ಎಲ್ಲರಿಗೂ ಬೇಕು ಮಿತಾಕ್ಷರ, ಯಾರಿಗೂ ಬೇಡ ವಿಜ್ಞಾನೇಶ್ವರ
ವಿಜ್ಞಾನೇಶ್ವರನ
ಹೆಸರು
ಕೇಳಿದವರು
ಕೆಲವೇ
ಮಂದಿ.
ಭಾರತೀಯ
ನ್ಯಾಯಶಾಸ್ತ್ರದ
ಆಧಾರ
ಸ್ತಂಭ
ಎಂದೇ
ಪರಿಗಣಿಸಲಾಗುವ
‘ಮಿತಾಕ್ಷರ’
ಎಂಬ
ಅಮೂಲ್ಯ
ಗ್ರಂಥ
ಬರೆದ
ವಿಜ್ಞಾನೇಶ್ವರ,
ಕರ್ನಾಟಕದವ
ಹಾಗೂ
ಅಪ್ಪಟ
ಕನ್ನಡದವ
ಎಂಬುದು
ಬಹುಮಂದಿಗೆ
ಗೊತ್ತಿಲ್ಲ!
- ವಿಶ್ವೇಶ್ವರ ಭಟ್
ಅಮೆರಿಕದಲ್ಲಿ ಲಾಸ್ ವೆಗಾಸ್ನಿಂದ ಜಗತ್ತಿನ ವಿಸ್ಮಯಗಳಲ್ಲೊಂದಾದ ಗ್ರ್ಯಾಂಡ್ ಕ್ಯಾನ್ಯನ್ಗೆ ಹೋಗುವಾಗ ದಾರಿಯಲ್ಲಿ ಒಂದು ಅಣೆಕಟ್ಟು ಸಿಗುತ್ತದೆ. ಆ ದಾರಿಯಲ್ಲಿ ಕಾರಿನಲ್ಲಿ ಮೊದಲ ಸಲ ಹೋಗುವವರು ಅಲ್ಲೊಂದು ಸ್ಟಾಪ್ ಕೊಡುತ್ತಾರೆ. ಆ ಅಣೆಕಟ್ಟನ್ನು ನೋಡದೇ ಯಾರೂ ಮುಂದಕ್ಕೆ ಹೋಗುವುದಿಲ್ಲ. ಇತ್ತೀಚೆಗೆ ಆ ಮಾರ್ಗದಲ್ಲಿ ಹೋಗುವಾಗ ಸ್ನೇಹಿತ ವಲ್ಲೀಶ ಶಾಸ್ತ್ರಿ, ‘ನಿಮಗೊಂದು ಅಚ್ಚರಿ ತೋರಿಸುತ್ತೇನೆ. ಅಮೆರಿಕದ ಅತಿ ಎತ್ತರದ ಅಣೆಕಟ್ಟುಗಳಲ್ಲಿ ಇದೂ ಒಂದು’ ಎಂಬ ಪುಟ್ಟ ಮುನ್ನುಡಿಯಾಂದಿಗೆ ಅಣೆಕಟ್ಟನ್ನು ಒಂದು ಸುತ್ತು ಹಾಕಿಸಿದರು.
ಅಂದ ಹಾಗೆ ಇದನ್ನು ಹೂವರ್ ಡ್ಯಾಮ್ ಅಂತಾರೆ. ನಮ್ಮ ಕೃಷ್ಣರಾಜ ಸಾಗರ(ಕೆಆರ್ಎಸ್) ಅಣೆಕಟ್ಟಿನ ಮುಂದೆ ಈ ಹೂವರ್ ಡ್ಯಾಮ್ ಏನೇನೂ ಅಲ್ಲ. ಆದರೆ ಈ ಹೂವರ್ ಡ್ಯಾಮನ್ನು ಷೋಕೇಸ್ ಮಾಡಿದ ರೀತಿ, maintain ಮಾಡುತ್ತಿರುವ ವಿಧಾನದ ಮುಂದೆ ಕೆಆರ್ಎಸ್ ಏನೇನೂ ಅಲ್ಲ.
ಹೂವರ್ ಡ್ಯಾಮಿನ ಜಲವಿದ್ಯುತ್ ಸ್ಥಾವರದಿಂದ ಮೊದಲುಗೊಂಡು ಇಡೀ ಅಣೆಕಟ್ಟನ್ನು ನೋಡಲು ಏನಿಲ್ಲವೆಂದರೂ ನಾಲ್ಕು ತಾಸು ಬೇಕು. ಈ ಡ್ಯಾಮಿನ ನಿರ್ಮಾಣಕ್ಕೆ ಮೊದಲ ಗುದ್ದಲಿ ಬಿದ್ದು ಶಂಕುಸ್ಥಾಪನೆ ನೆರವೇರಿದ ಲಾಗಾಯ್ತಿನಿಂದ, ಪೂರ್ಣಗೊಂಡು ಎದ್ದು ನಿಲ್ಲುವ ತನಕ ಸಾಕ್ಷ್ಯಚಿತ್ರವನ್ನು ಅಲ್ಲಿ ತೋರಿಸುತ್ತಾರೆ. ಅರ್ಧಗಂಟೆಯ ಈ ಚಿತ್ರ ನೋಡಿದರೆ ಇಡೀ ಅಣೆಕಟ್ಟು ಕಣ್ಮುಂದೆ ನಿಲ್ಲುತ್ತದೆ.
ಅಲ್ಲಲ್ಲಿ ಡ್ಯಾಮಿನ ಪ್ರತಿಕೃತಿಗಳನ್ನು ಇಟ್ಟಿದ್ದಾರೆ. ಅದರ ಮುಂದೆ ನಿಂತು ಫೋಟೊ ತೆಗೆಸಿಕೊಳ್ಳಲು. ಪಕ್ಕದಲ್ಲಿ ದೊಡ್ಡ ಅಂಗಡಿಯಿದೆ. ಅಲ್ಲಿ ಹೂವರ್ ಡ್ಯಾಮಿನ ಚಿತ್ರವಿರುವ ಪೋಸ್ಟ್ ಕಾರ್ಡ್, ಕ್ಯಾಪು, ಕೀಚೈನ್, ಬ್ಯಾಡ್ಜ್, ಟೀಶರ್ಟ್, ಪೇಪರ್ವೇಟ್, ಪುಸ್ತಕ, ಪೆನ್ನುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಅಲ್ಲಿಗೆ ಹೋದವರ್ಯಾರೂ ಖಾಲಿ ಕೈಲಿ ಬರುವುದಿಲ್ಲ. ಡ್ಯಾಮಿನ ಸನಿಹದಲ್ಲಿ ಪುಟ್ಟ ಸಮಾಧಿಯಿದೆ. ಅಣೆಕಟ್ಟನ್ನು ಕಟ್ಟುವಾಗ ಆ ಜಾಗದಲ್ಲಿ ಲಾರಿಯ ಚಕ್ರಕ್ಕೆ ಸಿಲುಕಿ ಸತ್ತ ನಾಯಿಯ ನೆನಪಿಗಾಗಿ ಕಟ್ಟಿದ್ದು.
ಹೂವರ್ ಡ್ಯಾಮಿಗೆ ಹೋಗಿ ಬಂದರೆ ಕೇವಲ ಒಂದು ಅಣೆಕಟ್ಟೆಗೆ ಹೋದ ಅನುಭವ ಮಾತ್ರ ಆಗುವುದಿಲ್ಲ. ಅದೊಂದು ಶೈಕ್ಷಣಿಕ ಯಾತ್ರೆ. ಅದೊಂದು ಪ್ರೇಕ್ಷಣೀಯ ತಾಣಕ್ಕೆ ಭೇಟಿ ನೀಡಿದ ಅನುಭವ. ನವನಾಗರಿಕತೆಯ ‘ತೀರ್ಥಕ್ಷೇತ್ರ’ಕ್ಕೆ ಹೋಗಿ ಬಂದ ಅನುಭೂತಿ. ಒಂದು ಡ್ಯಾಮನ್ನು ಎಷ್ಟೊಂದು ಸುಂದರವಾಗಿ, ಅಚ್ಚುಕಟ್ಟಾಗಿ ನಿರ್ಮಿಸಬಹುದು ಹಾಗೂ ಇಟ್ಟುಕೊಳ್ಳಬಹುದು ಮತ್ತು ಅದನ್ನು ನೋಡಿದ್ದನ್ನೇ ಜೀವಮಾನವಿಡೀ ನೆನಪಿನಲ್ಲುಳಿಯುವಂತೆ ಮಾಡಬಹುದು ಎಂಬುದಕ್ಕೆ ಹೂವರ್ ಡ್ಯಾಮ್ ನಿದರ್ಶನ.