ವ್ಯಂಗ್ಯಚಿತ್ರ: ಸುಳ್ಳನ್ನೇ ಆಡುವ ಬಾಯಿಗೆ ಸತ್ಯದ ಸವಿ ಗೊತ್ತಿರಲು ಸಾಧ್ಯವೆ?
ನಗುವನ್ನಷ್ಟೆ ಉಕ್ಕಿಸಿ ಸುಮ್ಮನಾದರೆ ಕಾರ್ಟೂನ್ಗಳು ಫೇಲ್ ಆದಂತೆ, ಅವು ಚಿಂತನೆಗೆ ಹಚ್ಚಬೇಕು, ವಿಷಯವೊಂದನ್ನು ನೋಡುಗನಿಗೆ ದಾಟಿಸಬೇಕು. ಈ ಎರಡೂ ಕಾರ್ಯವನ್ನು ಶಂಕರ್ ಅವರ ಈ ಕಾರ್ಟೂನು ಶಕ್ತವಾಗಿ ಮಾಡುತ್ತಿದೆ.
ಸಮಯವೊಂದಿತ್ತು ವಿಚಾರಗಳ ಮೇಲೆ, ಸಮಸ್ಯೆಗಳ ಮೇಲೆ ಚುನಾವಣೆ ನಡೆಯುತ್ತಿತ್ತು, ಪರ ವಿರೋಧ ಸ್ಪರ್ಧಿಗಳಿಗೂ ಗಾಂಧಿಯೇ ಆದರ್ಶವಾಗಿರುತ್ತಿದ್ದರು, ಸನ್ಮಾರ್ಗದಲ್ಲೇ ಚುನಾವಣೆ ನಡೆಯುತ್ತಿತ್ತು ಆದರೆ ಇಂದಿನ ರಾಜಕಾರಣಿಗಳಿಗೆ ಗಾಂಧಿ ವಾದದ ಅರ್ಥವೇ ತಿಳಿದಿಲ್ಲ ಅವರಿಗೆ ಗೊತ್ತಿರುವ ಗಾಂಧಿ ಪಿಂಕು ನೋಟಿನ ಮೇಲೆ ನಗುತ್ತಿರುವ ಗಾಂಧಿ ಅಷ್ಟೆ.
ಶಂಕರ್ ಅವರ ಈ ಕಾರ್ಟೂನು ನಮ್ಮ ರಾಜಕಾರಣಿಗಳ ಬುದ್ಧಿಮತ್ತೆ, ನಿರಾದರ್ಶ ಸ್ಥಿತಿಗೆ ಕನ್ನಡಿ ಹಿಡಿದಿದೆ. ಇಲ್ಲೊಬ್ಬ ರಾಜಕಾರಣಿ ಗಾಂಧಿಯವರ 'ನುಡಿದಂತೆ ನಡೆ, ಸತ್ಯವನ್ನೇ ನುಡಿ' ಎಂಬ ಉತ್ಕೃಷ್ಠ ಜೀವನ ಪದ್ಧತಿಯನ್ನು ಗೊಂದಲದಿಂದ ನೋಡುತ್ತಿದ್ದಾನೆ, ಗಾಂಧಿ ಅವರ ಈ ಆದರ್ಶದ ಅರಿವೂ ಆತನಿಗಿಲ್ಲ. ಇಂದಿನ ಬಹುತೇಕ ನಮ್ಮ ರಾಜಕಾರಣಿಗಳ ಸ್ಥಿತಿ ಇದೇ ಆಗಿದೆ.
ಹಣ ಬಲ, ಭುಜಬಲ, ಜಾತಿಬಲದಿಂದ ಇಂದಿನ ಚುನಾವಣೆಗಳಲ್ಲಿ ಗೆಲುವು ನಿಶ್ಚಯವಾಗುತ್ತಿದೆ, ಇದಕ್ಕೆ ಕಾರಣ ಅಧಃಪತನ ಕಂಡಿರುವ ನಮ್ಮ ರಾಜಕಾರಣಿಗಳ ಮಾನಸಿಕ ಸ್ಥಿತಿ.