ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಸಮಯದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?
Recommended Video

ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬ ಮಾತೊಂದಿದೆ. ಹಿರಿಯರಾದ ಶಿವಕುಮಾರ ಸ್ವಾಮಿಗಳು ಶಿವೈಕ್ಯರಾದ ದಿನ, ಕಾಲವನ್ನು ಪರಾಂಬರಿಸುವಾಗ ಅದೆಂಥ ಅಚ್ಚರಿಯ ಸಂಗತಿಗಳು ತಿಳಿದುಬರುತ್ತಿವೆ ಗೊತ್ತೆ? ಅಂಥ ವಿಚಾರಗಳನ್ನು ನಿಮ್ಮೊಂದಿಗೆ ಅಲ್ಲದೆ ಇನ್ಯಾರ ಜತೆಗೆ ಹಂಚಿಕೊಳ್ಳಲು ಸಾಧ್ಯ?
ಜನವರಿ 21ನೇ ತಾರೀಕು, ಸೋಮವಾರ ಬೆಳಗ್ಗೆ 11.44ಕ್ಕೆ ಶಿವಕುಮಾರ ಸ್ವಾಮೀಜಿ ಕಾಲವಾಗಿದ್ದಾರೆ ಎಂಬುದು ಸದ್ಯಕ್ಕೆ ಇರುವ ಮಾಹಿತಿ. ಈಗ ಉತ್ತರಾಯಣ ಪರ್ವ ಕಾಲ. ಅದರಲ್ಲೂ ಪೌಷ ಮಾಸ, ಶುಕ್ಲ ಪಕ್ಷದ ಪೌರ್ಣಮಿ. ಚಂದ್ರನಿಗೆ ಸಂಪೂರ್ಣ ಬಲವಿರುವ ಸಂದರ್ಭ ಇದು. ಇನ್ನು ನಕ್ಷತ್ರದ ವಿಚಾರಕ್ಕೆ ಬಂದರೆ, ಪುಷ್ಯ ನಕ್ಷತ್ರ.
ಈಗ ವೈದ್ಯರು ನೀಡಿದ ಸಮಯಕ್ಕಿಂತ ಜ್ಯೋತಿಷ್ಯ ಮತ್ತೊಂದು ಸಮಯ ಹೇಳುತ್ತಿದೆ. ಈ ವಿಚಾರದಲ್ಲಿ ಗೊಂದಲ ಬೇಡ. ಏಕೆಂದರೆ ಬೆಳಗ್ಗೆ ಸೂರ್ಯೋದಕ್ಕೂ ಮೊದಲು ಅಂದರೆ 5.12 ರಿಂದ 6.50ರೊಳಗೆ ಅಥವಾ 6.50ರಿಂದ ಸ್ವಲ್ಪ ಕಾಲದೊಳಗೆ ಶಿವಕುಮಾರ ಸ್ವಾಮಿಗಳ ಆತ್ಮವು ದೇಹದಿಂದ ಪ್ರಯಾಣ ಆರಂಭಿಸಿದ ಸಾಧ್ಯತೆ ಇರುತ್ತದೆ.

ಆ ಅವಧಿಯಲ್ಲಿ ಧನು ಅಥವಾ ಮಕರ ಲಗ್ನ ಇರುತ್ತದೆ. ಆ ಎರಡೂ ಲಗ್ನಗಳ ಗ್ರಹ ಸ್ಥಿತಿಯನ್ನು ಲೆಕ್ಕ ಹಾಕಿ ನೋಡುವುದಾದರೆ, ಶ್ರೀಗಳ ಆತ್ಮವು ದೇಹದಿಂದ ಬಿಡುಗಡೆ ಹೊಂದಿದ ಸಮಯ ಅದಾಗಿರಬಹುದು ಎಂದು ಅಂದಾಜಿಸಬಹುದು. ಆ ವೇಳೆ ಕಾಲವಾದವರಿಗೆ ಮುಂದಿನ ಜನ್ಮ ಎಂಬುದು ಇರುವುದಿಲ್ಲ. ಮೋಕ್ಷ ಪ್ರಾಪ್ತಿ ಆಗುತ್ತದೆ.
ಇನ್ನು ಬೆಳಗ್ಗೆ 11.44 ಅಂತ ಲೆಕ್ಕಕ್ಕೆ ತೆಗೆದುಕೊಂಡರೂ ಕೆಲ ಮುಖ್ಯ ಹಾಗೂ ಅಷ್ಟೇ ಆಸಕ್ತಿಕರ ಸಂಗತಿಗಳು ಹೇಳಲಿಕ್ಕಿದೆ. ಈ ಸಮಯದಲ್ಲಿ ದೇಹ ತ್ಯಜಿಸಿದ್ದರೆ, ಸೂಕ್ಷ್ಮ ಸ್ವರೂಪದಲ್ಲಿ ಶಿವಕುಮಾರ ಸ್ವಾಮಿಗಳು ಸಿದ್ದಗಂಗಾ ಮಠದಲ್ಲಿಯೇ ಇರುತ್ತಾರೆ. ಅವರ ಭೌತಿಕ ಕಾಯಕ್ಕೆ ಮಾತ್ರ ಇಲ್ಲಿಂದ ಬಿಡುಗಡೆಯೇ ವಿನಾ ಚಿರಂಜೀವಿಯಾಗಿ ಅವರ ಆತ್ಮ ಇಲ್ಲೇ ಉಳಿಯುತ್ತದೆ.
ಈ ಸಮಯದಲ್ಳಾದರೆ ಅವರ ಆತ್ಮಕ್ಕೆ ಮೋಕ್ಷ ಸಿಗುವ ಸಾಧ್ಯತೆ ಇಲ್ಲ. ಇನ್ನೊಂದು ಮಾತು, ಇನ್ನು ಮುಂದೆ ಕೂಡ ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಯಾವುದೇ ಶುಭ ಕಾರ್ಯಗಳಿಗೂ ಅವರ ಆಶೀರ್ವಾದ ಇದ್ದೇ ಇರುತ್ತದೆ. ಪವಾಡಗಳು ಅನುಭವಕ್ಕೆ ಬರುತ್ತವೆ. ಒಟ್ಟಾರೆ ಈ ದಿನವು ಬಹಳ ವಿಶಿಷ್ಟವಾಗಿದೆ.












Click it and Unblock the Notifications