ವೃಷಭದಿಂದ ಕರ್ಕ ರಾಶಿಯವರಿಗೆ 2014ರ ಸಂಕ್ರಮಣ ಫಲ
ವೃಷಭ : ಕೃತ್ತಿಕಾದ 2, 3, 4, ರೋಹಿಣಿಯ ನಾಲ್ಕು ಹಾಗೂ ಮೃಗಶಿರಾ ನಕ್ಷತ್ರದ 1, 2ನೇ ಚರಣದಲ್ಲಿ ಜನಿಸಿದವರದು ವೃಷಭ ರಾಶಿ. ಈ ನಕ್ಷತ್ರದವರ ಪಾಲಕರಾಗಲಿ ಅಥವಾ ಸ್ವತಃ ಅವರೇ ಅನ್ನದಾಸೋಹ ಅಥವಾ ಸಾಮೂಹಿಕ ವಿವಾಹ ನಡೆಯುವಲ್ಲಿ ಕೈಲಾದಷ್ಟು ಅಕ್ಕಿ, ಬೆಲ್ಲ, ಹೆಸರುಕಾಳು ಹಾಗೂ ಅವರೇಕಾಳು ದಾನ ಕೊಡಬೇಕು.
ಇನ್ನು ಈ ಮೇಲಿನ ನಕ್ಷತ್ರದವರಿಗೆ ಈ ಮಕರ ಸಂಕ್ರಮಣ ಫಲವು ತುಂಬಾ ಖುಷಿ ಕೊಡುವ ರೀತಿಯಲ್ಲಿದೆ. ಯಾವುದಕ್ಕೂ ಬಯಸದೇ ಬಂದ ಭಾಗ್ಯ ಎನ್ನಬಹುದು. ಆದರೂ ಬಂದ ಅವಕಾಶ ಹಾಗೂ ಬರುವ ಹಣದ ಅನುಕೂಲತೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಹೆಂಗೆಂಗೋ ಲಾಭ ಬಂದಿದೆ ಎಂದುಕೊಂಡು ಬೇಕಾಬಿಟ್ಟಿ ಖರ್ಚು ಮಾಡದೇ ಮುಂದಾಲೋಚನೆ ಮಾಡಿಕೊಂಡು ಅನುಕೂಲಕ್ಕೆಂದು ಹಣ ಉಳಿತಾಯ ಮಾಡಿಟ್ಟುಕೊಳ್ಳಬೇಕು. ಅಲ್ಲದೇ ಸುಮ್ಸುಮ್ನೆ ಸಿಕ್ಕಾಪಟ್ಟೆ ಲಾಭ ಬಂದಿದೆ ಎಂದು ಹೇಳಿಕೊಂಡು ತಿರುಗುವುದು ಕೂಡ ಹಿತವಲ್ಲ.
ಮಿಥುನ : ಮೃಗಶಿರಾ 2, 3 ಹಾಗೂ ಆರಿದ್ರ, ಪುನರ್ವಸು ನಕ್ಷತ್ರದ 1, 2, 3ನೇ ಚರಣದಲ್ಲಿ ಜನಿಸಿದವರು ಮಿಥುನ ರಾಶಿಯವರಾಗುತ್ತಾರೆ. ಯಾವುದಾದರೂ ಅನಾಥಾಶ್ರಮ, ವೃದ್ಧಾಶ್ರಮ ಅಥವಾ ದಾಸೋಹ ನಡೆಯುವ ಸ್ದಳಗಳಲ್ಲಿ ಇವರು ತಮ್ಮ ಕೈಲಾದಷ್ಟು ಅಕ್ಕಿ, ಬೆಲ್ಲ, ಹೆಸರುಕಾಳು ಹಾಗೂ ಅವರೇಕಾಳು, ಹಾಲು ದಾನ ಕೊಡಬೇಕು. [ಮೇಷ ರಾಶಿ ಸಂಕ್ರಮಣ ಫಲ]
ಮಕರ ಸಂಕ್ರಾಂತಿಯ ಫಲವು ಇವರಿಗೆ ವಿಭಿನ್ನ ರೀತಿಯಲ್ಲಿ ಇದೆ. ಹೇಗೆಂದರೆ ಬಹಳಷ್ಟು ಸ್ಥಳಗಳಿಗೆ ಅನ್ಯ ಕಾರ್ಯ ನಿಮಿತ್ತ ಇವರು ಪ್ರಯಾಣ ಬೆಳೆಸಬೇಕಾಗಿರುವುದರಿಂದ ಸ್ವತಃ ದುಡಿಮೆಯ ದುಡ್ಡನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಖರ್ಚು ಮಾಡಿದ ಹಣವು ಪ್ರಯಾಣದಿಂದಾದ ಖುಷಿಯ ಮುಂದೇನೂ ಸಮನಾಗುವುದಿಲ್ಲ. ಆದ್ದರಿಂದ ಎಲ್ಲೇ ಹೋಗಲಿ ಖರ್ಚನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಪರಸ್ಥಳಗಳಿಗೆ ಹೋದಾಗ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿಕೊಂಡಿರಬೇಕು. ಸಂಕ್ರಮಣದ ಫಲವು ಇವರಿಗೆ ಹೊಸ ಸ್ಥಳಗಳನ್ನು ಪರಿಚಯ ಮಾಡಿಸುತ್ತದೆ.
ಕರ್ಕ : ಪುನರ್ವಸು ನಕ್ಷತ್ರದ 4, ಪುಷ್ಯ, ಆಶ್ಲೇಷ ನಕ್ಷತ್ರದ ಎಲ್ಲ ಪಾದಗಳಲ್ಲಿ ಜನಿಸಿದವರು ಕರ್ಕ ರಾಶಿಯವರಾಗುತ್ತಾರೆ. ಇವರೂ ಕೂಡ ಅಕ್ಕಿ, ಬೆಲ್ಲ, ಹಾಲು ದಾನ ಕೊಡಬೇಕು. ಈ ರಾಶಿಯವರಿಗೆ ಸ್ವಲ್ಪ ಸುಖ ಹೆಚ್ಚೇ ಎನ್ನಬಹುದು. ಏಕೆಂದರೆ ಮಕರ ಸಂಕ್ರಮಣ ಫಲವು ಆ ರೀತಿ ಇದೆ ಇವರಿಗೆ. ಎಂದೂ ನೋಡದ ಹೊಸ ಸ್ಥಳಗಳನ್ನು ನೋಡಿ ಆನಂದಿಸುವ ಸಮಯ ಬರುತ್ತದೆ. ಅದೂ ಅಲ್ಲದೇ ಆ ಸ್ಥಳಗಳಲ್ಲಿ ಸುತ್ತಾಡಲು, ಸಂತಸದಿಂದ ಬಯಸಿದ್ದನ್ನು ಕೊಂಡುಕೊಳ್ಳಲು ಹಣದ ಅಭಾವವೂ ಕೂಡ ಇವರಿಗಿರಲ್ಲ. ಹೀಗಾಗಿ ಮನಸ್ಸು ಉಲ್ಲಸಿತವಾಗಿ ಸಂತಸದಿಂದ ಇರುತ್ತಾರೆ. ಪ್ರಕೃತಿ ಸೌಂದರ್ಯ ಸವಿಯಬೇಕೆನ್ನುವವರಿಗೆ ಇದು ಸಕಾಲ. ಅವಕಾಶಗಳು ಹುಡುಕಿಕೊಂಡು ಬರುತ್ತವೆ ಹೊಸ ಸ್ಥಳಗಳನ್ನು ನೋಡಲು. ಹೀಗಾಗಿ ಈ ರಾಶಿಯವರು "ದೇಶ ಸುತ್ತಿ" ಕೋಶ ಓದಿದಷ್ಟೇ ಜ್ಞಾನ ಸಂಪಾದಿಸಿಕೊಳ್ಳಬಹುದು.
ಇನ್ನು "ಎಲ್ಲಿಯೂ ದಾನ ಕೊಡುವಂತಹ ಪದ್ಧತಿಯೇ ನನ್ನ ಜಾಯಮಾನದಲ್ಲಿಲ್ಲ ಸಾಮೇರೆ" ಎನ್ನುವವರು ಯಾವುದೇ ದೇವಸ್ಥಾನಕ್ಕೆ ಹೋದರೂ ಅಲ್ಲಿ ಪ್ರಸಾದ ತೆಗೆದುಕೊಳ್ಳದೇ ಬರಿ ಹೊಟ್ಟೆಯಲ್ಲಿ ಬರಬೇಕು. ದೇವಸ್ಥಾನಗಳಿಗೆ ಭಕ್ತರು ಕೊಟ್ಟರೇನೆ ಪ್ರಸಾದ ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು.
ಸಿಂಹ ರಾಶಿಯಿಂದ ಮುಂದಿನ ರಾಶಿಗಳ ಸಂಕ್ರಮಣ ಫಲ ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ಲೇಖಕರ ಮೊಬೈಲ್ : 94815 22011