ಒಂದು ಗೌರವ ಡಾಕ್ಟರೇಟ್ ಪದವಿ ಕುರಿತು...

ವಿಶ್ವ ಮೊದಲಿನಿಂದಲೂ ಒಳ್ಳೆಯ ವಿದ್ಯಾರ್ಥಿ. ಅವನು ಬಿಎಸ್ಸಿ ಮಾಡಿ, ಭೂಗರ್ಭಶಾಸ್ತ್ರದಲ್ಲಿ ಎಂಎಸ್ಸಿ ಮಾಡಿ ಮತ್ತೆ ಪತ್ರಿಕೋದ್ಯಮದಲ್ಲಿ ಎಂಎ ಮಾಡಿದ. ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಅವನು ನನಗೆ ಗೊತ್ತು. ಪತ್ರಿಕೋದ್ಯಮದಲ್ಲಿ ಅವನು ನಾಲ್ಕು ಚಿನ್ನದ ಪದಕ ತಂದುಕೊಂಡ. ಮುಂದೆ ಇಂಗ್ಲೆಂಡಿಗೆ ಹೋಗಿ ಮತ್ತೊಂದು ಪದವಿ ಪಡೆದು ಬಂದ. ಏಷಿಯನ್ ಕಾಲೇಜ್ ಆಪ್ ಜರ್ನಲಿಸಂನಲ್ಲಿ ಅಧ್ಯಾಪಕನಾಗಿದ್ದ. ಅವನು 'ವಿಜಯ ಕರ್ನಾಟಕ'ವನ್ನು ಕಟ್ಟಿ ಬೆಳೆಸಿದ ರೀತಿ ವಿದಿತವಾದದ್ದೇ. ಇವತ್ತಿಗೂ ವಿಶ್ವ ನಿರಂತರವಾಗಿ ಬರೆಯುತ್ತಿದ್ದಾನೆ. ಸುಮಾರು ನಲವತ್ತೈದು ಪುಸ್ತಕಗಳು ಪ್ರಕಟವಾಗಿವೆ. ಅಂಥವನಿಗೆ, ಅವನೇ ಓದಿದ ವಿಶ್ವವಿದ್ಯಾಲಯವೊಂದು ಕರೆದು ಗೌರವ ಡಾಕ್ಟರೇಟ್ ನೀಡಿದರೆ ಅದರಲ್ಲಿ ಆಭಾಸವಾಗುವಂತಹುದೇನಿದೆ?
ನನ್ನ ಪ್ರಕಾರ ಪ್ರಶಸ್ತಿ, ಸನ್ಮಾನ, ಗೌರವ ಡಾಕ್ಟರೇಟ್ ಮುಂತಾದವುಗಳು ಚಿಕ್ಕ ವಯಸ್ಸಿನ ಪ್ರತಿಭಾವಂತರಿಗೆ ಸಂದಾಯವಾಗಬೇಕು. ಉದಾಹರಣೆಗೆ, ನಮ್ಮ ಸರ್ಕಾರ ಕೊಡುವ ಪತ್ರಿಕೋದ್ಯಮಿಗಳಿಗೇ ಮೀಸಲಾದ ಟಿಯೆಸ್ಸಾರ್ ಪ್ರಶಸ್ತಿಯನ್ನೇ ತೆಗೆದುಕೊಳ್ಳಿ. ಎಂಥ ಹಣ್ಣುಹಣ್ಣು ಮುದುಕರಿಗೆ ಕೊಡುತ್ತಾರೆಂದರೆ, ಅವರು ನಿವೃತ್ತರಾಗಿಯೇ ಐವತ್ತು ವರ್ಷಗಳಾಗಿರುತ್ತವೆ! ಈಗಿನ ತಲೆಮಾರಿನವರು ಅವರ ಹೆಸರನ್ನೇ ಕೇಳಿರುವುದಿಲ್ಲ. ಅದರ ಬದಲಿಗೆ ಸಕ್ರಿಯರಾಗಿರುವ, ವ್ಯಾಪಕವಾಗಿ ಓದುಗರನ್ನು ಹೊಂದಿರುವ, ತುಂಬ ಕೆಲಸ ಮಾಡುವ, ಜನಪರವಾಗಿ ದನಿಯೆತ್ತುವ, ರಾಜಿ ಮಾಡಿಕೊಳ್ಳದ ಪತ್ರಕರ್ತನೊಬ್ಬನಿಗೆ ಕೊಟ್ಟರೆ ಅವನು ಉಳಿದವರಿಗೆ ಮಾದರಿಯಾಗುತ್ತಾನೆ. Living example ಆಗಿ ಕಣ್ಣೆದುರಿಗಿರುತ್ತಾನೆ. ಹೊಸ ತಲೆಮಾರಿನ ಹುಡುಗ ಹುಡುಗಿಯರಿಗೆ ಪ್ರೇರಕ ಶಸ್ತಿಯಾಗುತ್ತಾನೆ.
ಹಿಂದೆ ಇದೇ ಟಿಯೆಸ್ಸಾರ್ ಪ್ರಶಸ್ತಿಯನ್ನು ಲಂಕೇಶರಿಗೆ ಕೊಡಿ ಅಥವಾ ವೈಎನ್ಕೆ ಅವರಿಗೆ ಕೊಡಿ, ಇಬ್ಬರಿಗೂ ಬೇಕಾದರೆ ಅದನ್ನು ಹಂಚಿಕೊಡಿ ಅಂತ ನಾನು ಮತ್ತು ಡಿಆರ್ ನಾಗರಾಜ್ ವಾದಿಸಿದ್ದೆವು. ನಮ್ಮಂಥವರ ವಾದಗಳು ಸರ್ಕಾರದ ಕಿವಿಗೆಲ್ಲಿ ಬೀಳುತ್ತವೆ? ಯಾರೋ ಹೆಸರು ಕೂಡ ಕೇಳಿರದ ಅನಾಮಧೇಯ, ಗತಕಾಲದ ವೃದ್ಧರಿಗೆ ಅದನ್ನು ಕೊಟ್ಟು ಕೈತೊಳೆದುಕೊಂಡವು ಸರ್ಕಾರಗಳು. ಕಡೆಗೂ ಅಂಥದೊಂದು ಪ್ರತಿಷ್ಠಿತ ಪ್ರಶಸ್ತಿ ಪಡೆಯದೇನೇ ಲಂಕೇಶ್ ಮತ್ತು ವೈಎನ್ಕೆ ತೀರಿಕೊಂಡರು. ಅದರಿಂದ ಅವರಿಗೇನೂ ನಷ್ಟವಾಗಲಿಲ್ಲ, ಪ್ರಶಸ್ತಿ ಅರ್ಥ ಕಳೆದುಕೊಂಡಿತು.
ಹೀಗಾಗಿ, ನಾನು ಜೊಯಿಡಾದಿಂದ ಬಂದವನೇ ವಿಶ್ವನಿಗೆ ಫೋನು ಮಾಡಿ ಅಭಿನಂದಿಸಿದೆ. ಆದರೆ ಅಷ್ಟು ಹೊತ್ತಿಗಾಗಲೇ ಅಪಸ್ವರ ಆರಂಭವಾಗಿತ್ತು. ರಾಜ್ಯಪಾಲರಿಗೆ ಯಾರೋ ದೂರು ಕೊಟ್ಟಿದ್ದಾರಂತೆ. ವಿಶ್ವ ಬಲಪಂಥೀಯನೆಂಬ ಆಪಾದನೆಯಂತೆ. ನಾನು ಅಭ್ಯಸಿಸಿದ ಹಾಗೆ ವಿಶ್ವ ಅಂಥ ಕಟ್ಟರ್ ಬಲಪಂಥೀಯನಲ್ಲ, ಆರೆಸ್ಸಿಸಿಗನಲ್ಲ. ಇದೇ ಯಡಿಯೂರಪ್ಪನವರ ಸರ್ಕಾರವನ್ನು ಹಿಗ್ಗಾಮುಗ್ಗಾ ತನ್ನ ವರದಿಗಳಲ್ಲಿ, ಸಂಪಾದಕೀಯಗಳಲ್ಲಿ ಝಾಡಿಸಿದ್ದಾನೆ. ಅಷ್ಟು ಆತ್ಮೀಯರಾದ ಅನಂತಕುಮಾರ್ ಕೂಡ ಭಟ್ಟರ ಕಟು ಟೀಕೆಗೆ ಒಳಗಾಗಿದ್ದಾರೆ. ಪ್ರತಾಪ್ ಸಿಂಹನಂಥ right wing ಬರಹಗಾರನಿಗೆ ಅಂಕಣ ಕೊಟ್ಟ ಮಾತ್ರಕ್ಕೆ ವಿಶ್ವನನ್ನು ಬಲಪಂಥೀಯನೆನ್ನಲು ಸಾಧ್ಯವಿಲ್ಲ. ಅಲ್ಲದೆ, ಒಂದು ಸಿದ್ಧಾಂತಕ್ಕೆ ಜೋತುಬಿದ್ದು ಸರ್ವಸಮ್ಮತವಾದ ಒಂದು ದಿನಪತ್ರಿಕೆಯನ್ನು ನಡೆಸಲಾಗುವುದಿಲ್ಲ.
ಹಾಗೊಂದು ವೇಳೆ ಬಲಪಂಥೀಯ(?)ನಾದ ವಿಶ್ವನಿಗೆ ಗೌರವ ಡಾಕ್ಟರೇಟ್ ಕೊಡಬಾರದು ಎಂಬುದೇ ಆದರೆ, ಎಸ್ಎಲ್ ಭೈರಪ್ಪನವರಿನ್ನೇನು? ಅವರು ಅನುಮಾನಾತೀತವಾಗಿಯೂ ಬಲಪಂಥೀಯರು. ನಿಜ, ಅವರು ವಿಶ್ವನಿಗಿಂತ ದೊಡ್ಡವರು. ಹೆಚ್ಚು ಕೆಲಸ ಮಾಡಿದವರು. ಅ ಅಲ್ಲದೆ ಈ ನಾಡು ಕಂಡ ಅಪ್ರತಿಮ ಗದ್ಯ ಲೇಖಕರಲ್ಲಿ ಒಬ್ಬರು. ಅವರಿಗೆ ತಾವೇ ದುಡಿದುಕೊಂಡ ಡಾಕ್ಟರೇಟ್ ಯಾವಾಗಿನಿಂದಲೋ ಇದೆ. ಆದರೂ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯ ಪುರಸ್ಕರಿಸಿದ್ದು ಸಮರ್ಥನೀಯ. ಭೈರಪ್ಪನವರ ಕ್ರಿಯಾಶೀಲತೆಗೆ ಸಂದ ಗೌರವ. ಆದರೆ ವಿಶ್ವೇಶ್ವರ ಭಟ್ಟರ ಬಗ್ಗೆ ತಕರಾರು ತೆಗೆದದ್ದು ಏಕೆ?
ಹಾಗೊಂದು ತಕರಾರು ಅಥವಾ ಸಣ್ಣ ಅಪಸ್ವರ ಶುರುವಾಯಿತು ಎಂಬುದು ಗೊತ್ತಾದ ತಕ್ಷಣ ಈ ಹುಡುಗ ವಿಶ್ವ ಎಷ್ಟು ಸೆನ್ಸಿಟಿವ್ ಆಗಿಬಿಟ್ಟನೆಂದರೆ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಸೈದೂಪೂರ್ ಅವರಿಗೆ ಫ್ಯಾಕ್ಸ್ ಕಳಿಸಿಯೇಬಿಟ್ಟ. ನಾನು ಡಾಕ್ಟರೇಟ್ ಒಲ್ಲೆ! 'ಅದೆಂಥ ಕೆಲಸ ಮಾಡಿಬಿಟ್ಟೆ ವಿಶ್ವ' ಅಂದೆ. "ಇಲ್ಲ ಅಣ್ಣಾ, ಹಿಂದೆ ಯಡಿಯೂರಪ್ಪ ಅಮೆರಿಕಕ್ಕೆ ಹೋಗಿ ಗೌರವ ಡಾಕ್ಟರೇಟ್ ಪಡೆದಾಗ ನಾನೇ ಟೀಕಿಸಿ ಬರೆದಿದ್ದೆ. ಈಗ ನಾನೇ ಹೋಗಿ ಇನ್ನೊಂದು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದು ಬಂದರೆ ಹೇಗೆ? ಓದುಗರಿಗೆ ಯಾವ ಸಂದೇಶ ಕೊಟ್ಟಂತಾಗುತ್ತದೆ? ಅದಕ್ಕಾಗಿ ಒಲ್ಲೆ ಅಂದೆ" ಅಂದ. ಅವನ ಬಗ್ಗೆ ಹೆಮ್ಮೆಯನ್ನಿಸಿತು.
ತಮಾಷೆಯ ಮತ್ತು ಇಂಟರೆಸ್ಟಿಂಗ್ ಆದ ಸಂಗತಿಯೆಂದರೆ, ನಾನು ಮತ್ತು ವಿಶ್ವ ಇಬ್ಬರೂ ಡಾಕ್ಟರೇಟ್ ಪದವಿ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದು. ಆದರೆ, ಗೌರವ ಡಾಕ್ಟರೇಟುಗಳಲ್ಲ. ನಾವಿಬ್ಬರೂ ಅದೇ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಾಗಿ ನಮ್ಮ ಹೆಸರುಗಳನ್ನು ನೋಂದಾಯಿಸಲಿಕ್ಕೆ ಎಲ್ಲ ದೃಷ್ಟಿಯಿಂದ ಅರ್ಹರು. ಶ್ರದ್ಧೆಯಿಂದ ಕೆಲಸ ಮಾಡುವುದು ಇಬ್ಬರಿಂದಲೂ ಸಾಧ್ಯ ಮತ್ತು ಆ ಚಟ ಇಬ್ಬರಿಗೂ ಇದೆ. ಕೊಂಚ ಆಸಕ್ತಿ ವಹಿಸಿದರೆ ಒಳ್ಳೆಯ ಪ್ರೊಫೆಸರು ಗೈಡ್ ಗಳಾಗಿ ಸಿಗುತ್ತಾರೆ. ಅದ್ಭುತವಾದ ಎರಡು ವಿಷಯಗಳನ್ನು ಆಯ್ದುಕೊಂಡು ಮೂರು ವರ್ಷ ಗಂಭೀರವಾಗಿ ಕೆಲಸ ಮಾಡಿ ಪ್ರೌಢ ಪ್ರಬಂಧ ಮಂಡಿಸಿ ಯಾರ ಮರ್ಜಿ ಮುಲಾಜುಗಳೂ ಇಲ್ಲದೆ ರಾಜಾರೋಷವಾಗಿ ಡಾಕ್ಟರೇಟ್ ಪದವಿ ಪಡೆಯಬಹುದು. ಆ ನಂತರ ಆ ಪ್ರಬಂಧಗಳನ್ನು ಪ್ರಕಟಿಸಲೂಬಹುದು. ಅದರಲ್ಲಿ ಸಿಗುವ ನೆಮ್ಮದಿ ಮತ್ತು ಸಂತೋಷ ಈ ಗೌರವ ಡಾಕ್ಟರೇಟಿನಲ್ಲಿ ಎಲ್ಲಿದೆ?
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications