ಎಲ್ಲಿ ಹೋದವೋ ಅಚ್ಚರಿ ಮೂಡಿಸುತ್ತಿದ್ದ ಮಕ್ಕಳ ಪುಸ್ತಕಗಳು?
ಹೋದ ವಾರ ಕನ್ನಡ ಹೇಳಿಕೊಡುವ ಸಲುವಾಗಿ ಕ್ಯಾಬಿನಲ್ಲಿ ಕನಕಪುರಕ್ಕೆ ಹೋಗುತ್ತಿದ್ದೆ. ಆಗ ಕ್ಯಾಬಿನ ಚಾಲಕ ನಾ ಪುಸ್ತಕದೊಳಗೆ ಮುಳುಗಿದ್ದನ್ನು ಕಂಡು, ಸಿಕ್ಕಾಪಟ್ಟೆ ಪುಸ್ತಕ ಓದುವ ಹವ್ಯಾಸವಿರಬೇಕೆಂದುಕೊಂಡು ಯಾವ ಪುಸ್ತಕ ಅಂತೆಲ್ಲಾ ವಿಚಾರಿಸಿದ.
ನಂತರ, ಅವರ ಮಗಳಿಗೆ ಸಹ ಪುಸ್ತಕಗಳ ಹುಚ್ಚಿದೆ. ಆದರೆ ಮಗಳು ಇನ್ನೂ 10 ವರ್ಷದವಳು ಮನೆಯಲ್ಲಿ ಇರುವ ಹೆಣ್ಣುಮಕ್ಕಳ ಮಾಗಝೀನ್ ಎಲ್ಲಾ ಓದುತ್ತಾಳೆ. ಮಕ್ಕಳ ಪುಸ್ತಕ ಎಲ್ಲಿ ಸಿಗೋದು ಎಂದು ವಿಚಾರಿಸುತ್ತಿದ್ದರು. ಹಾಗೆ ನಾ ಚಿಕ್ಕವಳ್ಳಿದ್ದಾಗ ಯಾವ ಪುಸ್ತಕಗಳು ಓದುತ್ತಿದ್ದೆ ಎಂಬ ಪ್ರಶ್ನೆಯನ್ನ ಸಹ ಹಾಕಿದ್ದರು.
ಚಿಕ್ಕವಳ್ಳಿದ್ದಾಗ ಬಹಳ ಇಷ್ಟ ಪಟ್ಟು ಓದುತ್ತಿದ್ದದ್ದು ಅಮರ ಚಿತ್ರ ಕಥೆ. ಅದರಷ್ಟು ಇಷ್ಟವಾಗುತ್ತಿದ್ದದ್ದು ಎಲ್ಲವೂ. ಮೊದಲ ಬಾರಿಗೆ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಭಗತ್ ಸಿಂಗ್ ಬಗ್ಗೆ, ಶಿವಾಜಿ ಬಗ್ಗೆ, ಝಾನ್ಸಿ ರಾಣಿ ಬಗ್ಗೆ, ರಾಮಾಯಣ ಮಹಾಭಾರತದ ಬಗ್ಗೆ ಸಮಗ್ರವಾಗಿ ಓದಿದ್ದು ಅಲ್ಲಿಯೇ. ಇದು ಕನ್ನಡ ಇಂಗ್ಲಿಷ್ ಎರಡರಲ್ಲೂ ಬರುತ್ತಿತ್ತು. ಮನೆಯ ಹತ್ತಿರವಿದ್ದ ಲೈಬ್ರರಿಯಲ್ಲಿ ಕನ್ನಡದ ಅವತರಣಿಕೆ ಸಿಗುತ್ತಿತ್ತು ಶಾಲೆಯಲ್ಲಿ ಅದರದ್ದೇ ಇಂಗ್ಲಿಷ್ ಅವತರಣಿಕೆ. ಕನ್ನಡದ್ದೇ ಸುಲಭವಾಗುತ್ತಿತ್ತು ಓದೋಕೆ. ಪೌರಾಣಿಕ ಕಥೆಗಳೆಲ್ಲವೂ ತಾತನ ಕಥೆಗಳ ಜೊತೆ ಇದೊಂಥರಾ ಎಕ್ಸ್ಟ್ರಾ ಚೌಚೌ ಸಾರನ್ನದ ಜೊತೆ ಇದ್ದಂಗೆ.
ಜೀವನದ ಸಿದ್ಧಾಂತವೇ ಇರಲಿ, ಐಟಂ ಸಾಂಗೇ ಇರಲಿ, ಹಂಸಲೇಖರನ್ನ ಮೀರಿಸೋರಿಲ್ಲ!
ಅದೇ ಪುಸ್ತಕದ ಜೊತೆ ಟಿಂಕಲ್ ಸಹ ಸಿಗತ್ತೆ ಎಂದು ಗೆಳತಿ ಹೇಳಿದಾಗ ಓಡಿದ್ದು ಮನೆಯ ಹತ್ತಿರವಿದ್ದ ಅದೇ ಗ್ರಂಥಾಲಯಕ್ಕೆ. ಟಿಂಕಲ್ ನಲ್ಲಿ ಎಲ್ಲವೂ ಹೊಸದು. ಹೊಸ ಹೊಸ ಕಥೆಗಳು. ಶಿಖಾರಿ ಶಂಭು, ಸುಪ್ಪಾಂಡಿ, ಕಾಲಿಯಾ, ಡುಬ್ ಡುಬ್, ಚಮಟಕ, ರಾಮು ಮತ್ತು ಶಾಮು, ತಂತ್ರಿ ದ ಮಂತ್ರಿ, ನಸೀರುದ್ದೀನ್ ಹೂಜನ ಕಥೆಗಳು ಇವೆಲ್ಲಾ ಇನ್ನೂ ಮನಸಿನಲ್ಲೇ ಉಳಿದಿರುವ ಪಾತ್ರಗಳು.
ಸುಪ್ಪಾಂಡಿ ಅಂತೂ ಹೆಡ್ಡರಲ್ಲಿ ಹೆಡ್ಡ. ಅವನ ಕಥೆಗಳನ್ನ ಓದಿ ಬಿದ್ದು ನಕ್ಕಿದ್ದೆವು. ನಾನು ಮತ್ತು ನನ್ನ ಗೆಳತಿ ಖುಷಿಯಾಗಿ ಕ್ಲಾಸಿನ ಮಧ್ಯದಲ್ಲಿಯೂ ಪುಸ್ತಕವನ್ನ ಓದಿ ಟೀಚರ್ ಹತ್ತಿರ ಸಿಕ್ಕು ಹಾಕಿಕೊಂಡದ್ದು ಇದೆ. ಕಾಡಿನಲ್ಲಿ ಚಮಟಕ ಎಂಬ ನರಿ ವಿಪರೀತ ಮೋಸಗಾರ, ಡುಬ್ ಡುಬ್ ಎಂಬ ಮೊಸಳೆ, ಕಾಲಿಯಾ ಎಂಬ ಕಾಗೆ ಇರುವ ಕಥೆಯಂತೂ ಸಿಕ್ಕಾಪಟ್ಟೆ ಸ್ವಾರಸ್ಯಕರ. ಈಗಲೂ ಮೊಸಳೆಯನ್ನ ನೋಡಿದರೆ ಮೊದಲು ಡುಬ್ ಡುಬ್ ಮಾತ್ರವೇ ನೆನಪು ಬರೋದು. ಕಾಗೆ ಎಂಬ ಹೆಸರು ಮರೆಯುವಷ್ಟು ಕಾಲಿಯಾ ಎಂಬ ಹೆಸರೇ ಕರೆಯೋದು.
ಪ್ರತಿವಾರವೂ ತಂತ್ರಿ ಎಂಬ ಮಂತ್ರಿ ರಾಜನನ್ನ ಸಿಂಹಾಸನದಿಂದ ಓಡಿಸಿ ತಾನು ರಾಜನಾಗಬೇಕೆಂದು ಕಷ್ಟ ಪಡುವ, ಪ್ರತಿ ಬಾರಿಯೂ ಸೋಲುವ ಕಥೆಯನ್ನ ಓದಿದಾಗ, ಅರ್ಹತೆ ಇದ್ದರೆ ಮಾತ್ರ ನಮಗೆ ಸ್ಥಾನ ಮಾನ ಸಿಗುತ್ತದೆ ಎಂಬ ಸತ್ಯ ಅರಿವಾಗುತ್ತಾ ಹೋಗುತ್ತದೆ. ಶಿಖಾರಿ ಶಂಭು ಆಕಸ್ಮಿಕವಾಗಿ ಬೇಟೆಗಾರನಾಗುವವನು. ಎಲ್ಲವೂ ಅವನಿಗೆ ಲಕ್ಕಿನಲ್ಲಿಯೇ ಪ್ರಾಣಿಗಳು ಸಿಗೋದು, ಮತ್ತೆ ಅವನು ಹೀರೋ ಆಗೋದು. ಯಾವುದಕ್ಕೂ ಭಯ ಪಡದ ಅವನಿಗೆ ಭಯ ಬರೋದು ಹೆಂಡತಿಯನ್ನ ನೋಡಿದಾಗಲೇ. ಇದೆಲ್ಲ ಪಾತ್ರಗಳು ಮನಸ್ಸಲ್ಲಿ ಈಗಲೂ ಅಚ್ಚೊತ್ತಿದೆ. ಬಾರ್ಸಿಲೋನಾದಲ್ಲಿ ಯಾರೋ ಟಿಂಕಲ್ ಇಟ್ಟುಕೊಂಡು ಮೆಟ್ರೋಲಿ ಓಡಾಡುತ್ತಿದ್ದನ್ನು ಕಂಡು ಮಾತಾಡಿಸಿ ಅಲ್ಲಿನ ಗೆಳತಿಯ ಹತ್ತಿರ ಉಗಿಸಿಕೊಂಡಿದ್ದೆ. ಯಾರೋ ಏನೋ ನಿಂಗೇನೆ ಗೊತ್ತು ಎಂದು.
ಎಲ್ಲರ ಅಡುಗೆಮನೆಯ ಸಾರ್ವಭೌಮ ಅವಗೂದೆ ಯಾನೆ ಟೊಮೆಟೊ ಹಣ್ಣು!
ಇಂಗ್ಲಿಷಿನಲ್ಲೇ ಸುಮಾರು ಓದುತ್ತಿದ್ದರಿಂದ ಕನ್ನಡಕ್ಕೆ ಮಕ್ಕಳ ಮ್ಯಾಗಝೀನ್ ಅಂತ ನಮ್ಮ ಕಾಲಕ್ಕೆ ಓದಿದ್ದು ತುಂತುರುವನ್ನೇ. ಬಾಲಮಂಗಲವನ್ನ ಆಗಾಗ ಓದಿತ್ತಿದ್ದರೂ, ಚಂದಮಾಮದ ಬಗ್ಗೆ ಅಪ್ಪ ಅಮ್ಮ ಸುಮಾರು ಹೇಳಿದ್ದರೂ ತುಂತುರುವೇ ನನಗೆ ಸಿಕ್ಕಿದ್ದು ಓದೋಕೆ. ಅದರ ಪರಿವಿಡಿಯೇ ಇನ್ನೂ ಸ್ವಾರಸ್ಯ. "ತುಂತುರು - ಖಜಾನೆ ಒಳಗೇನಿದೆ" ಎಂಬುದೇ ಖುಷಿಕೊಡುವಂಥದ್ದು. ಹೊಸ ಹೊಸ ಕಥೆಗಳು, ಅಕ್ಬರ್ ಬೀರ್ಬಲ್ ಬಗ್ಗೆ, ನಮ್ಮ ಪುರಾಣದ ಬಗ್ಗೆ ಸುಮಾರು ವಿಷಯಗಳು ತಿಳಿದ್ದದ್ದು ಅಲ್ಲೇ. ಮಕ್ಕಳಿಗೆ ಧಾರಾವಾಹಿ ಪರಿಚಯಿಸಿದ್ದು ನನ್ನ ಪ್ರಕಾರ ಅದೇ ಅನ್ನಿಸುತ್ತೆ. ಅರ್ಧ ಕಥೆಯನ್ನ ಬರೆದು ಪೂರ್ಣಗೊಳಿಸುವ ಸ್ಪರ್ಧೆಗೆ ಹಲವು ಬಾರಿ ಕಥೆ ಕಳಿಸಿ ಬಹುಮಾನ ಬಂದದ್ದು ಇದೆ.
ಬಾಲಮಂಗಳದ ಡಿಂಗ ನಮ್ಮ ಹೀರೋ. ಇದು 8 ಭಾಷೆಗಳಲ್ಲಿ ಬರುತ್ತಿದ್ದ ಕಾರಣ ಸುಮಾರು ಜನರಿಗೆ ಇವನು ಪರಿಚಯ. ಫೇಸ್ ಬುಕ್ಕಿನಲ್ಲಿ ಡಿಂಗನ ಅಭಿಮಾನಿಗಳ ಸಂಘ ಎಂಬ ಪೇಜ್ ಸಹ ಇದೆ. ಡಿಂಗ ಸೂಪರ್ ಮ್ಯಾನಿನ ಪ್ರಾಣಿ ಅವತರಣಿಕೆ, ಅವನಿಗೊಂದು ಕೇರಗ ಎಂಬ ಶತ್ರು. ಇನ್ನೂ ಅದೇ ಪುಸ್ತಕದಲ್ಲಿ ಬರುತ್ತಿದ್ದ ಚೆಂಚು, ಕಾಡಿನ ಕಿಟ್ಟ, ಚೋಮು, ತಂಗು ಮಾಮ, ಒಂಟಿ ಸಲಗ ಎಲ್ಲ ಮರೆಯಲಸಾಧ್ಯ. ಈಗಲೂ ಕಥೆ ಹೇಳು ಅಂದರೆ ನೆನಪು ಬರೋದು ಶಕ್ತಿ ಮದ್ದು ಕಥೆ ಅಥವಾ ಮರಿಗುಬ್ಬಿ ಕಥೆ.
ಇಷ್ಟು ಚೆನ್ನಾಗಿ ನಮ್ಮ ಬಾಲ್ಯದಲ್ಲಿ ಕಲ್ಮಶವಿಲ್ಲದೆ ಕಳೆಯುವ ದಾರಿಯಾಯಿತು. ತದ ನಂತರ ಕಾರ್ಟೂನ್ ಬಂತು. ಅದಿದ್ದರೂ ಪುಸ್ತಕಗಳೇ ನನ್ನ ಸಾಥಿ. 65 ವಾರವೂ ಬರೆಯಬೇಕು ಎಂದಾಗ ಆಟ್ ಲೀಸ್ಟ್ 6500 ವಾರಗಳ ಓದಿರಬೇಕು. ಅದರಲ್ಲಿ ಅರ್ಧ ಇವುಗಳೇ ಇರತ್ತೆ ನೋಡಿ.
ಇದೇ ಯೋಚಿಸುತ್ತಾ ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕ ಮಗುವನ್ನ "ಏನ್ ಮಾಡ್ತೀಯಾ ಹೋಂ ವರ್ಕ್ ಬಿಟ್ಟು" ಅಂದ್ರೆ "ಅದೊಂದು ಗೇಮ್ ಇದೆ ಅದ್ರಲ್ಲಿ ಎಲ್ಲಾರ್ನೂ ಡಬ ಡಬ ಹೊಡೀದಾಕ್ ಬಿಡ್ತೀನಿ" ಅಂದ. ಸರಿ ಯಾರು ಫೇವರೆಟ್ ನಿಂಗೆ ಗೇಮ್ಸ್ ಅಲ್ಲಿ, ಯಾರದ್ರೂ ಮನುಷ್ಯ ಪ್ರಾಣಿ ಎಲ್ಲಾ ಇರತ್ತಾ ಅಂದೆ. "ಹೂ ಓನ್ಲಿ ಪೆಪ್ಪ ಪಿಗ್" ಅಂದ. ಪುಸ್ತಕ ಓದಲ್ವಾ ಎಂದು ಕೇಳೋ ಅಷ್ಟ್ರಲ್ಲಿ ಅದರ ಅಮ್ಮನೇ ಬಂದು "ಸ್ಸಾರಿ ಹೀ ಡಸನ್ಟ್ ರೀಡ್ ಬುಕ್ಸ್ ಲೈಕ್ ಯೂ, ಓನ್ಲಿ ಮೊಬೈಲ್" ಅಂದ್ರು.
ನಮಸ್ಕಾರ ಎಂದು ಬಂದೆ.