಿಡ ನೆಟ್ಟಿದ್ದರು ಅವು ಮರಗಳಾಗಿ ಫಸಲು ಕೊಡುತ್ತಿದ್ದವು. ಆಸ್ಪತ್ರೆಯಿಂದ ಹೋದ ಮೇಲೆ ಮರದ ಮೇಲೆಯೇ ಕಾಯಿ ಕೊಳ್ಳುವವರು ಬಂದಾಗ ಮಾರಿದ್ದರು. ಆ ಹಣವನ್ನೇ ಈಗ ಆಸ್ಪತ್ರೆಗೆ ಪಾವತಿಸಿದ್ದು ಎಂದು ಮಗ ಹೇಳಿದ.
ನಮ್ಮ ಮಾತುಗಳನ್ನು ಕೇಳಿಸಿಕೊಂಡು ಕುಳಿತಿದ್ದ ಮುನಿವೆಂಕಟಪ್ಪ, "ಇಟ್ಲನಿ ತೆಲಿಸಿಂಟೇ ಯಾಬೈ ಚೆಟ್ಲು ಪೆಟ್ಟೇವಾಣ್ಣಿ" (ಹೀಗೆಂದು ತಿಳಿದಿದ್ದರೆ ಐವತ್ತು ಗಿಡಗಳನ್ನು ನೆಡುತ್ತಿದ್ದೆ) ಎಂದರು. ಇದು ಆ ಸಂದರ್ಭದ ಮಾತಾಗಿದ್ದರೂ ಭವಿಷ್ಯಕ್ಕೆ ಅಗತ್ಯವಾದ ಮಾತಾಗಿತ್ತು. ಒಬ್ಬರ ಅನುಭವ ಇತರರಿಗೆ ಪಾಠವಾಗುವ ಪರಿಯಿದು.












Click it and Unblock the Notifications