ಗೌರಿ ಬೀಜ ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದವರಿಗೆ ಬೀಜವಿಲ್ಲದ ಬದನೆಕಾಯಿ!
ಬೀಜ ಬೀಜ ಬೀಜ! ಅದು ಗೌರಿ ಬೀಜ! ಫೇಸ್ ಬುಕ್ಕಿನಲ್ಲಿ ಎಲ್ಲೆಲ್ಲೂ ಬೀಜದ್ದೇ ಮಾತು, ಚರ್ಚೆ, ಜಗಳ, ವಾಗ್ವಾದ, ವ್ಯಂಗ್ಯ, ಅಪಹಾಸ್ಯ... ಕೆಲವರು ಬೀಜವನ್ನು ಹೋರಾಟದ ಅಸ್ತ್ರವನ್ನಾಗಿ ಮಾಡಿಕೊಂಡಿದ್ದರೆ, ಮತ್ತೊಂದಿಷ್ಟು ಜನ ಬೀಜವನ್ನು ಲೇವಡಿಯ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ.
ಪಿಎಚ್ಡಿ ಮಾಡುವವರಿಗೆ ಬೇಕಾದಷ್ಟು ಸರಕು ಒದಗಿಸಿದೆ ಬೀಜಗಳ ಮೇಲಿನ ಹಾಸ್ಯಾಯಣ, ಪ್ರಬಂಧಾಯಣ. ತುಂಬಿದ ಸಭೆಯಲ್ಲಿ, ನಾವು ಗೌರಿ ಬೀಜವನ್ನು ಬಿತ್ತಿದ್ದೇವೆ ಎಂದು ಘಂಟಾಘೋಷವಾಗಿ ಸಾರುತ್ತಿದ್ದಂತೆಯೆ, ಗೌರಿ ಗೌರಿ ಎನ್ನುವವರ ಬಾಯಿಗೆ ಬಂದಿತ್ತು ಬೀಜ ಎಂಬಂತಹ ಚಟಾಕಿಗಳು ಸಿಡಿದಿವೆ.
ಈ ಮಾತು ಸಾಂಪ್ರದಾಯಿಕ ಬೀಜಗಳ ಕಿವಿಗೆ ಕೇಳದೆ ಇರುತ್ತದಾ? ಕಡ್ಲೆಕಾಯ್ ಬೀಜದ ನೇತೃತ್ವದಲ್ಲಿ ಪುಟಾಣಿ, ಕಾಬೂಲ್ ಕಡಲೆ, ಗೋಧಿ, ಹೆಸರು, ತೊಗರಿ, ಬಾದಾಮಿಗಳನ್ನು ಸಾಸಿವೆ ಒಂದೆಡೆ ಸೇರಿಸಿತು. ಇವುಗಳ ಬದ್ಧ ವೈರಿಗಳಾದ ಸಿರಿಧಾನ್ಯದ ಜಾತಿಗೆ ಸೇರಿದ ಸಾಮೆ, ನವಣೆ, ಸಜ್ಜೆ, ಹಾರಕ, ರಾಗಿಗಳು ತಮ್ಮ ವೈರತ್ವವನ್ನು ಮರೆತು ಗುಪ್ತಾಲೋಚನೆಯಲ್ಲಿ ತೊಡಗಿದವು.

ಇದಾವುದೀ ಗೌರಿ ಬೀಜ? ಇದರಿಂದಾಗಿ ನಮ್ಮ ಮಾನ ಮರ್ಯಾದೆ ಸೋಷಿಯಲ್ ಮೀಡಿಯಾದಲ್ಲಿ ಹರಾಜಾಗುತ್ತಿದೆ. ಇದನ್ನು ಹಿರಿಧಾನ್ಯದಲ್ಲಿ ಸೇರಿಸುವುದೋ, ಸಿರಿಧಾನ್ಯದಲ್ಲಿ ಸೇರಿಸುವುದೋ ಎಂಬ ಬಗ್ಗೆ ಘಮಾಸಾನ್ ಚರ್ಚೆಯಾಗಿ, ವಾಗ್ವಾದ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿ, ಕಡೆಗೆ ಸಾಸಿವೆ ಗೌರಿ ಬೀಜವನ್ನು ಎರಡೂ ಗುಂಪಿನೊಳಗೆ ಸೇರಿಸಿಕೊಂಡರೆ ಆಮರಣಾಂತ ಉಪವಾಸ ಮಾಡುತ್ತೇನೆಂದು ಚಟಪಟ ಚಟಪಟ ಸಿಡಿದಾಗ ಎರಡೂ ಗುಂಪುಗಳು ಯುದ್ಧಕ್ಕೆ ಶಾಂತಿ ಕೋರಿದವು.
ಸಿರಿಧಾನ್ಯ, ಕಿರಿಧಾನ್ಯಗಳ ಗುಪ್ತ ಸಮಾಲೋಚನೆ ಜಗಜ್ಜಾಹೀರಾತಾಗಿ ಜಗತ್ತಿನಾದ್ಯಂತ ಚರ್ಚೆಯ ವಸ್ತುವಾಗುತ್ತಿದ್ದಂತೆ, ಇದೇ ತಕ್ಕ ಸಮಯವೆಂದು ಗೌರಿ ಪತ್ರಿಕೆ 'ಗೌರಿ ಬೀಜ'ದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ತಕ್ಷಣ ಏರ್ಪಡಿಸಿದೆ. ಬೀಜದ ಬಗ್ಗೆ ಆಸಕ್ತಿಯಿರುವವರು, ಬೀಜದ ಮಹತ್ವ ತಿಳಿದಿರುವವರು, ಹದಿನೆಂಟು ವರ್ಷ ಮೀರಿರುವವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಅಂಥಿಂಥ ಸ್ಪರ್ಧೆಯೂ ಇದಲ್ಲ. ಇದಕ್ಕೆ ಆಕರ್ಷಕ ಬಹುಮಾನವನ್ನೂ ನೀಡಲಾಗುತ್ತಿದೆ.
ಮೊದಲ ಬಹುಮಾನ ಪಡೆದವರಿಗೆ ಒಂದು ಕೆಜಿ ಬೀಜವಿಲ್ಲದ ಬದನೆಕಾಯಿ, ಎರಡನೇ ಬಹುಮಾನ ಗೆದ್ದವರಿಗೆ ಅರ್ಧ ಕೆಜಿ ಬೀಜವಿಲ್ಲದ ಬೆಂಡೇಕಾಯಿ ಮತ್ತು ಮೂರನೇ ಸ್ಥಾಪ ಪಡೆದವರಿಗೆ ಕಾಲು ಕೇಜಿ ಬೀಜವಿಲ್ಲದ ಕಡ್ಲೆಕಾಯಿ ನೀಡುವುದಾಗಿ ಆಯೋಜಕರು ಘೋಷಿಸಿದ್ದಾರೆ. ಪ್ರಬಂಧವನ್ನು ಇದೇ ವರ್ಷ ಫೆಬ್ರವರಿ 29ರೊಳಗಾಗಿ ತಲುಪಿಸಲು ಕೋರಲಾಗಿದೆ. ತೀರ್ಪುಗಾರರ ತೀರ್ಮಾನವನ್ನು ಯಾರೂ ಪ್ರಶ್ನಿಸುವಂತಿಲ್ಲ!

ಬೀಜಕ್ಕೆ ಸಿಗುತ್ತಿರುವ ಭರ್ಜರಿ ಪ್ರಚಾರ, ಜನಪ್ರಿಯತೆ, ಅಲೆಯನ್ನು ಗುರುತಿಸಿದ ಪುಢಾರಿಯೊಬ್ಬರು ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಆಹ್ವಾನವನ್ನು ಧಿಕ್ಕರಿಸಿ 'ಗೌರಿ ಫ್ರಂಟ್' ಎಂಬ ಪಕ್ಷವನ್ನು ಹುಟ್ಟುಹಾಕಿ, ಬೀಜದ ಚಿಹ್ನೆಗೆ ಅರ್ಜಿ ಹಾಕಿದ್ದಾರೆ. ಅಲ್ಲದೆ, ಬೀಜಕ್ಕೆ ಜೈಜೈಕಾರ ಕೂಗುವವರ ಜನರಿಗಾಗಿ ಹುಡುಕಾಟ ನಡೆಸುತ್ತಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಜಾಹೀರಾತು ನೀಡಿದ್ದಾರೆ. ಆಸಕ್ತರು ಪ್ರಯತ್ನಿಸಬಹುದು.
ಇದೆಲ್ಲ ಸಂಗತಿ ರಾಜ್ಯದ ಎಂಎಲ್ಎಗಳ ಕಿವಿಗೂ ಬಿದ್ದು, ಗೌರಿ ಬೀಜದ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕೆಂದು ದುಂಬಾಲು ಬಿದ್ದಿದ್ದಾರೆ. ಗೌರಿ ಫ್ರಂಟ್ ಪಕ್ಷವನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಎಲ್ಲ ಪಕ್ಷಗಳೂ ಮುಗಿಬಿದ್ದಿದ್ದು, ಗೌರಿ ಫ್ರಂಟ್ ಅಧ್ಯಕ್ಷರಿಗೆ ಸಾಕುಬೇಕಾಗಿದೆ, ತಲೆಮರೆಸಿಕೊಂಡು ಓಡಾಡುತ್ತಿದ್ದಾರೆಂಬ ಸುದ್ದಿ ವಿಧಾನಸೌಧದ ಗೋಡೆಗಳನ್ನು ಅಪ್ಪಳಿಸುತ್ತಿದೆ.












Click it and Unblock the Notifications