ಜಗ್ಗಿಗೆ ಮಂಗಳಾರತಿ ಮಾಡಿದ್ರಂತೆ ಅಂಬಿ

Jaggesh
ನಂಬಿ ಮತ ಕೊಟ್ಟ ತುರುವೇಕೆರೆಯ ಮತದಾರರಿಗೆ ಮೂರು ಮತ್ತೊಂದು ದಿನದಲ್ಲಿ ಕೈಕೊಟ್ಟ ಶತರಸ ನಾಯಕ ಜಗ್ಗೇಶ್ ಮೂನ್ನೆ ಮಂಡ್ಯದ ಗಂಡು ಅಂಬರೀಷ್ ಕೈಲಿ ಚೆನ್ನಾಗಿ ತಾಡಿಸಿಕೊಂಡು ಬಂದಿದ್ದಾರೆ.

ಕಳೆದ ಚುನಾವಣೆಯ ಸಂದರ್ಭದಲ್ಲಿ ಜಗ್ಗೇಶ್‌ಗೆ ಟಿಕೆಟ್ ಕೊಡುವ ಪ್ರಶ್ನೆ ಬಂದಾಗ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇರವಾಗಿಯೇ ತಕರಾರು ಎತ್ತಿದ್ದಾರೆ. ಈ ಜೋಕರ್‌ಗೆ ಟಿಕೆಟು ಕೊಟ್ಟರೆ ಪಕ್ಷಕ್ಕೆ ಗೌರವ ತರದಿಲ್ಲ ಕಣ್ರಿ ಅಂತ ಹೈಕಮಾಂಡ್ ನಾಯಕರಿಗೆ ಹೇಳಿದ್ದರು. ಆದರೆ ಯಾವಾಗ ತಮಗೆ ಟಿಕೆಟ್ ಕೊಡುವುದಿಲ್ಲ ಅಂತ ಗೊತ್ತಾಯಿತೋ, ಆವತ್ತು ತುರುವೇಕೆರೆಯಿಂದ ಬೀದಿಯಲ್ಲಿ ಗೊಳೋ ಅಂತ ಅಳುತ್ತಾ ರಂಪ ರಾದ್ಧಾಂತ ಎಬ್ಬಿಸಿದ ಜಗ್ಗೇಶಿಯ ಕೈ ಹಿಡಿದವರು ಎಸ್ಎಂ ಕೃಷ್ಣ.

ಪೃಥ್ವೀರಾಜ್ ಚೌಹಾಣ್‌ರಿಂದ ಹಿಡಿದು ಎಲ್ಲರಿಗೂ ಫೋನಾಯಿಸಿ ತಲೆ ತಿಂದ ಕೃಷ್ಣ, ಜಗ್ಗೇಶ್ ಎಂಥಾ ಪ್ರಾಮಿಸಿಂಗ್ ಲೀಡರು ಗೊತ್ತೇನ್ರಿ? ಅವರಿಗೆ ಟಿಕೆಟ್ ಕೊಡಲೇಬೇಕು ಅಂತ ಪಟ್ಟು ಹಿಡಿದು ಯಶಸ್ವಿಯಾದರು. ಹೀಗೆ ಟಿಕೆಟ್ ಪಡೆದು ಗೆದ್ದ ಜಗ್ಗೇಶ್ ಕೆಲವೇ ದಿನಗಳಲ್ಲಿ ತುರುವೇಕೆರೆಯ ಜನರ ಮಾನ ಕಳೆಯುವಂತೆ ವರ್ತಿಸಿ ಬಿಜೆಪಿಗೆ ಸೇರಿದರು.

ಅವರಿಗೀಗ ಅದೇ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಧೈರ್ಯ ಇಲ್ಲ. ಹೀಗಾಗಿ ತಮ್ಮ ಪತ್ನಿಗೆ ಟಿಕೆಟ್ ಕೊಡಿ ಅಂತ ಸಿಎಂ ಯಡ್ಡಿಯನ್ನು ಗೋಗರೆದರು. ಆದರೆ ತುರುವೇಕೆರೆಯಲ್ಲಿ ಜಗ್ಗೇಶ್‌ಗೆ ಮಾರ್ಯಾದೆ ಹುಟ್ಟುವುದು ಕಷ್ಟ ಎಂಬುದನ್ನು ಅರ್ಥ ಮಾಡಿಕೊಂಡಿರುವ ಮುಖ್ಯಮಂತ್ರಿ ಯಡ್ಡಿ, ನೀನು ನಿಂತರೆ ಕಷ್ಟ ಕಣಪ್ಪ. ಹೀಗಾಗಿ ಎಂಡಿ ಲಕ್ಷ್ಮಿನಾರಾಯಣ್‌ಗೆ ಟಿಕೆಟ್ ಕೊಡಾಣ ಅಂದುಬಿಟ್ಟರು. ಯಾವಾಗ ಸಿಎಂ ಈ ಮಾತನ್ನು ಉದುರಿಸಿದರೋ ಜಗ್ಗೇಶ್ ಕಂಗಾಲಾಗಿ ಹೋಗಿದ್ದಾರೆ.

Ambarish
ಒಂದು ವೇಳೆ ಯಡಿಯೂರಪ್ಪ ಹೇಳಿದಂತೆ ಲಕ್ಷ್ಮಿನಾರಾಯಣ್‌ಗೆ ಟಿಕೆಟ್ ಸಿಕ್ಕಿದರೆ ನಾಳೆ ತುರವೇಕೆರೆ ಕ್ಷೇತ್ರದಲ್ಲಿ ಠಿಕಾಣಿ ಹಾಕುವುದು ಕಷ್ಟ ಅನ್ನುವುದು ಅವರ ಧಾವಂತ. ಇಂತಹ ಧಾವಂತದಲ್ಲಿರುವಾಗಲೇ ಜಗ್ಗಿಗೆ ಜ್ಞಾಪಕ ಶಕ್ತಿ ಬಂದಿದ್ದು ನಟ ಅಂಬರೀಷ್. ಬ್ಯಾಡ ಅಂತ ಎಲ್ಲ ಬಡಕೊಂಡರೂ ಕೇಳದೇ ಡಿಸಿಎಂ ಆಯ್ತೀನಿ ಅಂತ ಶ್ರೀರಂಗಪಟ್ಟಣದಲ್ಲಿ ಎಲೆಕ್ಷನ್ನಿಗೆ ನಿಂತು ಸೋತವರು ಅಂಬಿ. ಇಂತಹ ಅಂಬಿಯನ್ನು ಕರೆತಂದು ತುರುವೇಕೆರೆಯಲ್ಲಿ ನಿಲ್ಲಿಸಿದರೆ ಹೇಗೇ ಅನ್ನುವ ಐಡಿಯಾ ಹೊಳೆದದ್ದೇ ತಡ, ಖುಷಿಯೆದ್ದು ಹೋದ ಜಗ್ಗೇಶಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಬಹುದು ಅಂತ ಯೋಚಿಸಿದರು.

ಯಾಕೆಂದರೆ, ಅಂಬಿಯನ್ನು ಕಣಕ್ಕಿಳಿಸಿದರೆ, ಬಿಜೆಪಿ ವೇವ್‌ನಲ್ಲಿ ಅವರು ಗೆದ್ದುಬಿಡಬಹುದು. ಆದರೆ ಗೆದ್ದು ಬರುವ ಅಂಬಿ ಕ್ಷೇತ್ರದ ಕಡೆಗೆ ತಿರುಗಿ ನೋಡುವುದು ಕಷ್ಟ. ಕೇಂದ್ರ ಸಚಿವರಾಗಿ ತಮ್ಮ ಆಫೀಸನ್ನೇ ಸರಿಯಾಗಿ ನೋಡದೇ ದಿಲ್ಲಿಯಿಂದ ವಾಪಸ್ಸು ಬಂದವರು ಅಂಬಿ. ಇನ್ನು ಇಲ್ಲಿ ಗೆದ್ದರೆ ತುರುವೇಕೆರೆಗೆ ಹೋಗುತ್ತಾರಾ? ಆದ್ದರಿಂದ ಅವರು ಗೆದ್ದರೂ ತುರುವೇಕೆರೆಯಲ್ಲಿ ತಮ್ಮ ವರ್ಚಸ್ಸು ಬೆಳೆಸಿಕೊಳ್ಳಲು ಟ್ರೈ ಮಾಡಬಹುದು ಎಂಬ ಲೆಕ್ಕಾಚಾರಕ್ಕೆ ಬಂದ ಜಗ್ಗೇಶಿ ಸೀದಾ ಸಾರಿಗೆ ಮಂತ್ರಿ ಆಶೋಕ್ ಹತ್ತಿರ ಹೋದವರೇ, ಅಣ್ಣ ಬರ್ರಣ್ಣ, ತುರುವೇಕೆರೆ ನಿಲ್ಲಿ ಅಂತ ಅಂಬರೀಷ್ ಅವರ ಮನವೊಲಿಸೋಣ ಎಂದರು.

ಅಂದ ಹಾಗೆ ಅಶೋಕ್‌ಗೂ ಒಂದು ಲೆಕ್ಕಾಚಾರವಿತ್ತು. ಅದೆಂದರೆ ಮದ್ದೂರಿನ ಕಣದಲ್ಲಿ ಅಂಬರೀಷ್ ಅವರನ್ನು ನಿಲ್ಲಿಸುವುದು. ಹೀಗಾಗಿ ಜಗ್ಗೇಶ್ ಜತೆಗೂಡಿ ಅವರೂ ಅಂಬಿಯನ್ನು ಭೇಟಿ ಮಾಡಿದ್ದಾರೆ. ಹೋಗಿ ಭೇಟಿ ಮಾಡುತ್ತಿದ್ದಂತೆಯೇ ಅಂಬಿಯ ಗುಣಗಾನಕ್ಕಿಳಿದ ಜಗ್ಗೇಶ್, ನೀವು ಹೀಗೆ ಕುಂತ್ಕಳದು ಇಷ್ಟ ಆಗಲ್ಲ ಕಣಣ್ಣ. ಸುಮ್ನೆ ನಿಲ್ತೀರಿ ಅಂದ್ರೆ ಯಡಿಯೂರಪ್ಪ ಒಪ್ತಾರೆ. ನಿಮಗೆ ಒಂದು ಮತ ಕೊಡ್ಸದು ನನ್ನ ಜವಾಬ್ದಾರಿ ಅಂತ ಪೇಡಿದ್ದಾರೆ. ಜಗ್ಗೇಶಿಯ ಪ್ರಪೋಸಲ್ಲು ಕೇಳುತ್ತಲೇ ಸಿರ್ರ್ ಅಂತ ರೇಗಿರುವ ಅಂಬರೀಷ್, ಮಾಡಕ್ಕೆ ಬೇರೆ ಕೆಲಸ ಇಲ್ಲವೇನಪ್ಪಾ ಜಗ್ಗೇಶು, ನಂಗೆ ಜನರ ಸಹವಾಸವೇ ಸಾಕಾಗಿ ಹೋಗಿದೆ ಸುಮ್ನೆ ನಡಿ ಅಂದಿದ್ದಾರೆ.

ಇಷ್ಟಾದರೂ ಬಿಡದ ಜಗ್ಗೇಶ್, ನೀವು ಸುಮ್ನೆ ಎಲೆಕ್ಷನ್‌ಗೆ ನಿಂತ್ಕಳಿ, ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ದು, ಹೇಗಿದ್ರೂ ತುರುವೇಕೆರೆ ಜನರಿಗೆ ನೀವು ಅಂದ್ರೆ ಇಷ್ಟ. ಗೆದ್ದು ಬಂದ ಮೇಲೆ ನಿಮ್ಮ ಇಷ್ಟ ಬಂದಂಗೆ ಇರಿ. ಕ್ಷೇತ್ರದ ಕೆಲಸ ನಾನು ಮಾಡ್ತೀನಿ ಅಂದಿದ್ದಾರೆ. ಅದೆಲ್ಲಿತ್ತೂ ಅಂಬಿಯ ಸಿಟ್ಟು? ತಕ್ಷಣವೇ ಮೇಲೆದ್ದಿದೆ, "ಹೋಗಪ್ಪೋ ನೀನು ಮಾಡಿರೋ ಕೆಲಸ ನೋಡಿಯೇ ಜನರಿಗೆ ಫಿಲ್ಮ್ ಆಕ್ಟರ್‌ಗಳ ಮೇಲೆ ನಂಬಿಕೆ ಹೋಗಿದೆ. ನಾನು ಬೇರೆ ಶ್ರೀರಂಗಪಟ್ಟಣದಿಂದ ನಿಂತು ಸೋತಾಗಿದೆ. ಇನ್ನು ಪದೇಪದೆ ಈ ಕೆಲಸಾನೇ ಮಾಡ್ತಾ ನಿಂತರೆ ಮರ್ಯಾದೆ ಇರಲ್ಲ ಹೋಗಪ್ಪೋ" ಅಂತ ತಾಡಿಸಿದ್ದಾರೆ. ಹೀಗೆ ಅಂಬಿ ಕೈಲಿ ತಾಡಿಸಿಕೊಂಡು ಬಂದ ಜಗ್ಗೇಶ್‌ಗೀಗ ತುರುವೇಕೆರೆಯಲ್ಲಿ ಲಕ್ಷ್ಮಿ ನಾರಾಯಣ ನಿಲ್ಲದಂತೆ ಮಾಡುವುದು ಹೇಗೆಂಬುದೇ ಚಿಂತೆ. ಪಾಪ, ಮತದಾರರಿಗೆ ಕೈಕೊಟ್ಟ ಪಾಪಕ್ಕೆ ಚಿಂತೆ ಮಾಡದಿದ್ದರೆ ಹೇಗೆ?

(ಸ್ನೇಹಸೇತು : ಹಾಯ್ ಬೆಂಗಳೂರು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+