ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರು ನಿಜವಾಗಿಯೂ ಇರುವುದಾದರೆ ಎಲ್ಲಿದ್ದಾನೆ?

By Staff
|
Google Oneindia Kannada News

Where is God? What is God?ಪ್ರೀತಿಯನ್ನು ಹೇಗೆ ವ್ಯಾಖ್ಯಾನಕ್ಕೆ ಒಡ್ಡಲಾಗುವುದಿಲ್ಲವೋ ದೇವರ ಅಸ್ತಿತ್ವವನ್ನೂ ಅರಿಯಲು, ದೇವರನ್ನು ಅಳೆಯಲು ಸಾಧ್ಯವಿಲ್ಲ. ನಂಬಿದವರಿಗೆ ಇದ್ದಾನೆ ಇಲ್ಲದವರಿಗೆ ಇಲ್ಲ. ಪ್ರೀತಿ, ನಂಬಿಕೆ, ವಿಶ್ವಾಸ, ಒಳ್ಳೆಯತನ, ಆಕಾಶ, ಭೂಮಿ, ಆಕಾರ, ನಿರಾಕಾರ... ದೇವರು ಅಂದ್ರೆ ಏನು? ದೇವರು ಅಂದ್ರೆ ಯಾರು?

ಸಾರಸಂಗ್ರಹ: ಡಾ| 'ಜೀವಿ' ಕುಲಕರ್ಣಿ

ಯಾರು ದೇವರು? ಎಷ್ಟುಮಂದಿ ದೇವರು? ದೇವರ ಹೆಸರಲ್ಲಿ ಜಗಳವೇಕೆ?ಧರ್ಮಗಳು ಮನುಷ್ಯರನ್ನು ದ್ವೇಷ, ಹಿಂಸೆಯ ನರಕಕ್ಕೆ ತಳ್ಳಲು ಹುಟ್ಟಿಕೊಂಡಿವೆಯೇ? ದುರ್ಬಲರನ್ನು ಶೋಷೀಸಲಿಕ್ಕೆ ಹುಟ್ಟಿಕೊಂಡಿವೆಯೇ? ಮತಾಂಧತೆಯಿಂದ ಅವು ಮಾನವನನ್ನು ಉನ್ಮತ್ತನನ್ನಾಗಿಸುವ ಮಾದಕ ದ್ರವ್ಯಗಳೇ?

ವಿಶ್ವದ ಮೂಲಭೂತ ಏಕತೆಯ ಕುರಿತ ಸಿದ್ಧಾಂತ ಕೇವಲ ಅನುಭಾವಿಗಳ ದೃಢವಾದ ಅನುಭೂತಿ ಮಾತ್ರವಲ್ಲ ಅದು ಆಧುನಿಕ ಯುಗದ ಭೌತಶಾಸ್ತ್ರದ ಅಧ್ಯಯನದಿಂದ ತಿಳಿದುಬರುವ ಪ್ರಮುಖವಾದ ಸಂಗತಿಯೂ ಹೌದು. ಪೌರಸ್ತ್ಯ ತಾತ್ತ್ವಿಕ ಪರಂಪರೆಯು ಭೇದರಹಿತ ಏಕಮೇವಾದ್ವಿತೀಯವಾದ ಪರಮಸತ್ಯದ ನೈಜಸ್ವರೂಪವನ್ನು ತಿಳಿಸುತ್ತ ಅದು ಸರ್ವವ್ಯಾಪಿಯಾಗಿದೆ ಎಂದು ಹೇಳುತ್ತದೆ. ಹಿಂದೂಧರ್ಮದಲ್ಲಿ ಅದನ್ನು ಬ್ರಹ್ಮ" ಎಂದೂ ಬೌದ್ಧಧರ್ಮದಲ್ಲಿ ಧರ್ಮಕಾಯ"ವೆಂದೂ ಚೀನಾದೇಶದ ತಾವೋಮತದಲ್ಲಿ ಯಾವೋ" ಎಂದೂ ಪರಿಗಣಿಸುತ್ತಾರೆ." -ಪ್ರಿಜೊ ಕಾಪ್ರಾ.

1993ರಲ್ಲಿ ಅಮೇರಿಕೆಯಲ್ಲಿ ನಡೆದ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಹೇಳಿದ ಮಾತುಗಳು:
ಜಗತ್ತಿಗೆ ವಿಶ್ವಧರ್ಮ ಸಮ್ಮೇಳನವು ಏನಾದರೂ ತೋರಿದ್ದರೆ ಅದು ಇದು. ದೈವೀಪ್ರಜ್ಞೆ, ಪವಿತ್ರತೆ, ದಯೆ, ದಾನಬುದ್ಧಿ- ಮುಂತಾದವುಗಳು ಜಗತ್ತಿನ ಯಾವ ಒಂದು ಧರ್ಮಸಂಸ್ಥೆಗೋ ಧರ್ಮಕ್ಕೋ ಮೀಸಲಾದುದಲ್ಲ. ಪ್ರತಿಯೊಂದು ಧರ್ಮವೂ ಕೂಡ, ಉನ್ನತ ಮಟ್ಟದ ಉದಾತ್ತ ಚರಿತರಾದ ಸ್ತ್ರೀಪುರುಷರನ್ನು ಕೊಟ್ಟಿರುವುದು. ಇಷ್ಟೊಂದು ಸಾಕ್ಷ್ಯಾಧಾರಗಳೆಲ್ಲವೂ ಇರುವಾಗಲೂ ಯಾರಾದರೂ ತಮ್ಮ ಧರ್ಮ ಒಂದೇ ಬಾಳುವುದು, ಇತರ ಧರ್ಮಗಳೆಲ್ಲವೂ ನಾಶವಾಗುವವು ಎಂದು ತಿಳಿದುಕೊಂಡರೆ ಅವರ ಅಜ್ಞಾನ, ಮತಾಂಧತೆ, ಮತಿಹೀನತೆಗಳನ್ನು ಕಂಡು ನಾನು ತೀವ್ರವಾಗಿ ಮರುಗುತ್ತೇನೆ, ಕನಿಕರಪಡುತ್ತೇನೆ. ಪ್ರತಿಯೊಂದು ಧರ್ಮದ ಧ್ವಜದ ಮೇಲೂ ವಿಭಿನ್ನ ಧರ್ಮಾನುಯಾಯಿಗಳು ಎಷ್ಟೇ ವಿರೋಧಿಸಿದರೂ ಹೋರಾಟವಲ್ಲ, ಸಹಾಯ", ನಾಶವಲ್ಲ, ಸ್ವೀಕಾರ", ವೈಮನಸ್ಯವಲ್ಲ, ಶಾಂತಿ ಮತ್ತು ಸಮನ್ವಯ" ಎಂಬುದನ್ನು ಬೇಗ ಬರೆಯಲಾಗುವುದು".

ವಿಜ್ಞಾನದ ಪರಮಾದ್ಭುತವಾದ ನೂತನ ಸಂಶೋಧನೆಗಳ ಬೆಳಕಿನಲ್ಲಿ ಇಡಿಯ ಜಗತ್ತೇ ಒಂದು ಎಂಬುದು ಸ್ಪಷ್ಟವಾಗಿರುವ ಸನ್ನಿವೇಶದಲ್ಲಿ ಜಗತ್ತಿನ ನಿಯಾಮಕನೂ ಒಬ್ಬನೇ. ಎಲ್ಲರೂ ದೇವರ ಮಕ್ಕಳೇ ಎಂಬ ಶ್ರೇಷ್ಠ ಸತ್ಯವನ್ನು ಎಲ್ಲ ಧಾರ್ಮಿಕ ಮುಖಂಡರೂ ಪ್ರಸಾರ ಮಾಡುವ ಕಾಲ ಸನ್ನಿಹಿತವಾಗಿದೆ.

* ಯಾರ ಮಹಿಮೆಯನ್ನು ಹಿಮವತ್ ಪರ್ವತಗಳೂ ಅಗಾಧಸಾಗರಗಳೂ ನದಿಗಳೂ ದಶದಿಕ್ಕುಗಳೂ ಸಾರುತ್ತವೆಯೋ ಆತನನ್ನು ನಮ್ಮ ಪರಿಶುದ್ಧ ನಿವೇದನೆಗಳಿಂದ ಪೂಜಿಸೋಣ." (ಋಗ್ವೇದ 10-121-3)
* ಸಪ್ತ ಸಮುದ್ರಗಳೂ ಭೂಮಿಯೂ ಅಲ್ಲಿದ್ದುಕೊಂಡಿರುವ ಎಲ್ಲವೂ ಅವನನ್ನು ಹೊಗಳಿ ಹಾಡುತ್ತವೆ. ಅವನನ್ನು ಹಾಡಿ ಹೊಗಳದ ಯಾವ ವಸ್ತುವೂ ಇಲ್ಲ. ಆದರೆ ಅವು ಮಾಡುವ ಸ್ತುತಿಯನ್ನು ನೀವು ತಿಳಿದುಕೊಂಡಿಲ್ಲ." (ಅಲ್ ಕೊರಾನ್, 17.33)
* ಭಗವಂತನು ಚೈತನ್ಯಮಯನು, ಅವನು ಎಲ್ಲ ವಸ್ತುಗಳಲ್ಲಿಯೂ ವ್ಯಕ್ತನಾಗಿದ್ದಾನೆ- ಜೀವಾತ್ಮನು ಶರೀರದಲ್ಲಿ ವ್ಯಕ್ತವಾಗುವಂತೆ." (ಕ್ರೈಸ್ತರ ಪ್ರಸಿದ್ಧ ಪವಿತ್ರ ಗ್ರಂಥ, ಫಿಲೋಕಾಲಿಯಾ ಸಂ.1.337)
* ಭಗವಂತನೇ ಸಮಸ್ತ ಜಗತ್ತಿನ ಉತ್ಪತ್ತಿಗೆ ಕಾರಣ. ಆತನಿಂದಲೇ ಜಗತ್ತು ನಡೆಯುತ್ತದೆ. (ಭಗವದ್ಗೀತೆ- 10.8)
* ಕಣ್ಣು ತೆರೆದಿದ್ದರೂ ಸರ್ವಭೂತಗಳಲ್ಲಿಯೂ ಭಗವಂತನಿರುವುದನ್ನು ನೋಡಿದ್ದೇನೆ. ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ಗಿಡಮರಗಳಲ್ಲಿ, ಸೂರ್ಯಚಂದ್ರರಲ್ಲಿ, ನೆಲದಲ್ಲಿ, ಜಲದಲ್ಲಿ, ಸರ್ವಭೂತಗಳಲ್ಲಿಯೂ ಆತನೇ ಇದ್ದಾನೆ." - ಭಗವಾನ್ ಶ್ರೀರಾಮಕೃಷ್ಣ.

ನಿಜವಾದ ಪ್ರೀತಿ ವ್ಯಕ್ತವಾಗುವ ಬಗೆ ಹೇಗೆ? ತ್ಯಾಗ ಸೇವೆಗಳ ಮೂಲಕ ಅಲ್ಲವೇ? ಪ್ರೀತಿಪಾತ್ರರ ಮೆಚ್ಚುಗೆಗಾಗಿ ಅವರ ಸಂತೋಷಕ್ಕಾಗಿ ಎಂಥ ತ್ಯಾಗಕ್ಕೂ ಸೇವೆಗೂ ನಾವು ಸಿದ್ಧರೆಂದರೆ ನಮ್ಮಲ್ಲಿ ನಿಜವಾದ ಪ್ರೀತಿ ಉಕ್ಕುತ್ತಿದೆ ಎಂದಾಯಿತಲ್ಲವೇ? ಇಂದು ಧಾರ್ಮಿಕರೆನಿಸಿಕೊಂಡವರು ಎಲ್ಲರೆಡೆಗೂ ಆ ಪ್ರೀತಿಯನ್ನು ಹರಿಯಿಸಲು ಸಮರ್ಥರಾಗಿದ್ದಾರೆಯೇ? ಪರಸ್ಪರ ದ್ವೇಷಿಸಲು ನಮ್ಮಲ್ಲಿ ಬೇಕಷ್ಟು ಧರ್ಮಗಳಿವೆ ಆದರೆ ಪ್ರೀತಿಸಲು ಇಲ್ಲ.

ಗಾಡ್ ಅಲ್ಲಾ ಬ್ರಹ್ಮ ಎಂಬೆಲ್ಲ ಹೆಸರುಗಳು ಬೇರೆ ಬೇರೆಯಾದರೂ ಸರ್ವಶಕ್ತನಾದ ಭಗವಂತನು ಒಬ್ಬನೇ. ಎಲ್ಲರೂ ಆತನ ಮಕ್ಕಳೇ. ಕೆಲವರು ಸ್ವಲ್ಪ ಮುಂದಿದ್ದಾರೆ. ಇನ್ನು ಕೆಲವರು ಸ್ವಲ್ಪ ಹಿಂದಿದ್ದಾರೆ ನಾವೆಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕಲು ಕಲಿಯಬೇಕೆಂಬುದೇ ಆತನ ಇಚ್ಛೆ. ಪ್ರೇಮಮಯನಾದ ಭಗವಂತನ ಪ್ರತಿನಿಧಿಗಳಾದ ಬೆಳಕು ಗಾಳಿಗಳು ಎಲ್ಲರ ಮನೆಯಂಗಳಕ್ಕೂ ಹರಿಯುತ್ತವೆ. ಎಲ್ಲೆಡೆಗೂ ಹಬ್ಬಿ ಎಲ್ಲರನ್ನೂ ತಬ್ಬಿ ಅವು ನಿಸ್ವಾರ್ಥಪ್ರೀತಿಯ ಪಾಠವನ್ನೇ ಬೋಧಿಸುತ್ತವೆ. ನನ್ನ ಆಕಾರಗಳಿಂದ ಗೋಚರಿಸಿದರೂ ಆತ ಒಬ್ಬನೇ. ಎಲ್ಲರೂ ಬೇರೆ ಬೇರೆ ಪಥಗಳಿಂದ ಅವನನ್ನು ಸಮೀಪಿಸುತ್ತಿದ್ದಾರೆ ಎಂಬ ಸತ್ಯ ಎಲ್ಲರಿಗೂ ಮನವರಿಕೆಯಾಗಬೇಕಾಗಿದೆ. ಅಸಂಖ್ಯ ದೇವದೇವಿ ದೇವತೆಗಳಾಗಿ ಕಂಡರೂ ಆತನೊಬ್ಬನೇ. ಯಾವ ಮತ ಪಂಥದವರೇ ಆಗಲಿ, ದೇವರಲ್ಲಿ ವಿಶ್ವಾಸವಿರುವವರೆಲ್ಲ ಶಾಂತಿ ಸೌಹಾರ್ದ ಸಮನ್ವಯ ಸದ್ಭಾವನೆಗಳು ಸರ್ವತ್ರ ವೃದ್ಧಿಯಾಗುವಂತೆ ಭಗವಂತನಲ್ಲಿ ಪ್ರಾರ್ಥಿಸಬೇಕು.

ಈಶ್ವರ ಅಲ್ಲಾ ತೇರೇ ನಾಮ, ಸಬಕೋ ಸನ್ಮತಿ ದೇ ಭಗವಾನ್.

***

ಒಬ್ಬ ಭಕ್ತನಿಗೆ ದೇವರನ್ನು ಕಾಣುವ ಹಂಬಲವಿತ್ತು, ಅವನ ಸ್ವಪ್ನದಲ್ಲಿ ದೇವ ಬಂದ:
ನಾಳೆ ನಿನ್ನನ್ನು ಕಾಣಲು ಬರುವೆ' ಎಂದ. ಇಡೀ ದಿನ ದೇವನಿಗಾಗಿ ಭಕ್ತ ಕಾಯ್ದ.
ಭಗವಂತ ಬರಲಿಲ್ಲ ಎಂದು ಬೇಸರಗೊಂಡು ಭಕ್ತ ಮಲಗಿದ. ಮತ್ತೆ ಅವನ ಸ್ವಪ್ನದಲ್ಲಿ
ದೇವ ಪ್ರತ್ಯಕ್ಷನಾದ. ಯಾಕೆ ಬರಲಿಲ್ಲ?' ಭಕ್ತ ಆಕ್ಷೇಪಿಸಿದ. ಭಗವಂತನೆಂದ: ವತ್ಸ,
ಮೂರು ಸಲ ಬಂದೆ; ಮುದುಕ, ಭಿಕ್ಷುಕ, ನಾಯಿಯಾಗಿ- ನೀನೇ ಎನ್ನ ಓಡಿಸಿದೆಯಲ್ಲ?' ಎಂದು.
(ಜೀವಿ" ವಚನ-60-4)

ಪೂರಕ ಓದಿಗೆ
ಅಂತಃಶಕ್ತಿಯ ಅಕ್ಷಯ ಆಗರವೇ ಪ್ರಾರ್ಥನೆಯಲ್ಲಿದೆ
ಎಡ್ಗರ್ ಕೇಸೀಯ ಅತೀಂದ್ರೀಯ ಶಕ್ತಿ
ವಿಜ್ಞಾನಕ್ಕೆ ಸವಾಲೊಡ್ಡುವ ಸೂಕ್ಷ್ಮ ಶರೀರ ಸಿದ್ಧಾಂತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X