ಹೂವ ತರುವವರ ಮನೆಗೆ ಹುಲ್ಲ ತರುವ ಮಣಿ
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯತನಹಳ್ಳಿ ಎಂಬ ಪುಟ್ಟ ಊರಿಂದ ಬಂದವರು ಅಂಕಣಕಾರ ಎ.ಆರ್. ಮಣಿಕಾಂತ್. ಮಂಡ್ಯದ ಪಿ.ಇ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಟೊಮೊಬೈಲ್ ಎಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಬೆಂಗಳೂರಿನ ಐದಾರು ಫ್ಯಾಕ್ಟರಿಗಳಲ್ಲಿ ದುಡಿದದ್ದು ಈಗ ಹಳೆಯ ಕಥೆ.
ಓದಿದ್ದು ಎಂಜಿನಿಯರಿಂಗ್ ನಿಜ. ಆದರೆ ಒಲಿದದ್ದು ಪತ್ರಿಕೋದ್ಯಮ. ಮೊದಲು 'ಹಾಯ್ ಬೆಂಗಳೂರ್", ನಂತರ 'ಸಂಯುಕ್ತ ಕರ್ನಾಟಕ"ದಲ್ಲಿ ಕೆಲಸ. ಕಳೆದ ಎಂಟು ವರ್ಷಗಳಿಂದ 'ವಿಜಯ ಕರ್ನಾಟಕ"ದಲ್ಲಿದ್ದಾರೆ. 'ಈ ಗುಲಾಬಿಯು ನಿನಗಾಗಿ", 'ಮರೆಯಲಿ ಹ್ಯಾಂಗ", 'ಉಭಯ ಕುಶಲೋಪರಿ ಸಾಂಪ್ರತ" ಹಾಗೂ 'ಹಾಡು ಹುಟ್ಟಿದ ಸಮಯ" ಇವು ಮಣಿಕಾಂತ್ ಬರೆಯುತ್ತಿರುವ ಜನಪ್ರಿಯ ಅಂಕಣಗಳು. ಒಂದು ಮ್ಯಾಗಜಿನ್ನಲ್ಲಿ ಹೇಳಬಹುದಾದ ಸಂಗತಿಗಳನ್ನು 'ವಿಜಯ ಕರ್ನಾಟಕ"ದ ಬೆಂಗಳೂರು ಆವೃತ್ತಿಯೊಂದಿಗೆ ಬರುವ 'ಸಿಂಪ್ಲಿಸಿಟಿ ಪೇಜ್"ನಲ್ಲಿ ಹೇಳುತ್ತಾರೆಂಬುದು; ಕಳೆದ ಆರು ವರ್ಷಗಳಿಂದ ಚೂರೂ ರುಚಿ ಕೆಡದಂತೆ ಆ ಪೇಜ್ನ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆಂಬುದು ಸಂತೋಷದ ವಿಚಾರ.
ಮಣಿಕಾಂತ್ ಯಶಸ್ಸಿನ ಹಿಂದೆ ಅವರ ಬರಹಗಳಲ್ಲಿರುವ ಮಾನವೀಯತೆಯ ಸೆಲೆ ಹಾಗೂ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಹಾರೈಕೆಯ ನೆರಳಿದೆ ಎಂಬುದು ಹೇಳಲೇಬೇಕಾದ ಮಾತು. ಈ ವಾರದಿಂದ 'ಉಭಯ ಕುಶಲೋಪರಿ ಸಾಂಪ್ರತ..." ನಿಮ್ಮೆದುರಿಗೆ.
ಮಣಿಕಾಂತ್ ಬರೆದ ಲೇಖನಗಳ ಕುರಿತು ನಿಮ್ಮ ಅನಿಸಿಕೆಗಳನ್ನು [email protected] ವಿಳಾಸಕ್ಕೆ ಕಳಿಸಿರಿ.