ಇಲ್ಲಿದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತ್ಯೇಕ ಪ್ರಚಾರದ ಹಿಂದಿನ ಕಾರಣ!
ಬೆಂಗಳೂರು, ಅ. 19: ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಉಪ ಚುನಾವಣೆಯಲ್ಲಿ ಪ್ರಚಾರ ಮಾಡಲು ಮಾಜಿ ಸಿಎಂ ಯಡಿಯೂರಪ್ಪ ಒಪ್ಪಿದ್ದಾರೆ. ಅಧಿಕಾರ ತ್ಯಾಗದ ಬಳಿಕ ಮೌನವಹಿಸಿದ್ದ ಯಡಿಯೂರಪ್ಪ ಅವರು ಉಪ ಚುನಾವಣೆಯಲ್ಲಿ ಪ್ರಚಾರ ಮಾಡುವುದು ಸಂದೇಹ ಮೂಡಿಸಿತ್ತು. ಆದರೆ ಬಿಜೆಪಿ ಅಭ್ಯರ್ಥಿಗಳಿಗೆ ಹಿನ್ನಡೆಯಾದಲ್ಲಿ ಅದರ ಪರಿಣಾಮ ತಮ್ಮ ಆಪ್ತ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಆಗುವುದರಿಂದ ಯಡಿಯೂರಪ್ಪ ನಿಲುವು ಬದಲಿಸಿ ಪ್ರಚಾರಕ್ಕೆ ತೆರಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಚುನಾವಣಾ ಪ್ರಚಾರದಿಂದ ಎರಡೂ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಬಹುದಾಗಿದೆ. ಜೊತೆಗೆ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗೆ ಇಳಿಸಿದ್ದು ಕೂಡ ಮತ್ತೊಮ್ಮೆ ಬಿಜೆಪಿ ಕಾರ್ಯಕರ್ತರಲ್ಲಿ ಚರ್ಚೆ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪ್ರಚಾರದಿಂದ ಬಿಜೆಪಿಗೆ ಲಾಭವಾಗಬಹುದು, ಜೊತೆಗೆ ನಷ್ಠವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬ ಮಾಹಿತಿಯಿದೆ.
ಅದರೊಂದಿಗೆ ಯಡಿಯೂರಪ್ಪ ಅವರು ಪ್ರತ್ಯೇಕ ಪ್ರಚಾರ ಮಾಡಲು ಮುಂದಾಗಿದ್ದಾರೆ, ಬೇರೆ ನಾಯಕರೊಂದಿಗೆ ಪ್ರಚಾರಕ್ಕೆ ಹೋಗದೇ ಒಬ್ಬರೆ ಹೋಗುತ್ತಿರುವುದು ಕುತೂಹಲಕ್ಕೆ ಮೂಡಿಸಿದೆ. ಅದರ ಹಿಂದಿನ ಕಾರಣವೂ ದೊಡ್ಡದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾವ ಕ್ಷೇತ್ರದಲ್ಲಿ ಯಾವಾಗ ಪ್ರಚಾರ ಮಾಡುತ್ತಾರೆ? ಪ್ರತ್ಯೇಕವಾಗಿ ಪ್ರಚಾರ ಮಾಡುತ್ತಿರುವುದರ ಹಿಂದಿನ ಕಾರಣ ಏನು? ಮುಂದಿದೆ ಸಂಪೂರ್ಣ ಮಾಹಿತಿ!

ನಾಳೆಯಿಂದ ಯಡಿಯೂರಪ್ಪ ಪ್ರಚಾರ!
ಅಂತೂ ಇಂತೂ ಮಾಜಿ ಸಿಎಂ ಯಡಿಯೂರಪ್ಪ ಅವರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಸಿದ್ಧವಾಗಿದ್ದಾರೆ. ನಾಳೆ ಅ. 20ರಿಂದ ಸತತ ನಾಲ್ಕು ದಿನ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಈ ಬಗ್ಗೆ ಯಡಿಯೂರಪ್ಪ ಅವರೇ ಹೇಳಿಕೆ ನೀಡಿದ್ದು ಈಗಾಗಲೇ ಅವರ ಪ್ರಚಾರ ಪ್ರವಾಸ ಕಾರ್ಯಕ್ರಮ ಕೂಡ ಸಿದ್ಧವಾಗಿದೆ. ಇಂದು ಮಂಗಳವಾರ ಸಂಜೆ ಆಲಮಟ್ಟಿಗೆ ತೆರಳಿ ವಾಸ್ತವ್ಯ ಮಾಡಲಿದ್ದಾರೆ. ನಾಳೆ ಬುಧವಾರ ಇಡೀ ದಿನ ಸಿಂದಗಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಬಳಿಕ ವಿಜಯಪುರದಲ್ಲಿ ಯಡಿಯೂರಪ್ಪ ಅವರು ವಾಸ್ತವ್ಯ ಮಾಡಲಿದ್ದಾರೆ.

ಕುತೂಹಲ ಮೂಡಿಸಿದ ಪ್ರತ್ಯೇಕ ಪ್ರಚಾರ!
ಜೊತೆಗೆ ಗುರುವಾರವೂ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರವಾಗಿ ಯಡಿಯೂರಪ್ಪ ಅವರು ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಆದರೆ ಯಡಿಯೂರಪ್ಪ ಅವರು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯ ಬೇರೆ ಯಾವುದೇ ನಾಯಕರೊಂದಿಗೆ ಜಂಟಿ ಪ್ರಚಾರ ಮಾಡುತ್ತಿಲ್ಲ. ತಾವೊಬ್ಬರೆ ಪ್ರಚಾರಕ್ಕೆ ಮುಂದಾಗಿರುವುದು ಕೂಡ ಕುತೂಹಲ ಮೂಡಿಸಿದೆ. ಆ ಮೂಲಕ ಮತ್ತೊಂದು ಸಂದೇಶವನ್ನು ಬಿಜೆಪಿ ಕಾರ್ಯರ್ತರು ಹಾಗೂ ಹೈಕಮಾಂಡ್ಗೆ ಯಡಿಯೂರಪ್ಪ ರವಾನಿಸುತ್ತಿದ್ದಾರಾ? ಎಂಬ ಚರ್ಚೆಗಳು ಆರಂಭವಾಗಿವೆ.

ಯಡಿಯೂರಪ್ಪ ಪ್ರತ್ಯೇಕ ಪ್ರಚಾರದ ಹಿಂದಿನ ಕಾರಣ!
ನಾಲ್ಕು ದಿನಗಳ ಕಾಲ ಎರಡೂ ಕ್ಷೇತ್ರಗಳಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಒಬ್ಬರೇ ಪ್ರತ್ಯೇಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಪ್ರತ್ಯೇಕ ಪ್ರಚಾರದಿಂದ ಪಕ್ಷಕ್ಕೆ ಲಾಭವಾಗಲಿದೆ ಎಂಬ ಹೇಳಿಕೆಯನ್ನು ಯಡಿಯೂರಪ್ಪ ಕೊಟ್ಟಿದ್ದಾರೆ. ಆದರೆ ನಿಜವಾಗಿಯೂ ಇರುವ ಕಾರಣವೇ ಬೇರೆ ಎಂಬ ಮಾಹಿತಿಯಿದೆ. ಪ್ರತ್ಯೇಕವಾಗಿ ಪ್ರಚಾರ ಮಾಡುವ ಮೂಲಕ ಮತದಾರರ ಮನದಲ್ಲಿ ಏನಿದೆ ಎಂಬುದನ್ನು ಅರಿಯಲು ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ. ಜೊತೆಗೆ ಪ್ರಚಾರದ ಸಂದರ್ಭದಲ್ಲಿ ಸೇರುವ ಜನರ ಮೂಲಕ ಹೈಕಮಾಂಡ್ಗೆ ಸ್ಪಷ್ಟ ಸಂದೇಶವನ್ನು ರವಾನಿಸಲು ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಯಡಿಯೂರಪ್ಪ ಪ್ರತ್ಯೇಕ ಪ್ರಚಾರದ ಹಿಂದೆ ಬಹುದೊಡ್ಡ ರಾಜಕೀಯ ಲೆಕ್ಕಾಚಾವಿದೆ ಎಂಬುದರಲ್ಲಿ ಸಂಶಯವಿಲ್ಲ.

ಕೆಜೆಪಿಯಲ್ಲಿ ಜೊತೆಗಿದ್ದ ಹಾನಗಲ್ ಅಭ್ಯರ್ಥಿ!
ಅ. 20, 21 ರಂದು ಎರಡು ದಿನಗಳ ಕಾಲ ಸಿಂದಗಿಯಲ್ಲಿ ಪ್ರಚಾರ ಮಾಡಿದ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಅವರು ಅ. 22 ಹಾಗೂ 23ರಂದು ಎರಡು ದಿನ ಹಾವೇರಿ ಜಿಲ್ಲೆ ಹಾನಗಲ್ ಉಪ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಒಟ್ಟಾರೆ ಎರಡೂ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಅವರ ಪ್ರಚಾರದಿಂದ ಏನಾಗಬಹುದು ಎಂಬುದು ಕುತೂಹಲ ಮೂಡಿಸಿದೆ. ಜೊತೆಗೆ ವಿರೋಧ ಪಕ್ಷಗಳ ನಾಯಕರು ಕೂಡ ಯಡಿಯೂರಪ್ಪ ಅವರ ಪ್ರಚಾರದ ಬಗ್ಗೆ ಗಮನ ಕೊಟ್ಟಿದ್ದಾರೆ. ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಬಹುತೇಕ ಖಚಿತ ಎಂಬ ವರದಿಗಳಿವೆ. ಅದೇ ರೀತಿ ಹಾನಗಲ್ ಕ್ಷೇತ್ರದಲ್ಲಿ ಮತದಾರರ ಒಲವು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮೇಲಿದೆ ಎಂಬ ವರದಿಗಳಿವೆ. ಹೀಗಾಗಿ ಯಡಿಯೂರಪ್ಪ ಅವರ ಪ್ರಚಾರ ಗಮನ ಸೆಳೆದಿದೆ.












Click it and Unblock the Notifications