ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀನ, ಮೇಷ, ಮಿಥುನ, ಕರ್ಕ ಗುಣಗಳಿವು

By ನಾಗನೂರಮಠ ಎಸ್.ಎಸ್.
|
Google Oneindia Kannada News

ತಾಕತ್ತಿರುವವರು ನಿಮ್ಮ ಸರಿಸಮಾನರೊಂದಿಗೆ ಅಥವಾ ನಿಮಗಿಂತ ಹೆಚ್ಚು ತಾಕತ್ತಿರುವವರೊಂದಿಗೆ ನಿಮ್ಮ ಶಕ್ತಿ, ಸಾಮರ್ಥ್ಯ ತೋರಿಸಿ. ನಿಮಗಿಂತ ಕಡಿಮೆ ತಾಕತ್ತಿರುವವರಿಗೆ ನಿಮ್ಮ ತಾಕತ್ತು ತೋರಿಸಿ, ಅವರನ್ನು ತೊಂದರೆಗೀಡು ಮಾಡುವವರು ನೀವಾಗಿದ್ದರೆ ನಿಮ್ಮನ್ನು ಮಣ್ಣು ಮುಕ್ಕಿಸಲು ಶನಿದೇವನು ಬರುತ್ತಾನೆ. ಎಷ್ಟೋ ಜನ ತಮ್ಮ ಕೈಕೆಳಗಿನವರಿಗೆ ತಮ್ಮ ದುರ್ಬುದ್ಧಿಯಿಂದ ವಿಪರೀತ ತೊಂದರೆ ನೀಡುತ್ತಿರುತ್ತಾರೆ.

ನೀವು ಅಂದುಕೊಳ್ಳಬಹುದು. ಇವರೆಲ್ಲರೂ ಮಹಾನ್ ವಿದ್ಯಾವಂತ, ಬುದ್ಧಿವಂತರು ಇಂಥವರಿಗೇನು ಆಗೋದೇ ಇಲ್ವಾ ಅಂತ. ಆಗದೇ ಇರುತ್ತಾ ಇಂಥ ದುಷ್ಟ, ಪಾಪಿಗಳಿಗೆ. ಟೈಮ್ ಬರಬೇಕು ಅಷ್ಟೇ. ಬಂದೇ ಬರುತ್ತೇ ಆ ಟೈಮ್. ನಿಮ್ಮ ಕಣ್ಣಾರೆ ನೋಡುತ್ತೀರಿ, ಅವರೊಂದಿಗೆ ಅವರ ಸಂಸಾರದ ಸದಸ್ಯರೆಲ್ಲರೂ ಪಾಪದ ಫಲ ಉಣ್ಣುವುದನ್ನು. "ವಿನಾಶಕಾಲೇ ವಿಪರೀತ ಬುದ್ಧಿ" ಎನ್ನುವಂತೆ ತಮ್ಮ ಮತ್ತು ಕುಟುಂಬದವರ ವಿನಾಶವನ್ನು ಅವರೇ ತಂದುಕೊಳ್ಳುತ್ತಾರೆ. ಅನುಭವಿಸುತ್ತಾರೆ ಬಿಡಿ.

Sade Sati in Aries, Cancer, Gemini and Pisces

ನಾವು, ನೀವೆಲ್ಲರೂ ಇರುವ ಈ ಜಗತ್ತು ಎಷ್ಟೊಂದು ಸುಂದರವಾಗಿದೆ. ವಿಪರೀತ ದುರ್ಗುಣದಿಂದ ಮೆರೆಯುತ್ತ, ಮಾನವೀಯತೆ, ಕರುಣೆ ಇಲ್ಲದ ಕೆಲವರಿಂದ ಈ ಸುಂದರ ಜಗತ್ತಿನಲ್ಲಿ ಕೆಲ ಕುಟುಂಬಗಳು ಕಣ್ಣೀರಿಡುವಂತೆ ಆಗುತ್ತಿದೆ. ಇಂತಹ ರಾಕ್ಷಸ ಬುದ್ದಿಯವರು ನಮ್ಮ ಸುತ್ತಮುತ್ತಲಿದ್ದಾರೆ ಎನ್ನುವುದು ವಿಪರ್ಯಾಸ. ಆದರೆ ಇವರೇನೂ ಅನಕ್ಷರಸ್ಥರಲ್ಲ. ಸಾಕಷ್ಟು ವಿದ್ಯೆ ಕಲಿತು ಉನ್ನತ ಹುದ್ದೆಯಲ್ಲಿದ್ದುಕೊಂಡೇ ಇಂತಹ ದಾನವರ ಕೆಲಸ ಮಾಡುತ್ತಿರುತ್ತಾರೆ.

ನೀವು ನೋಡಿರಬಹುದು, ಅಲ್ಲಲ್ಲಿ ಹಣ್ಣು, ಹಂಪಲ, ತರಕಾರಿ ಮತ್ತಿತರರ ಸಾಮಾನು ಮಾರಾಟ ಮಾಡುವವರನ್ನು. ಅವರು ಸಾಯುವವರೆಗೂ ಅದೇ ಉದ್ಯೋಗ ಮಾಡಿದರೂ ಎಷ್ಟೊಂದು ಪ್ರಾಮಾಣಿಕತೆ ಮೈಗೂಡಿಸಿಕೊಂಡಿರುತ್ತಾರೆ. ಇಂಥವರು ಯಾವುದೇ ಡಿಗ್ರಿ ಓದಿರಲ್ಲ. ಆದರೆ ಇವರೆಲ್ಲರೂ ಮೋಸ, ಸುಳ್ಳು ಹೇಳಲು ಶುರು ಮಾಡಿದರೆಂದರೆ ಏನಾಗಬಹುದು ಎಂಬುದನ್ನು ಒಮ್ಮೆ ಯೋಚಿಸಿ. ಮೋಸ, ವಂಚನೆ, ಸುಳ್ಳು ಹೇಳುವವರು ಸಾಮಾನ್ಯವಾಗಿ ದೊಡ್ಡವರೆನಿಸಿಕೊಂಡವರೇ. ಇರಲಿ, "ಕಾಲಾಯ ತಸ್ಮೈಯಃ ನಮಃ" ಎಂದು ಕಾದು ನೋಡೋಣ ದುಷ್ಟರ ಸಂಹಾರವನ್ನು.

ಮೀನ : ಸದ್ಯ ಅಷ್ಟಮ ಸ್ಥಾನದಲ್ಲಿದ್ದಾನೆ ಶನಿರಾಜನು ಇವರಿಗೆ. ಇವರು ಯಾವಾಗಲೂ ಅದ್ಧೂರಿಯಾಗಿಯೇ ಜೀವನ ನಡೆಸಬೇಕೆನ್ನುವವರು. ತಮ್ಮಲ್ಲಿ ಏನಿಲ್ಲದಿದ್ದರೂ ಎಲ್ಲವೂ ತಮ್ಮಲ್ಲೇ ಇದೆ ಎಂದು ತೋರಿಕೆಯ ಜೀವನ ಬೇಕು ಇವರಿಗೆ. ಸುಂದರ ಮಾತು ಮತ್ತು ಮಾತಿಗೆ ತಕ್ಕಂತೆ ಭಾವಾಭಿನಯ ಮಾಡುವುದು ಇವರಿಗೆ ಕರಗತ. ಇವರ ಮಾತಿಗೆ ಮರುಳಾಗದವರೇ ಇಲ್ಲ. ಎಲ್ಲ ಕೆಲಸಗಳಲ್ಲಿ ಅವಸರ ಜಾಸ್ತಿ. ಮನರಂಜನೆ ಮತ್ತು ಮಜವಾದ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಸಮಾಜದಲ್ಲಿ ಗೌರವವಾಗಿರಬೇಕು ಎಂಬುದು ಧ್ಯೇಯವಾಗಿರುತ್ತದೆ. ಇದಲ್ಲದೇ ಅನೇಕರಿಗೆ ಉಪಕಾರ ಮಾಡುತ್ತ, ದೇವರಲ್ಲಿ ಆಸಕ್ತಿ ಹೆಚ್ಚಿಸಿಕೊಂಡಿರುತ್ತಾರೆ. ಸ್ವಲ್ಪ ಬೇಗನೇ ಸಿಟ್ಟು ಬಂದರೂ, ಜೀವನದ ಬಗ್ಗೆ ಕೆಲವೊಮ್ಮೆ ಜಿಗುಪ್ಸೆ ಪಟ್ಟುಕೊಳ್ಳುತ್ತಾರೆ.

ಕಷ್ಟದ ಕೆಲಸವಿದ್ದರೂ ಸಂತೋಷದಿಂದ ಮಾಡುತ್ತ, ಮಾತಿನಲ್ಲಿ ಭಾರಿ ಜಾಣತನ ತೋರಿಸುತ್ತಾರೆ. ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾರೆ. ಕಾಮಿಡಿ ಮಾಡುತ್ತ ಪಿಕ್‌ನಿಕ್‌ಗೆ ಹೋಗೋದೆಂದರೆ ಇವರಿಗೆ ಹುರುಪು. ಏನಾದರೂ ಕೆಲಸ ಮಾಡಬೇಕಾದರೆ ಹಿಂದೆ-ಮುಂದೆ ಯೋಚನೆ ಮಾಡುವುದಿಲ್ಲ. ಮುಂದೇನಾಗುವುದೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮನದಲ್ಲೇ ಹಲವಾರು ಯೋಚನೆ ಹುಟ್ಟಿಸಿಕೊಳ್ಳುತ್ತಿರುತ್ತಾರೆ. ತಮ್ಮ ಸುತ್ತಮುತ್ತಲಿನವರಿಗೆ ಪ್ರವಚನ ಮಾಡುವುದರಲ್ಲಿ ಇವರು ಸಿದ್ಧಹಸ್ತರು. ಯಾರಿಗಾದರೂ ಸಹಾಯ ಮಾಡಿದ್ದರೆ ಪದೇ ಪದೇ ಅದನ್ನು ಅವರಿಗೆ ನೆನಪಿಸುವಂಥಹ ವಿಚಿತ್ರ ಸ್ವಭಾವ ಇವರಲ್ಲಿರುತ್ತದೆ. ಆಸೆಬುರುಕುತನವಿದ್ದರೂ ಮನೆಯವರಿಗೆ ಬೇಕಾದ್ದನ್ನೂ ಕೊಡಿಸುವಂಥಹ ಧಾರಾಳತನ ಇವರಲ್ಲಿರುತ್ತದೆ.

ಮೇಷ : ಸಪ್ತಮದಲ್ಲಿದ್ದಾನೆ ಶನಿದೇವನು ಇವರಿಗೀಗ. ಇವರಿಗೆ ತಮ್ಮ ಆರೋಗ್ಯದ ಕುರಿತು ಯಾವಾಗಲೂ ಕಾಳಜಿಯಿರುತ್ತದೆ. ಅತೀ ಹೆಚ್ಚಿನ ಆತ್ಮವಿಶ್ವಾಸ ತುಂಬಿ ತುಳುಕುತ್ತಿರುತ್ತದೆ. ಮತ್ತೊಬ್ಬರನ್ನು ತಮ್ಮ ಕಣ್ಣಳತೆಯಿಂದಲೇ ಅರಿಯುವಂಥ ಬುದ್ಧಿವಂತಿಕೆ ಇವರಲ್ಲಿದೆ. ಇವರಲ್ಲಿ ಅತ್ಯಧಿಕವಾಗಿ ವಿಚಾರಶಕ್ತಿ ಇರುತ್ತದೆ. ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಎಲ್ಲವೂ ಸುಂದರವಾಗಿ, ಚೊಕ್ಕಟವಾಗಿರಬೇಕು. ಇವರಲ್ಲಿರುವ ವಿಶಿಷ್ಟ ವಿಚಾರಶಕ್ತಿಯಿಂದಲೇ ಮಹೋನ್ನತವಾದ ಸಾಧನೆ ಮಾಡುತ್ತಾರೆ. ಇವರ ಜೀವನಶೈಲಿಯನ್ನು ಬೇರೆಯವರು ನೋಡುವುದರಿಂದ ಗೌರವ, ಮರ್ಯಾದೆ ಹೆಚ್ಚುತ್ತದೆ ಎಂದುಕೊಳ್ಳುವ ಸ್ವಭಾವ ಇವರದು. ಸಿಟ್ಟು ಮತ್ತು ಹಠದ ಸ್ವಭಾವ ಇದ್ದರೂ, ಸತ್ಯವಂತರಾಗಿದ್ದುಕೊಂಡು ಅಧರ್ಮ, ಅನೀತಿ ಮತ್ತು ಅನ್ಯಾಯದ ಕೆಲಸ ಯಾವತ್ತೂ ಮಾಡುವುದಿಲ್ಲ.

ಬೇಕಾದಂತಹ ಕೆಲಸ ಕೊಟ್ಟರೂ ಮಾಡಿ ಮುಗಿಸುತ್ತಾರೆ. ಬೇರೆಯವರು ಅದೇ ಕೆಲಸ ಮಾಡಲು ಕಷ್ಟಪಟ್ಟು ಸೋತು ಕೈಬಿಟ್ಟಿರುತ್ತಾರೆ. ಸಹನೆ, ತಾಳ್ಮೆಯಿಂದ ಮನೋಸ್ಥೈರ್ಯ ಹೆಚ್ಚಿಸಿಕೊಳ್ಳುತ್ತಿರುತ್ತಾರೆ. ಯಾವುದೇ ಕೆಲಸ ಮಾಡಬೇಕೆಂದರೆ ಧೈರ್ಯದಿಂದಲೇ ಮುನ್ನುಗ್ಗುತ್ತಾರೆ. ಪ್ರೀತಿಯಿಂದ ಹೇಳಿದರೆ ಮಾತ್ರ ಮತ್ತೊಬ್ಬರ ಮಾತು ಕೇಳುತ್ತಾರೆ. ಇವರು ಬಯಸಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸುತ್ತಾರೆ. ದೇವರ ಬಗ್ಗೆ ಎಲ್ಲರಲ್ಲಿಲ್ಲದ ಆಸಕ್ತಿ, ಕುತೂಹಲ ಇವರಿಗೆ. ಎಲ್ಲ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸ್ನೇಹಿತರ ಬಳಗ ಹೆಚ್ಚಿರುವುದರಿಂದ, ಸ್ನೇಹಿತರಿಂದಲೇ ದಾರಿ ತಪ್ಪಿ ಒಮ್ಮೊಮ್ಮೆ ಪೆಟ್ಟು ತಿನ್ನುತ್ತಾರೆ. ಇವರಿಗೆ ತಾವಿದ್ದಲ್ಲಿಂದಲೇ ಎಲ್ಲ ಕೆಲಸಗಳನ್ನು ಮುಗಿಸುವ ಚಾಣಾಕ್ಷತನವಿರುತ್ತದೆ.

ಮಿಥುನ : ಪಂಚಮದಲ್ಲಿದ್ದಾನೆ ಶನಿದೇವ ಇವರಿಗೆ. ಇವರ ದೇಹ ಸಣ್ಣಗಾಗಿದ್ದರು, ಮನಸ್ಸು ಮಾತ್ರ ಭಾರಿ ಗಟ್ಟಿ ಇವರದು. ಬೇರೆಯವರಿಗಿಂತ ತಮ್ಮ ಮೇಲೆಯೇ ಹೆಚ್ಚು ವಿಶ್ವಾಸವಿರುತ್ತದೆ ಇವರಿಗೆ. ಏನಾದರು ಮಾಡಲೆಂದು ಮುಂದಡಿಯಿಟ್ಟರೆ ಹಿಂದೆ ಸರಿಯದಂತಹ ಮನೋಬಲ ಇವರದು. ಇವರಿಗ್ಯಾರಾದರೂ ನೋವು ಆಗುವ ಹಾಗೆ ಮಾತನಾಡಿದರೆ ಏನೂ ಅಂದುಕೊಳ್ಳದಂತಹ ಸ್ವಭಾವ ಇವರದು. ತಾವು ಮಾಡುತ್ತಿರುವ ಕೆಲಸ ತಾವೇ ಮಾಡಬೇಕು. ಬೇರೆಯವರಿಗೆ ಆ ಕೆಲಸ ಬಿಟ್ಟುಕೊಡಲ್ಲ. ಇವರದು ಚಂಚಲತೆಯ ವಿಚಿತ್ರ ಸ್ವಭಾವ. ಬೆಳಿಗ್ಗೆ ಒಂಥರಾ ಇರ‍್ತಾರೆ, ಸಂಜೆ ಒಂಥರಾ ಚೇಂಜ್ ಆಗ್ತಾರೆ. "ಹಿಂಗಂದ್ರ ಹಂಗೆ, ಹಂಗಂದ್ರೆ ಹಿಂಗೆ" ಎನ್ನುವವರಿವರು.

ಸತ್ಯವನ್ನು ಸುಳ್ಳಾಗಿಸುವುದು, ಸುಳ್ಳನ್ನು ಸತ್ಯವನ್ನಾಗಿಸುವುದು ಇವರಿಗೆ ಚಿಟಿಕೆ ಹೊಡೆಯುವಷ್ಟು ಸುಲಭದ ಕೆಲಸ. ತಮ್ಮ ಪ್ರತಿಷ್ಠೆಯೆ ಹೆಚ್ಚು ಎಂದುಕೊಳ್ಳುತ್ತ, ತಾವು ಹಿಡಿದ ಕೆಲಸವನ್ನು ಶರವೇಗದಲ್ಲಿ ಮಾಡಿ ಮುಗಿಸುತ್ತಾರೆ. ಇವರೊಂದಿಗೆ ವಾದ ಮಾಡಿ ಗೆಲ್ಲೋದು ತುಂಬಾ ಕಷ್ಟ. ಯಾಕೆಂದರೆ ಇವರು ಮಾತಿನಲ್ಲೇ ಎಲ್ಲರನ್ನ ಮರಳು ಮಾಡುವ ಕಿಲಾಡಿ ಪ್ರತಿಭಾವಂತರು. ಬೇರೆ ಬೇರೆ ಭಾಷೆ ಕಲಿಯುವುದು ಇವರಿಗೆ ಇಷ್ಟದ ವಿಷಯ. ಸಂಸಾರ ಸುಖವನ್ನು ಮನಸೋ ಇಚ್ಛೆಯಿಂದ ಆನಂದಿಸುವ ಇವರು, ಜೀವನದಲ್ಲಿ ದಾರಿ ತಪ್ಪದೇ ಸರಿಯಾದ ರೀತಿಯಲ್ಲೇ ಜೀವನ ಮಾಡುವಂತಹ ಬುದ್ಧಿವಂತರು.

ಕರ್ಕ : ಚತುರ್ಥ ಸ್ಥಾನದಲ್ಲಿದ್ದಾನೆ ಶನಿದೇವ ಇವರಿಗೆ. ಅಂದರೆ ಅರ್ಧಾಷ್ಟಮ ಸ್ಥಾನದಲ್ಲಿದ್ದಾನೆ. ಇವರು ಯಾವಾಗಲೂ ಗಂಭೀರರಾಗಿಯೇ ಇರುವಂಥವರು. ತಮ್ಮ ಬುದ್ಧಿ ಮತ್ತು ನಡವಳಿಕೆಯ ಮೇಲೆ ಇವರಿಗಿರುವಷ್ಟು ಹತೋಟಿ ಬೇರೆಯವರಲ್ಲಿರುವುದಿಲ್ಲ. ಕಣ್ಣಿನಲ್ಲೇ ಎಲ್ಲ ಅಳೆದು ನೋಡುವ ತೀಕ್ಷ್ಣ ಬುದ್ಧಿ ಇವರಲ್ಲಿದೆ. ಬೇರೆಯವರಿಗಿಂತಲೂ ಹೆಚ್ಚಿನ ಚಟುವಟಿಕೆ ಹಾಗೂ ಚುರುಕುತನ ಇವರಲ್ಲಿರುವುದರಿಂದ ಬೇರೆಯವರು ಇವರನ್ನೇ ನೋಡಿ ಕಲಿಯುವಂತಾಗುತ್ತದೆ. ಸಿಟ್ಟು ಮಾಡಿಕೊಳ್ಳದೆ ಎಲ್ಲ ಕೆಲಸ ಮಾಡಿ ಮುಗಿಸುತ್ತಾರೆ. ಏನೇ ಮಾಡಿದರೂ ಅದರ ದುಪ್ಪಟ್ಟು ಲಾಭ ಬಯಸುತ್ತಾರೆ. ತಮಗೆ ತಿಳಿದರೆ ಮಾತ್ರ ಇತರರಿಗೆ ಸಹಾಯ ಮಾಡುತ್ತಾರೆ.

ಕಷ್ಟಪಟ್ಟು ದುಡಿಯಲು ಹಿಂಜರಿಯದೆ, ಜೀವನದಲ್ಲಿ ಯಶಸ್ವಿಯಾಗಿ ಬೇರೆಯವರಿಂದ ಪ್ರಶಂಸೆಗಳ ಸುರಿಮಳೆ ಸಿಗುತ್ತದೆ. ಹರಕೆ ಹೊತ್ತರೆ ಮರೆಯೋದಿಲ್ಲ. ಇವರಿಗ್ಯಾರಾದರು ಕೆಟ್ಟದ್ದನ್ನು ಮಾಡಲು ಬಂದರೆಂದರೆ ಇವರಿಗೆ ಒಳ್ಳೆಯದೇ ಆಗುತ್ತದೆ. ತಮ್ಮ ಆರೋಗ್ಯವನ್ನು ಯಾವಾಗಲೂ ನಿರ್ಲಕ್ಷ್ಯ ಮಾಡುತ್ತಿರುತ್ತಾರೆ. ಕೀರ್ತಿ ಮತ್ತು ಹೆಸರು ಇವರನ್ನು ಹುಡುಕಿಕೊಂಡು ಬರುತ್ತದೆ. ಇಷ್ಟಪಟ್ಟು ಕೊಟ್ಟ ಕೆಲಸ ಮನಸ್ಸು ಕೊಟ್ಟು ಮಾಡುತ್ತಾರೆ. ಇವರ ಮೇಲೆ ಎಲ್ಲರಿಗೆ ನಂಬಿಕೆ ಜಾಸ್ತಿ. ದೈವದ ಕುರಿತು ತಿಳಿದುಕೊಳ್ಳಲು ಉತ್ಸುಕತೆ ಹೆಚ್ಚು. ತಮ್ಮ ಜೀವನದಲ್ಲಾದ ಹಿಂದಿನ ಸಿಹಿ-ಕಹಿ ಘಟನೆ ನೆನೆಸಿಕೊಂಡು ಸಂತಸಪಡುವ ಮನೋಭಾವ ಇವರದು. ಮನೆಯವರಿಗಿಂತ ಹೊರಗಿನವರೆಂದರೆ ಇಷ್ಟ. ಹೀಗಾಗಿ ಮತ್ತೊಬ್ಬರಿಗೆ ಹೆಚ್ಚಿನ ಸಹಾಯ ಮಾಡುವ ಬಯಕೆ ಇವರದು. "ಊರಿಗೆ ಉಪಕಾರಿ" ಎನ್ನುವ ಹಾಗೆ.

ಈ ರೀತಿ ಎಲ್ಲ ರಾಶಿಗಳವರಲ್ಲಿ ಒಳ್ಳೆಯ ಗುಣಗಳಿವೆ. ಆದರೆ ಇಲ್ಲಿ ರಾಶಿಗಳವರ ಇನ್ನೂ ಕೆಲವು ಒಳ್ಳೆಯ ಗುಣ ಹಾಗೂ ಕೆಟ್ಟ ಗುಣ ತಿಳಿಸುವುದೇನು ಬೇಕಾಗಿಲ್ಲ. ಅವರದವರಿಗೆ ಗೊತ್ತಿರುತ್ತದೆ. ಮತ್ತೊಬ್ಬರಲ್ಲಿರುವ ಕೆಟ್ಟ ಗುಣ ಅವರ ನಡವಳಿಕೆಯಿಂದಲೇ ಗೊತ್ತಾಗುತ್ತಿರುತ್ತದೆ. ಯಾರಿಗೂ ಗೊತ್ತಿಲ್ಲ ಅಂದುಕೊಳ್ಳಬೇಡಿ ನೀವು ಹೇಗಿದ್ದೀರಿ, ನಿಮ್ಮ ಗುಣಗಳೆಂಥಹದು ಎಂಬುದು. ನಿಮ್ಮ ಸುತ್ತಮುತ್ತಲಿನವರಿಗೆ ಗೊತ್ತಿರುತ್ತದೆ. ಆದರೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ ಎಂಬ ಮಾತಿನಂತೆ ದುರ್ಗುಣಗಳನ್ನು ಕಮ್ಮಿ ಮಾಡಿಕೊಳ್ಳುವುದು ಒಳ್ಳೆಯದು. ಎಷ್ಟೊ ಜನ ದುರ್ಗುಣಗಳಿರುವ ಜನರು ತಮ್ಮ ಹತ್ತಿರದಲ್ಲಿದ್ದರೂ ಅವರ ದುರ್ಗುಣಗಳ ಬಗ್ಗೆ ಅವರಿಗೆ ತಿಳಿ ಹೇಳುವುದಿಲ್ಲ. ತಮ್ಮಷ್ಟಕ್ಕೆ ತಾವಿದ್ದು "ಕೆಸರಿನ ಮೇಲೆ ಕಲ್ಲು ಚೆಲ್ಲಿ ಮೈಗೇಕೆ ಸಿಡಿಸಿಕೊಳ್ಳಬೇಕು" ಇಂಥವರಿಗಾಗಿಯೇ ಶನಿದೇವನಿದ್ದಾನೆ ಎಂದು ಸುಮ್ಮನಿದ್ದು ಒಳ್ಳೆಯವರಾಗಿ ಬಿಡುತ್ತಾರೆ.

"ಶನಿಕಾಟದಲ್ಲಿ ಆಂಜನೇಯನಿಗೇಕೆ ಪೂಜಿಸಬೇಕು?" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ವಾಸ್ತು ಟಿಪ್ಸ್ : ಮನೆ ಬಾಗಿಲು ಹೊರಗೆ ತೆಗೆಯದಂತಿರಬಾರದು. ಒಳಭಾಗದಲ್ಲಿ ತೆರೆದುಕೊಳ್ಳುವಂತಿರಬೇಕು.

ಶನಿದೇವನ ಕೃಪೆಗೆ : ಮನೆಯಲ್ಲಿರುವ ಹಿರಿಯರ ಸೇವೆ ಮಾಡುತ್ತಿರಬೇಕು. ನಿಮ್ಮೊಂದಿಗೆ ಅವರ ನಡವಳಿಕೆ ಹೇಗಿದ್ದರೂ, ನೀವು ಮಾತ್ರ ಅವರ ಸೇವೆ ಮಾಡುವುದನ್ನು ಬಿಡಬಾರದು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 27 : Impact of Sade Sati on zodiac signs. Let's look at how Lord Shani is playing game in the lives of Aries, Cancer, Gemini and Pisces zodiac sign people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X